ನಂಜನಗೂಡಿನ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ 10 ದಿನಗಳ ಕಾಲ ನಡೆದ 25ನೇ ವರ್ಷದ ಬ್ರಹ್ಮೋತ್ಸವಕ್ಕೆ ಇಂದು ಮಂಡಲೊತ್ಸವ ಆಚರಿಸುವ ಮೂಲಕ ತೆರೆ ಬಿದ್ದಿತು.
ನಿನ್ನೆ ಪಾದಯಾತ್ರೆಯಲ್ಲಿ ಬಂದ ನೂರಾರು ಅಯ್ಯಪ್ಪ ಭಕ್ತರ ಇರುಮುಡಿ ಬಿಚ್ಚಿ ತೆಂಗಿನಕಾಯಿ ಯಿಂದ ಹೊರತೆಗೆದ ತುಪ್ಪವನ್ನು ಇಂದು ಶ್ರೀ ಶಾಸ್ತನಿಗೆ ಅಭಿಷೇಕ ಮಾಡಲಾಯಿತು.
ಅಭಿಷೇಕಕ್ಕು ಮುನ್ನ ದೇವಾಲಯದಲ್ಲೇ ಉಳಿದಿದ್ದ ನೂರಾರು ಅಯ್ಯಪ್ಪ ಭಕ್ತರು ಬೆಳಿಗ್ಗೆಯಿಂದಲೇ ವಿಳಕ್ಕು ಆಚರಿಸುವ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಣ್ಣ ಹಚ್ಚಿಕೊಂಡು ಅಯ್ಯಪ್ಪನ ನಾಮಸ್ಪರಣೆ ಮಾಡುತ್ತಾ ಕುಣಿದು ಕುಪ್ಪಳಿಸಿದರು.
ಬಳಿಕ ದೇವಾಲಯಕ್ಕೆ ಬಂದು ದೇವಾಲಯದ ಸುತ್ತ ಗುರುಸ್ವಾಮಿಗಳ ನೇತೃತ್ವದಲ್ಲಿ ಪ್ರದಕ್ಷಿಣೆ ಹಾಕಿ ತಮ್ಮ ಭಕ್ತಿ ನಮನ ಸಲ್ಲಿಸಿದರು.
ನಂತರ ಕಪಿಲಾ ನದಿಯಲ್ಲಿ ಮಿಂದು ದೇವಾಲಯಕ್ಕೆ ಬಂದ ಭಕ್ತರು ತುಪ್ಪದ ಅಭಿಷೇಕದಲ್ಲಿ ಮಿಂದೆದ್ದ ಪಂದಳ ರಾಜಕುಮಾರ ಶ್ರೀ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದು ಅವನ ನಾಮಸ್ಮರಣೆ ಮಾಡಿ ತಮ್ಮ ಭಕ್ತಿ ಭಾವ ಮೆರೆದರು.
ತುಪ್ಪದ ಅಭಿಷೇಕ ಹಾಗೂ ಮಹಾಮಂಗಳಾರತಿ ಮುಗಿದ ನಂತರ ಭಕ್ತರು ತಾವು ಧರಿಸಿದ್ದ ಅಯ್ಯಪ್ಪ ಸ್ವಾಮಿಯ ಮಾಲೆ ತೆಗೆಸಿಕೊಂಡರು.
ಇದೇ ಸಂದರ್ಭ ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರಿಗೆ ಅಭಿಷೇಕದ ತುಪ್ಪ ಹಾಗೂ ಅವಲಕ್ಕಿ ಪ್ರಸಾದ ನೀಡುವ ಮೂಲಕ 25ನೇಬ್ರಹ್ಮೋತ್ಸವಕ್ಕೆ ತೆರೆ ಬಿದ್ದಂತಾಯಿತು.
ಗುರುಸ್ವಾಮಿಗಳಾದ ದೇವರಾಜಸ್ವಾಮಿ ಮಾತನಾಡಿ ಬ್ರಹ್ಮೋತ್ಸವದ ಬಗ್ಗೆ ವಿವರಿಸಿ ಬ್ರಹ್ಮೋತ್ಸವಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…