ಚಾಮರಾಜನಗರ: ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್ ತಮ್ಮ ಸ್ನೇಹಿತರ ಜೊತೆ ಇಂದು ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ವತಿಯಿಂದ ದರ್ಶನ್ ಅವರನ್ನು ಗೌರವಿಸಲಾಯಿತು.
ಮುದ್ದು ಮಾದಪ್ಪನಿಗೆ ಪ್ರಾರ್ಥನೆ ಸಲ್ಲಿಸಿ ನಟ ದರ್ಶನ್ ಹಿಂತಿರುಗುವಾಗ ನೆಚ್ಚಿನ ನಟನನ್ನು ಕಾಣಲು ಬೆಟ್ಟಕ್ಕೆ ಬಂದಿದ್ದ ಭಕ್ತರು ಮುಗಿಬಿದ್ದರು. ಜನದಟ್ಟನೆ ಚದುರಿಸಲು ಪೊಲೀಸರು ಹರಸಾಹಸಪಟ್ಟರು. ಹುಟ್ಟುಹಬ್ಬಕ್ಕೆ 3 ದಿನ ಬಾಕಿ ಇರುವಾಗ ನಟ ದರ್ಶನ್ ಮಲೆ ಮಹದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಪ್ರಸಾದವನ್ನು ಸ್ವೀಕರಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಇನ್ನು ನಟ ದರ್ಶನ್ ಜೊತೆಗೆ ಸ್ನೇಹಿತ ಸಚ್ಚಿದಾನಂದ ಕೂಡ ಇದ್ದರು. ಮತ್ತೊಂದು ಕಡೆ ದರ್ಶನ್ ನಿವಾಸದಲ್ಲಿ ಹುಟ್ಟಹಬ್ಬಕ್ಕೆ ಸಿದ್ಧತೆ ನಡೀತಿದೆ. ಎರಡು ವರ್ಷಗಳಿಂದ ಹುಟ್ಟುಹಬ್ಬದ ದಿನ ದರ್ಶನ್ ಅಭಿಮಾನಿಗಳನ್ನು ಭೇಟಿ ಮಾಡಿರಲಿಲ್ಲ. ಆದರೆ ಈ ಬಾರಿ ಅಭಿಮಾನಿಗಳಿಗೆ ಆ ಅವಕಾಶ ಸಿಗಲಿದೆ. ಕಳೆದ ಕೆಲ ವರ್ಷಗಳಿಂದ ದರ್ಶನ್ ತಮ್ಮ ಹುಟ್ಟುಹಬ್ಬಕ್ಕೆ ಕೇಕ್, ಹಾರ, ಉಡುಗೊರೆ ತರಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದೇ ಹಣದಲ್ಲಿ ಅಕ್ಕಿ, ಬೇಳೆ ಸೇರಿದಂತೆ ದವಸ ಧಾನ್ಯ ತಂದು ಕೊಡಲು ಹೇಳುತ್ತಿದ್ದಾರೆ. ಅದನ್ನು ಅವಶ್ಯ ಇರುವವರಿಗೆ ತಲುಪಿಸುತ್ತಿದ್ದಾರೆ.
ಈ ವರ್ಷ ಕೂಡ ದರ್ಶನ್ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇನ್ನು ದರ್ಶನ್ ಹುಟ್ಟುಹಬ್ಬಕ್ಕೆ D56 ಸಿನಿಮಾ ಟೈಟಲ್ ಕೂಡ ರಿವೀಲ್ ಆಗಲಿದೆ. ತರುಣ್ ಸುಧೀರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದು, ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada