ಉತ್ತರ ಪ್ರದೇಶ(Uttar Pradesh)ದಲ್ಲಿ 20 ರೂಪಾಯಿ ಕದ್ದ ಆರೋಪಕ್ಕೆ 7 ವರ್ಷದ ಬಾಲಕಿಯನ್ನು ಥಳಿಸಿ, ತಳ್ಳುವ ಗಾಡಿಗೆ ಆಕೆಯನ್ನು ಕಟ್ಟಿ ಎಳೆದೊಯ್ದಿರುವ ಅಮಾನವೀಯ ಘಟನೆ ನಡೆದಿದೆ.
ಸಮೋಸಾ ತರಲು ಹೋದ ಬಾಲಕಿ ಮೇಲೆ ಹಲ್ಲೆ….!!!
ಉತ್ತರ ಪ್ರದೇಶದ ಬಹದ್ದೂರ್ಗರ್ನ ಹಾಪುರ್ನಲ್ಲಿ ಈ ದುರ್ಘಟನೆ ನಡೆದಿದೆ. 7 ವರ್ಷದ ಬಾಲಕಿಯೊಬ್ಬಳಿಗೆ ಸಮೋಸಾ ತಿನ್ನುವ ಆಸೆಯಾಗಿತ್ತು. ತನ್ನ ಅಪ್ಪನ ಬಳಿ ಹಣ ಪಡೆದುಕೊಂಡು ಸಮೋಸಾ ಅಂಗಡಿಗೆ ಹೋಗಿದ್ದಾಳೆ. ಅಂಗಡಿ ಮಾಲೀಕ ರಾಕೇಶ್ ಕುಮಾರ್ ಎಂಬಾತ ಬಾಲಕಿಗೆ ಸಮೋಸಾ ನೀಡಿದ್ದಾರೆ. ಇದೇ ವೇಳೆ ಅಲ್ಲೇ ಕ್ಯಾಶ್ ಬಾಕ್ಸ್ನಲ್ಲಿ ಇದ್ದ 20 ರೂಪಾಯಿ ಕಾಣೆಯಾಗಿತ್ತು. ಇಷ್ಟಕ್ಕೆ ಕೋಪಗೊಂಡ ಅಂಗಡಿ ಮಾಲೀಕ ಆಕೆ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ಪುಟ್ಟ ಬಾಲಕಿಯೆಂದು ಲೆಕ್ಕಿಸದೇ ಆಕೆಯ ಕೈ ಕಾಲು ಕಟ್ಟಿದ್ದಾನೆ.
ಪ್ರಶ್ನಿಸಿದವರ ಮೇಲೂ ಮಾಲೀಕನ ಸಹಚರನಿಂದ ಹಲ್ಲೆ
ಪುಟ್ಟ ಮಗುವಿಗೆ ಹೀಗೆ ಮಾಡುತ್ತಿದ್ದನ್ನ ಕಂಡ ಕೆಲ ಸ್ಥಳೀಯರು ಇದನ್ನು ಪ್ರಶ್ನೆ ಮಾಡಿದ್ದಾರೆ. ಆ ಮಗುವಿಗೆ ತೊಂದರೆ ಕೊಡಬೇಡ ಎಂದು ಮಾಲೀಕನಿಗೆ ಹೇಳಿದ್ದಾರೆ. ಮತ್ತೆ ಮಾತಾಡಲು ಬಂದ ಸ್ಥಳೀಯರಿಗೆ ಮಾಲೀಕ ರಾಕೇಶ್ ಸಿಂಗ್ ಸಹಚರ ಮಹೇಶ್ ಸಿಂಗ್ ಎಂಬಾತ ಹಲ್ಲೆ ಮಾಡಲು ಯತ್ನಿಸಿದ್ದಾನೆ . ಇಷ್ಟಕ್ಕೆ ನಿಲ್ಲದ ಮಾಲೀಕನ ಕ್ರೌರ್ಯ ಆಕೆಯನ್ನು ತಳ್ಳುವ ಗಾಡಿಗೆ ಕಟ್ಟಿ ಎಳೆದೊಯ್ದಿದ್ದಾನೆ. ಮಗು ಅಳುತ್ತಾ ನಾನು ಹಣ ಕದ್ದಿಲ್ಲವೆಂದು ಬೇಡಿಕೊಂಡರು ಮಾಲೀಕನ ಕಲ್ಲು ಹೃದಯ ಕರಗಿಲ್ಲ. ಮತ್ತೆ ಮತ್ತೆ ಪುಟ್ಟ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ.
ಈ ಘಟನೆಯ ಸಂಪೂರ್ಣ ದೃಶ್ಯವನ್ನು ವ್ಯಕ್ತಿಯೊಬ್ಬ ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದ. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಬಾಲಕಿಯ ತಂದೆ ಕೂಡ ಅಂಗಡಿ ಮಾಲೀಕ ಹಾಗೂ ಆತನ ಸಹಚರನ ವಿರುದ್ಧ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಾಲೀಕ ರಾಕೇಶ್ ಸಿಂಗ್, ಹಾಗೂ ಆತನ ಸಹಚರ ಮಹೇಶ್ ಸಿಂಗ್ ಬಂಧಿಸಲು ಮುಂದಾಗಿದ್ದರು. ಈ ವೇಳೆ ಪೊಲೀಸರ ಮೇಲೂ ಇಬ್ಬರು ಕಿರುಚಾಡಿದ್ದಾರೆ. ಆ ಬಾಲಕಿ ಹಣ ಕದ್ದಿದ್ದಾಳೆ. ಹೀಗಾಗಿ ತಕ್ಕ ಶಿಕ್ಷೆ ನೀಡಿದ್ದೇವೆ. ಹೀಗೆ ಬಿಟ್ಟರೆ ಆ ಮಗು ದೊಡ್ಡ ಕಳ್ಳಿಯಾಗುತ್ತೆ ಅಂತ ಹೀಗೆ ಮಾಡಿದೆ ಎಂದು ಪೊಲೀಸರ ಮುಂದೆ ಹೇಳಿದ್ದಾರೆ. ಸಿಟ್ಟಿಗೆದ್ದ ಪೊಲೀಸರು ಇಬ್ಬರಿಗೂ ಥಳಿಸಿ, ಜೈಲಿಗಟ್ಟಿದ್ದಾರೆ. ಆದರೆ ಬಾಲಕಿಯ ತಂದೆ ನನ್ನ ಮಗಳು ಹಣ ಕದಿಯಲು ಸಾಧ್ಯವಿಲ್ಲ. ನಾನೇ ಸಮೋಸಾ ತರಲು ಹೆಚ್ಚಿನ ಹಣವನ್ನೂ ನೀಡಿದ್ದೆ ಅಂತ ಹೇಳಿದ್ದಾರೆ.
ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :
https://play.google.com/store/apps/details?id=com.speed.newskannada