ಹುಬ್ಬಳ್ಳಿ, ಜನವರಿ 31; ಕಾಂಗ್ರೆಸ್ ತೊರೆಯುವುದಾಗಿ ಘೋಷಣೆ ಮಾಡಿರುವ ಕೇಂದ್ರದ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಭಾನುವಾರ ಹುಬ್ಬಳ್ಳಿಗೆ ಭೇಟಿ ನೀಡಿದ್ದರು. ಅಲ್ಲಿ ವಿಧಾನ ಪರಿಷತ್ನ ಮಾಜಿ ಸದಸ್ಯ ಎಸ್. ಆರ್. ಪಾಟೀಲ್ ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ.ಎಸ್. ಆರ್. ಪಾಟೀಲ್ ಭೇಟಿಗಾಗಿಯೇ. ಸಿ.ಎಂ.ಇಬ್ರಾಹಿಂ ಹುಬ್ಬಳ್ಳಿಗೆ ಆಗಮಸಿದ್ದರು. ಉಭಯ ನಾಯಕರು ಖಾಸಗಿ ಹೋಟೆಲ್ನಲ್ಲಿ ಮಾತುಕತೆ ನಡೆಸಿದ್ದು, ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಯನ್ನು ಮಾಡಿದ್ದಾರೆ.ಸಭೆಯ ಬಳಿಕ ಮಾತನಾಡಿದ ಸಿ. ಎಂ. ಇಬ್ರಾಹಿಂ, “ಎಸ್. ಆರ್. ಪಾಟೀಲ್ ಜೊತೆಗಿನ ಸಭೆ ಶೇ 100 ರಷ್ಟು ಸಕ್ಸಸ್ ಫುಲ್ ಆಗಿದೆ” ಎಂದು ಹೇಳುವ ಮೂಲಕ ಕುತೂಹಲ ಹುಟ್ಟಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ಎಸ್. ಆರ್. ಪಾಟೀಲ್ಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿತ್ತು.
“ನನಗೆ ಈಗ ಮೂರು ಆಯ್ಕೆಗಳಿವೆ. ಜೆಡಿಎಸ್, ಟಿಎಂಸಿ ಮತ್ತು ಸಮಾಜವಾದಿ ಪಕ್ಷ. ಟಿಎಂಸಿ ಮತ್ತು ಸಮಾಜವಾದಿ ಪಕ್ಷದ ನಾಯಕರು ನನ್ನನ್ನು ಸಂಪರ್ಕಿಸಿದ್ದಾರೆ. ಚುನಾವಣೆಗೂ ಮುನ್ನ ಹಲವು ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆಯಲಿದ್ದಾರೆ” ಎಂದು ಸಿ. ಎಂ. ಇಬ್ರಾಹಿಂ ಹೇಳಿದರು.ಈಗಿನ ರಾಜಕಾರಣಿಗಳು ಹೈಬ್ರಿಡ್ ತಳಿಗಳು; ಸಿ.ಎಂ.ಇಬ್ರಾಹಿಂ. “ಫೆಬ್ರವರಿಯಲ್ಲಿ ಕೂಡಲಸಂಗಮದಿಂದ ಅಲಿಂಗ (ಅಲ್ಪಸಂಖ್ಯಾತ-ಲಿಂಗಾಯತ) ಎಂಬ ಚಳವಳಿ ಆರಂಭಿಸಲಿದ್ದೇವೆ. ನನಗೆ ಹಲವಾರು ದೊಡ್ಡ ದೊಡ್ಡ ನಾಯಕರ ಬೆಂಬಲವಿದೆ. ಅವರ ಹೆಸರುಗಳನ್ನು ಹೇಳುವುದಿಲ್ಲ. ಅವರೆಲ್ಲ ಚಳವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗಲು ಈ ಚಳವಳಿ” ಎಂದು ಸಿ. ಎಂ. ಇಬ್ರಾಹಿಂ ತಿಳಿಸಿದರು.”ಕಾಂಗ್ರೆಸ್ ಪಕ್ಷದಲ್ಲಿ ಇರಬೇಕು ಎಂದು ಎಸ್. ಆರ್. ಪಾಟೀಲ್ ಮನವಿ ಮಾಡಿದರು. ಆದರೆ ಅದು ಮುಗಿದ ಅಧ್ಯಾಯ ಒಂದು ಸಲ ಡ್ಯಾಂ ನಿಂದ ನೀರು ಹರಿದು ಹೋದರೆ ಮುಗಿಯಿತು” ಎಂದು ಹೇಳುವ ಮೂಲಕ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ ತೊರೆಯುವುದಾಗಿ ಮತ್ತೊಮ್ಮೆ ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada