ಬೆಂಗಳೂರು, ಜೂ.28. ಪೈಥಾನ್ ಯಂತ್ರ ಬಳಸಿ ನಗರದ ರಸ್ತೆಗುಂಡಿಗಳನ್ನು ಮುಚ್ಚುವ ಕಾಮಗಾರಿ ನಡೆಸಲು ಅಮೆರಿಕನ್ ರೋಡ್ ಟೆಕ್ನಾಲಜಿ ಸಲ್ಯೂಷನ್ಸ್ (ಎಆರ್ಟಿಎಸ್) ಸಂಸ್ಥೆಯೊಂದಿಗೆ ಈವರೆಗೂ ಒಪ್ಪಂದ ಮಾಡಿಕೊಳ್ಳದ ಹಾಗೂ ಕಾರ್ಯಾದೇಶ ಹೊರಡಿಸದ ಬಿಬಿಎಂಪಿಯ ಕ್ರಮವನ್ನು ಹೈಕೋರ್ಟ್ ಮತ್ತೆ ತರಾಟೆ ತೆಗೆದುಕೊಂಡಿದೆ.
ಈಗಾಗಲೇ ಹಲವು ಬಾರಿ ತರಾಟೆಗೆ ತೆಗೆದುಕೊಂಡರೂ ಬುದ್ದಿಕಲಿಯದ ಪಾಲಿಕೆ ತನ್ನ ಹಳೆಯ ಚಾಳಿ ಮುಂದುವರಿಸಿ ಮತ್ತೆ ಹೈಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದೆ.
ಅಷ್ಟೇ ಅಲ್ಲದೆ, ಸಾಕಷ್ಟು ಸಮಯ ನೀಡಲಾಗಿದ್ದರೂ, ಯಾವುದೇ ಕೆಲಸವಾಗಿಲ್ಲ. ಎಲ್ಲದಕ್ಕೂ ಮಿತಿ ಇರುತ್ತದೆ, ಇನ್ನು ಸಹಿಸಲು ಸಾಧ್ಯವಿಲ್ಲ. ರಸ್ತೆ ನಿರ್ವಹಣೆಯ ಕೆಲಸವನ್ನು ಮಿಲಿಟರಿ ಏಜೆನ್ಸಿ ಅಥವಾ ಬೇರೆ ಯಾವುದಾದರೂ ಸಂಸ್ಥೆಗೆ ವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದೆ.
ಮಂಗಲದ ವಿಜಯ್ ಮೆನನ್ ಮತ್ತಿತರರು ಬೆಂಗಳೂರಿನ ರಸ್ತೆ ದುಸ್ಥಿತಿ ಕುರಿತು ಸಲ್ಲಿಸಿರುವ ಅರ್ಜಿಯ ಕುರಿತು ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.
ಆಗ ನ್ಯಾಯಪೀಠ, ಕಳೆದ ವಿಚಾರಣೆ ವೇಳೆ ಎರಡು ದಿನಗಳಲ್ಲಿ ಎಆರ್ ಟಿಎಸ್ ಸಂಸ್ಥೆಯೊಂದಿಗೆ ಒಪ್ಪಂದ ಆಖೈರು ಮಾಡಿಕೊಳ್ಳಲು ಸೂಚಿಸಲಾಗಿತ್ತು, ಏನಾಗಿದ ಎಂದು ಪ್ರಶ್ನಿಸಿತು.
ಪಾಲಿಕೆ ಪರ ವಕೀಲರು, ಇಲ್ಲ ಇನ್ನೂ ಒಪ್ಪಂದ ಏರ್ಪಟ್ಟಿಲ್ಲ. ಅದಕ್ಕೆ ಸ್ವಲ್ಪ ಸಮಯಾವಕಾಶ ನೀಡಬೇಕೆಂದರು. ಅದಕ್ಕೆ ಸಿಟ್ಟಿಗೆದ್ದ ಸಿಜೆ, ಮತ್ತೆ ಬಿಬಿಎಂಪಿ ಕ್ರಮದ ವಿರುದ್ಧ ಬೇಸರ ವ್ಯಕ್ತಪಡಿಸಿ ಹರಿಹಾಯ್ದರು. ಕೆಲ ಕಾಲ ವಿಚಾರಣೆ ನಂತರ ನ್ಯಾಯಪೀಠ, ಪಾಲಿಕೆಯ ಮುಖ್ಯ ಆಯುಕ್ತರು ಹಾಗೂ ಅಧಿಕಾರಿಗಳನ್ನು ಅಮಾನತುಪಡಿಸುವಂತೆ ಸರ್ಕಾರಕ್ಕೆ ಆದೇಶಿಸುತ್ತೇವೆ ಎಂದು ಕಿಡಿ ಕಾರಿತು.
ಒಂದು ದಿನ ಗಡುವು:
ಕೊನೆಗೆ ಅಂತಿಮವಾಗಿ ಒಂದು ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರೊಳಗೆ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡು, ಕಾರ್ಯಾದೇಶ ಹೊರಡಿಸಿ ಕೋರ್ಟ್ಗೆ ದಾಖಲೆಗಳನ್ನು ಸಲ್ಲಿಸಬೇಕು. ಇಲ್ಲವಾದರೆ ಬಿಬಿಎಂಪಿ ವಿರುದ್ಧ ಕಠಿಣ ಆದೇಶ ಹೊರಡಿಸಲು ನ್ಯಾಯಾಲಯ ಯಾವುದೇ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿತು.
ಮುಂದಿನ ವಿಚಾರಣೆ ವೇಳೆ ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಮುಖ್ಯ ಇಂಜಿನಿಯರ್ ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ಸೂಚನೆ ನೀಡಿತು.
ಕಳೆದ ವಿಚಾರಣೆ ವೇಳೆ ನ್ಯಾಯಪೀಠ, ಮಳೆಗಾಲ ಆರಂಭವಾಗಿದೆ ನಗರದ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ, ಸಮಸ್ಯೆಗಳನ್ನು ಹೊತ್ತುಕೊಂಡು ಕೋರ್ಟ್ ಮುಂದೆ ಬರಬೇಡಿ ಎಂದು ಬಿಬಿಎಂಪಿ ಹಾಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ಪಡೆದಿರುವ ಅಮೆರಿಕನ್ ರೋಡ್ ಟೆಕ್ನಾಲಜೀಸ್ ಸಂಸ್ಥೆ (ಎಆರ್ಟಿಸಿ)ಗೆ ತಾಕೀತು ಮಾಡಿತ್ತು.
ಅರ್ಜಿ ವಿಚಾರಣೆಗೆ ಬಂದಾಗ ಎಆರ್ಟಿಸಿ ಪರ ಹಿರಿಯ ವಕೀಲರು ವಾದ ಮಂಡಿಸಿ, ಪೈಥಾನ್ ಯಂತ್ರದಿಂದ ರಸ್ತೆ ಗುಂಡಿಗಳನ್ನು ಮುಚ್ಚಲು ಪ್ರತಿ ಚದರ ಮೀಟರ್ಗೆ 551 ರೂ. ಮೂಲ ದರಕ್ಕೆ ಒಪ್ಪಿಗೆ ಇದೆ ಎಂದು ತಿಳಿಸಿ ಅಫಿಡವಿಟ್ ಸಲ್ಲಿಸಿದರು. ಎಆರ್ಟಿಸಿ ನಮೂದಿಸಿರುವ ದರಕ್ಕೆ ಕಾಮಗಾರಿ ನೀಡಲು ಮುಖ್ಯ ಆಯುಕ್ತರು ಒಪ್ಪಿಕೊಂಡಿದ್ದಾರೆ ಎಂದು ಬಿಬಿಎಂಪಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದರು.
ಅದಕ್ಕೆ, ಹಾಗಿದ್ದಾಗ ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆರಂಭಿಸಿ ಎಂದು ಎಆರ್ಟಿಸಿಗೆ ಸೂಚನೆ ನೀಡಿತು. ಅಲ್ಲದೇ ಕಾಮಗಾರಿ ಒಪ್ಪಂದ, ಕಾರ್ಯಾದೇಶ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಳ್ಳುವಂತೆ ಬಿಬಿಎಂಪಿಗೆ ನ್ಯಾಯಪೀಠ ಹೇಳಿತು. ಮಳೆಗಾಲ ಆರಂಭವಾಗಿದೆ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿ, ಸಮಸ್ಯೆಗಳನ್ನು ಹೊತ್ತು ಬರಬೇಡಿ ಎಂದು ಎಆರ್ಟಿಸಿ ಹಾಗೂ ಬಿಬಿಎಂಪಿಗೆ ತಾಕೀತು ಮಾಡಿದ ನ್ಯಾಯಪೀಠ, ರಸ್ತೆ ಗುಂಡಿ ಮುಚ್ಚಿದ ಕಾರ್ಯಪ್ರಗತಿ ವರದಿಯನ್ನು 10 ದಿನಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada