12ನೇ ದಾದಾಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಕನ್ನಡಕ್ಕೆ ಸಂದ ಗೌರವ
ಬೆಂಗಳೂರು ಅನಿಮೇಷನ್ ತಂತ್ರಜ್ಞಾನದಲ್ಲೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಅನಿಮೇಷನ್ ಚಲನಚಿತ್ರಗಳೂ ಸಾಕಷ್ಟು ಸದ್ದು ಮಾಡುತ್ತಿವೆ. ಇದಕ್ಕೆ ಒಂದು ತಾಜಾ ಉದಾಹರಣೆ ಎಂದರೆ 2015 ರಲ್ಲಿ ಬಿಡುಗಡೆಯಾಗಿ ಹೆಸರು ಮಾಡಿದ ಶಿರಡಿ ಶ್ರೀ ಸಾಯಿಬಾಬಾ ಕನ್ನಡ ಫೀಚರ್ ಅನಿಮೇಷನ್ ಚಿತ್ರ. ಇದು ಆಗ ಕರ್ನಾಟಕದ ಹಲವಾರು ಖ್ಯಾತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ವೀಕ್ಷಕರು ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆಯನ್ನೂ ಗಳಿಸಿತ್ತು. ಇದನ್ನು ಬೆಂಗಳೂರಿನ ಮೀಡಿಯಾಟೆಕ್ ಐ’ ಸಲ್ಯೂಷನ್ಸ್ ಪ್ರೈ. ಲಿ. ನಿರ್ಮಿಸಿ ಈ ಸಂಸ್ಥೆಯ ಸಂಸ್ಥಾಪಕ ನಿರ್ದೇಶಕರಾದ ಡಾ. ಬಾಲಕೃಷ್ಣ ಮದ್ದೂರು ನಿರ್ದೇಶಿಸಿದ್ದಾರೆ.
ಈಗ ಈ ಚಿತ್ರ ಮತ್ತು ಅದರ ನಿರ್ದೇಶಕರು ಮತ್ತೆ ಸುದ್ದಿಯಲ್ಲಿದೆ. ಈ ಚಿತ್ರದ ನಿರ್ದೇಶನಕ್ಕಾಗಿ ಡಾ. ಬಾಲಕೃಷ್ಣ ಮದ್ದೂರು ಅವರಿಗೆ ಭಾನುವಾರ, 30.04.2022 ರಂದು ನವದೆಹಲಿಯಲ್ಲಿ ನಡೆದ ’12ನೇ ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ 2022’ ಸಮಾರಂಭದಲ್ಲಿ ಫೀಚರ್ ಅನಿಮೇಷನ್ ವಿಭಾಗದಲ್ಲಿ ಅತ್ಯುತ್ತಮ ಹೊಸ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಚಿತ್ರ ನಿರ್ಮಾಪಕರಾದ ಶ್ರೀಮತಿ ಸವಿತಾರಾಜ್ ಹಿರೇಮಠ್ ಹಾಗೂ ರಾಜೇಶಕುಮಾರ್ ಜೈನ್ ಪ್ರಶಸ್ತಿಯನ್ನು ವಿತರಿಸಿದರು.
ಭಾರತ ಚಲನಚಿತ್ರರಂಗದ ಪಿತಾಮಹ ಎಂದೇ ಕರೆಯಲ್ಪಡುವ ಶ್ರೀ ದುಂಡಿರಾಜ್ ಗೋವಿಂದ್ ಫಾಲ್ಕೆ ಜನ್ಮದಿನದ ಸ್ಮರಣೆಗಾಗಿ ಪ್ರತಿವರ್ಷ ನಡೆಯುವ ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಿತ್ರೋತ್ಸವದ ಉದ್ದೇಶ, ಚಲನಚಿತ್ರ ರಂಗದ ವಿವಿಧ ವಿಭಾಗಗಳಲ್ಲಿ ಕೆಲಸಮಾಡುತ್ತಿರುವ ಪ್ರತಿಭಾವಂತರನ್ನು ಗೌರವಿಸುವುದಾಗಿದೆ. ಈ ಸಲ ಭಾರತವೇ ಅಲ್ಲದೆ ಇತರ 110+ ರಾಷ್ಟ್ರಗಳು ಈ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದವು.
ಗುಣಮಟ್ಟದ ಬಗ್ಗೆ ಅಪಾರ ಕಾಳಜಿ ವಹಿಸುವ ಮೀಡಿಯಾಟೆಕ್ ಐ’ ಸಲ್ಯೂಷನ್ಸ್ ಪ್ರೈ. ಲಿ., ಮಾಧ್ಯಮ-ಮನರಂಜನೆ, ಮತ್ತು ಅನಿಮೇಷನ್ ಚಲನಚಿತ್ರಗಳ ನಿರ್ಮಾಣ ಇತ್ಯಾದಿ ಕ್ಷೇತ್ರಗಳಲ್ಲಿ ತೊಡಗಿಕೊಂಡಿದೆ. ಈ ಪ್ರಶಸ್ತಿಯಿಂದಾಗಿ ಸಂಸ್ಥೆಯ ಮುಡಿಗೆ ಮತ್ತೊಂದು ಕಿರೀಟ ತೊಡಿಸಿದಂತಾಗಿದೆ. ಡಾ. ಬಾಲಕೃಷ್ಣ, ಜೀವನ ಮೌಲ್ಯಗಳನ್ನು ಎತ್ತಿಹಿಡಿಯುವ ಗುಣಮಟ್ಟದ ಅನಿಮೇಷನ್ ಚಿತ್ರಗಳ ತಯಾರಿಕೆಯಲ್ಲಿ ಅಪಾರವಾದ ಅನುಭವವನ್ನು ಮತ್ತು ಪ್ರೀತಿಯನ್ನು ಹೊಂದಿದ್ದಾರೆ.
ಮಕ್ಕಳಿಗೆ ಅನಿಮೇಷನ್ ಎಂದರೆ ಬಹಳ ಇಷ್ಟ. ಹಾಗಾಗಿ ಈ ಪ್ರಭಾವಿ ಮಾಧ್ಯಮದ ಮೂಲಕ ಮಕ್ಕಳಿಗೆ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು ಒಳ್ಳೆಯ ಪ್ರಯತ್ನ. ಮಕ್ಕಳನ್ನು ಆಕರ್ಷಿಸುವುದರ ಜೊತೆಗೆ ನಿರ್ದೇಶಕರು ದೊಡ್ಡವರಿಗೂ ಬಾಬಾ ಅವರ ಜೀವನ ಸಂದೇಶವನ್ನು ತಲುಪಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada