ಏರ್ಪೋರ್ಟ್ ಸಿಟಿ ದೇವನಹಳ್ಳಿಯತ್ತ ರಾಜ್ಯ ರಾಜಕಾರಣದ ದಲಿತ ನಾಯಕರ ಚಿತ್ತ ಕೇಂದ್ರೀಕೃತವಾಗುತ್ತಿದೆ. ದಲಿತ ಮತಗಳ ಪ್ರಾಬಲ್ಯ ಹೊಂದಿರುವ ಮೀಸಲು ಕ್ಷೇತ್ರದಲ್ಲಿ ದಶಕಗಳಿಂದ ಕಾಂಗ್ರೆಸ್, ಜೆಡಿಎಸ್ ನಡುವೆ ನೇರ ಹಣಾಹಣಿ ಇದೆ. 2013 ಮತ್ತು 2018ರಲ್ಲಿ ಜೆಡಿಎಸ್ ಗೆಲುವಿನ ನಾಗಾಲೋಟ ಬೀರಿದೆ. ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಜೆಡಿಎಸ್ಗೆ ಕಾಂಗ್ರೆಸ್ನಿಂದ ರಾಜ್ಯ ಮುಖಂಡರು ಸ್ಪರ್ಧೆಗೆ ಬರಲಿದ್ದಾರೆ ಎನ್ನುವ ವಿಚಾರ ಕಂಗೆಡುವಂತೆ ಮಾಡಿವೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವ ಒಲವು ವ್ಯಕ್ತಪಡಿಸಿದಂತೆ, ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ದೇವನಹಳ್ಳಿ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆನ್ನುವ ಸುದ್ದಿ ಬಾರಿ ಚರ್ಚೆ ಹುಟ್ಟುಹಾಕಿದೆ. ಮುನಿಯಪ್ಪ ಮಾತ್ರವಲ್ಲದೆ 15ಕ್ಕೂ ಹೆಚ್ಚು ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಅಂಶವೂ ಇಲ್ಲಿನ ಅಭ್ಯರ್ಥಿಗಳ ಪೈಪೋಟಿಗೆ ನಿದರ್ಶನ ಎಂಬಂತಿದೆ. ಒಟ್ಟಾರೆ ದೇವನಹಳ್ಳಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಸೃಷ್ಟಿಯಾಗಲಿದ್ದು, ಬಿಜೆಪಿ ಯಾವ ತಂತ್ರದ ಮೊರೆ ಹೋಗಲಿದೆ ಎನ್ನುವ ಕುತೂಹಲ ಮೂಡಿದೆ.ದಲಿತ, ಒಕ್ಕಲಿಗ ಮತಗಳು ನಿರ್ಣಾಯಕ ಪಾತ್ರ ವಹಿಸುವ ದೇವನಹಳ್ಳಿಯಲ್ಲಿ ಬಿಜೆಪಿ ಹೇಗಾದರೂ ಈ ಬಾರಿ ಗೆಲುವು ದಾಖಲಿಸಬೇಕೆನ್ನುವ ನಿರೀಕ್ಷೆಯಲ್ಲಿದೆ. ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮ ಸಂಘಟಿಸಿರುವ ಬಿಜೆಪಿ ಸತತ ಸಭೆಗಳ ಮೂಲಕ ಮತದಾರರನ್ನು ಸೆಳೆಯಲು ಕಾರ್ಯತಂತ್ರ ಹೆಣೆಯುತ್ತಿದೆ. ಜಿಲ್ಲಾಉಸ್ತುವಾರಿ ಸಚಿವ ಡಾ.ಕೆ. ಸುಧಾಕರ್ ಜನತಾ ದರ್ಶನ ಕಾರ್ಯಕ್ರಮದ ಮೂಲಕ ಈಗಾಗಲೇ ಮತಬುಟ್ಟಿಗೆ ಕೈಹಾಕಿದ್ದಾರೆ. ಪ್ರಬಲ ಅಭ್ಯರ್ಥಿಗಳಿಲ್ಲದ ಹೊರತು ಬಿಜೆಪಿ ಆಟ ದೇವನಹಳ್ಳಿಯಲ್ಲಿ ನಡೆಯುವುದಿಲ್ಲವೆನ್ನುವ ಮಾತಿದೆ. ಟಿಕೆಟ್ ಹಂಚಿಕೆ ಬಳಿಕ ಕ್ಷೇತ್ರ ಕಾವೇರಲಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ದೇವನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸವಿದೆ. 5 ಹೋಬಳಿ ವ್ಯಾಪ್ತಿಯ ಕ್ಷೇತ್ರದಲ್ಲಿ ದಲಿತ ಮತ್ತು ಒಕ್ಕಲಿಗ ಮತಗಳೇ ನಿರ್ಣಾಯಕ. 3 ದಶಕಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರತಿ ಚುನಾವಣೆಯಲ್ಲೂ ಒಮ್ಮೊಮ್ಮೆ ಗೆಲುವು ದಾಖಲಿಸುತ್ತಾ ಬಂದಿರುವ ಕ್ಷೇತ್ರದಲ್ಲಿ 2008 ರ ಬಳಿಕ ಜೆಡಿಎಸ್ ಭದ್ರಕೋಟೆಯಾಗಿ ಪರಿವರ್ತನೆಯಾಗುತ್ತದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada