ಬೆಂಗಳೂರು, ಮೇ. 31: ರಾಜ್ಯಸಭಾ ಚುನಾವಣಾ ಕಣಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಕುಪೇಂದ್ರರೆಡ್ಡಿ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದ್ದಾರೆ.
ಮಾಜಿ ರಾಜ್ಯ ಸಭಾ ಸದಸ್ಯ ಕುಪೇಂದ್ರರೆಡ್ಡಿ ವಿಧಾನಸೌಧದಲ್ಲಿ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ನಾಮಪತ್ರವನ್ನು ಸಲ್ಲಿಸಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕುಪೇಂದ್ರರೆಡ್ಡಿ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. 2014 ರಿಂದ ಜೆಡಿಎಸ್ ಪಕ್ಷದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರು.
ಉದ್ಯಮಿಯಾಗಿರುವ ಕುಪೇಂದ್ರರೆಡ್ಡಿ 20 ವರ್ಷದಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಶ್ರೀಮಂತ ಉದ್ಯಮಿಯಾಗಿರುವ ಕುಪೇಂದ್ರರೆಡ್ಡಿ ಅವರು, ಸಮಾಜ ಸೇವೆಯ ಮೂಲಕವೂ ಗುರುತಿಸಿಕೊಂಡಿದ್ದರು. 2014 ರಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದರು. ಇನ್ನು ರಾಜ್ಯಸಭೆಯಲ್ಲಿ ರಾಜ್ಯದ ಪರ ಅತಿ ಹೆಚ್ಚು ಪ್ರಶ್ನೆ ಕೇಳಿದ್ದಾರೆ ಎಂಬ ಕೀರ್ತಿಗೆ ಕುಪೇಂದ್ರರೆಡ್ಡಿ ಪಾತ್ರರಾಗಿದ್ದಾರೆ ಎಂಬುದು ಅವರ ಬಗ್ಗೆ ವಿಕಿಪಿಡಿಯಾದ ಪುಟದಲ್ಲಿ ಉಲ್ಲೇಖವಾಗಿದೆ.
ಬೆಂಗಳೂರಿನಲ್ಲಿ ಕೆರೆಗಳ ಸಂರಕ್ಷಣೆ ಹೋರಾಟದ ಮುಂದಾಳತ್ವ ವಹಿಸಿದ್ದ ಕುಪೇಂದ್ರರೆಡ್ಡಿ ಅವರು, ಅಗರ, ವರ್ತೂರು ಮತ್ತು ಬೆಳ್ಳಂದೂರು ಕೆರೆಗಳ ರಕ್ಷಣೆಯಲ್ಲಿ ಪಾತ್ರ ವಹಿಸಿದ್ದರು. ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ಮಾಡಿದ್ದು ಉಲ್ಲೇಖಾರ್ಹ.
ಕೇವಲ 33 ಶಾಸಕರ ಬಲ ಹೊಂದಿರುವ ಜೆಡಿಎಸ್ನ ಕುಪೇಂದ್ರರೆಡ್ಡಿ ಗೆಲುವು ಅಷ್ಟು ಸುಲಭವಾಗಿಲ್ಲ. ಕಾಂಗ್ರೆಸ್ ಎರಡನೇ ಅಭ್ಯರ್ಥಿ ಕಣಕ್ಕೆ ಇಳಿಸಿದೆ. ಬಿಜೆಪಿ ಕೂಡ ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಮೂಲಕ ಅನ್ಯ ಪಕ್ಷದ ಮತಗಳನ್ನು ಸೆಳೆಯುವ ತಂತ್ರದಲ್ಲಿ ಮುಳಗಿವೆ. ಜೆಡಿಎಸ್ ನ ಅಭ್ಯರ್ಥಿ ಕುಪೇಂದ್ರ ರೆಡ್ಡಿ ರಾಜ್ಯಸಭೆಗೆ ಆಯ್ಕೆಯಾಗಲು ಜೆಡಿಎಸ್ ಗೆ ಇನ್ನೂ 12-13 ಶಾಸಕರ ಮತಗಳು ಬೇಕು. ಕಾಂಗ್ರೆಸ್ ಉಳಿಕೆ ಮತ ಗಳಿಸುವ ನಿಟ್ಟಿನಲ್ಲಿ ಕುಪೇಂದ್ರರೆಡ್ಡಿ ಪ್ರಯತ್ನ ಮಾಡಿದ್ದರು. ಕುಪೇಂದ್ರರೆಡ್ಡಿ ಪ್ರಯತ್ನಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಎಳ್ಳನೀರು ಬಿಟ್ಟಿದ್ದಾರೆ. ಎರಡನೇ ಅಭ್ಯರ್ಥಿಯನ್ನಾಗಿ ಮನ್ಸೂರ್ ಆಲಿಖಾನ್ ಅವರನ್ನು ಕಣಕ್ಕೆ ಇಳಿಸಿ ಟಾಂಗ್ ಕೊಟ್ಟಿದ್ದಾರೆ.
ಸಿದ್ದರಾಮಯ್ಯ ರೂಪಿಸಿದ ರಣತಂತ್ರಕ್ಕೆ ಜೆಡಿಎಸ್ ವಿಚಲಿತವಾಗಿದೆ. ಜೆಡಿಎಸ್ ನ ಸುಮಾರು ಶಾಸಕರು ಈಗಾಗಲೇ ಒಂದು ಕಾಲು ಪಕ್ಷದಿಂದ ಹೊರಗೆ ಇಟ್ಟಿದ್ದಾರೆ. ಜಿ.ಟಿ. ದೇವೇಗೌಡ ಕಾಂಗ್ರೆಸ್ ಹಾಗೂ ಬಿಜೆಪಿ ಕದ ತಟ್ಟಿದ್ದಾರೆ. ಗುಬ್ಬಿ ಶಾಸಕ ಶ್ರೀನಿವಾಸ್ ಅದಾಗಲೇ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಶಾಸಕ ಶಿವಲಿಂಗೇಗೌಡ ಅವರು ಮುನಿಸಿಕೊಂಡಿದ್ದಾರೆ. ಜೆಡಿಎಸ್ ನ ಹಲವು ಶಾಸಕರು ತಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದು ಅನುಮಾನ ಎಂದೇ ಹೇಳಲಾಗುತ್ತಿದೆ.
ಇನ್ನು ಜೆಡಿಎಸ್ ಹಿನ್ನೆಲೆಯಿಂದ ಬಂದಿರುವ ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಮತಗಳಿಗೆ ಗಾಳ ಹಾಕಿದ್ದಾರೆ. ತಮ್ಮ ಕುಲ ಬಾಂಧವನನ್ನು ಗೆಲ್ಲಿಸುವ ನಿಟ್ಟಿನಲ್ಲಿ ಜೆಡಿಎಸ್ ಶಾಸಕರ ಮತ ಸೆಳೆಯುವ ಕಾರ್ಯವನ್ನು ಚಾಮರಾಜಪೇಟೆ ಜಮೀರ್ ಬಾಯ್ ಅವರಿಗೆ ವಹಿಸಿದ್ದಾರೆ. ತಮ್ಮ ಸಮುದಾಯದ ವ್ಯಕ್ತಿಗೆ ಅವಕಾಶ ಕೊಟ್ಟಿದ್ದೇ ದೊಡ್ಡದು ಎಂದು ಸಿದ್ದು ಅವರ ಸೂಚನೆಯನ್ನು ತಲೆಮೇಲೆ ಹೊತ್ತು ಜಮೀರ್ ಮತ ಸೆಳೆಯುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದು ಜೆಡಿಎಸ್ ಅಭ್ಯರ್ಥಿಯ ಗೆಲುವಿಗೆ ಕಂಟಕವಾಗಿ ಪರಿಣಮಿಸಿದೆ.
ಇನ್ನು ಬಿಜೆಪಿಯ ಮತ ಸೆಳೆಯಲು ಅದಾಗಲೇ ಆ ಪಕ್ಷದಿಂದಲೂ ಮೂರನೇ ಅಭ್ಯರ್ಥಿಯನ್ನು ಕಣಕ್ಕೆ ಇಳಸಿಲಾಗಿದೆ. ಹೀಗಾಗಿ ಮೂರು ಪಕ್ಷಗಳಿಗೆ ನಾಲ್ಕನೇ ಅಭ್ಯರ್ಥಿಯ ಗೆಲುವಿಗೆ ಅನ್ಯ ಪಕ್ಷದ ಮತ ಸೆಳೆಯುವ ಅನಿವಾರ್ಯತೆಗೆ ಬಿದ್ದಿವೆ. ಈ ಚದುರಂಗ ಆಟದಲ್ಲಿ ಜೆಡಿಎಸ್ ಅಭ್ಯರ್ಥಿ ಕುಪೇಂದ್ರರೆಡ್ಡಿ ನಿಜಯಾಗಿಯೂ ರಾಜ್ಯಸಭೆ ಸದಸ್ಯರಾಗಿ ಆಯ್ಕೆಯಾಗುತ್ತಾರಾ ಎಂಬುದು ಕಾದು ನೋಡಬೇಕಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada