ನಟಿ ಐಶ್ವರ್ಯಾ ರೈ ಸುದ್ದಿ ಮಾಧ್ಯಮಗಳಿಂದ ತುಸು ದೂರ. ತಮ್ಮ ಕುಟುಂಬ, ಸಿನಿಮಾಗಳು ಇಷ್ಟಕ್ಕೇ ಸೀಮಿತವಾಗಿರಿಸಿಕೊಂಡು ಶಾಂತ ಜೀವನ ನಡೆಸುತ್ತಿದ್ದಾರೆ. ಆದರೆ ಇದೀಗ ಹಳೆಯ ಪ್ರಕರಣವೊಂದು ಅವರನ್ನು ಹುಡುಕಿ ಬಂದಿದೆ.
2014 ರ ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಐಶ್ವರ್ಯಾ ರೈಗೆ ಇಡಿ (ಜಾರಿ ನಿರ್ದೇಶನಾಲಯ) ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಕೋರಿದೆ.
ದೆಹಲಿಯ ಲೋಕನಾಯಕ್ ಭವನದ ಇಡಿ ಕಚೇರಿಗೆ ಐಶ್ವರ್ಯಾ ರೈ ಹಾಜರಾಗಬೇಕಿದೆ. ಆದರೆ ವಿಚಾರಣೆಗೆ ಹಾಜರಾಗಲು ತಮಗೆ ಸಮಯದ ಅವಶ್ಯಕತೆ ಇದೆಯೆಂದು ಐಶ್ವರ್ಯಾ ರೈ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (2002)ರ ಅನ್ವಯ ದೂರು ದಾಖಲಿಸಿಕೊಂಡಿದ್ದು, ಐಶ್ವರ್ಯಾ ರೈ ಸೇರಿದಂತೆ ಇನ್ನೂ ಹಲವು ಪ್ರಮುಖ ಸೆಲೆಬ್ರಿಟಿಗಳು, ಉದ್ಯಮಿಗಳು, ರಾಜಕಾರಣಿಗಳ ವಿಚಾರಣೆ ನಡೆಸಲಿದೆ.
ಐಶ್ವರ್ಯಾ ರೈಗೆ ಇಡಿ ನೊಟೀಸ್ ನೀಡುತ್ತಿರುವುದು ಇದು ಮೊದಲೇನೂ ಅಲ್ಲ ಈ ಹಿಂದೆ ಎರಡು ಬಾರಿ ಜಾರಿ ನಿರ್ದೇಶನಾಲಯ ಐಶ್ವರ್ಯಾ ರೈಗೆ ನೊಟೀಸ್ ನೀಡಿತ್ತು. ಆದರೆ ಎರಡೂ ಬಾರಿ ಐಶ್ವರ್ಯಾ ರೈ, ವಿಚಾರಣೆಯಿಂದ ತಪ್ಪಿಸಿಕೊಂಡಿದ್ದರು.
ಐಶ್ವರ್ಯಾ ರೈಗೆ ಮಾತ್ರವೇ ಅಲ್ಲ ಅವರ ಮಾವ, ಜನಪ್ರಿಯ ನಟ ಅಮಿತಾಬ್ ಬಚ್ಚನ್ ಅವರಿಗೂ ಇಡಿ ನೊಟೀಸ್ ಜಾರಿ ಮಾಡಿದೆ. 2004 ರಿಂದಲೂ ಅಮಿತಾಬ್ ಬಚ್ಚನ್ ಮತ್ತು ಕುಟುಂಬ ಆರ್ಬಿಐನ (ಲಿಬಿರಲೈಸ್ಡ್ ರೆಮಿಟೆನ್ಸ್ ಸ್ಕೀಮ್) ಎಲ್ಆರ್ಸಿ ಯೋಜನೆಯಡಿ ವಿದೇಶಕ್ಕೆ ಹಣ ರವಾನೆ ಅಥವಾ ಹೂಡಿಕೆ ಮಾಡುತ್ತಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ.
2014 ರಲ್ಲಿ 1.10 ಕೋಟಿ ದಾಖಲೆಗಳನ್ನು ಬಹಿರಂಗಪಡಿಸಲಾಯಿತು. ಈ ದಾಖಲೆಗಳಿಂದ ವಿವಿಧ ದೇಶಗಳ ಗಣ್ಯರ, ಸೆಲೆಬ್ರಿಟಿಗಳ, ಕ್ರೀಡಾಪಟುಗಳ, ಸಿನಿಮಾ ತಾರೆಯರ ತೆರಿಗೆ ಕಳ್ಳತನದ ಮಾಹಿತಿಗಳು ಹೊರಬಿದ್ದವು.
2004 ರ ವರೆಗೆ ಯಾವ ಭಾರತೀಯರು ಸಹ ವಿದೇಶದಲ್ಲಿ ಹಣ ಹೂಡಿಕೆ ಮಾಡುವಂತಿರಲಿಲ್ಲ. 2004 ರ ನಂತರ ಆರ್ಬಿಐ ಈ ನಿಯಮವನ್ನು ಬದಲಾಯಿಸಿ, ವಿದೇಶಿ ಸಂಸ್ಥೆಗಳ ಶೇರು ಖರೀದಿಗೆ ಭಾರತೀಯರಿಗೆ ಅವಕಾಶ ನೀಡಿತು. ಆದರೆ ಯಾವುದೇ ಸಂಸ್ಥೆಯನ್ನು ಭಾರತೀಯರು ವಿದೇಶದಲ್ಲಿ ಹೊಂದುವಂತಿರಲಿಲ್ಲ. ಆದರೆ ಐಶ್ವರ್ಯಾ ರೈ ಹಾಗೂ ಇತರರು ವಿದೇಶದಲ್ಲಿ ತಮ್ಮದೇ ಸಂಸ್ಥೆಗಳನ್ನು ಹೊಂದಿದ್ದರು. ಅದರಲ್ಲಿಯೂ ತೆರಿಗೆ ಕಳ್ಳರ ಸ್ವರ್ಗ ಎಂದು ಕರೆಯಲ್ಪಡುವ ಬ್ರಿಟೀಷ್ ವರ್ಜಿನ್ ಐಸ್ಲ್ಯಾಂಡ್ನಲ್ಲಿ ನಕಲಿ ಸಂಸ್ಥೆಗಳನ್ನು ಸ್ಥಾಪಿಸಿ ಆ ಸಂಸ್ಥೆಗೆ ತಮ್ಮ ಹಣ ರವಾನೆ ಮಾಡಿ, ಅಕ್ರಮ ಹಾದಿಯಲ್ಲಿ ತೆರಿಗೆ ಉಳಿಸಿದ್ದರು. ಪನಾಮಾ ಪೇಪರ್ಸ್ನಿಂದ ಈ ಅಕ್ರಮಗಳು ಹೊರಬಿದ್ದವು.
ಐಶ್ವರ್ಯಾ ರೈ, ಅಮಿತಾಬ್ ಬಚ್ಚನ್, ನಟ ಅಜಯ್ ದೇವಗನ್, ಗೌತಮ್ ಅದಾನಿ ಸಹೋದರ ವಿನೋದ್ ಅದಾನಿ, ದಾವೂದ್ ಇಬ್ರಾಹಿಂ ಬಲಗೈ ಭಂಟ ಇಬ್ರಾಹಿಂ ಮಿರ್ಚಿ, ಉದ್ಯಮಿ ವಿಜಯ್ ಮಲ್ಯ, ಅಪೋಲೊ ಟೈರ್ಸ್ ಎಂಡಿ ಓಂಕಾರ್ ಕನ್ವರ್, ಅಬಾಸಾಹೇಬ್ ಗರ್ವಾರೆ, ಮೆಕ್ಸ್ ಬಟ್ಟೆ ಬ್ರ್ಯಾಂಡ್ನ ಮಾಲೀಕ ಮೋಹನ್ಲಾಲ್ ಲೋಹಿಯಾ, ಎಸ್ಕೆ ಬಜೋರಿಯಾ ಗ್ರೂಪ್ನ ಶಿಶಿರ್ ಭಜೋರಿಯಾ, ಕಾಂಗ್ರೆಸ್ ಮುಖಂಡ ಹರೀಶ್ ಸಾಲ್ವೆ, ಬಿಜೆಪಿ ಮುಖಂಡ ರವೀಂದ್ರ ಕಿಶೋರ್ ಸಿನ್ಹಾ, ಲೋಕ್ ಸತ್ತಾ ಪಕ್ಷದ ಅನುರಾಗ್ ಕೇಜ್ರಿವಾಲ್, ಗೋವಾ ಶಾಸಕ ಅನಿಲ್ ವಾಸುದೇವ್ ಸಾಲ್ಗೋಂಕರ್ ಇನ್ನೂ ಹಲವು ಭಾರತೀಯರ ಹೆಸರುಗಳು ಪನಾಮಾ ಪೇಪರ್ಸ್ನಿಂದ ಲೀಕ್ ಆಗಿದ್ದವು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: