ಅಮ್ರೋಹ (ಉತ್ತರ ಪ್ರದೇಶ): ಮದುವೆ ಮನೆಯಲ್ಲಿ ಆಗುವ ಹಲವಾರು ಘಟನೆಗಳು ಸಾಕಷ್ಟು ವೈರಲ್ ಆಗುತ್ತಿವೆ. ಅದೇ ರೀತಿ ಇಲ್ಲೊಂದು ಮದುವೆಯ ಕುರಿತೂ ವೈರಲ್ ಆಗಿದ್ದು, ಇದು ಸ್ವಲ್ಪ ಭಿನ್ನವಾಗಿದೆ. ಅದೇನೆಂದರೆ ಜೈಲಿನಲ್ಲಿ ಇರುವ ತಮ್ಮ ಸಂಬಂಧಿ ಜೈಲಿನಿಂದ ಹೊರಕ್ಕೆ ಬಂದರೆ ಮಾತ್ರ ಪತ್ನಿಗೆ ತಾಳಿ ಕಟ್ಟುವುದಾಗಿ ಡಿಮಾಂಡ್ ಮಾಡಿರುವ ಘಟನೆ ಇದು.ಇದು ನಡೆದಿದ್ದು, ಉತ್ತರ ಪ್ರದೇಶದ ಅಮ್ರೋಹ ಜಿಲ್ಲೆಯಲ್ಲಿ. ಆಗಿದ್ದೇನೆಂದರೆ, ವರ ನನ್ಹೇ ಸಿಂಗ್ನ ಸಹೋದರ ಸಂಬಂಧಿ ಅಂಕಿತ್ ಎಂಬಾತನ ವಿರುದ್ಧ ಮದುಮಗಳ ಅಪ್ಪ ಕೇಸು ದಾಖಲು ಮಾಡಿದ್ದರು. ಕ್ರಿಮಿನಲ್ ಕೇಸ್ ಒಂದಕ್ಕೆ ಸಂಬಂಧಿಸಿದಂತೆ ಆತನ ವಿರುದ್ಧ ದೂರು ದಾಖಲಾಗಿತ್ತು, ಅವನು ಜೈಲಿನಲ್ಲಿ ಇದ್ದ.
ಮದುವೆ ನಡೆಯುವವರೆಗೆ ಸುಮ್ಮನಿದ್ದ ವರ, ತಾಳಿ ಕಟ್ಟುವ ಸಮಯದಲ್ಲಿ ಈ ಕೇಸನ್ನು ವಾಪಸ್ ಪಡೆದು ಜೈಲಿನಲ್ಲಿ ಇರುವ ಅಂಕಿತ್ನನ್ನು ಹೊರಕ್ಕೆ ಕರೆತರಬೇಕು. ಅಲ್ಲಿಯವರೆಗೆ ತಾಳಿ ಕಟ್ಟುವುದಿಲ್ಲ ಎಂದು ಪಟ್ಟು ಹಿಡಿದ. ಇದರಿಂದ ಮದುವೆ ಮನೆಯಲ್ಲಿ ಬಹಳ ಜೋರ ಗಲಾಟೆ ನಡೆದು, ಕೊನೆಗೆ ವರನ ಮಾತಿಗೆ ವಧುವಿನ ಅಪ್ಪ ತಲೆಬಾಗಲೇಬೇಕಾಯ್ತು.
ನಂತರ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತು. ಆಮೇಲೆ ತಿಳಿದದ್ದು ಇನ್ನೊಂದು ವಿಷಯ, ಈ ಜೋಡಿಗೆ ಇದಾಗಲೇ ಮದುವೆಯಾಗಿದ್ದು, ಸಾಮೂಹಿಕ ವಿವಾಹದ ಪ್ರಯೋಜನವನ್ನು ಪಡೆದುಕೊಳ್ಳಲು ಪುನಃ ಮದುವೆ ಆಗುತ್ತಿದ್ದಾರೆ ಎಂಬುದು. ಇದೀಗ ಸಹೋದರ ಸಂಬಂಧಿಯನ್ನು ಜೈಲಿನಿಂದ ಹೊರಕ್ಕೆ ಬಿಡುವ ಮಾತನ್ನು ಪಕ್ಕಕ್ಕಿಟ್ಟಿರುವ ಪೊಲೀಸರು ಈ ದಂಪತಿ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada