ಹಾಸನ ಸಕಲೇಶಪುರದ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು:

ಹಾಸನ ಸಕಲೇಶಪುರದ ಪ್ರಜಾಧ್ವನಿ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಮಾತುಗಳು: ರಾಜ್ಯದ ಜನರ ಆಚಾರ ವಿಚಾರ, ಸಂಕಷ್ಟ, ನೋವುಗಳನ್ನು ಅರಿತು, ಅವುಗಳಿಗೆ ಸ್ಪಂದಿಸಲು ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದೇವೆ. ಕಳೆದ 30 ವರ್ಷಗಳಿಂದ ಈ ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರು ಆಯ್ಕೆಯಾಗಿಲ್ಲ. ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಎತ್ತಿನಹೊಳೆ ಯೋಜನೆ ಮಾಡಿದೆವು. ಅನ್ನಭಾಗ್ಯ ಯೋಜನೆ ನೀಡಿದೆವು. ರೈತರಿಗೆ 7 ತಾಸು ವಿದ್ಯುತ್ ನೀಡಿದೆವು. ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹ ಧನ ನೀಡಿದೆವು. ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ನೀಡಿದೆವು. ಈಗ ಈ ಭಾಗದ ಜನರ ಸಮಸ್ಯೆಗಳೇನು, ಇವರಿಗೆ ಯಾವ ರೀತಿಯ ನೆರವಿನ ಅಗತ್ಯವಿದೆ ಎಂದು ತಿಳಿಯಲು ಬಂದಿದ್ದೇವೆ. ಎಸ್.ಎಂ. ಕೃಷ್ಣಾ ಅವರ ಕಾಲದಲ್ಲಿ ಮೋಟಮ್ಮ ಅವರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಮಹಿಳೆಯರಿಗೆ ಶಕ್ತಿ ತುಂಬಲು ಸ್ತ್ರೀ ಶಕ್ತಿ ಸಂಘಗಳಿಗೆ ಉತ್ತೇಜನ ನೀಡಲಾಯಿತು. ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ನೀಡಲಾಯಿತು. ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದವರಿಗೆ ಜಮೀನು ನೀಡುವ ಕಾನೂನು ತಿದ್ದುಪಡಿ ಮಾಡಿದೆವು. ದೇವರಾಜ ಅರಸು ಅವರ ಕಾಲದಲ್ಲಿ ಉಳುವವನೇ ಭೂಮಿಯ ಒಡೆಯ ಎಂದು ಜಮೀನು ನೀಡಿದೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಬ್ಯಾಂಕುಗಳ ರಾಷ್ಟ್ರೀಕರಣ, ಪಿಂಚಣಿ ಯೋಜನೆ ಜಾರಿ ಮಾಡಿದ್ದೆವು. ನಮಗೆ ಬಹುಮತ ಬಾರದೇ ಇದ್ದಾಗ, ಐದು ವರ್ಷ ಸರ್ಕಾರ ಮಾಡುವಂತೆ ದಳದವರಿಗೆ ಬೆಂಬಲ ನೀಡಿದೆವು. ಅವರ ಅಧಿಕಾರ ಅವಧಿಯಲ್ಲಿ ನಿಮ್ಮ ಜೀವನದಲ್ಲಿ ಏನಾದರೂ ಬದಲಾವಣೆ ಆಯಿತಾ? ಇನ್ನು ಬಿಜೆಪಿ ಡಬಲ್ ಇಂಜಿನ್ ಸರ್ಕಾರದಿಂದ ಏನಾದರೂ ಅನುಕೂಲ ಆಗಿದೆಯಾ? ಇತ್ತೀಚೆಗೆ 3 ಕೋಟಿ ಅನುದಾನ ಬಂದಿದ್ದು, ನಂತರ ಅದು ಹಾಸನ ಹಾಗೂ ಹೊಳೆನರಸಿಪುರಕ್ಕೆ ಹೋಯಿತು ಎಂದು ನಮ್ಮ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಈ ಭಾಗದಲ್ಲಿ ಕಾಡಾನೆ ದಾಳಿಯಿಂದ ಆಸ್ತಿ ಹಾನಿ ಜತೆಗೆ 78 ಜನ ಸತ್ತಿದ್ದು, ಇದಕ್ಕೆ ಸರ್ಕಾರ ಯಾವ ರೀತಿ ಪರಿಹಾರ ನೀಡಿದೆ? ಕೋವಿಡ್ ಬಂದ ಸಂದರ್ಭದಲ್ಲಿ ಶಾಸಕರು, ಸರ್ಕಾರದಿಂದ ಏನಾದರೂ ಸಹಾಯ ಸಿಕ್ಕಿತಾ? ಬೀದಿ ವ್ಯಾಪಾರಿಗಳಿಗೆ ಹಣ ಕೊಟ್ಟರಾ? ಆಸ್ಪತ್ರೆ ಖರ್ಚು, ಸತ್ತವರಿಗೆ ಪರಿಹಾರ ಕೊಟ್ಟರಾ? ಕೋವಿಡ್ ಸಮಯದಲ್ಲಿ ಜನ ನರಳುತ್ತಿರುವಾಗ ರೈತರ ಬೆಳೆಗೆ ಬೆಲೆ ನಿಗದಿ ಮಾಡಲು ಆಗಲಿಲ್ಲ. ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೆ 36 ಮಂದಿ ಸತ್ತಾಗ ಒಬ್ಬ ಮಂತ್ರಿ, ಅಧಿಕಾರಿ ಹೋಗಿ ಭೇಟಿ ಮಾಡಲಿಲ್ಲ. ನಾವು ಭೇಟಿ, ಪರಿಶೀಲನೆ ಮಾಡಿ ಅವರಿಗೆ ಪಕ್ಷದ ವತಿಯಿಂದ 1 ಲಕ್ಷ ಪರಿಹಾರ ನೀಡಿ ಸಾಂತ್ವಾನ ಹೇಳಿದೆವು. ನಂತರ ನಮ್ಮ ಸರ್ಕಾರ ಬಂದಾಗ ನಿಮಗೆ ಮೆಡಿಕಲ್ ಕಾಲೇಜಿನಲ್ಲಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದೆವು. ಈ ಸರ್ಕಾರಕ್ಕೆ ಕಿವಿ, ಕಣ್ಣು, ಹೃದಯವಿಲ್ಲ. ಈ ಸರ್ಕಾರ ನಿಮಗೆ ಬೇಕಾ? ಬಿಜೆಪಿಯವರು ನಿಮ್ಮ ಆದಾಯ ಡಬಲ್ ಮಾಡುತ್ತೇವೆ, ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ, ಅಚ್ಛೇದಿನ ತರುತ್ತೇವೆ ಎಂದರು. ಯಾವುದಾದರೂ ಭರವಸೆ ಈಡೇರಿಸಿದ್ದಾರಾ? ಇಲ್ಲ. ಆದರೂ ಮತ್ತೆ ಮತ ಯಾಕೆ ಕೇಳುತ್ತಿದ್ದಾರೆ? ಈ ಭಾಗದ ಶಾಸಕ ಕುಮಾರಸ್ವಾಮಿ ಅವರು ಹಲವು ಬಾರಿ ಗೆದ್ದಿದ್ದರೂ ನಿಮಗೆ ರಕ್ಷಣೆ ನೀಡಲು ಆಗದಿದ್ದರೆ ಹೇಗೆ. ಸ್ವತಃ ಅವರೇ ನನಗೆ ಜನರ ರಕ್ಷಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ಹೇಳಿದ್ದಾರೆ. ಅವರಿಗೆ ನೀವು ವಿಶ್ರಾಂತಿ ನೀಡಬೇಕು. ಅವರಿಗೆ ರೇವಣ್ಣ ಹಾಗೂ ಬಿಜೆಪಿ ಮುಂದೆ ಹೋರಾಟ ಮಾಡಲು ಸಾಧ್ಯವಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕು ಎಂದು ನಾವು ನಿಮ್ಮ ಮುಂದೆ ಬಂದಿದ್ದೇವೆ. ನಾವು ಮಾಡಿದ ಕಾನೂನು ಅನುಷ್ಠಾನಕ್ಕೆ ತರು ಇವರಿಗೆ ಆಗಿಲ್ಲ. ನೀವು ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಕಾಂಗ್ರೆಸ್ ಸರ್ಕಾರ ತಂದರೆ 94ಸಿ ಜಾರಿ ಆಗಲಿದೆ ಹಾಗೂ ಅರಣ್ಯ ಪ್ರದೇಶದಲ್ಲಿ ಆಗುತ್ತಿರುವ ತೊಂದರೆಯನ್ನು ತಪ್ಪಿಸುತ್ತೇವೆ. ಹೇಮಾವತಿ ಮುಳುಗಡೆ ಪ್ರದೇಶದಲ್ಲಿ ನಿಮಗೆ ಸಹಾಯವಾಗಬೇಕಿದೆ. ಎತ್ತಿನಹೊಳೆಯಲ್ಲಿ ಪರಿಹಾರ ಸರಿಯಾಗಿ ಆಗಿಲ್ಲ ಎಂಬ ಅರ್ಜಿಯನ್ನು ಕೊಟ್ಟಿದ್ದಾರೆ.

ಈ ಯಾತ್ರೆ ನಿಮಗೆ ಬದಲಾವಣೆ ತರುವ ಅವಕಾಶ ಕಲ್ಪಿಸಿದೆ. ನೀವು ಹೋರಾಟ ತ್ಯಾಗ ಮಾಡಿ ನಮಗೆ ಶಕ್ತಿ ನೀಡಬಹುದು. ಆಮೂಲಕ ಈ ಸರ್ಕಾರವನ್ನು ಕಿತ್ತುಹಾಕಬಹುದು, ನಿಮ್ಮ ಕ್ಷೇತ್ರದಲ್ಲಿ ಬದಲಾವಣೆ ತರಬಹುದು. ಈ ಚುನಾವಣೆ ಸಾಮೂಹಿಕ ನಾಯಕತ್ವದಲ್ಲಿ ನಡೆಯುತ್ತಿದೆ. ಮೋದಿ ಅವರು ರಾಜ್ಯಕ್ಕೆ ಬಂದು ಯಡಿಯೂರಪ್ಪ ಅವರಿಗೆ ನಮ್ರತೆಯಿಂದ ನಮಸ್ಕರಿಸುತ್ತಿದ್ದಾರೆ. ಆದರೆ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದ್ದು ಯಾಕೆ? ಇನ್ನು ಅಮಿತ್ ಶಾ ಅವರು ರಾಜ್ಯದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಒಪ್ಪಿಕೊಂಡಿದ್ದಾರೆ. ಈ ಡಬಲ್ ಇಂಜಿನ್ ಸರ್ಕಾರ ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದೆ. ವಿಧಾನಸೌಧದಿಂದ ಯಾವುದೇ ಸರ್ಕಾರಿ ಕಚೇರಿಯವರೆಗೆ ಪ್ರತಿಯೊಂದು ಕಚೇರಿಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸವಾಗಿಲ್ಲ.

ಸಚಿವ ಈಶ್ವರಪ್ಪ ಅವರಿಗೆ 40% ಲಂಚ ನೀಡಲಾಗದೇ ಬಿಜೆಪಿ ಕಾರ್ಯಕರ್ತ ನೇಣಿಗೆ ಶರಣಾದ. ಅಮಿತ್ ಶಾ ಅವರು ಹೇಳಿದಂತೆ ಈ ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹ ಮಾಡಲು ಬಿಜೆಪಿ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತನ್ನಿ. ಬೆಲೆ ಏರಿಕೆಯಿಂದ ತತ್ತರಿಸಿರುವ ಜನರ ಬದುಕಿನಲ್ಲಿ ಬೆಳಕು ತರಬೇಕು ಎಂಬ ಉದ್ದೇಶದಿಂದ ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಇದರಿಂದ ಪ್ರತಿ ತಿಂಗಳು 1500 ರೂ. ಉಳಿತಾಯವಾಗುತ್ತದೆ. ಇನ್ನು ಮಹಿಳೆಯರಿಗೆ ಬೆಲೆ ಏರಿಕೆ ಸಮಸ್ಯೆಯಿಂದ ಪರಿಹಾರ ನೀಡಲು ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ಗೃಹಲಕ್ಷ್ಮಿ ಯೋಜನೆ ಘೋಷಣೆ ಮಾಡಿದ್ದೇವೆ. ಈ ಎರಡು ಯೋಜನೆ ಮೂಲಕ ವರ್ಷಕ್ಕೆ 42 ಸಾವಿರದಂತೆ 5 ವರ್ಷಕ್ಕೆ 2 ಲಕ್ಷದಷ್ಟು ಆರ್ಥಿಕ ಶಕ್ತಿ ತುಂಬಲಾಗುವುದು. ಬಿಜೆಪಿ, ದಳದವರು ಇಂತಹ ಯಾವುದಾದರೂ ಒಂದು ಕಾರ್ಯಕ್ರಮ ನೀಡಿದ್ದಾರಾ? ಈ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸಹಿ ಹಾಕಿಸಿ ಗ್ಯಾರಂಟಿ ಕಾರ್ಡ್ ನೀಡಲಾಗುವುದು. ನೀವು ಮನೆ ಮನೆಗೆ ಈ ಕಾರ್ಡ್ ತಲುಪಿಸಬೇಕು. ಅತಿ ಹೆಚ್ಚು ಮನೆಗೆ ಈ ಕಾರ್ಡ್ ತಲುಪಿಸುವವರಿಗೆ ವಿಶೇಷ ಬಹುಮಾನ ನೀಡಲಾಗುವುದು.

ನೀವು ದಳ ಹಾಗೂ ಬಿಜೆಪಿ ವಿರುದ್ಧ ಹೋರಾಟ ಮಾಡಬೇಕು. ಇಲ್ಲಿರುವ ಪ್ರತಿಯೊಬ್ಬರೂ 10 ಮತಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಹಾಕಿಸಬೇಕು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುತ್ತದೆ. ಕಾಂಗ್ರೆಸ್ ಸರ್ಕಾರ ತನ್ನ ಅವಧಿಯಲ್ಲಿ, ಉಳುವವನಿಗೆ ಭೂಮಿ, ಆಣೆಕಟ್ಟುಗಳು, ವಿದ್ಯಾಸಂಸ್ಥೆ, ಬಡವರಿಗೆ ಜಮೀನು, ಮನೆ, ಪಿಂಚಣಿ, ರೈತರಿಗೆ ಉಚಿತ ವಿದ್ಯುತ್, ಬಿಸಿಯೂಟ, ಸ್ತ್ರೀ ಶಕ್ತಿ, ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್, ಹಾಲಿಗೆ 5 ರೂ. ಪ್ರೋತ್ಸಾಹ ಧನ ಕೊಟ್ಟಿತು. ಯಡಿಯೂರಪ್ಪ ಅವರ ಕಾಲದಲ್ಲಿ ಸೈಕಲ್ ಹಾಗೂ ಸೀರೆ ಕೊಟ್ಟಿದ್ದು ಬಿಟ್ಟರೆ ಬೇರೇನು ನೀಡಲಿಲ್ಲ.

ಬಿಜೆಪಿಯವರು ನಿಮ್ಮ ತಲೆಯಲ್ಲಿ ಕೇವಲ ಹಿಂದೂ ಮುಸ್ಲಿಂ ಎಂಬ ದ್ವೇಷದ ವಿಷಬೀಜ ಬಿತ್ತುತ್ತಿದ್ದಾರೆ. ನಾವುಕೂಡ ಹಿಂದೂಗಳು ಅಲ್ಲವೇ? ಬಿಜೆಪಿಯವರು ನಾವು ಹಿಂದೂ ನಾವು ಮುಂದು ಎನ್ನುತ್ತಾರೆ. ಆದರೆ ನಾವು ಹಿಂದೂ, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು. ಒಕ್ಕಲಿಗರು, ಲಿಂಗಾಯತರು, ಕುರುಬರು ಎಲ್ಲ ವರ್ಗದವರು ಒಂದು ಎನ್ನುತ್ತೇವೆ. ನಾವು ಕಬ್ಬಿಣವನ್ನು ಎರಡು ರೀತಿ ಬಳಸಬಹುದು. ಬಿಜೆಪಿಯವರು ಕತ್ತರಿಯಂತೆ ನಿಮ್ಮ ಮನಸ್ಸು ಕತ್ತರಿಸಿದರೆ, ಕಾಂಗ್ರೆಸ್ ಪಕ್ಷ ನಿಮ್ಮ ಮನಸ್ಸುಗಳನ್ನು ಸೂಜಿಯಂತೆ ಒಂದುಗೂಡಿಸುತ್ತೇವೆ. ನಾವು ಹುಟ್ಟುವಾಗ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕುತ್ತೇವಾ? ಜಾತಿ ಧರ್ಮ ಬೇರೆಯಾದ ಕಾರಣಕ್ಕೆ ನಾವು ಕುಡಿಯುವ ನೀರು, ನಮ್ಮ ರಕ್ತ, ಬೆವರು ಬೇರೆಯಾಗುತ್ತದೆಯಾ?

ಬಿಜೆಪಿ ಶಾಸಕ ಯತ್ನಾಳ್ ನಮಗೆ ಮುಸಲ್ಮಾನರ ಮತ ಬೇಡ ಎಂದು ಹೇಳಿದ್ದಾನೆ. ಮುಸಲ್ಮಾನರು ಮನುಷ್ಯರಲ್ಲವೇ? ಸಂವಿಧಾನದಲ್ಲಿ ಮುಸಲ್ಮಾನರಿಗೆ, ಕ್ರೈಸ್ತರಿಗೆ, ಜೈನರಿಗೆ ರಕ್ಷಣೆ ಇಲ್ಲವೇ? ನಾವೆಲ್ಲರೂ ಈ ಭೂಮಿ ತಾಯಿಯ ಮಕ್ಕಳು. ಬಿಜೆಪಿ 600 ಭರವಸೆ ನೀಡಿದ್ದು, 550 ಭರವಸೆ ಈಡೇರಿಸಿಲ್ಲ. ಈ ಬಗ್ಗೆ ನಾವು ದಿನನಿತಕ್ಯ ಪ್ರಶ್ನೆ ಕೇಳುತ್ತಿದ್ದು ಯಾವುದಕ್ಕೂ ಉತ್ತರ ನೀಡಿಲ್ಲ. ಅವರ ಈ ವೈಫಲ್ಯದ ಬಗ್ಗೆ ಬಿಜೆಪಿ ಪಾಪದ ಪುರಾಣ ಎಂಬ ಕಿರುಹೊತ್ತಿಗೆ ತಂದಿದ್ದೇವೆ.

ಇಲ್ಲಿ ಕಾಫಿ, ಅಡಿಕೆ, ಮೆಣಸು ಬೆಳೆಗಾರರು ಇದ್ದೀರಿ. ಎಲ್ಲ ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. ಸಚಿವ ಅರಗ ಜ್ಞಾನೇಂದ್ರ ಅವರು ಅಡಿಕೆ ತೆಗೆದುಬಿಡಿ ಎಂದು ಹೇಳುತ್ತಾರೆ. ಅಡಿಕೆ ದೇವರ ಸಮಾನ, ವಿಳೆದೆಲೆ ಜತೆ ಅಡಿಕೆ ಇಟ್ಟರೆ ನಮಗೆ ದೇವರ ಸಮಾನ. ಅದನ್ನೇ ಬೇಡ ಎನ್ನುತ್ತಾರೆ. ಅವರ ಕ್ಷೇತ್ರದ ಜನ ಅವರನ್ನು ಖಾಲಿ ಮಾಡಿಸಲು ತೀರ್ಮಾನಿಸಿದ್ದಾರೆ. ನೀವು ಕೂಡ ಬಿಜೆಪಿ ಹಾಗೂ ಜನತಾದಳವನ್ನು ಖಾಲಿ ಮಾಡಿಸಬೇಕು.

ಕಮಲ ಕೆರೆಯಲ್ಲಿದ್ದರೆ ಚೆಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯದಂತಹ ಜನಪರ ಕಾರ್ಯಕ್ರಮ ನೀಡುವ ಈ ಕೈಗೆ ನೀವು ಅಧಿಕಾರ ನೀಡಬೇಕು. ಈ ದಾನ ಧರ್ಮ ಮಾಡುವ ಕೈ ಜತೆ ಕೈ ಜೋಡಿಸಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೋದಿ, ಶಾ ಬಿಜೆಪಿ ಚುನಾವಣಾ ಏಜೆಂಟ್.

Wed Mar 1 , 2023
  ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ದೇಶದ ಕೆಲಸ ಮಾಡುವುದನ್ನು ಬಿಟ್ಟು ಬಿಜೆಪಿಯ ಚುನಾವಣಾ ಏಜೆಂಟರಾಗಿ ದುಡಿಯುತ್ತಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವಂತೆ ಮೋದಿ, ಶಾ ಪದೇ ಪದೇ ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ಟೀಕಿಸಿರುವ ಸಿದ್ದರಾಮಯ್ಯ, ‘ರಾಜ್ಯದ ಜನರಿಂದ ದೋಚಿಕೊಂಡ ಸಂಪತ್ತನ್ನು ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಬದಲು ಚುನಾವಣಾ ಪ್ರಚಾರಗಳಿಗೆ ಖರ್ಚು ಮಾಡುತ್ತಿದ್ದಾರೆ’ ಎಂದು […]

Advertisement

Wordpress Social Share Plugin powered by Ultimatelysocial