ಡೆಹ್ರಾಡೂನ್:ಕಳೆದ ಎರಡು ದಶಕಗಳಲ್ಲಿ 11 ಮುಖ್ಯಮಂತ್ರಿಗಳನ್ನು ಕಂಡಿರುವ ಪರ್ವತ ರಾಜ್ಯ ಉತ್ತರಾಖಂಡ್ ನ 70 ವಿಧಾನಸಭಾ ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದೆ.ಬಿಜೆಪಿ ಈ ಬಾರಿ ಶತಾಯಗತಾಯ ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದು, ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರ ಪಡೆಯುವ ಹಂಬಲದಲ್ಲಿದೆ, ಆಮ್ ಆದ್ಮಿ ಪಕ್ಷ ಈ ಬಾರಿ ರಾಜಕೀಯ ಅನಿಶ್ಚಿತತೆ ಇರುವ ರಾಜ್ಯದಲ್ಲಿ ತನ್ನ ಅಧಿಕಾರದ ಹೆಜ್ಜೆಯನ್ನಿರಿಸಲು ಹವಣಿಸುತ್ತಿದೆ.ನಾಳೆ ಬೆಳಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ಮತದಾನ ಮುಂದುವರಿಯಲಿದೆ. ಒಟ್ಟು 632 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಬಿಜೆಪಿ ಜೊತೆಗೆ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ ಕೂಡ ತಮ್ಮ ಚುನಾವಣಾ ಭವಿಷ್ಯವನ್ನು ಪರೀಕ್ಷೆಗೊಳಪಡಿಸಲಿದ್ದಾರೆ.ಗಂಗೋತ್ರಿ ಕ್ಷೇತ್ರದ ಅಭ್ಯರ್ಥಿ ಅಜಯ್ ಕೊತಿಯಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಪ್ ಘೋಷಿಸಿದರೆ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ನೇತೃತ್ವದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಮುಂದುವರಿಸಿದೆ. ಇನ್ನು ಬಿಜೆಪಿಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ದಾಮಿ ಸ್ಟಾರ್ ಕ್ಯಾಂಪೈನರ್ ಆಗಿದ್ದಾರೆ. ದಾಮಿಯವರು ಖಟಿಮ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಹರೀಶ್ ರಾವತ್ ಅವರು ಲಲ್ಕುವ ಕ್ಷೇತ್ರದಿಂದ ಸ್ಪರ್ಧಾಕಣಕ್ಕಿಳಿದಿದ್ದಾರೆ. ಮತ ಎಣಿಕೆ ಮಾರ್ಚ್ 10ರಂದು ನಡೆಯಲಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada