ಡಾ. ಸಂಧ್ಯಾ ಎಸ್. ಪೈ ಅವರು ಪತ್ರಿಕೋದ್ಯಮದಲ್ಲಿ ಪ್ರಸಿದ್ಧ ಹೆಸರು. ಮಣಿಪಾಲ್ ಮೀಡಿಯಾ ನೆಟ್ವರ್ಕ್ನ ನಿರ್ದೇಶಕಿಯಾಗಿ ಮತ್ತು ಆ ಸಮೂಹದ ತರಂಗ , ರೂಪತಾರ, ತುಂತುರು , ತುಷಾರ ಪತ್ರಿಕೆಗಳಿಗೆ ಸಂಪಾದಕಿಯಾಗಿ ಅವರು ಹೆಸರಾಗಿದ್ದಾರೆ.ಸಂಧ್ಯಾ ಅವರು ಬಂಟ್ವಾಳದಲ್ಲಿ 1947ರ ಫೆಬ್ರುವರಿ 26ರಂದು ಜನಿಸಿದರು. ತಂದೆ ಬಿ. ನಾರಾಯಣ ಬಾಳಿಗಾ. ತಾಯಿ ಸುಮಿತ್ರಾದೇವಿ. ಅವರು ಬೆಳೆದದ್ದು ಚಿಕ್ಕಮಂಗಳೂರಿನಲ್ಲಿ. ಮುಂದೆ ಅವರು ಮಣಿಪಾಲದ ಪ್ರತಿಷ್ಠಿತ ಪೈ ಕುಟುಂಬದ ಸೊಸೆಯಾಗಿ ಸಂಧ್ಯಾ ಎಸ್.ಪೈ ಆದರು.ಸಂಧ್ಯಾ ಎಸ್.ಪೈ ಅವರು ‘ಮಣಿಪಾಲ ಮೀಡಿಯಾ’ ಮನೋರಂಜನಾ ನೆಟ್ವರ್ಕ್ನ ಗೌರವ ನಿರ್ದೇಶಕಿಯಾಗಿ ಬೃಹತ್ ಸಾಧನೆ ಮಾಡಿದ್ದಾರೆ. ಜನಪ್ರಿಯ ತರಂಗ , ರೂಪತಾರ, ತುಂತುರು , ತುಷಾರ ನಿಯತಕಾಲಿಕಗಳ ಸಂಪಾದಕತ್ವ ನಿರ್ವಹಿಸುವುದರ ಜೊತೆಗೆ ಲೇಖಕಿಯೂ ಆಗಿದ್ದಾರೆ.ಸಂಧ್ಯಾ ಪೈ ಅವರ ಪ್ರಕಟಿತ ಕೃತಿಗಳಲ್ಲಿ ‘ಇದು ಈಜಿಪ್ಟ್ ಇದು ಇಸ್ರೇಲ್’ (ಪ್ರವಾಸ ಕಥನ), ಸಂಪಾದಕೀಯ ಅಂಕಣಗಳಾದ ‘ಪ್ರಿಯ ಓದುಗರೇ’ ಬರಹಗಳ 10 ಸಂಪುಟಗಳು, ‘ಕೊಂಕಣಿ ರಾಂದಪ'(ಕನ್ನಡ, ಇಂಗ್ಲಿಷ್ ಆವೃತ್ತಿ), !ಯಕ್ಷ ಪ್ರಶ್ನೆ’, ‘ಪರಂಪರೆಯ ಪುಟಗಳಿಂದ’ ( ಭಾರತೀಯ ಧಾರ್ಮಿಕ-ಸಾಂಸ್ಕೃತಿಕ ಮೌಲ್ಯಗಳ ಸಂವಾದ ಮಾಲೆ), ‘ಭಜಗೋವಿಂದಂ’, ‘ಮಕ್ಕಳ ಕಥಾ ಮಾಲಿಕೆ-38’, ‘ಸ್ಮೃತಿ ಗಂಧವತೀ’ ಮುಂತಾದವು ಸೇರಿವೆ. ಮಕ್ಕಳ ಕಥಾಮಾಲಿಕೆಗಳ ನಿರೂಪಣೆಯಲ್ಲಿ ಅವರು ತಮ್ಮನ್ನು ಅಕ್ಕರೆಯಿಂದ ‘ಸಂಧ್ಯಾಮಾಮಿ’ ಎಂದು ಅಭಿವ್ಯಕ್ತಿಸುತ್ತಾರೆ.ಸಂಧ್ಯಾ ಪೈ ಅವರು ಬರೆದು ನಿರ್ದೇಶಿಸಿದ ಧಾರವಾಹಿ ‘ಬಿದಿಗೆ ಚಂದ್ರಮ’ 252 ಕಂತುಗಳಲ್ಲಿ ಪ್ರಸಾರವಾಗಿತ್ತು. ‘ಗುಪ್ತಗಾಮಿನಿ’ ಅಪಾರ ಜನಪ್ರಿಯತೆಯ ಜೊತೆಗೆ ಅನೇಕ ಪ್ರಶಸ್ತಿಗಳನ್ನು ಗಳಿಸಿತ್ತು.
ಸಂಧ್ಯಾ ಎಸ್.ಪೈ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ಸಾರ್ವಜನಿಕ ಸಂಪರ್ಕ ವ್ಯಕ್ತಿ ಪ್ರಶಸ್ತಿ, ಎಚ್.ಕೆ. ವೀರಣ್ಣ ಗೌಡ ಪತ್ರಿಕೋದ್ಯಮ ಪ್ರಶಸ್ತಿ, ‘ಸಾಧನಾ’ ಪ್ರಶಸ್ತಿ, ಶ್ರೀಮಾತಾ ಪ್ರಶಸ್ತಿ, ವಿಶ್ವಪ್ರಭಾ ಪ್ರಶಸ್ತಿ, ಗುಲ್ಬರ್ಗಾ ವಿಶ್ವವಿದ್ಯಾಲಯದ ಡಾಕ್ಟರೇಟ್ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: