ಮಂಗಳೂರು, ಜನವರಿ, 22: ನಶೆಯಲ್ಲಿದ್ದ ವೈದ್ಯರ ಬೆನ್ನು ಹತ್ತಿದ್ದ ಪೊಲೀಸರು ಮತ್ತೆ 9 ಮಂದಿಯನ್ನು ಬಂಧನ ಮಾಡಿದ್ದಾರೆ. ಇಬ್ಬರು ವೈದ್ಯರು ಸೇರಿದಂತೆ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳು ಪೊಲೀಸರ ಅತಿಥಿಗಳಾಗಿದ್ದು, ಬಂಧಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
ವೈದ್ಯರ ಗಾಂಜಾ ಘಾಟಿನ ನಶೆ ಇನ್ನೂ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಪೊಲೀಸರು ಕೆದಕಿದಷ್ಟು ಹೆಚ್ಚು ಮಂದಿ ಈ ಪ್ರಕರಣದಲ್ಲಿ ಬಲೆಗೆ ಬೀಳುತ್ತಲೇ ಇದ್ದಾರೆ. ವೈದ್ಯರ ಗಾಂಜಾ ಘಾಟಿನ ಹಿಂದೆ ಬಿದ್ದ ಪೊಲೀಸರು ಇದೀಗ ಮತ್ತೆ ಒಂಬತ್ತು ಮಂದಿಯನ್ನು ಬಂಧಿಸಿದ್ದಾರೆ. ಶ್ರೀನಿವಾಸ ಆಸ್ಪತ್ರೆಯ ಕರ್ನಾಟಕದ ವೈದ್ಯ ಸಿದ್ದಾರ್ಥ್ ಪವಸ್ಕರ್(29) ಮತ್ತು ದುರ್ಗಾ ಸಂಜೀವಿನಿ ಆಸ್ಪತ್ರೆಯ ಕರ್ನಾಟಕದ ವೈದ್ಯ ಡಾ.ಸುಧೀಂದ್ರ(34) ಬಂಧಕ್ಕೊಳಗಾದ ವೈದ್ಯರಾಗಿದ್ದಾರೆ.
ಮಂಗಳೂರಿನಲ್ಲಿ ಗಾಂಜಾ ದಂಧೆ ಪ್ರಕರಣ: ಮೆಡಿಕಲ್ ವಿದ್ಯಾರ್ಥಿನಿಯರು ಸೇರಿದಂತೆ 10 ಜನರು ಸಿಸಿಬಿ ವಶಕ್ಕೆ
ಬಂಧಿತರ ಸಂಖ್ಯೆ 24ಕ್ಕೆ ಏರಿಕೆ
ಮಂಗಳೂರಿನ ಕೆ.ಎಂ.ಸಿ ಮೆಡಿಕಲ್ ಕಾಲೇಜಿನ ಏಳು ಮಂದಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಉತ್ತರ ಪ್ರದೇಶದ ವಿದುಶ್ ಕುಮಾರ್(27), ದೆಹಲಿಯ ಶರಣ್ಯ(23), ಕೇರಳದ ಸೂರ್ಯಜಿತ್ ದೇವ್(20), ಕೇರಳದ ಆಯೇಷಾ ಮಹಮ್ಮದ್(23), ತೆಲಂಗಾಣದ ಪ್ರಣಯ್ ನಟರಾಜ್(24), ತೆಲಂಗಾಣದ ಚೈತನ್ಯಾ(23), ಉತ್ತರ ಪ್ರದೇಶದ ಇಶ್ ಮಿದ್ದ(24) ಎಂದು ಗುರುತಿಸಲಾಗಿದೆ. ಈ ಏಳು ಮಂದಿ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ವೈದ್ಯ ವಿದ್ಯಾರ್ಥಿಗಳಾಗಿದ್ದಾರೆ ಎಂದು ತಿಳಿದುಬಂದಿದೆ. ಈವರೆಗೆ ವೈದ್ಯರ ಗಾಂಜಾ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 24ಕ್ಕೆ ಏರಿದೆ.
ಮುಂದುವರೆದ ಶೋಧಕಾರ್ಯ
ಡಾ.ಶರಣ್ಯಾ ಬಿಡಿಎಸ್ ವಿದ್ಯಾರ್ಥಿನಿಯಾಗಿದ್ದರೆ, ಉಳಿದವರು ಎಂಬಿಬಿಎಸ್ ವಿದ್ಯಾರ್ಥಿಗಳಾಗಿದ್ದಾರೆ.
ಬಂಧಿತರಲ್ಲಿ ಇಬ್ಬರು ವೈದ್ಯರು, ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ. ಈ ಪ್ರಕರಣದಲ್ಲಿ ಬಂಧಿತನಾಗಿರುವ ಪ್ರಮುಖ ಆರೋಪಿ ಡಾ.ಕಿಶೋರಿಲಾಲ್ ರಾಮ್ ಜೀಯೊಂದಿಗೆ ಸಂಪರ್ಕ ಹೊಂದಿದ್ದ ಗಾಂಜಾ ಪೆಡ್ಲರ್ಗಳು ಕೆಲವರು ಫೋನ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಬಂಧಿತರಲ್ಲಿ ಎಲ್ಲರಿಗೂ ಪಾಸಿಟಿವ್ ಬಂದಿದೆ. ಬಂಧಿತರಿಂದಲೇ ಮಾಹಿತಿ ಕಲೆಹಾಕಿದ ಪೊಲೀಸರು ಪ್ರಕರಣದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈವರೆಗೆ ಒಟ್ಟು 24 ಜನರ ಬಂಧನ
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಈವರೆಗೆ ಒಟ್ಟು 24 ಮಂದಿಯ ಬಂಧನವಾಗಿದೆ. ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯೂ ಇದೆ. ಪ್ರಕರಣದಲ್ಲಿ ಬೇರೆ ಬೇರೆ ಆಯಾಮಗಳು ಲಭ್ಯವಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದವರೆಲ್ಲರ ಹೆಡೆಮುರಿ ಕಟ್ಟುವುದಾಗಿ ಹೇಳಿದ್ದಾರೆ.
ಡ್ರಗ್ಸ್ ದಾಸರಿಗೆ ಕೆಎಂಸಿಯಿಂದ ಗೇಟ್ ಪಾಸ್
ಮಂಗಳೂರು ನಗರದಲ್ಲಿ ವೈದ್ಯರ ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಕ್ಕಿಬಿದ್ದ ಇಬ್ಬರು ವೈದ್ಯರು ಹಾಗೂ ಏಳು ಮಂದಿ ವೈದ್ಯಕೀಯ ವಿದ್ಯಾರ್ಥಿಗಳನ್ನು ಕೆಎಂಸಿ ಆಸ್ಪತ್ರೆಯ ಆಡಳಿತ ಮಂಡಳಿ ಇತ್ತೀಚೆಗಷ್ಟೇ ಅಮಾನತು ಮಾಡಿತ್ತು. ಅತ್ತಾವರ ಕೆಎಂಸಿ ಆಸ್ಪತ್ರೆಯ ಮೆಡಿಕಲ್ ಆಫೀಸರ್ ಡಾ.ಸಮೀರ್, ಮೆಡಿಕಲ್ ಸರ್ಜನ್ ಡಾ.ಮಣಿಮಾರನ್ ಮುತ್ತು ಅಮಾನತಾಗಿರುವ ವೈದ್ಯರಾಗಿದ್ದಾರೆ. ಅದೇ ರೀತಿ ಡಾ.ಕಿಶೋರಿ ಲಾಲ್, ಡಾ.ನದೀಯಾ ಸಿರಾಜ್, ಡಾ. ವರ್ಷಿಣಿ ಪತ್ರಿ, ಡಾ.ರಿಯಾ ಚಡ್ಡ, ಡಾ.ಇರಾ ಬಾಸಿನ, ಡಾ.ಕ್ಷಿತಿಜ್ ಗುಪ್ತಾ, ಡಾ.ಹರ್ಷ ಕುಮಾರ್ ವಿ.ಎಸ್. ಅಮಾನತು ಆಗಿರುವ ವೈದ್ಯಕೀಯ ವಿದ್ಯಾರ್ಥಿಗಳಾಗಿದ್ದಾರೆ.
ಸಂಚಲನ ಸೃಷ್ಟಿಸಿದ “ಗಾಂಜಾ” ಕೇಸ್
ಮಂಗಳೂರಿನಲ್ಲಿ ಪ್ರತಿಷ್ಠಿತ ವೈದ್ಯಕೀಯ ಕಾಲೇಜುಗಳ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ಗಾಂಜಾ ಪೆಡ್ಲಿಂಗ್ ಹಾಗೂ ಗಾಂಜಾ ಸೇವನೆ ಪ್ರಕರಣ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಇಬ್ಬರು ವೈದ್ಯರನ್ನು ವಜಾ ಮಾಡಿ ಗುತ್ತಿಗೆ ರದ್ದುಪಡಿಸಿದೆ. ಅದೇ ರೀತಿ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಆಸ್ಪತ್ರೆಯಿಂದ ಅಮಾನತು ಮಾಡಿದೆ. ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಗೆ ಆಗಮಿಸಿರುವ ಕೆಎಂಸಿ ಡೀನ್ ಉನ್ನಿಕೃಷ್ಣನ್ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಂಡ ಬಗ್ಗೆ ಮಾಹಿತಿ ನೀಡಿದ್ದರು.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಕೆಎಂಸಿ ಸಂಸ್ಥೆಯ ಡೀನ್ ಅವರು ಭೇಟಿಯಾಗಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳನ್ನು ಅಮಾನತು ಮಾಡಿರುವುದಾಗಿ ಹೇಳಿದ್ದಾರೆ. ಇವರ ನಡೆಯನ್ನು ಪ್ರಸಂಶಿಸುತ್ತೇನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಈ ದಂಧೆಯನ್ನು ಆಸ್ಪತ್ರೆ ವ್ಯಾಪ್ತಿಯ ಒಳಗೆ ಮಾಡಿಲ್ಲ. ಬಂಧಿತರು ನೆಲೆಸಿದ್ದ ರೂಂಗಳಲ್ಲಿ ದಂಧೆಯನ್ನು ಮಾಡುತ್ತಿದ್ದರು. ಬೇಗನೇ ಹಣ ಮಾಡುವ ಉದ್ದೇಶದಿಂದ ಈ ದಂಧೆಯನ್ನು ಮಾಡುತ್ತಿದ್ದರು ಅಂತಾ ಕಮೀಷನರ್ ಎನ್. ಶಶಿಕುಮಾರ್ ಹೇಳಿದ್ದರು.
https://play.google.com/store/apps/details?id=com.speed.newskanna