ಹೈದರಾಬಾದ್, ಮೇ 19: ರಾಜ್ಯಸಭೆ ಚುನಾವಣೆಗಾಗಿ ವಿವಿಧ ರಾಜ್ಯಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಭರದಿಂದ ಸಾಗಿದೆ. ತೆಲಂಗಾಣದಿಂದ ರಾಜ್ಯಸಭೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತೆಲಂಗಾಣ ರಾಷ್ಟ್ರಸಮಿತಿ(ಟಿಆರ್ಎಸ್) ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಪ್ರಕಟಿಸಿದ್ದಾರೆ.
ತೆಲಂಗಾಣ ರಾಷ್ಟ್ರಸಮಿತಿ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೂವರು ಹೆಸರಿದೆ. ಈ ಪೈಕಿ ಫಾರ್ಮಾಸ್ಯೂಟಿಕಲ್ಸ್ ಕ್ಷೇತ್ರದ ಖ್ಯಾತ ಉದ್ಯಮಿ, ಪಾರ್ಥಸಾರಥಿ ರೆಡ್ಡಿ ಹಾಗೂ ಮತ್ತೊಬ್ಬ ಉದ್ಯಮಿ ರವಿಚಂದ್ರ ಹೆಸರು ಗಮನ ಸೆಳೆದಿವೆ. ವಡ್ಡಿರಾಜು ರವಿಚಂದ್ರ ಹಿಂದುಳಿದ ವರ್ಗದ ಮುಖಂಡರಾಗಿ ಕೂಡಾ ಗುರುತಿಸಿಕೊಂಡಿದ್ದಾರೆ.
ಪಾರ್ಥಸಾರಥಿ ರೆಡ್ಡಿ ಹೆಟೆರೋ ಸಮೂಹ ಸಂಸ್ಥೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಸಿಂಥೆಟೆಕ್ ರಸಾಯನಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿರುವ ಪಾರ್ಥಸಾರಥಿ ಅವರು Anti retroviral ಔಷಧ ಉತ್ಪಾದನೆಯಲ್ಲಿ ವಿಶ್ವದ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ.
ತೆಲಂಗಾಣ ರಾಜ್ಯ ಕ್ವಾರಿ, ಗ್ರಾನೈಟ್ಸ್ ಮಾಲೀಕರ ಸಂಘದ ಅಧ್ಯಕ್ಷರಾದ ಗಾಯತ್ರಿ ರವಿ ಅಲಿಯಾಸ್ ವಡ್ಡಿರಾಜು ರವಿಚಂದ್ರ ಅವರು ಮೂಲತಃ ಮೆಹಬೂಬಾಬಾದ್ ಜಿಲ್ಲೆಯವರಾಗಿದ್ದು, ಖಮ್ಮಂನಲ್ಲಿ ನೆಲೆಸಿದ್ದಾರೆ. ಹಿಂದುಳಿದ ವರ್ಗ, ಮುನ್ನುರು ಕಾಪು ಸಮುದಾಯದ ಗೌರವಾಧ್ಯಕ್ಷರಾಗಿದ್ದಾರೆ. 2018ರಲ್ಲಿ ವಾರಂಗಲ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸಿದ್ದ ರಾಜು ಗೆಲುವು ಸಾಧಿಸಿರಲಿಲ್ಲ, 2019ರ ಏಪ್ರಿಲ್ ತಿಂಗಳಲ್ಲಿ ತೆಲಂಗಾಣ ರಾಷ್ಟ್ರಸಮಿತಿ ಸೇರ್ಪಡೆಗೊಂಡರು.
ಮಾಧ್ಯಮ ಕ್ಷೇತ್ರದಿಂದ ಬಂದು ತೆಲಂಗಾಣ ರಾಷ್ಟ್ರಸಮಿತಿಯಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವುಳ್ಳ ದಾಮೋದರ್ ರಾವ್ ಇನ್ನೊಬ್ಬ ಅಭ್ಯರ್ಥಿಯಾಗಿದ್ದಾರೆ.ದಾಮೋದರ್ ರಾವ್ ಅವರು ತೆಲಂಗಾಣ ಪಬ್ಲಿಕೇಷನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಚೇರ್ಮನ್, ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ಪಕ್ಷದ ಮುಖವಾಣಿ ಎನಿಸಿರುವ ಟಿ ನ್ಯೂಸ್, ನಮಸ್ತೆ ತೆಲಂಗಾಣ ಪತ್ರಿಕೆ, ತೆಲಂಗಾಣ ಟುಡೇ ಮುಖ್ಯಸ್ಥರಾಗಿದ್ದಾರೆ.
ಕ್ಯಾಪ್ಟನ್ ವಿ ಲಕ್ಷ್ಮಿಕಾಂತ್ ರಾವ್, ಡಿ ಶ್ರೀನಿವಾಸ್ ನಿವೃತ್ತಿ, ಬಂಡಾ ಪ್ರಕಾಶ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕಾಗಿ ಚುನಾವಣೆ ನಡೆಯಲಿದೆ. 119 ಸ್ಥಾನಗಳ ತೆಲಂಗಾಣ ವಿಧಾನಸಭೆಯಲ್ಲಿ ತೆಲಂಗಾಣ ರಾಷ್ಟ್ರಸಮಿತಿ 102 ಸ್ಥಾನ ಹೊಂದಿದ್ದು, ಎಲ್ಲಾ ಮೂರು ರಾಜ್ಯಸಭಾ ಸ್ಥಾನಗಳನ್ನು ಸುಲಭವಾಗಿ ಪಡೆದುಕೊಳ್ಳಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada