ಶ್ರೀ ಕೃಷ್ಣನು ಧರ್ಮಜನನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದನು. ಒಂದು ದಿನ ಓಲಗದಲ್ಲಿ ಕೃಷ್ಣನು ಇನ್ನು ಪಾಂಡವರು ತಮ್ಮ ರಾಜ್ಯವನ್ನು ಮರಳಿ ಪಡೆಯುವ ಬಗ್ಗೆ ಯೋಚಿಸಬೇಕೆಂದಾಗ ದ್ರುಪದನು ದೇವಾ, ನೀನು ಕಾಲಿನಲ್ಲಿ ತೋರಿದ್ದನ್ನು ತಲೆಯಲ್ಲಿ ಹೊತ್ತು ನಡೆವವರು ನಾವು. ನೀನೇ ಈ ವಿಷಯದಲ್ಲಿ ದಾರಿತೋರಿಸು ಎಂದನು.
ಮೊದಲಿಗೆ ಶಿಷ್ಟರನ್ನು ಕಳುಹಿಸಿ ಸಾಮದಲ್ಲಿ ಬೇಡಬೇಕು. ಆಗಲಿಲ್ಲವಾದಲ್ಲಿ ಮುಂದೆ ಕಾಳಗ ಇದ್ದೇ ಇದೆಯೆಂದನು. ಬಲರಾಮ ಸುಯೋಧನನ ಪರವಾಗಿ ಮಾತನಾಡಿದನು. ಸಾತ್ಯಕಿಯು ಅದನ್ನು ಎದುರಿಸಿ ಮಾತನಾಡಿದನು. ಬೇಡುವ ಪ್ರಶ್ನೆ ಕ್ಷತ್ರಿಯರಿಗೆ ಸಲ್ಲದು. ಕಾದಿ ಕೊಳ್ಳುವಾ ಎಂದನು. ದ್ರುಪದನೂ ಇದಕ್ಕೆ ಸಹಮತವಿತ್ತನು. ಕೊನೆಗೆ ಯುದ್ಧಕ್ಕೆ ಸಿದ್ಧತೆಗಳನ್ನು ನಡೆಸಬೇಕೆಂದೂ ಜೊತೆಗೆ ಕೌರವನಲ್ಲಿಗೆ ,ಪುರೋಹಿತರನ್ನು ಕಳಿಸಲೂಬೇಕೆಂದೂ ತೀರ್ಮಾನವಾಯಿತು.
ನಾವು ಮದುವೆಗೆಂದು ಬಂದವರು. ಈಗ ಹೊರಡುತ್ತೇವೆ. ಕರೆಸಿದಾಗ ಬರುತ್ತೇವೆಂದು ಹೇಳಿ ಎಲ್ಲರನ್ನೂ ಸಂತೈಸಿ ಕೃಷ್ಣನು ಪರಿವಾರದೊಂದಿಗೆ ಹೊರಟನು. ದ್ರುಪದನು ಪುರೋಹಿತನನ್ನು ಹಸ್ತಿನಾಪುರಕ್ಕೆ ಕಳಿಸಿದನು. ವಿವಿಧ ಸ್ಥಳಗಳಿಂದ ರಾಜರುಗಳು ಅವರವರಿಗೆ ಬೇಕಾದ ಪಕ್ಷಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಬರತೊಡಗಿದರು.
ದುರ್ಯೋಧನನು ಯದುಕುಲದ ಬಲವನ್ನು ತನ್ನ ಕಡೆಗೆ ಸೆಳೆಯಲು ನಿಶ್ಚಯಿಸಿ ದ್ವಾರಕಾಪುರದತ್ತ ಹೊರಟನು. ಇದನ್ನು ತಿಳಿದ ಧರ್ಮಜನು ಅರ್ಜುನನನ್ನು ತಕ್ಷಣ ಹೊರಡಿಸಿದನು. ಅರ್ಜುನನು ದ್ವಾರಕಾಪುರಕ್ಕೆ ಹೊರಟಾಗ ಶುಭ ಶಕುನಗಳಾದವು. ಆ ನೆಲವನ್ನು ನೋಡುತ್ತಿದ್ದಂತೆ, ಆ ಸಮುದ್ರದ ಶಬ್ದ ಕೇಳುತ್ತಿದ್ದಂತೆ ಪುಳಕಿತನಾದನು. ಈ ಜಾಗವು ಪರಮ ಪರಾಯಣ ನಾರಾಯಣನ ಜಾಗವು, ಶ್ರುತಿಯನ್ನು ಉದ್ಧರಿಸಿದ ಜಾಗವಿದು, ಮುನಿಗಳು ತಪಗೈದ ಜಾಗವಿದು ಎಂದು ಭಾವಿಸಿ ಹರ್ಷಚಿತ್ತನಾದನು.
ಅರ್ಜುನನು ಬಂದಾಗ ಕೃಷ್ಣನು ಆರಾಮವಾಗಿ ಮಲಗಿದ್ದನು. ಇವನು ಅವನ ಕಾಲಿನ ಬಳಿ ಕುಳಿತನು. ಅದೇ ವೇಳೆಗೆ ಬಂದ ದುರ್ಯೋಧನನು ತಲೆಯ ಬಳಿ ಕುಳಿತನು. ಎಚ್ಚರಗೊಂಡ ಕೃಷ್ಣನಿಗೆ ಮೊದಲು ಅರ್ಜುನನು ಕಾಣಿಸಿದನು. ನಂತರ ದುರ್ಯೋಧನ. ಇಬ್ಬರನ್ನೂ ಮಾತನಾಡಿಸಿ ಬಂದ ಕಾರಣ ಕೇಳಲು ದುರ್ಯೋಧನನು ತಮ್ಮ ಕಡೆಗೆ ಇದ್ದು ಯುದ್ಧಕ್ಕೆ ಸಹಾಯ ಮಾಡಬೇಕೆಂದನು. ಅರ್ಜುನನು ಸಹಾ ಅದನ್ನೇ ಹೇಳಲು ಕೃಷ್ಣನು ತಾನು ಈಗ ಯುದ್ಧ ಮಾಡುವವನಲ್ಲ. ಚಿಕ್ಕಂದಿನಿಂದಲೂ ಹೋರಾಡಿ ಸಾಕಾಗಿದೆ. ತಾನು ಒಬ್ಬ ಒಂದು ಕಡೆ, ತನ್ನ ಸೈನ್ಯ ಇನ್ನೊಂದು ಕಡೆ ಎಂದು ಹೇಳಿ ಯಾವುದು ಬೇಕು ಎನ್ನಲು ಅರ್ಜುನನು ನೀನೇ ಇರಲಿ ಎಂದನು. ದುರ್ಯೋಧನನಿಗೆ ತುಂಬಾ ಸಂತಸವಾಯಿತು. ಹೊರಟನು.
ಮರುಳೆ, ನಾನು ಯುದ್ಧ ಮಾಡುವವನಲ್ಲ. ಸುಮ್ಮನೇ ಹಂಗಿನಲ್ಲಿ ಇರಲಾರೆ. ಏನಾದರೂ ಕೆಲಸ ಹೇಳು ಎನ್ನಲು ಅರ್ಜುನನು ತನಗೆ ಸಾರಥಿಯಾಗಿ ಇದ್ದು ಕರುಣಿಸಬೇಕೆಂದು ಬೇಡಿದನು. ತನ್ನ ಸೋದರರು ನಿನ್ನನ್ನೇ ಆರಿಸಿಕೊಂಡಿದ್ದಕ್ಕೆ ಒಪ್ಪುವರೆಂದನು. ಅದಕ್ಕೆ ಕೃಷ್ಣನು ಒಪ್ಪಿದನು.
ಹೀಗೆ ಕೃಷ್ಣನು ಪಾರ್ಥಸಾರಥಿಯಾಗಿ ನಿಂತು ತನ್ನ ಭಕ್ತರನ್ನು ರಕ್ಷಿಸಲು ಅನುವಾದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: