ಬಿ. ವಿ. ರಾಜಾರಾಂ 1953ರ ಜನವರಿ 8ರಂದು ಜನಿಸಿದರು. ತಂದೆ ಬುಕ್ಕಾಂಬುಧಿ ವೆಂಕಟೇಶಯ್ಯ, ತಾಯಿ ತಾವರೆಕೆರೆ ಭಾಗೀರಥಮ್ಮ.ರಾಜಾರಾಂ ಚಿಕ್ಕವಯಸ್ಸಿನಿಂದಲೇ ನಾಟಕಗಳಲ್ಲಿ ಆಸಕ್ತಿ ಮೂಡಿಸಿಕೊಂಡವರು. ಒಮ್ಮೆ ಅವರು ನುಡಿದದ್ದು ಇಂತು “ಶಾಲೆಯಲ್ಲಿ ತುಂಟಾಟ ಮಾಡಿಕೊಂಡು ಓಡಿಯಾಡುತ್ತಿದ್ದ ಹುಡುಗರನ್ನು ನಾಟಕಕ್ಕೆ ಅಂತ ಹಾಕೋರು. ನಾವು ಅದರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಲೇ ಎಲ್ಲೋ ಅದರಲ್ಲಿ ಆಸಕ್ತಿಯನ್ನೂ ಮೂಡಿಸಿಕೊಂಡವರು. ಕಾಲೇಜಿನಲ್ಲಿ ಓದುವಾಗ ಮತ್ತು ಕೆಲಸ ಮಾಡುವಾಗ ಅಂದು ರಂಗಭೂಮಿಯಲ್ಲಿ ನಡೆಯುತ್ತಿದ್ದ ಅದ್ಭುತ ನಾಟಕ ಪ್ರಯೋಗಗಳನ್ನು ಕಂಡು ನಮಗೂ ಹಾಗೆ ನಾಟಕ ಮಾಡುವ ಪ್ರೇರಣೆಯಾಯ್ತು. ರಂಗಭೂಮಿಯಲ್ಲಿ ತರಬೇತಿ ಪಡೆದೆವು. 1971ರಲ್ಲಿ ‘ಕಲಾಗಂಗೋತ್ರಿ’ ತಂಡ ಹುಟ್ಟುಹಾಕಿ ನಾಟಕರಂಗದಲ್ಲಿ ಸಾಗುತ್ತ ಬಂದೆವು”.ಬಿ. ವಿ. ರಾಜಾರಾಂ ವಿದ್ಯಾಸಾಧನೆಗಳಲ್ಲಿ ಬಿ.ಕಾಂ, ನಾಟಕ ಡಿಪ್ಲೊಮ, ಎಂ.ಎ. ಕನ್ನಡ, ಎಂ.ಎ. ಸಂಸ್ಕೃತ, ಪಿಎಚ್.ಡಿ, ಎಂ.ಪಿಲ್ ಮುಂತಾದ ಉತ್ತುಂಗದ ಸಾಧನೆಗಳಿವೆ. ಪಿಎಚ್.ಡಿಗಾಗಿ ಅವರು ಆಯ್ದ ವಿಚಾರ ‘ನಾಟ್ಯ ಶಾಸ್ತ್ರ ಮತ್ತು ಆಧುನಿಕ ರಂಗಭೂಮಿಯ ಮೇಲೆ ಅದರ ಪ್ರಭಾವ’. ಅಪಾರ ಓದುಗರಾದ ಅವರು ಬೌದ್ಧ ಧರ್ಮ ಗ್ರಂಥಗಳ ಅಪಾರ ಅಧ್ಯಯನವನ್ನೂ ಮಾಡಿದ್ದು ಪಾಲಿ ಭಾಷೆ ಡಿಪ್ಲೊಮಾ ಪಡೆದಿದ್ದಾರೆ. ಹಿಂದಿ ಉತ್ತಮವರೆಗೆ ಸಾಧನೆ ಮಾಡಿದ್ದಾರೆ.ಬಿ. ವಿ. ರಾಜಾರಾಂ ನಾಟಕವನ್ನೇ ಬದುಕಾಗಿಸಿಕೊಂಡ ಅಪರೂಪದ ಸಾಧಕರು. ಬೆಂಗಳೂರಿನ ಮಹಾಬೋಧಿ ಸೊಸೈಟಿ; ಬೆಂಗಳೂರು ವಿಶ್ವವಿದ್ಯಾಲಯದ ನೃತ್ಯ ನಾಟಕ ಸಂಗೀತ ವಿಭಾಗ; ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕೋರಿಯಾಗ್ರಫಿ ಕಾಲೇಜು ಮುಂತಾದೆಡೆ ಇವರ ಸೇವೆ ಸಂದಿತು. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರೊಫೆಸರ್ ಆಗಿಯೂ ಇವರ ಸೇವೆ ಸಲ್ಲುತ್ತಿದೆ.ಬಿ.ವಿ. ರಾಜಾರಾಂ ಅದ್ಭುತ ರಂಗನಟ, ಉಪನ್ಯಾಸಕ, ರಂಗನಿರ್ದೇಶಕ, ರಂಗತಂತ್ರಜ್ಞ, ರಂಗಸಂಘಟಕರಾಗಿ ಬೆಳೆದಿದ್ದಾರೆ. ಅವರು ದೂರದರ್ಶನ ಮತ್ತು ಆಕಾಶವಾಣಿ ಕಲಾವಿದ. ಕಿರುತೆರೆ ಹಿರಿತೆರೆಗಳಲ್ಲಿಯೂ ನಟಿಸಿದ್ದ ಇವರು ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯರಾಗಿ ಮತ್ತು ಅಧ್ಯಕ್ಷರಾಗಿ ಅಪಾರ ಸೇವೆ ಸಲ್ಲಿಸಿದವರು. ಮೈಸೂರಿನ ‘ರಂಗಾಯಣ’ದ ನಿರ್ದೇಶಕರಾಗಿಯೂ ಇವರ ಸೇವೆ ಅಪಾರ. ಮೈಸೂರು ವಿಶ್ವವಿದ್ಯಾನಿಲಯದ ಡಾ.ಗುಬ್ಬಿವೀರಣ್ಣ ರಂಗಪೀಠದಲ್ಲಿಯೂ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. ಕೇಂದ್ರ ಸರ್ಕಾರದ ಫಿಲಂ ಸೆನ್ಸಾರ್ ಬೋರ್ಡ್ ಸದಸ್ಯರಾಗಿದ್ದರು. ಅವರು ಕೇಂದ್ರ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada