ನಗರಗಳಲ್ಲಿ ಶಬ್ದ ಮಾಲಿನ್ಯದ (Noise Pollution) ಬಗ್ಗೆ ಬಹಳ ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ವಾಹನಗಳ ಹಾರ್ನ್ ಸದ್ದು, ಕೈಗಾರಿಕೆಗಳ ಯಂತ್ರಗಳ ಸದ್ದು ಮೊದಲಾದವು ನಗರವಾಸಿಗಳ ನಿದ್ದೆಗೆಡಿಸುತ್ತಿದ್ದವು. ಇತ್ತೀಚೆಗೆ ಈ ಶಬ್ದಮಾಲಿನ್ಯ ವಿಚಾರ ಮುನ್ನೆಲೆಗೆ ಬಂದಿದೆ.
ಮಸೀದಿಗಳಲ್ಲಿ ಧ್ವನಿವರ್ಧಕಗಳ ಮೂಲಕ ಕೂಗಲಾಗುವ ಬೆಳಗಿನ ಪ್ರಾರ್ಥನೆಯ ಆಜಾನ್ (Azaan) ಸದ್ದಿಗೆ ಹಲವರು ಕೆಂಗಣ್ಣು ಬೀರಿದ್ದಾರೆ. ಬಲಪಂಥೀಯ ಪಕ್ಷಗಳು ಆಜಾನ್ ವಿರುದ್ಧ ದೊಡ್ಡಮಟ್ಟದ ಪ್ರಚಾರವನ್ನೇ ಮಾಡುತ್ತಿವೆ.
ಆಜಾನ್ ಸದ್ದಿನ ಬಗ್ಗೆ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆವರಷ್ಟೇ ಅಲ್ಲ ಸಮಾಜದ ಇತರ ರಾಜಕೀಯೇತರ ವ್ಯಕ್ತಿಗಳೂ ಆಕ್ಷೇಪ ವ್ಯಕ್ತಪಡಿಸಿರುವುದುಂಟು. ಹಾಗಾದರೆ ಆಜಾನ್ ಸದ್ದಿನಿಂದ ಅಷ್ಟು ಶಬ್ದಮಾಲಿನ್ಯ ಆಗುತ್ತದಾ?
ಕಾನೂನು ಪ್ರಕಾರ ಶಬ್ದ ಮಾಲಿನ್ಯ ಎಂದರೇನು?: ವಾಯು ಮಾಲಿನ್ಯದ ರೀತಿಯಲ್ಲಿ ಶಬ್ದ ಮಾಲಿನ್ಯ ವಿಚಾರವೂ ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ವ್ಯಾಪ್ತಿಗೆ ಬರುತ್ತದೆ. ಕರ್ಕಶ ಎನಿಸುವ ಶಬ್ದವನ್ನು ಮಾಲಿನ್ಯ ಎಂದು ಪರಿಗಣಿಸಲಾಗುತ್ತದೆ. ಕೇಳುಗರಿಗೆ ಕಿರಿಕಿರಿ ಉಂಟು ಮಾಡುವ, ಕಿವಿಗೆ ನೋವು ಮಾಡುವ ಯಾವುದೇ ಶಬ್ದವನ್ನು ನಾಯ್ಸ್ (Noise) ಅಥವಾ ಕರ್ಕಶ ಸದ್ದು ಎಂದು ಹೇಳಲಾಗುತ್ತದೆ.
ವಸತಿ ಪ್ರದೇಶ, ಕೈಗಾರಿಕೆ ಪ್ರದೇಶ, ವಾಣಿಜ್ಯ ಪ್ರದೇಶಗಳಲ್ಲಿ ಶಬ್ದ ಮಾಲಿನ್ಯಕ್ಕೆ ಕಾನೂನುಗಳ ಮೂಲಕ ಮಿತಿ ಹಾಕಲಾಗಿದೆ. ಕರ್ನಾಟಕದಲ್ಲಿ ರೂಪಿಸಲಾಗಿರುವ ಮಾಲಿನ್ಯ ಕಾಯ್ದೆಯಲ್ಲಿ ಇರುವ ಅಂಶಗಳು ಈ ಕೆಳಕಂಡಂತಿವೆ:
ವಸತಿ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 55dB
ವಸತಿ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 45 ಡಿಬಿ
ಕೈಗಾರಿಕಾ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 75ಡಿಬಿ
ಕೈಗಾರಿಕಾ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 70 ಡಿಬಿ
ವಾಣಿಜ್ಯ ಪ್ರದೇಶಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 55 ಡಿಬಿ
ವಾಣಿಜ್ಯ ಪ್ರದೇಶಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 45 ಡಿಬಿ
ನಿಶಬ್ದ ವಲಯಗಳಲ್ಲಿ ಬೆಳಗಿನ ಹೊತ್ತು ಶಬ್ದ ಮಿತಿ: 50 ಡಿಬಿ
ನಿಶಬ್ದ ವಲಯಗಳಲ್ಲಿ ರಾತ್ರಿ ಹೊತ್ತು ಶಬ್ದ ಮಿತಿ: 40 ಡಿಬಿ
ಲೌಡ್ ಸ್ಪೀಕರ್ ಅಥವಾ ಧ್ವನಿವರ್ಧಕಗಳ ಬಳಕೆಗೆ ಇರುವ ಕಾನೂನು:
ಧ್ವನಿ ವರ್ಧಕಗಳನ್ನು ಬಳಸಲು ಸ್ಥಳೀಯ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯಲೇಬೇಕು ಎಂದಿದೆ ನಿಯಮ. ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡಿದರೂ ಅದು ಹೊರಹಾಕುವ ಸದ್ದಿಗೆ ಮಿತಿ ಇರಬೇಕು. ಇಲ್ಲದಿದ್ದರೆ 10 ಸಾವಿರ ರೂ ದಂಡ ಕಟ್ಟಬೇಕಾಗುತ್ತದೆ. ಅಧಿಕಾರಿಗಳು ಧ್ವನಿವರ್ಧಕ ಅಥವಾ ಮೈಕ್ ಮತ್ತಿತರ ಉಪಕರಣಗಳನ್ನ ಜಫ್ತಿ ಮಾಡಲು ಅವಕಾಶ ಇದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada