ಬಸವಾಪಟ್ಟಣ: ಯುಗಾದಿ ಹಬ್ಬಕ್ಕಾದರೂ ತೆಂಗಿನಕಾಯಿಯ ದರ ಹೆಚ್ಚಾಗಬಹುದು ಎಂಬ ರೈತರು ಮತ್ತು ವ್ಯಾಪಾರಿಗಳ ನಂಬಿಕೆ ಹುಸಿಯಾಗಿದೆ. ಹಬ್ಬ ಕಳೆಯುತ್ತಿದ್ದಂತೆ ದರ ಇನ್ನೂ ಕಡಿಮೆ ಆಗುತ್ತಿರುವುದರಿಂದ ಆತಂಕಗೊಂಡಿದ್ದಾರೆ.
ಈ ಭಾಗದಲ್ಲಿ ಮೊದಲಿನಂತೆ ತೋಟಗಳಲ್ಲಿ ತೆಂಗನ್ನು ಮುಖ್ಯ ಬೆಳೆಯಾಗಿ ಬೆಳೆಯುತ್ತಿಲ್ಲ.
ಅಡಿಕೆ ತೋಟಗಳ ಅಂಚಿನಲ್ಲಿ ಮಾತ್ರ ತೆಂಗಿನ ಮರಗಳನ್ನು ಬೆಳೆಸುತ್ತಿದ್ದಾರೆ. ಹೀಗೆ ಬೆಳೆಯುವ ತೆಂಗಿನ ಫಸಲು ಕಡಿಮೆಯಾದರೂ ದರ ಮಾತ್ರ ಕುಂಟುತ್ತಲೇ ಸಾಗಿದೆ.
ಎರಡು ವರ್ಷಗಳ ಹಿಂದೆ ಒಂದು ಕ್ವಿಂಟಲ್ ತೆಂಗಿಗೆ ₹ 46 ಸಾವಿರ ದರ ಇತ್ತು. ಆಗ ಚಿಲ್ಲರೆ ವ್ಯಾಪಾರಿಗಳು ದೊಡ್ಡ ಗಾತ್ರದ ಕಾಯಿಯನ್ನು ತಲಾ₹ 50 ಹಾಗೂ ಸಣ್ಣ ಗಾತ್ರದ ಕಾಯಿಯನ್ನು ₹ 40ಕ್ಕೆ ಮಾರಾಟ ಮಾಡಿದ್ದರು. ಈಗ ಕೆ.ಜಿ.ಗೆ ದರ
₹ 20ರಿಂದ 25ಕ್ಕೆ ಇಳಿದಿದೆ. ಸಣ್ಣ ಗಾತ್ರದ ಕಾಯಿ ಕೇವಲ ₹ 8ಕ್ಕೆ ಮಾರಾಟವಾದರೆ ದೊಡ್ಡ ಗಾತ್ರದ ಕಾಯಿಗಳು ₹ 12ರಿಂದ ₹ 15ಕ್ಕೆ ಮಾರಾಟವಾಗುತ್ತಿವೆ.
‘ಕೊರೊನಾ ಸಮಯದಲ್ಲಿ ತೆಂಗಿನಕಾಯಿ ಇಲ್ಲದೇ ಊಟ, ಉಪಾಹಾರ ತಯಾರಿಸುತ್ತಿದ್ದ ಹೋಟೆಲ್ನವರು ಈಗ ಅದನ್ನೇ ಮುಂದುವರಿಸಿದ್ದು, ಹೆಚ್ಚಾಗಿ ತೆಂಗನ್ನು ಬಳಸುತ್ತಿಲ್ಲ. ಮದುವೆ ಮುಂತಾದ ಸಮಾರಂಭಗಳಲ್ಲಿ ಫಲ ತಾಂಬೂಲದಲ್ಲಿ ತೆಂಗಿನ ಕಾಯಿ ಕೊಡುವ ಪದ್ಧತಿಯೂ ಈಗ ಇಲ್ಲವಾಗಿದೆ. ಈ ಭಾಗದ
ನೂರಾರು ಗ್ರಾಮಗಳ ರೈತರಿಂದ ತೆಂಗನ್ನು ಸಗಟು ದರದಲ್ಲಿ ಖರೀದಿಸಿ ಪುಣೆ, ಮುಂಬೈ, ಗೋವಾ ದೆಹಲಿ, ಸಾರಂಗಪುರದಂತಹ ದೂರದ ನಗರಗಳಿಗೆ ತೆಗೆದುಕೊಂಡು ಹೋಗಿ ಮಾರುತ್ತಿದ್ದೇನೆ. ಆ ಭಾಗದಲ್ಲಿ ತೆಂಗು ಬೆಳೆಯದಿದ್ದರೂ ದರ ಕಡಿಮೆ ಇದೆ. ಆದಕಾರಣ ಸಾಗಾಣಿಕೆ ವೆಚ್ಚವೂ ಲಭಿಸುತ್ತಿಲ್ಲ. ಮಾರಾಟವಾಗದೇ ಉಳಿದ ಒಣಕಾಯಿಗಳನ್ನು ಕೊಬ್ಬರಿ ಎಣ್ಣೆ ತಯಾರಿಸುವವರಿಗೆ ವರ್ಷಕ್ಕೊಮ್ಮೆ ಮಾರುತ್ತಿದ್ದೇನೆ. ಇದರಿಂದ ಹಾಕಿದ ಬಂಡವಾಳವೂ ಸಿಗುತ್ತಿಲ್ಲ’ ಎನ್ನುತ್ತಾರೆ ಇಲ್ಲಿನ ತೆಂಗಿನ ಸಗಟು ವ್ಯಾಪಾರಿ ಪಿ. ಅತಾವುಲ್ಲಾ.
‘ಈ ಬೇಸಿಗೆಯಲ್ಲಿ ಎಳನೀರಿಗೆ ಬೇಡಿಕೆ ಇದೆ. ಆದರೆ, ಬಲಿತ ತೆಂಗಿನಕಾಯಿಗೆ ಬೇಡಿಕೆ ಇಲ್ಲ. ಮನೆಗಳಲ್ಲಿ ಹೆಚ್ಚಾಗಿ ಸಿದ್ಧಪಡಿಸಿದ ಬ್ರಾಂಡೆಡ್ ಸಾಂಬಾರ ಪುಡಿಗಳನ್ನು ಮಹಿಳೆಯರು ಬಳಸುತ್ತಿರುವುದರಿಂದ ಅಡುಗೆ ಸಾಕಷ್ಟು ರುಚಿಯಾಗಿರುತ್ತದೆ ಎಂದು ಊಟ, ಉಪಾಹಾರಗಳಿಗೆ ತೆಂಗನ್ನು ಬಳಸುತ್ತಿಲ್ಲ. ಇದರಿಂದಲೂ ತೆಂಗಿನ ಬೇಡಿಕೆ ಕಡಿಮೆಯಾಗಿದ್ದು, ನಾವು ತೆಂಗಿನ ಕಾಯಿಗಳ ಬದಲಾಗಿ ಎಳೆನೀರನ್ನೇ ಹೆಚ್ಚಾಗಿ ಖರೀದಿಸಿ ಮಾರುತ್ತಿದ್ದೇವೆ. ತೆಂಗಿಗೆ ಬೆಲೆಯಿಲ್ಲ ಎಂದು ಈ ಭಾಗದ ರೈತರು ತೆಂಗಿನ ಮರಗಳನ್ನು ಕಡಿದು ಅಡಿಕೆ ಬೆಳೆಯುತ್ತಿದ್ದಾರೆ. ಆದರೆ, ತೆಂಗಿನ ಸೀಮೆಯವರಿಗೆ ಅದನ್ನು ಬಿಟ್ಟು ಬೇರೆ ಬೆಳೆ ಬೆಳೆಯಲು ಸಾಧ್ಯವಿಲ್ಲ. ಅಂತಹ ರೈತರ ನೆರವಿಗೆ ಸರ್ಕಾರ ಧಾವಿಸಬೇಕು’ ಎನ್ನುತ್ತಾರೆ ಇಲ್ಲಿನ ತೆಂಗಿನ ಸಗಟು ವ್ಯಾಪಾರಿ ಸಿರಾಜ್ ಅಹಮದ್.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada