ಚಂದ್ರಶೇಖರ ಕಂಬಾರರು ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ ಹೀಗೆ ಬಹುಮುಖಿ ವಿದ್ವಾಂಸರಾಗಿ ಪ್ರಖ್ಯಾತರು.
ಚಂದ್ರಶೇಖರ ಕಂಬಾರರು 1937ರ ಜನವರಿ 2ರಂದು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿದರು. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಇವರ ಬಾಲ್ಯದ ವಸಾಹತು ಸಂದರ್ಭದ ಅನುಭವಗಳನ್ನು ‘ನನ್ನ ಬದುಕು-ಬರಹ’ ಎಂಬ ಲೇಖನದಲ್ಲಿ ಅವರೇ ಸೂಚಿಸಿದ್ದಾರೆ. ಅಂಥ ವಸಾಹತು ಸಂದರ್ಭದ ಸಂವೇದನೆಯುಳ್ಳ ಕಂಬಾರರು ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿಎಚ್.ಡಿ ಪದವಿಗಳನ್ನು ಪಡೆದರು. ಅನಂತರ 1968ರಿಂದ 1969ರವರೆಗೆ ಅಮೆರಿಕದ ಚಿಕಾಗೋ ವಿಶ್ವವಿದ್ಯಾಲಯದಲ್ಲಿಯೂ, 1971ರಿಂದ 1991ರವರೆಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿಯೂ ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ನಂತರ 1992ರಿಂದ 1998ರವರೆಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾಗಿ ಸೇವೆ ಸಲ್ಲಿಸಿದರು.
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿಯ ಸದಸ್ಯರಾಗಿಯೂ, ಕರ್ನಾಟಕ ನಾಟಕ ಅಕಾಡಮಿಯ ಅಧ್ಯಕ್ಷರಾಗಿಯೂ, ಮೈಸೂರಿನ ಕರ್ನಾಟಕ ನಾಟಕ ರಂಗಾಯಣದ ಸದಸ್ಯರಾಗಿಯೂ, ದೆಹಲಿಯ ಕೇಂದ್ರ ಸಾಹಿತ್ಯ ಅಕಾಡಮಿಯ ಸದಸ್ಯರಾಗಿ – ಉಪಾಧ್ಯಕ್ಷರಾಗಿ – ಅಧ್ಯಕ್ಷರಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಹೀಗೆ ಅವರು ವಿವಿಧ ರಂಗಗಳಲ್ಲಿ ಸಮಸ್ತರಾಗಿ ಎಲ್ಲೆಲ್ಲಿಯೂ ಸಂದಿದ್ದಾರೆ.
ಕನ್ನಡದ ಮಹತ್ವದ ಕವಿಗಳು, ನಾಟಕಕಾರರು, ಜಾನಪದ ತಜ್ಞರು ಹಾಗೂ ಉತ್ತಮ ಆಡಳಿತಗಾರರಾದ ಕಂಬಾರರು ಸುಮಾರು ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದಾರೆ. ವಿಶ್ವದಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮೂರು ಸಾವಿರ ಪುಟಗಳಿಗೂ ಅಧಿಕವಾದ ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: