ಕಳೆದ ಕೆಲವು ದಿನಗಳಿಂದ ಅಸ್ಸಾಂ ಸುರಿಯುತ್ತಿರುವ ಭಾರಿ ಮಳೆಗೆ ಪ್ರವಾಹದ ಸ್ಥಿತಿ ನಿರ್ಮಾಣ ಆಗಿದೆ. ಕಳೆದೆರಡು ದಿನಗಳಲ್ಲಿ ಮಳೆ ಕೊಂಚ ಕಡಿಮೆಯಾಗಿದ್ದರೂ, ಪರಿಸ್ಥಿತಿ ಮಾತ್ರ ಇನ್ನೂ ಸುಧಾರಿಸಿಲ್ಲ. ಹೀಗಾಗಿ ಈಗಾಗಲೇ ಸುಮಾರು 127ಕ್ಕೂ ಅಧಿಕ ಮಂದಿ ಈ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಇನ್ನೂ ಹಲವು ಮಂದಿ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ.
ಅಸ್ಸಾಂನ ಬಜಾಲಿ, ಬಕ್ಸಾ, ಬರ್ಪೇಟಾ, ಕ್ಯಾಚರ್, ಚಿರಾಂಗ್, ದರ್ರಾಂಗ್, ಧೇಮಾಜಿ, ಧುಬ್ರಿ, ದಿಬ್ರುಗಢ, ಗೋಲ್ಪಾರಾ, ಗೋಲಾಘಾಟ್, ಹೈಲಕಂಡಿ, ನಲ್ಬರಿ, ಸೋನಿತ್ಪುರ್, ದಕ್ಷಿಣ ಸಲ್ಮಾರಾ, ತಮುಲ್ಪುರ್ ಮತ್ತು ಉದಲ್ಗುರಿ ಜಿಲ್ಲೆಗಳಲ್ಲಿ 22,21,500 ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿವೆ. ಈ ಮಧ್ಯೆ ಉದ್ಯಮಿಗಳು ಹಾಗೂ ಸೆಲೆಬ್ರೆಟಿಗಳು ಅಸ್ಸಾಂ ಪ್ರವಾಹ ಪೀಡಿತರ ನೆರವಿಗೆ ಬಂದಿದ್ದಾರೆ.
ಪ್ರವಾಹ ಪೀಡಿತರಿಗೆ 25 ಲಕ್ಷ ರೂ. ನೀಡಿದ ಆಮಿರ್ ಖಾನ್
ಆಮಿರ್ ಖಾನ್ ಸಿನಿಮಾಗಳಷ್ಟೇ ಅಲ್ಲ. ಸಿನಿಮಾಗಳಲ್ಲಿ ನಟಿಸುವುದರ ಜೊತೆ ಜೊತೆಗೆ ಸಾಮಾಜಿಕ ಕೆಲಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಕಷ್ಟದ ಸಂದರ್ಭಗಳಲ್ಲಿ ಆಗಾಗ ಸಹಾಯಕ್ಕೆ ಹಾಗೂ ನೆರವಿಗೆ ಧಾಮಿಸುತ್ತಿದ್ದಾರೆ. ಈ ಬಾರಿ ಕೂಡ ಅಸ್ಸಾಂನ ಪ್ರವಾಹ ಪೀಡಿತ ಜನರಿಗೆ ನೆರವಾಗಲು ಅಮೀರ್ ಖಾನ್ ಮುಂದಾಗಿದ್ದಾರೆ.
ಅಮಿರ್ ಖಾನ್ ಅಸ್ಸಾಂ ರಾಜ್ಯ ಸರ್ಕಾರದ ಜೊತೆ ಕೈ ಜೋಡಿಸಿದ್ದು, 25 ಲಕ್ಷ ರೂಪಾಯಿಯನ್ನು ಅಸ್ಸಾಂ ಸಿಎಂ ರಿಲೀಫ್ ಫಂಡ್ಗೆ ನೀಡಿದ್ದಾರೆ. ಈ ಹಿಂದೆ ಕೂಡ ಆಮಿರ್ ಖಾನ್ ಇಂತಹ ಸಾಮಾಜಿಕ ಕೆಲಸಗಳಿಗೆ ನೆರವಾಗಿದ್ದರು. ಆಮಿರ್ ನೆರವಿಗೆ ಧಾವಿಸಿದ್ದಕ್ಕೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಟ್ವೀಟ್ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.
ಆಮಿರ್ ಖಾನ್ಗೆ ಅಸ್ಸಾಂ ಸಿಎಂ ಧನ್ಯವಾದ
ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಇಂತಹ ಸಂಕಷ್ಟದ ಸಮಯದಲ್ಲಿ ಆಮಿರ್ ನೆರವಿಗೆ ಬಂದಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ. ” ಬಾಲಿವುಡ್ ನಟ ಆಮಿರ್ ಖಾನ್ ಪ್ರವಾಹಕ್ಕೆ ಸಿಲುಕಿರುವ ಜನರಿಗೆ ಸಹಾಯ ಹಸ್ತ ಚಾಚಿದ್ದಾರೆ. ಅವರು 25 ಲಕ್ಷ ಸಿಎಂ ರಿಲೀಫ್ ಫಂಡ್ಗೆ ನೀಡುವ ಮೂಲಕ ನೆರವಾಗಿದ್ದಾರೆ. ಅವರ ಕಾಳಜಿ ಹಾಗೂ ಉದಾರತೆಯನ್ನು ತೋರಿದ್ದಕ್ಕಾಗಿ ಧನ್ಯವಾದಗಳು.” ಎಂದು ಟ್ವೀಟ್ ಮಾಡಿದ್ದಾರೆ.
ಇನ್ನು ಸಿನಿಮಾ ವಿಷಯಕ್ಕೆ ಬರುವುದಾದರೇ, ಆಮಿರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ’ ಬಿಡುಗಡೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆಮಿರ್ ಜೊತೆ ಕರೀನಾ ಕಪೂರ್, ಟಾಲಿವುಡ್ ನಟ ನಾಗಚೈತನ್ಯ ಕೂಡ ನಟಿಸಿದ್ದಾರೆ. ಇದು ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಸಿನಿಮಾ ರಿಮೇಕ್ ಆಗಿದ್ದು,ಆಗಸ್ಟ್ 11ಕ್ಕೆ ಬಿಡುಗಡೆಯಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada