ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೊನೆಗೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದರೆ ಕೋಲಾರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಿದ್ದರಾಮಯ್ಯ ಹೊಸ ಸವಾಲನ್ನು ಸ್ವೀಕರಿಸಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ (Karnataka Election) ಸಿದ್ದರಾಮಯ್ಯ ಅವರ ಸೋಲು-ಗೆಲುವು, ಸ್ವಪಕ್ಷೀಯರ ಜತೆಗೆ ವಿರೋಧ ಪಕ್ಷದವರ ಪಾತ್ರವನ್ನೂ ಪ್ರಮುಖವಾಗಿಸಿದೆ.ಈ ಹಿಂದೆ ಮೈಸೂರು ಜಿಲ್ಲೆಯ ವರುಣ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಸಿದ್ದರಾಮಯ್ಯ, ಆ ಕ್ಷೇತ್ರವನ್ನು ಪುತ್ರ ರಾಕೇಶ್ ಸಿದ್ದರಾಮಯ್ಯಗೆ ಬಿಟ್ಟುಕೊಡುವ ಉಮೇದು ಹೊಂದಿದ್ದರು. ಕ್ಷೇತ್ರದಲ್ಲಿ ಸಿದ್ದರಾಮಯ್ಯ ಪರವಾಗಿ ಎಲ್ಲ ಕೆಲಸಗಳನ್ನೂ ನಿರ್ವಹಿಸುತ್ತಿದ್ದ ರಾಕೇಶ್, ಅದಾಗಲೆ ಜನರ ನಡುವೆ ಗುರುತಿಸಿಕೊಂಡಿದ್ದರು. ಆದರೆ 2016ರಲ್ಲಿ ದೂರದ ಬೆಲ್ಜಿಯಂನಲ್ಲಿ ರಾಕೇಶ್ ಅಕಾಲಿಕ ನಿಧನವಾಗಿದ್ದರಿಂದ ಸಿದ್ದರಾಮಯ್ಯ ಅವರ ಜಂಘಾ ಬಲವೇ ಉಡುಗಿ ಹೋಗಿತ್ತು. ನೇರ ರಾಜಕಾರಣಕ್ಕೆ ಇಳಿಯದೆ ತಮ್ಮ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಚುನಾವಣಾ ಕಣಕ್ಕಿಳಿಸಿದ ಸಿದ್ದರಾಮಯ್ಯ, ಅದೇ ವರುಣ ಕ್ಷೇತ್ರವನ್ನು ಬಿಟ್ಟುಕೊಟ್ಟರು. ತಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಿದರು.ಸಿದ್ದರಾಮಯ್ಯ ವಿರುದ್ಧ ಶತಾಯ ಗತಾಯ ಗೆಲ್ಲಬೇಕು ಎಂದು ನಿರ್ಧರಿಸಿದ ಜಿ.ಟಿ. ದೇವೇಗೌಡ ಜೆಡಿಎಸ್ನಿಂದ ಸ್ಪರ್ಧಿಸಿದರೆ, ಬಿಜೆಪಿಯೂ ತನ್ನಲ್ಲಿರುವ ಅಲ್ಪಸ್ವಲ್ಪ ಶಕ್ತಿಯನ್ನೇ ಅವರಿಗೆ ಧಾರೆ ಎರೆಯಿತು. ಹೆಚ್ಚು ಸ್ಪರ್ಧೆ ನೀಡುವುದಿಲ್ಲ ಎಂದು ಬಹಿರಂಗವಾಗಿಯೇ ಗೊತ್ತಾಗುವ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಬಿಜೆಪಿ ಸಂಘಟನೆಯ ಅಷ್ಟಿಷ್ಟು ಮತಗಳೂ ಜೆಡಿಎಸ್ಗೆ ಹೋಗುವಂತೆ ನೋಡಿಕೊಳ್ಳಲಾಯಿತು. ಇದರಿಂದಾಗಿ ಜಿ.ಟಿ. ದೇವೇಗೌಡ 121325 (ಶೇ. 53.62) ಮತ ಗಳಿಸಿದರೆ, ಸಿದ್ದರಾಮಯ್ಯ ಕೇವಲ 85283 (ಶೇ. 37.69) ಮತಗಳಿಸಿ ಬರೊಬ್ಬರಿ 36,042 ಮತಗಳ ಅಂತರದಿಂದ ಹೀನಾಯ ಸೋಲುಂಡರು.ಜನರ ನಾಡಿ ಮಿಡಿತವನ್ನು ಅರಿಯುವವರಲ್ಲಿ ಸಿದ್ಧಹಸ್ತರಾದ ಸಿದ್ದರಾಮಯ್ಯ, ಈ ಸೋಲನ್ನು ಮೊದಲೇ ಗ್ರಹಿಸಿದ್ದರು. ಇದಕ್ಕಾಗಿಯೇ ಕೊಪ್ಪಳ ಜಿಲ್ಲೆಯ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡರು. ಸಾಂಪ್ರದಾಯಿಕ ಕಾಂಗ್ರೆಸ್ ಮತಗಳ ಜತೆಗೆ ಪ್ರಮುಖವಾಗಿ ಕುರುಬ ಸಮುದಾಯದ ಮತಗಳು ಹೆಚ್ಚಾಗಿರುವುದು ಈ ಆಯ್ಕೆಯ ಪ್ರಮುಖ ಕಾರಣವಾಗಿತ್ತು. ಈ ಕ್ಷೇತ್ರದಲ್ಲಿ ಕುರುಬ ಸಮುದಾಯದ ಜತೆಗೇ ವಾಲ್ಮೀಕಿ ಸಮುದಾಯದ ಮತಗಳೂ ಗಣನೀಯವಾಗಿರುವುದರಿಂದ, ಲಿಂಗಾಯತ ಮತಗಳನ್ನೂ ಸೇರಿಸಿಕೊಂಡು ಪ್ರಬಲ ಸ್ಪರ್ಧೆ ನೀಡಲು ಬಿಜೆಪಿ ನಿರ್ಧಾರ ಮಾಡಿತು. ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನು ಮೊಣಕಾಲ್ಮೂರಿನ ಜತೆಗೆ ಬಾದಾಮಿಯಲ್ಲೂ ಕಣಕ್ಕಿಳಿಸಲಾಯಿತು. ಸಿದ್ದರಾಮಯ್ಯ ಈ ಕ್ಷೇತ್ರದಲ್ಲಿ 67,599 ಮತಗಳಿಸಿದರೆ ಶ್ರೀರಾಮುಲು 65,903 ಮತ ಗಳಿಸಿದರು. ಕೇವಲ 1,696 ಮತಗಳ ಅಂತರದಲ್ಲಿ ಗೆದ್ದ ಸಿಎಂ, ಹೇಗೋ ಮತ್ತೊಮ್ಮೆ ವಿಧಾನಸಭೆ ಪ್ರವೇಶಕ್ಕೆ ರಹದಾರಿ ಪಡೆದರು. ಚಾಮುಂಡೇಶ್ವರಿ ಹಾಗೂ ಬಾದಾಮಿಯಲ್ಲಿ ಕಾಂಗ್ರೆಸ್ ಸೋತದ್ದು ಒಂದು, ಗೆದ್ದದ್ದು ಒಂದು ಕ್ಷೇತ್ರವಾದರೂ ಇದರ ಪರಿಣಾಮ ಅಗಾಧ.ಬಾದಾಮಿಯಲ್ಲಿಯೂ ಅತ್ಯಂತ ಪ್ರಬಲ ಸ್ಪರ್ಧೆಯನ್ನು ಶ್ರೀರಾಮುಲು ಒಡ್ಡಿದ್ದರಿಂದಾಗಿ ಚುನಾವಣೆಗೂ ಮುನ್ನ ಸುಮಾರು 15 ದಿನಗಳು ಸಿದ್ದರಾಮಯ್ಯ ನೇರವಾಗಿ ಹಾಗೂ ಪರೋಕ್ಷವಾಗಿ ತಮ್ಮ ಗೆಲುವಿಗಾಗಿಯೇ ಶ್ರಮಿಸುವಂತಾಯಿತು. ಈ ಕ್ಷೇತ್ರದಲ್ಲಿ ಸ್ಪರ್ಧೆ ಸುಲಭವಾಗಿಬಿಟ್ಟರೆ ಸಿದ್ದರಾಮಯ್ಯ ತಮ್ಮ ಶಿಷ್ಯರ ಇತರೆ ಕ್ಷೇತ್ರಗಳಲ್ಲಿ ಸಂಚರಿಸಿ ಇನ್ನು 8-10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಗಳಿಸುವ ಸಾಧ್ಯತೆಯಿತ್ತು. ಇದನ್ನು ಅರಿತಿದ್ದ ಬಿಜೆಪಿ, ಸಿದ್ದರಾಮಯ್ಯ ಅವರನ್ನು ಒಂದೇ ಕ್ಷೇತ್ರಕ್ಕೆ ಕಟ್ಟಿಹಾಕುವ ತಂತ್ರ ಹೂಡಿ ಯಶಸ್ವಿಯಾಯಿತು.ಕ್ಷೇತ್ರದಲ್ಲಿ ಸಿದ್ದರಾಮಯ್ಯ ಜಯಗಳಿಸುವಲ್ಲಿ ಎದುರಾಳಿ ಸ್ಪರ್ಧಿ ಶ್ರೀರಾಮುಲು ಅವರ ಪಾತ್ರವೂ ಇತ್ತು. ಚುನಾವಣೆಗೆ ಎರಡು ಮೂರು ದಿನ ಇರುವಂತೆ ಶ್ರೀರಾಮುಲು ಬಾದಾಮಿಯತ್ತ ಗಮನ ನೀಡಲಿಲ್ಲ. ಬಹುತೇಕ ಇತ್ತ ಸುಳಿಯಲೇ ಇಲ್ಲ ಎಂದರೂ ತಪ್ಪಲ್ಲ. ಬಿಜೆಪಿಗೆ ಅಂತಿಮ ಕ್ಷಣದಲ್ಲಿ ದೊರಕಬಹುದಾಗಿದ್ದ 8-10 ಸಾವಿರ ಮತಗಳು ಈ ಕಾರಣದಿಂದ ಸಿದ್ದರಾಮಯ್ಯ ಅವರಲ್ಲೇ ಉಳಿದು ಕೂದಲೆಳೆ ಅಂತರದಲ್ಲಿ ಜಯಗಳಿಸಿದರು ಎಂಬ ಚರ್ಚೆ ಪಕ್ಷದ ವಲಯದಲ್ಲೇ ನಡೆಯುತ್ತಿರುತ್ತದೆ. ಇದನ್ನು ಸ್ವತಃ ಶ್ರೀರಾಮುಲು ಅವರೇ ಇತ್ತೀಚೆಗೆ ಹೇಳಿದ್ದಾರೆ. ಎಷ್ಟೇ ಆದರೂ ತಾವಿಬ್ಬರೂ ಹಿಂದುಗಳಿದ ವರ್ಗಗಳಿಗೆ ಸೇರಿದವರು. ನಾನು ಬೇರೆ ಪಕ್ಷದಲ್ಲಿರಬಹುದು, ಅವರು ಬೇರೆ ಪಕ್ಷದಲ್ಲಿರಬಹುದು. ಆದರೆ ಇಬ್ಬರೂ ವಿಧಾನಸಭೆ ಪ್ರವೇಶ ಮಾಡಬೇಕು ಎಂಬ ಕಾರಣಕ್ಕೆ ʼಹೀಗೆʼ ಮಾಡಿದೆ ಎಂದು ಗುಟ್ಟನ್ನು ಬಿಟ್ಟುಕೊಟ್ಟಿದ್ದರು.ಬಂಧನ, ಸುಧಾಕರ್ ಮತ್ತು ಮುನಿಯಪ್ಪಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಿದಂತೆಯೇ ಈ ಬಾರಿಯೂ ಮಾಡುವ ಎಲ್ಲ ಸಾಧ್ಯತೆಗಳೂ ಕೋಲಾರದಲ್ಲಿವೆ. ಮೊದಲನೆಯದಾಗಿ ಕೋಲಾರ ಕಾಂಗ್ರೆಸ್ನಲ್ಲಿರುವ ಭಾರೀ ಭಿನ್ನಮತ. ಈಗಾಗಲೆ ಮೂರ್ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ನಾಯಕರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ರಾಜ್ಯದ ಇತರೆಡೆ ಹೆಚ್ಚು ಪ್ರಸಿದ್ಧಿ ಪಡೆದಿರುವ ಮಾಜಿ ಸಚಿವ ಕೆ.ಆರ್. ರಮೇಶ್ ಕುಮಾರ್ ಸಹ ಇದರಿಂದ ಹೊರತಾಗಿಲ್ಲ. ಕೆ.ಸಿ. ವ್ಯಾಲಿಯಿಂದ ನೀರು ತಂದು ಕೆರೆಗಳನ್ನು ತುಂಬಿಸಿದೆ ಎನ್ನುವ ರಮೇಶ್ ಕುಮಾರ್ ವಾದಕ್ಕೆ ಪೂರ್ಣ ಬೆಂಬಲ ಇಲ್ಲ. ಕೊಳಚೆ ನೀರು ನೀಡಿದ್ದಾರೆ, ತರಕಾರಿ ಬೆಳೆಯಲು ಆಗುವುದಿಲ್ಲ, ರೋಗರುಜಿನ ಬರುತ್ತದೆ ಎಂಬ ಸಾಮಾನ್ಯ ಅಭಿಪ್ರಾಯ ಜನರಲ್ಲಿದೆ. ಕೆಲವರು ಇದಕ್ಕೆ ಅಪವಾದವೂ ಇದ್ದಾರೆ. ಈ ರೀತಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಕೋಲಾರ ಕಾಂಗ್ರೆಸ್ ಮುಖಂಡರು, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧರಿಸಿದರೆ ಅದರ ಪ್ರಭಾವಳಿಯಿಂದ ತಾವೂ ಪಾಸ್ ಆಗಬಹುದು ಎಂದು ಲೆಕ್ಕ ಮಾಡಿದ್ದಾರೆ.ಆದರೆ ಸ್ಥಳೀಯ ಕಾಂಗ್ರೆಸ್ ಮುಖಂಡರು ತಮಗೆ ಕೈಕೊಟ್ಟಿದ್ದರಿಂದಲೇ 2019ರ ಲೋಕಸಭೆ ಚುನಾವಣೆಯಲ್ಲಿ ತಾವು ಸೋಲಲು ಕಾರಣ ಎನ್ನುವುದು ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ಅವರ ಬಲವಾದ ನಂಬಿಕೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ವಿರುದ್ಧವೂ ಮುನಿಸಿಕೊಂಡಿರುವ ಮುನಿಯಪ್ಪ, ಇತ್ತೀಚೆಗೆ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದಾಗ ಗೈರಾಗಿದ್ದರು. ಮುನಿಯಪ್ಪ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪಕಲಾ ಸಹ ಗೈರಾಗಿದ್ದರು. ಕೋಲಾರದಲ್ಲಿ ನಡೆದ ಅನೇಕ ಸಭೆಗಳಲ್ಲಿ ಸಿದ್ದರಾಮಯ್ಯ ಪರಕ್ಕಿಂತಲೂ ವಿರೋಧವೇ ಹೆಚ್ಚಾಗಿ ಕಂಡುಬಂದಿದೆ.ಕೋಲಾರ ಕ್ಷೇತ್ರದಲ್ಲಿ ಜೆಡಿಎಸ್ ಸದೃಢವಾಗಿದೆ. ಕಳೆದ ಬಾರಿ ಜೆಡಿಎಸ್ನಿಂದಲೇ ಗೆದ್ದಿದ್ದ ಕೆ. ಶ್ರೀನಿವಾಸ ಗೌಡ ಇದೀಗ ಕಾಂಗ್ರೆಸ್ ಸೇರ್ಪಡೆಯಾಗಿ, ಸಿದ್ದರಾಮಯ್ಯಗೆ ಕ್ಷೇತ್ರ ಬಿಟ್ಟುಕೊಡಲು ಮುಂದಾಗಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ಗೆ 21% ಮತಗಳು ಲಭಿಸಿದ್ದವು. ಈಗಾಗಲೆ ಸಿ.ಎಂ. ಆರ್. ಶ್ರೀನಾಥ್ ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಎಚ್.ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ದು, ಪಂಚರತ್ನ ರಥಯಾತ್ರೆಯನ್ನು ಕೋಲಾರದಿಂದಲೇ ಆರಂಭಿಸಿದ್ದಾರೆ. ಕೋಲಾರದಲ್ಲಿ ತಮಗೆ ʼಕೈಕೊಟ್ಟʼ ಸೇಡನ್ನು ತೀರಿಸಿಕೊಳ್ಳಲು ಜೆಡಿಎಸ್ ಪ್ರತಿಷ್ಠೆಯ ಕಣವನ್ನಾಗಿ ಪರಿಗಣಿಸಿದೆ. ಜೆಡಿಎಸ್ ರಾಜ್ಯ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಕ್ಷೇತ್ರದಲ್ಲಿ ಸಂಚರಿಸಿ ಒಂದಷ್ಟು ಮುಸ್ಲಿಂ ಮತಗಳನ್ನು ಪಡೆದರೂ ಅಷ್ಟರ ಮಟ್ಟಿಗೆ ಸಿದ್ದರಾಮಯ್ಯಗೇ ನಷ್ಟ. ಹಾಗಾಗಿ ಜೆಡಿಎಸ್ನಿಂದ ಮೊದಲ ಸ್ಪರ್ಧೆ ಏರ್ಪಡುತ್ತದೆ.ಸಿದ್ದರಾಮಯ್ಯ ಅವರಿಗೆ ಎರಡನೇ ಪ್ರತಿಸ್ಪರ್ಧಿ ವರ್ತೂರು ಪ್ರಕಾಶ್. ಈ ಹಿಂದೆ ಎರಡು ಬಾರಿ ಶಾಸಕರಾಗಿದ್ದ ವರ್ತೂರು ಪ್ರಕಾಶ್ ಈ ಬಾರಿ ಬಿಜೆಪಿಯಿಂದ ಟಿಕೆಟ್ ಲಭಿಸುವ ನಿರೀಕ್ಷೆಯಲ್ಲಿದ್ದಾರೆ. ಸಿದ್ದರಾಮಯ್ಯ ಅವರಂತೆಯೇ ಕುರುಬ ಸಮುದಾಯಕ್ಕೆ ಸೇರಿದ ವರ್ತೂರು ಪ್ರಕಾಶ್ ಕಳೆದ 2018ರ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಎಂಬ ಪಕ್ಷದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. ಕಾಂಗ್ರೆಸ್ 21% ಮತ ಪಡೆದರೆ ವರ್ತೂರು ಪಡೆದದ್ದು 19.85% ಮತಗಳು. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಲು ತಾವು ಸಿದ್ಧ ಎಂದು ಈಗಾಗಲೆ ವರ್ತೂರು ಹೇಳಿದ್ದಾರೆ. ಆದರೆ, ಕುರುಬ ಸಮುದಾಯಕ್ಕೆ ಸದ್ಯಕ್ಕಂತೂ ಪ್ರಶ್ನಾತೀತ ನಾಯಕ ಎಂದರೆ ಸಿದ್ದರಾಮಯ್ಯ. ಈ ಹಿಂದೆ ಶ್ರೀನಿವಾಸ ಗೌಡ ಸ್ಪರ್ಧೆ ಮಾಡಿದಾಗ ವರ್ತೂರು ಜತೆ ನಿಂತಿದ್ದ ಕುರುಬ ಸಮುದಾಯ, ಸ್ವತಃ ಸಿದ್ದರಾಮಯ್ಯ ಸ್ಪರ್ಧೆ ಮಾಡಿದಾಗಲೂ ವರ್ತೂರು ಪ್ರಕಾಶ್ಗೆ ಮತ ನೀಡುತ್ತದೆಯೇ ಎಂಬುದು ಪ್ರಶ್ನೆ. ಈ ಕಾರಣದಿಂದಾಗೊ ಬಿಜೆಪಿಯು ವರ್ತೂರು ಪ್ರಕಾಶ್ಗೆ ಟಿಕೆಟ್ ನೀಡುತ್ತದೆಯೇ ಎನ್ನುವುದೂ ಪ್ರಶ್ನೆಯೆ. ಹಾಗೊಂದು ವೇಳೆ ಟಿಕೆಟ್ ಕೊಟ್ಟರೂ, ಒಂದಷ್ಟು ಕುರುಬ ಮತಗಳನ್ನು ಪಡೆಯುವುದರಲ್ಲಿ ಅನುಮಾನವಿಲ್ಲ. ಕ್ಷೇತ್ರದಲ್ಲಿ ವರ್ತೂರು ಫ್ಯಾಕ್ಟರ್ ಅನ್ನು ಸಿದ್ದರಾಮಯ್ಯ ಹೇಗಾದರೂ ಹ್ಯಾಂಡಲ್ ಮಾಡಲೇಬೇಕು.ಬಿಜೆಪಿಯು ಕೋಲಾರದಲ್ಲಿ ಭಾರೀ ಸದೃಢವಾಗಿದೆ ಎನ್ನಲು ಆಗುವುದಿಲ್ಲ. 2018ರ ಚುನಾವಣೆಯಲ್ಲಿ ಬಿಜೆಪಿ ಕಳಿಸಿದ್ದು ಕೇವಲ 6.96% ಮತಗಳು. ಆದರೆ ಈಗ ಪರಿಸ್ಥಿತಿ ಭಿನ್ನವಾಗಿದೆ. 2019ರ ಚುನಾವಣೆಯಲ್ಲಿ ಬಿಜೆಪಿ ಸಂಸದ ಆಯ್ಕೆಯಾಗಿದ್ದಾರೆ. ಮುನಿಸ್ವಾಮಿ ಸಾಕಷ್ಟು ಸಕ್ರಿಯವಾಗಿ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ಕೊರೊನಾ ಸಮಯದಲ್ಲೂ ಅನೇಕ ಕಾರ್ಯಗಳ ಮೂಲಕ ಹೆಸರು ಮಾಡಿದ್ದಾರೆ. ಕೋಲಾರದ ಕ್ಲಾಕ್ ಟವರ್ ವಿಚಾರದಲ್ಲೂ ಕಠಿಣವಾಗಿ ನಿರ್ಧಾರ ಕೈಗೊಂಡು ಹಿಂದು ಮತಗಳನ್ನು ತಮ್ಮತ್ತ ಸೆಳೆಯುವ ಯತ್ನ ಮಾಡಿದ್ದಾರೆ. 2023ರ ಚುನಾವಣೆಯಲ್ಲಿ ಈ ಅಂಶವು ಪ್ರಮುಖವಾಗುತ್ತದೆ. ಜತೆಗೆ, ಎಲ್ಲಕ್ಕಿಂತ ಮುಖ್ಯವಾಗಿ ಪಕ್ಕದ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಈ ಕ್ಷೇತ್ರದಲ್ಲಿ ಸಾಕಷ್ಟು ನಿಯಂತ್ರಣ ಹೊಂದಿದ್ದಾರೆ. ಸಚಿವ ಎಸ್.ಟಿ. ಸೋಮಶೇಖರ್ ಸೋಮವಾರ ಹೇಳಿದಂತೆ, ಸಿದ್ದರಾಮಯ್ಯ ಗೆಲುವು ಈಗ ಸುಧಾಕರ್ ಕೈಯಲ್ಲಿದೆ. ಸುಧಾಕರ್ ಮನಸ್ಸು ಮಾಡಿದರೆ ಸಿದ್ದರಾಮಯ್ಯ ಸೋಲುತ್ತಾರೆ ಎಂದಿದ್ದಾರೆ. ‘ಕೋಲಾರದಲ್ಲಿ ಬಿಜೆಪಿ ಪಕ್ಷವಿಲ್ಲ’ ಎಂದಿರುವ ಸಿದ್ದರಾಮಯ್ಯ, ಜತೆಜತೆಗೇ, ‘ಆದರೂ ಬಿಜೆಪಿ ಬಗ್ಗೆ ಜನ ಎಚ್ಚರವಾಗಿರಬೇಕು’ ಎಂದು ಟ್ವೀಟ್ ಮಾಡಿರುವುದು ಇದಕ್ಕೆ ಪುಷ್ಠಿ ನೀಡಿದೆ.ಕೆಪಿಸಿಸಿಯಿಂದ ಕೋಲಾರ ಉಸ್ತುವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕೋಲಾರ ಜಿಲ್ಲಾ ಅಧ್ಯಕ್ಷರೂ ಆಗಿದ್ದ ಎಂ. ನಾರಾಯಣ ಸ್ವಾಮಿ ಅವರ ಜಾಗಕ್ಕೆ ತಮ್ಮ ಆಪ್ತ ಹಾಗೂ ಮಾಜಿ ಸಚಿವ ಎಂ. ಆರ್. ಸೀತಾರಾಂ ಅವರನ್ನು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೂಲಕ ನೇಮಿಸಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆಯೂ ಸಾಕಷ್ಟಿದೆ. ಅಂದಾಜು 30 ಸಾವಿರ ಒಕ್ಕಲಿಗರಿದ್ದು, ಎಸ್ಸಿಎಸ್ಟಿ(60 ಸಾವಿರ), ಮುಸ್ಲಿಂ (40 ಸಾವಿರ) ನಂತರ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿರುವುದು ಕುರುಬ(20 ಸಾವಿರ) ಸಮುದಾಯದ ಮತಗಳು. ಸಹಜವಾಗಿಯೇ ಜೆಡಿಎಸ್ ಜತೆಗೆ ಗುರುತಿಸಿಕೊಳ್ಳುವ ಒಕ್ಕಲಿಗ ಸಮುದಾಯ, ಸಿದ್ದರಾಮಯ್ಯ ಸೋಲುಂಡರೆ ಡಿ.ಕೆ. ಶಿವಕುಮಾರ್ಗೆ ಸಿಎಂ ಸ್ಥಾನದ ಅವಕಾಶ ಹೆಚ್ಚಾಗುತ್ತದೆ ಎಂದು ಭಾವಿಸಿ ಮತ್ತೂ ಧೃವೀಕರಣಗೊಂಡರೆ ಅದರ ಪರಿಣಾಮವೂ ಸಿದ್ದರಾಮಯ್ಯ ಮೇಲೆಯೇ ಆಗುತ್ತದೆ. ಇಷ್ಟೆಲ್ಲ ಸಂಕಷ್ಟಗಳನ್ನು ಪರಿಹರಿಸಿಕೊಳ್ಳುವ ಮಾರ್ಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಯಾವ ಪಾತ್ರ ವಹಿಸುತ್ತಾರೆ, ಎಷ್ಟು ಸಹಕಾರ ನೀಡುತ್ತಾರೆ, ಎಷ್ಟು ಪ್ರಮಾಣದಲ್ಲಿ ಅಂತರ ಕಾಯ್ದುಕೊಳ್ಳುತ್ತಾರೆ ಎನ್ನುವುದು ಮತ್ತೊಂದು ಪ್ರಮುಖ ಪ್ರಶ್ನೆ.ಅಂದರೆ ಕೋಲಾರದಲ್ಲಿ ಇಷ್ಟೆಲ್ಲ ಸವಾಲುಗಳನ್ನು ಹೊಂದಿರುವ ಸಿದ್ದರಾಮಯ್ಯ, ನಿರಾಯಾಸವಾಗಿ ರಾಜ್ಯವನ್ನು ಸುತ್ತುವುದು ಕಷ್ಟವಾಗುತ್ತದೆ. ಚುನಾವಣೆಗೂ ಮುನ್ನ ಮುನಿಯಪ್ಪ ಅವರ ಮನವೊಲಿಸಿರುವುದಾಗಿ ತೋರಿಸಿಕೊಂಡಿದ್ದಾರೆ. ಮುನಿಯಪ್ಪ ಜತೆಯಲ್ಲೇ ಕಾರಿನಲ್ಲಿ ವೇದಿಕೆಗೆ ಆಗಮಿಸಿ, ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಘೋಷಿಸಿದ್ದಾರೆ. ಮುನಿಯಪ್ಪ ಸಹ ಸಿದ್ದರಾಮಯ್ಯ ಪರ ಮಾತಾಡಿದ್ದಾರಾದರೂ, ಹೈಕಮಾಂಡ್ ಹೇಳಿದರೆ ಕೆಲ ಮಾಡುತ್ತೇನೆ ಎಂಬ ನಿಬಂಧನೆಯನ್ನೂ ಇಟ್ಟಿದ್ದಾರೆ. ರಾಜಕೀಯ ಎನ್ನುವುದು ನಿಂತ ನೀರಲ್ಲ, ಹಾಗೆಯೇ ರಾಜಕೀಯ ಸಂಬಂಧಗಳೂ. ಈಗ ಸಹಕಾರ ನೀಡುತ್ತೇನೆ ಎಂದಿರುವ ಮುನಿಯಪ್ಪ ಯಾವಾಗ ಬದಲಾಗುತ್ತಾರೆ ಹೇಳಲು ಸಾಧ್ಯವಿಲ್ಲ.ಇದೆಲ್ಲವನ್ನೂ ತೂಗಿಸಿಕೊಂಡು ಸಿದ್ದರಾಮಯ್ಯ ಚುನಾವಣೆಯಲ್ಲಿ ಗೆಲ್ಲುತ್ತಾರೆ ಎನ್ನುವುದರಲ್ಲಿ ಹೆಚ್ಚಿನ ಸಂಶಯ ಉಳಿಯದು. ಆದರೆ ನಿಜವಾಗಲೂ ನಷ್ಟವಾಗುವುದು ಸಿದ್ದರಾಮಯ್ಯ ಸಿಎಂ ಆಗುವ ಕನಸಿಗೆ. ತಾವು ಪ್ರಚಾರವನ್ನೇ ನಡೆಸದೆ ಸುಲಭವಾಗಿ ಗೆದ್ದುಬರುವ ಕ್ಷೇತ್ರದ ಹುಡುಕಾಟದಲ್ಲಿ ಸಿದ್ದರಾಮಯ್ಯ ಇದ್ದರು. ಇದರ ಕಾರಣವೇನೆಂದರೆ, ತಮ್ಮ ಬೆಂಬಲಿಗ 50-60 ಶಾಸಕರನ್ನು ಗೆಲ್ಲಿಸಿಕೊಂಡು ಬರುವುದು. ಆಗ ಮಾತ್ರ ತಮ್ಮ ಸಿಎಂ ಆಗುವ ಕನಸು ನನಸಾಗುತ್ತದೆ ಎಂದು ಅರಿತಿದ್ದಾರೆ. ಆದರೆ ಈ ಹಿಂದೆ ಬಾದಾಮಿಯಂತೆ ಕೋಲಾರದಲ್ಲೂ ಲಾಕ್ ಆಗಿಬಿಟ್ಟರೆ ಸಿದ್ದರಾಮಯ್ಯ ಸಿಎಂ ಕನಸು ದೂರಾಗುತ್ತದೆ. ಕಳೆದ ಬಾರಿ ಶ್ರೀರಾಮುಲು ವಹಿಸಿದ ʼಮುಖ್ಯʼ ಪಾತ್ರವನ್ನು ಈ ಬಾರಿ ಸುಧಾಕರ್ ವಹಿಸುತ್ತಾರೆಯೇ ಎನ್ನುವುದು ಪ್ರಶ್ನೆ. ಒಂದು ಕಾಲದ ರಾಜಕೀಯ ಗುರು ಸಿದ್ದರಾಮಯ್ಯ ಒಂದೆಡೆಯಾದರೆ, ತಾನು ಬಿಜೆಪಿಯ ಕಟ್ಟಾಳು ಎಂದು ನಿರೂಪಿಸುವ ಸವಾಲು ಮತ್ತೊಂದೆಡೆ. ಇದೆಲ್ಲವನ್ನೂ ಚುನಾವಣೆಗೆ ಮುನ್ನವೇ ಸಿದ್ದರಾಮಯ್ಯ ಹೇಗೆ ನಿಭಾಯಿಸುತ್ತಾರೆ ಎನ್ನುವುದು ಸವಾಲು.2019ರ ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ. ದೇವೇಗೌಡರು ಅಚಾನಕ್ಕಾಗಿ ತುಮಕೂರಿನಿಂದ ಸ್ಪರ್ಧೆ ಮಾಡಿದರು. ಒಕ್ಕಲಿಗ ಮತಗಳು ತಮಗೆ ಲಭಿಸಿ ಗೆಲ್ಲಬಹುದು ಎಂದು ಭಾವಿಸಿದ್ದರು. ಆದರೆ ಅಲ್ಲಿ ಹೇಮಾವತಿ ಅಲೆಯು ದೇವೇಗೌಡರ ವಿರುದ್ಧ ತಿರುಗಿತು. ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯದಿಂದ ತುಮಕೂರಿಗೆ ಪ್ರತಿವರ್ಷ 0.24 ಟಿಎಂಸಿ ನೀರು ಲಭಿಸಬೇಕು ಎನ್ನುವುದು ನೀರಾವರಿ ಸಲಹಾ ಸಮಿತಿ ನಿರ್ದೇಶನ. ಆದರೆ ಈ ಸಮಿತಿಗೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅಧ್ಯಕ್ಷ. ಇಲ್ಲಿವರೆಗೆ ನಿಗದಿತ ಪ್ರಮಾಣದ ನೀರು ತುಮಕೂರಿಗೆ ಹರಿಯದೇ ಇರಲು ದೇವೇಗೌಡರು ಹಾಗೂ ರೇವಣ್ಣ ಕಾರಣ ಎನ್ನುವ ಮಾತು ಕ್ಷೇತ್ರದಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬಿತು. ಈ ವಾದವನ್ನು ಭರ್ಜರಿಯಾಗಿ ಬಿಜೆಪಿ ಬಳಸಿಕೊಂಡಿದ್ದರಿಂದ ದೇವೇಗೌಡರು ಸೋಲಲು ಪ್ರಮುಖ ಕಾರಣವಾಯಿತು.ತುಮಕೂರಿನಲ್ಲಿ ಹೇಮಾವತಿ ವಿಚಾರದಂತೆಯೇ ಕೋಲಾರದಲ್ಲಿ ಕೆ.ಸಿ. ವ್ಯಾಲಿ ವಿಚಾರವಿದೆ. ಬರಪೀಡಿತ ಕೋಲಾರಕ್ಕೆ ಎತ್ತಿನಹೊಳೆಯಿಂದ ನೀರು ತರುತ್ತೇವೆ ಎನ್ನುವುದು ಹಳೆಯ ಯೋಜನೆ. ಇದರ ಬದಲಿಗೆ ಬೆಂಗಳೂರಿನ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರದ ಕೆರೆಗಳಿಗೆ ತುಂಬಿಸುವ ಕೆ.ಸಿ. ವ್ಯಾಲಿ ಯೋಜನೆಯನ್ನು ತಂದಿದ್ದಾಗಿ ರಮೇಶ್ ಕುಮಾರ್ ಹೇಳಿಕೊಳ್ಳುತ್ತಾರೆ.ಈ ಯೋಜನೆ ನಂತರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದು ಅನೇಕ ವರದಿಗಳು ತಿಳಿಸುತ್ತವೆ. ಮೂರು ಹಂದಲ್ಲಿ ಸಂಸ್ಕರಣೆಯಾಗುವ ನೀರು, ಕೃಷಿ ಬಳಕೆಗೆ ಯೋಗ್ಯ ಎನ್ನುತ್ತವೆ ವೈಜ್ಞಾನಿಕ ವರದಿಗಳು. ಆದರೆ ಈ ನೀರು ಬಳಸಲು ಯೋಗ್ಯವಾಗಿಲ್ಲ ಎನ್ನುವುದು ಹೆಚ್ಚಿನ ಜನರಲ್ಲಿ ಸಾಮಾನ್ಯವಾಗಿರುವ ಅಭಿಪ್ರಾಯ. ಎತ್ತಿನ ಹೊಳೆ ಕೊಡಿ ಎಂದರೆ ಕೆ.ಸಿ. ವ್ಯಾಲಿ ಕೊಟ್ಟು ರೋಗ ರುಜಿನ ತಂದರು ಎಂಬ ಆರೋಪ ಕಾಂಗ್ರೆಸ್ ಮೇಲಿದೆ. ಐದು ವರ್ಷ ಸಿಎಂ ಆಗಿದ್ದ ಸಿದ್ದರಾಮಯ್ಯ ಅವರಿಗೂ ಈ ಆರೋಪ ಅಂಟಿಕೊಳ್ಳುವ ಎಲ್ಲ ಸಾಧ್ಯತೆ ಇದೆ.ಇದನ್ನು ಅರಿತಿರುವ ಸಿದ್ದರಾಮಯ್ಯ, ಸೋಮವಾರವಷ್ಟೇ ಎತ್ತಿನ ಹೊಳೆ ಕುರಿತು ಮಾತನಾಡಿದ್ದಾರೆ. ‘ನಾವು ಕೆ.ಸಿ ವ್ಯಾಲಿ ಯೋಜನೆಗೆ 1,400 ಕೋಟಿ ಅನುದಾನ ನೀಡಿ, ಜಾರಿ ಮಾಡಿದ್ದೆವು, ಎನ್,ಸಿ ವ್ಯಾಲಿ ಯೋಜನೆ ಜಾರಿ ಮಾಡಿದ್ದೆವು. ಎತ್ತಿನಹೊಳೆ ಯೋಜನೆಗೆ ಚಿಕ್ಕಬಳ್ಳಾಪುರದಲ್ಲಿ ಭೂಮಿ ಪೂಜೆ ಮಾಡಿದ್ದು ನಮ್ಮ ಕಾಲದಲ್ಲಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದ್ದರೆ ಈ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದೆವು. ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಲು ರೂ.24,000 ಕೋಟಿ ಬೇಕಾಗುತ್ತದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 2 ವರ್ಷಗಳಲ್ಲಿ ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧರಿದ್ದೇವೆ. 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ಖರ್ಚು ಮಾಡಿ ರಾಜ್ಯದ ಎಲ್ಲಾ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ.’ ಎಂದಿದ್ದಾರೆ. ಹೇಗಾದರೂ ಮಾಡಿ ಕೆ.ಸಿ. ವ್ಯಾಲಿ ಕುರಿತು ಇರುವ ನಕಾರಾತ್ಮಕ ಅಂಶ ಹೆಚ್ಚಾಗಬಾರದು ಎನ್ನುವುದು ಸಿದ್ದರಾಮಯ್ಯ ವಹಿಸಿರುವ ಎಚ್ಚರಿಕೆ. ಆದರೆ ಈ ತಂತ್ರ ಎಷ್ಟರಮಟ್ಟಿಗೆ ವರ್ಕೌಟ್ ಆಗುತ್ತದೆ ಎನ್ನುವುದನ್ನೂ ಕಾದುನೋಡಬೇಕಿದೆ. ಕೋಲಾರದಲ್ಲಿ ಸ್ಪರ್ಧೆ ಮಾಡಲು ಇಚ್ಛೆಯಿದೆ, ಅಂತಿಮ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳುತ್ತದೆ ಎಂದು ಹೇಳಿರುವುದೂ ಕುತೂಹಲ ಮೂಡಿಸಿದೆ.ಕೇಕ್ ವಾಕ್ನಂತಾಗಿದ್ದ ವರುಣ ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಪುತ್ರನ ರಾಜಕೀಯ ಭವಿಷ್ಯಕ್ಕೆ ಸಂಚಕಾರ ಎದುರಾಗುತ್ತದೆ ಎಂದು ಭಾವಿಸಿ ಕೋಲಾರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಪುತ್ರ ವ್ಯಾಮೋಹಕ್ಕೆ ಒಳಗಾಗಿ ತಮ್ಮ ಸಿಎಂ ಆಕಾಂಕ್ಷೆಗೇ ತಣ್ಣೀರೆರೆಚಿಕೊಳ್ಳುವ ಕೆಲಸಕ್ಕೆ ಮುಂದಾದರೇ ಎನ್ನುವ ಅನುಮಾನಗಳಿವೆ.ಶಿವಮೊಗ್ಗ : ರಾಜ್ಯದಲ್ಲಿ ಬದಲಾವಣೆ ತರುವ ದೃಷ್ಟಿಯಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ತಿಳಿಸಿದ್ದಾರೆ.10 ವರ್ಷಗಳ ಹಿಂದೆ ಸ್ಥಾಪನೆಯಾದ ಪಕ್ಷವು ಇಂದು ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದ್ದು, ದೆಹಲಿ ಹಾಗೂ ಪಂಜಾಬ್ನಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಉತ್ತಮ ಆಡಳಿತ ನೀಡುತ್ತಿರುವುದರಿಂದ ಜನರ ವಿಶ್ವಾಸಗಳಿಸಿದೆ. ಇತ್ತೀಚೆಗೆ ನಡೆದ ಗುಜರಾತ್, ಗೋವಾ ರಾಜ್ಯದ ಚುನಾವಣೆಯಲ್ಲೂ ನಮ್ಮ ಪಕ್ಷ ಖಾತೆ ತೆರೆದಿದೆ. ಗ್ರಾಮ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳ ಚುನಾವಣೆ ಸೇರಿದಂತೆ ಇತರೆ ಚುನಾವಣೆಗಳಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾ ಬಂದಿದ್ದಾರೆ. ಕರ್ನಾಟಕ ಸೇರಿದಂತೆ ಮುಂಬರುವ 9 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ಸ್ಪರ್ಧಿಸಲಿದೆ ಎಂದರು.ರಾಜ್ಯದಲ್ಲಿ ರಾಜಕೀಯ ನಾಯಕರು ವೈಯಕ್ತಿಕ ಟೀಕೆಗಳನ್ನು ಮಾಡುತ್ತಾ ಕಬಡ್ಡಿ ಆಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಪಕ್ಷ ಕೀಳುಮಟ್ಟದಲ್ಲಿ ರಾಜಕೀಯ ಮಾಡುವುದಿಲ್ಲ. ಜನರ ತೆರಿಗೆಯಿಂದ ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ವಿದ್ಯುತ್ ಸಮರ್ಪಕವಾಗಿ ನಿಭಾಯಿಸಿ ಮುಂದಿನ ಪೀಳಿಗೆಯ ದೃಷ್ಟಿಯಿಂದ ಕಾರ್ಯನಿರ್ವಹಿಸಲಿದೆ ಎಂದರು.ಭಾಸ್ಕರ್ ರಾವ್ ಎದುರಲ್ಲೇ ಆಪ್ ಮುಖಂಡನ ರಂಪಾಟಕಾರ್ಯಕ್ರಮಕ್ಕೆ ಆಹ್ವಾನ ನೀಡದ್ದಕ್ಕೆ ಭಾಸ್ಕರ್ ರಾವ್ ಸಮ್ಮುಖದಲ್ಲೇ ಶಿವಮೊಗ್ಗ ನಗರ ಕ್ಷೇತ್ರದ ಆಕಾಂಕ್ಷಿ, ಆಪ್ ಮುಖಂಡ ಕಿಶನ್ ಆಕ್ರೋಶಗೊಂಡು ಮಾತಿನ ಚಕಮಕಿ ನಡೆಸಿದ್ದಾರೆ. ಶಿವಮೊಗ್ಗದ ಜುವೇಲ್ ರಾಕ್ ಹೋಟೆಲ್ ಬಳಿ ಈ ಘಟನೆ ನಡೆದಿದೆ. ಬೇರೆಯವರು ಆಕಾಂಕ್ಷಿ ಎಂದು ಹೇಳಿದ್ದಕ್ಕೆ ಕೋಪಗೊಂಡ ಕಿಶನ್, ಪಕ್ಷದಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದು ಆರೋಪಿಸಿದರು.’ನಾನೂ ಒಬ್ಬ ಪಕ್ಷದ ಅಭ್ಯರ್ಥಿ ಆಕಾಂಕ್ಷಿ, ನನಗೆ ಪತ್ರಿಕಾಗೋಷ್ಠಿ ಬಗ್ಗೆ ಮಾಹಿತಿ ನೀಡಿಲ್ಲ. ಐದಾರು ಕಡೆ ಹೋಗಿ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೂ ನನಗೆ ಗೌರವ ಕೊಟ್ಟಿಲ್ಲ. ರಾಜ್ಯದ ನಾಯಕರು ಬಂದಾಗ ನಮಗೆ ಮಾಹಿತಿ ನೀಡಿಲ್ಲ. ರಾಜ್ಯದ ನಾಯಕರು ನೀವು ಇದನ್ನೆಲ್ಲ ಮೊದಲು ಸರಿಪಡಿಸಿ’ ಎಂದು ಭಾಸ್ಕರ್ ರಾವ್ಗೆ ಕಿಶನ್ ನೇರವಾಗಿ ಹೇಳಿದರು.ಬೆಂಗಳೂರು: ಕೊನೆಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಅವರಿಗೆ ವಿರುದ್ಧವಾಗಿ ʻಸಿದ್ದು ನಿಜ ಕನಸುʼ ಎಂಬ ಪುಸ್ತಕವನ್ನು ಬಿಡುಗಡೆ ಮಾಡುವ ಬಿಜೆಪಿ ಕನಸಿಗೆ ಕೋರ್ಟ್ ತಡೆ ಹಾಕಿದೆ. ಆದರೂ ಬುಕ್ ವಾರ್ ಮುಂದುವರಿದಿದೆ. ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ನೀಡುವ ವಿಚಾರಕ್ಕೆ ಸಂಬಂಧಿಸಿ ಧಾರ್ಮಿಕ ಮುಖಂಡರ ಮ್ಯಾರಥಾನ್ ಸಭೆ ನಡೆದು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಮೌಲ್ಯ ಶಿಕ್ಷಣ ಜಾರಿಗೆ ತೀರ್ಮಾನಿಸಲಾಗಿದೆ. ಶಿವಮೊಗ್ಗದಲ್ಲಿ ಬಜರಂಗ ದಳ ಮುಖಂಡನ ಹತ್ಯೆಯತ್ನ, ಇಂಡಿಗೋ ಫ್ಲೈಟ್ನಲ್ಲಿ ಕುಡಿದು ಹೊಡೆದಾಟ, ದೇಶದ ಅಣೆಕಟ್ಟುಗಳು ಬರಿದಾಗುವ ಆತಂಕದ ಸುದ್ದಿಗಳಿವೆ. ಅದರ ನಡುವೆಯೇ ಮೂಡಿರುವ ಇನ್ನೊಂದು ಕುತೂಹಲವೆಂದರೆ ಕೆಜಿಎಫ್-೩ಯಲ್ಲಿ ಯಶ್ ಇರ್ತಾರಾ ಇಲ್ವಾ? ಹೀಗೆ ನಾನಾ ವಲಯಗಳ ಪ್ರಮುಖ ಸುದ್ದಿಗಳ ಗುಚ್ಛವಿದು ವಿಸ್ತಾರ.೧. ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣ ಜಾರಿ; ಅಧ್ಯಯನಕ್ಕೆ ಉನ್ನತ ಸಮಿತಿ ರಚನೆಶಾಲೆಯಲ್ಲಿ ಮೌಲ್ಯಯುತ ಶಿಕ್ಷಣವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮೌಲ್ಯ ಶಿಕ್ಷಣ ಸಮಿತಿಯನ್ನು ರಚಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಅಭಿಪ್ರಾಯ/ಸಲಹೆಗಳನ್ನು ಸಂಗ್ರಹಿಸಲು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಕರೆಯಲಾಗಿದ್ದ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೌಲ್ಯಯುತ ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆಯಾಗಿ ಈ ಎಲ್ಲ ಸಲಹೆಗಳನ್ನು ಆಧರಿಸಿ, ವರದಿ ನೀಡುವಂತೆ ಸಮಿತಿಯನ್ನು ರಚಿಸಲು ಸರಕಾರ ಮುಂದಾಗಿದೆ. 2. ಸಿದ್ದರಾಮಯ್ಯ ಸ್ಪರ್ಧಾ ಅಖಾಡವಾಯ್ತು ಕೋಲಾರ; ಶುರುವಾಗಿದೆ ರಾಜಕೀಯ ಲೆಕ್ಕಾಚಾರಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಮ್ಮ ಕ್ಷೇತ್ರ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಕೋಲಾರವೇ ತಮ್ಮ ಮುಂದಿನ ಚುನಾವಣೆ ಅಖಾಡ ಎಂದು ಘೋಷಿಸುವ ಮೂಲಕ ಸ್ಪರ್ಧೆಯ ವಿಚಾರವಾಗಿ ಉಂಟಾಗಿದ್ದ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಇವರ ಕ್ಷೇತ್ರ ಆಯ್ಕೆಯ ಹಿಂದೆ ಸಾಕಷ್ಟು ಲೆಕ್ಕಾಚಾರಗಳು, ಅಧ್ಯಯನಗಳು, ಜಾತಿ ಸಮೀಕರಣ, ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಸೇರಿದಂತೆ ಸಾಧಕ-ಬಾಧಕಗಳ ಚಿಂತನೆಗಳ ಬಳಿಕವೇ ಸಿದ್ದರಾಮಯ್ಯ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆಯಾದರೂ, ಇದು ಅವರಿಗೆ ಹೂವಿನ ಹಾಸಿಗೆಯಂತೂ ಅಲ್ಲ ಎಂಬುದಂತೂ ಸ್ಪಷ್ಟ ೩. ನಿಜವಾಗದ ಬಿಜೆಪಿ ಕನಸು; ಕೋರ್ಟ್ ತಡೆಯಿಂದ ಬಿಡುಗಡೆಯಾಗದ ಸಿದ್ದು ನಿಜಕನಸು!ಕಳೆದ ಎರಡು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ‘ಸಿದ್ದು ನಿಜಕನಸುಗಳು’ ಪುಸ್ತಕ ಬಿಡುಗಡೆ ಸಮಾರಂಭವು ಸಾಕಷ್ಟು ಗದ್ದಲ, ಪ್ರತಿಭಟನೆಗಳ ನಡುವೆ ಕೋರ್ಟ್ ತಡೆಯಾಜ್ಞೆಯಿಂದ ರದ್ದಾಗಿದೆ. ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಯ ಬಿಜೆಪಿ ಕನಸು ಈಡೇರಿಲ್ಲ. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ, ಕಾರ್ಯಕ್ರಮವನ್ನು ರದ್ದು ಮಾಡಲಾಗಿಲ್ಲ. ಮುಂದೂಡಲ್ಪಟ್ಟಿದೆ. ಈ ವಿಚಾರವನ್ನು ಕೋರ್ಟ್ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿಕೊಂಡಿದೆ. ಈ ನಡುವೆ ಕಾಂಗ್ರೆಸ್ ಕೂಡಾ ʻಬಿಜೆಪಿಯ ಕಳ್ಳ ಮಾರ್ಗಗಳುʼ ಎನ್ನುವ ಪುಸ್ತಕವನ್ನು ಸಿದ್ಧಪಡಿಸಿದ್ದಾಗಿ ಹೇಳಿಕೊಂಡಿದೆ. ೪. ಮುಂದಿನ ವಾರದಲ್ಲಿ ಪ್ರಧಾನಿ ಮೋದಿ, ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ: ಹೆಚ್ಚಲಿದೆ ಚುನಾವಣಾ ಕಳೆಪ್ರಧಾನಿ ನರೇಂದ್ರ ಮೋದಿ ಅವರು ಜನವರಿ ೧೨ ಮತ್ತು ೧೯ರಂದು ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಜನವರಿ ೧೬ರಂದು ರಾಜ್ಯಕ್ಕೆ ಬರಲಿದ್ದಾರೆ. ಮೋದಿ ಬರುವುದು ಸರ್ಕಾರಿ ಕಾರ್ಯಕ್ರಮಕ್ಕೇ ಆದರೂ ಅದರಲ್ಲಿ ರಾಜಕೀಯ ಛಾಯೆ ದಟ್ಟವಾಗಿದೆ. ಪ್ರಿಯಾಂಕಾ ಗಾಂಧಿ ಅವರದ್ದು ಪಕ್ಕಾ ಪೊಲಿಟಿಕಲ್ ಸಮಾವೇಶ.5. 7 ದಿನವಾದರೂ ಸ್ಯಾಂಟ್ರೊ ರವಿ ಬಂಧಿಸದ ಪೊಲೀಸ್, ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆದಲಿತ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ವಂಚನೆಯ ಪ್ರಕರಣ ದಾಖಲಿಸಿ ಏಳು ದಿನಗಳೇ ಕಳೆದಿವೆ. ರಾಜ್ಯಾದ್ಯಂತ ಆತನ ಸಂಬಂಧಗಳು, ಖತರ್ನಾಕ್ ಕೃತ್ಯಗಳ ಬಗ್ಗೆ ಬಣ್ಣ ಬಣ್ಣದ ಕಥೆಗಳು ಓಡಾಡುತ್ತಿವೆ. ಅಷ್ಟಾದರೂ ಮೈಸೂರು ಪೊಲೀಸರು ಮಾತ್ರ ವಿಚಾರಣೆ ಮಾಡುವಷ್ಟೂ ಧೈರ್ಯವನ್ನು ತೋರಿಸಿಲ್ಲ. ಇದೀಗ ಹೈಕೋರ್ಟ್ ಆತನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡು ಪೊಲೀಸರಿಗೆ ನೋಟಿಸ್ ನೀಡಿದೆ.6. ಬಜರಂಗ ದಳ ಸಹ ಸಂಚಾಲಕ ಸುನಿಲ್ ಹತ್ಯೆ ಯತ್ನ: ಜ. 10ರಂದು ಸಾಗರ ಬಂದ್ಗೆ ಕರೆಸಾಗರದ ನೆಹರೂ ನಗರದ ಬಜರಂಗ ದಳದ ನಗರ ಸಹ ಸಂಚಾಲಕ ಸುನೀಲ್ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆಗೈಯಲು ವಿಫಲ ಯತ್ನ (Shivamogga attack) ನಡೆಸಲಾಗಿದ್ದು, ಇದನ್ನು ಖಂಡಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗ ದಳ, ಪರಿವಾರದ ಸಂಘಟನೆಗಳು ಜ. 10ರ ಮಂಗಳವಾರ ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಸಾಗರ ಬಂದ್ಗೆ ಕರೆ ನೀಡಿವೆ. ೭. 2050ರ ಹೊತ್ತಿಗೆ ಭಾರತದ 3700 ಡ್ಯಾಮ್ಗಳ ನೀರಿನ ಸಂಗ್ರಹ ಸಾಮರ್ಥ್ಯ ಶೇ.26ರಷ್ಟು ಕುಸಿಯಲಿದೆ!2050ರ ಹೊತ್ತಿಗೆ ಭಾರತದಲ್ಲಿನ ಸುಮಾರು 3,700 ಡ್ಯಾಮ್ಗಳು ತಮ್ಮ ಒಟ್ಟು ನೀರು ಸಂಗ್ರಹಣೆಯ ಸಾಮರ್ಥ್ಯದಲ್ಲಿ ಶೇ.26ರಷ್ಟು ಕಳೆದುಕೊಳ್ಳಲಿವೆ. ಹೆಚ್ಚುತ್ತಿರುವ ಹೂಳಿನಿಂದಾಗಿ ಸಂಗ್ರಹಣಾ ಸಾಮರ್ಥ್ಯವು ಕುಸಿಯಲಿದ್ದು, ಭವಿಷ್ಯದಲ್ಲಿ ನೀರಿನ ಭದ್ರತೆ, ನೀರಾವರಿ ಮತ್ತು ವಿದ್ಯುತ್ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ವಿಶ್ವ ಸಂಸ್ಥೆಯ ಅಧ್ಯಯನ ವರದಿಯೊಂದು ತಿಳಿಸಿದೆ. ೮. ಕೆಜಿಎಫ್-3 ಚಿತ್ರದಿಂದ ‘ರಾಕಿಭಾಯ್’ ಯಶ್ ಔಟ್? ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದೇನು?ಸ್ಯಾಂಡಲ್ವುಡ್ನಲ್ಲಿ ಇತಿಹಾಸ ಸೃಷ್ಟಿಸಿದ ರಾಕಿಂಗ್ ಸ್ಟಾರ್ ಯಶ್ ಅಭಿನಯದ (Actor Yash ) ಕೆಜಿಎಫ್ ಸಿನಿಮಾ ಬ್ಲಾಕ್ ಬಸ್ಟರ್ ಲಿಸ್ಟ್ಗೆ ಸೇರುತ್ತಿದ್ದಂತೆ ‘ಕೆಜಿಎಫ್ 3’ ಬೇಕು ಎಂದು ಅಭಿಮಾನಿಗಳು ಪಟ್ಟು ಹಿಡಿದಿದ್ದರು. ನಿರ್ಮಾಣ ಸಂಸ್ಥೆ ಕೂಡ ‘ಕೆಜಿಎಫ್ ಚಾಪ್ಟರ್ 3’ ಸೆಟ್ಟೇರಿವುದಕ್ಕೆ ತುದಿಗಾಲಲ್ಲಿ ನಿಂತಿದೆ. ಆದರೆ ಇದೀಗ ವಿಜಯ ಕಿರಗಂದೂರು ಹೇಳಿಕೆ ಒಂದು ಭಾರಿ ಸಂಚಲನ ಸೃಷ್ಟಿಸಿದೆ. ೯. ಏಕರೂಪ ನಾಗರಿಕ ಸಂಹಿತೆ ಸಮಿತಿ ರಚನೆ ವಿರೋಧಿಸಿದ್ದ ಪಿಐಎಲ್ ವಜಾ ಮಾಡಿದ ಸುಪ್ರೀಂ ಕೋರ್ಟ್ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ಸಂಬಂಧ ವಿವಿಧ ರಾಜ್ಯಗಳು ಸಮಿತಿಗಳನ್ನು ರಚಿಸಿವೆ. ಇದನ್ನು ವಿರೋಧಿಸಿ ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ. ೧೦. | ಇಂಡಿಗೋ ಫ್ಲೈಟ್ನಲ್ಲಿ ಕುಡಿದು, ಪರಸ್ಪರ ಜಗಳವಾಡಿದ ಇಬ್ಬರು ಪ್ರಯಾಣಿಕರುಏರ್ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ ಪ್ರಕರಣದ ಬೆನ್ನಲ್ಲೇ ಮತ್ತೊಂದು ಪ್ರಕರಣವು ಬೆಳಕಿಗೆ ಬಂದಿದೆ. ಪ್ರಯಾಣಿಕರಿಬ್ಬರು ವಿಮಾನದಲ್ಲಿ ಕುಡಿದು, ಅಮಲಿನಲ್ಲಿ ಪರಸ್ಪರ ಜಗಳವಾಡಿದ ಘಟನೆ ಇಂಡಿಗೋ ಪ್ಲೈಟ್ನಲ್ಲಿ ನಡೆದಿದೆ ಬೆಂಗಳೂರು: ಇದುವರೆಗೆ ಬಿಜೆಪಿ ಜತೆಗೆ ಗುರುತಿಸಿಕೊಂಡಿದ್ದ ಮುಳಬಾಗಿಲಿನ ಪಕ್ಷೇತರ ಶಾಸಕ ಎಚ್. ನಾಗೇಶ್ ಅವರು ಕಾಂಗ್ರೆಸ್ ಪಕ್ಷ ಸೇರಲು (Karnataka Election) ಮುಂದಾಗಿದ್ದಾರೆ.ಸೋಮವಾರ ಅವರು ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಪಕ್ಷ ಸೇರ್ಪಡೆಗೆ ಉತ್ಸುಕತೆ ತೋರಿದರು ಎನ್ನಲಾಗಿದೆ.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಕೊತ್ತೂರು ಮಂಜುನಾಥ್ ಅವರು ಕೊನೆಯ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯಬೇಕಾಯಿತು. ಆಗ ಕಾಂಗ್ರೆಸ್ ನಾಗೇಶ್ ಅವರನ್ನು ಬೆಂಬಲಿಸಿತ್ತು. ಮತ್ತು ಈ ಕಾರಣದಿಂದ ನಾಗೇಶ್ ಗೆಲುವು ಸಾಧಿಸಿದ್ದರು. ಮೈತ್ರಿ ಸರಕಾರದ ಅವಧಿಯಲ್ಲಿ ಸರಕಾರವನ್ನು ಬೆಂಬಲಿಸಿದ್ದ ನಾಗೇಶ್ ಬಳಿಕ ಆಪರೇಷನ್ ಕಮಲದ ಮೂಲಕ ಹುಟ್ಟಿಕೊಂಡ ಬಿಜೆಪಿ ನೇತೃತ್ವದ ಸರಕಾರದ ಬೆಂಬಲಕ್ಕೆ ನಿಂತರು. ಈ ವೇಳೆ ಅವರನ್ನು ಮಂತ್ರಿ ಮಾಡಿ ಅಬಕಾರಿ ಖಾತೆಯನ್ನೂ ನೀಡಲಾಗಿತ್ತು.ಈಗ ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಹವಾ ಹೆಚ್ಚಾಗಿರುವುದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧಿಸಲು ನಿರ್ಧರಿಸಿದ್ದು ಎಚ್. ನಾಗೇಶ್ ಅವರನ್ನು ಕೈ ಪಕ್ಷದ ಕಡೆಗೆ ಸೆಳೆದಿದೆ ಎನ್ನಲಾಗಿದೆ.ಟಿಕೆಟ್ ಕೊಟ್ಟರೆ ಸೇರುತ್ತೇನೆ ಎಂದ ನಾಗೇಶ್, ಭರವಸೆ ನೀಡದ ಡಿಕೆಶಿಮುಳಬಾಗಿಲು ಕ್ಷೇತ್ರದಿಂದ ಟಿಕೆಟ್ ನೀಡುವುದಾದರೆ ತಾನು ಕಾಂಗ್ರೆಸ್ ಸೇರಲು ಸಿದ್ಧ ಎಂದು ಎಚ್. ನಾಗೇಶ್ ಅವರು ಡಿ.ಕೆ. ಶಿವಕುಮಾರ್ ಮುಂದೆ ಹೇಳಿದರು ಎನ್ನಲಾಗಿದೆ. ಆದರೆ, ಟಿಕೆಟ್ ನೀಡುವ ಬಗ್ಗೆ ಡಿಕೆ ಶಿವಕುಮಾರ್ ಭರವಸೆ ನೀಡಿಲ್ಲ ಎನ್ನಲಾಗಿದೆ.ಮುಳಬಾಗಿಲಿನಲ್ಲಿ ಈ ಬಾರಿ ಹೆಚ್ಚು ಆಕಾಂಕ್ಷಿಗಳು ಇದ್ದಾರೆ. ಕೆ. ಮುನಿಯಪ್ಪ, ಕೊತ್ತೂರು ಮಂಜುನಾಥ್ ಸೇರಿದಂತೆ ಒಂಬತ್ತು ಜನ ಆಕಾಂಕ್ಷಿಗಳು ಇದ್ದಾರೆ. ಹೀಗಾಗಿ ಈ ಕ್ಷಣದಲ್ಲೇ ಟಿಕೆಟ್ ಭರವಸೆ ನೀಡಲಾಗದು. ಮೊದಲು ಪಕ್ಷ ಸೇರಿಕೊಳ್ಳಿ. ನಾನು ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿ ತಿಳಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು ಎನ್ನಲಾಗಿದೆ. ಪಕ್ಷ ಸೇರ್ಪಡೆಗೆ ದಿನಾಂಕವನ್ನು ತಿಳಿಸುವುದಾಗಿ ಡಿಕೆಶಿ ತಿಳಿಸಿದರು ಎನ್ನಲಾಗಿದೆ.ಸಿದ್ದರಾಮಯ್ಯ ಸ್ಪರ್ಧಾ ಅಖಾಡವಾಯ್ತು ಕೋಲಾರ; ಶುರುವಾಗಿದೆ ರಾಜಕೀಯ ಲೆಕ್ಕಾಚಾರಅನಿಲ್ ಕಾಜಗಾರ್ ವಿಸ್ತಾರ ನ್ಯೂಸ್ ಬೆಳಗಾವಿಚುನಾವಣೆ ಘೋಷಣೆಗೂ ಮುನ್ನವೇ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರಿದೆ. ಮತದಾರರನ್ನು ಸೆಳೆಯಲು ರಾಜಕೀಯ ನಾಯಕರು ನಾನಾ ಕಸರತ್ತು ನಡೆಸುತ್ತಿದ್ದಾರೆ. ಸದ್ಯ ಗಿಫ್ಟ್ ಪಾಲಿಟಿಕ್ಸ್ ಜೊತೆಗೆ ಆಣೆ ಪ್ರಮಾಣ ರಾಜಕೀಯ ಸಹ ಶುರುವಾಗಿದೆ.ಕಾಂಗ್ರೆಸ್, ಬಿಜೆಪಿ ನಾಯಕರು ಮತದಾರರನ್ನು ಸೆಳೆಯಲು ಜಿದ್ದಿಗೆ ಬಿದ್ದು ಭರಪೂರ ಉಡುಗೊರೆಗಳನ್ನು ಬಹಿರಂಗವಾಗಿಯೇ ಹಂಚುತ್ತಿದ್ದಾರೆ. ಈಗ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರು ಮನೆ ಮನೆಗೆ ತೆರಳಿ ಆಣೆ ಪ್ರಮಾಣ ಮಾಡಿಸಿಕೊಂಡು ಮಿಕ್ಸರ್ ಗ್ರೈಂಡರ್ ಹಂಚುತ್ತಿದ್ದಾರೆಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಧನಂಜಯ ಜಾಧವ್ ಗಂಭೀರ ಆರೋಪ ಮಾಡಿದ್ದಾರೆ.ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹಳದಿ-ಕುಂಕುಮ ಕಾರ್ಯಕ್ರಮ ನಡೆಸಿ ಆ ಮೂಲಕ ಟಿಫಿನ್ ಬಾಕ್ಸ್ ಹಂಚಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಈಗ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಗ್ರಾಮೀಣ ಕ್ಷೇತ್ರದಲ್ಲಿ ಮನೆ ಮನೆಗೆ ತೆರಳಿ ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಧನಂಜಯ ಜಾಧವ್ ಈ ಆರೋಪ ಮಾಡಿದ್ದಾರೆ.ಇದರೊಂದಿಗೆ ಆಣೆ ಪ್ರಮಾಣ ಮಾಡಿಸುವ ಬಗ್ಗೆ ಮತದಾರರು ತರಾಟೆಗೆ ತೆಗೆದುಕೊಳ್ಳುವ ವಿಡಿಯೊಗಳನ್ನು ಧನಂಜಯ ಜಾಧವ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮಹಿಳೆಯರು ಮಿಕ್ಸರ್ ಗ್ರೈಂಡರ್ ಒಯ್ಯುತ್ತಿರುವ ವಿಡಿಯೊ ಸಹ ರಿಲೀಸ್ ಮಾಡಿದ್ದಾರೆ.ʻʻತೆಂಗಿನಕಾಯಿ ಹಿಡಿದು ಆಣೆ ಮಾಡಿಸಿ ಮಿಕ್ಸರ್ ಗ್ರೈಂಡರ್ ನೀಡುತ್ತಿದ್ದು, ನಿಜವಾದ ಅಭಿವೃದ್ಧಿ ಮಾಡಿದ್ರೆ ಆಣೆ ಪ್ರಮಾಣ ಏಕೆ ಮಾಡಿಸ್ತಿದ್ರಿ? ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚೇಲಾಗಳು ಪ್ರತಿ ಮನೆಗೆ ತೆರಳಿ ಆಣೆ ಮಾಡಿಸುತ್ತಿದ್ದಾರೆ. ಇದಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಜನರು ವಿರೋಧ ಮಾಡುತ್ತಿದ್ದಾರೆ. ನಮಗೆ ವೋಟ್ ಹಾಕಬೇಕು ಅಂತಾ ಆಣೆ ಮಾಡಿಸುತ್ತಿದ್ದಾರೆ..ಈ ರೀತಿಯ ನೀಚ ರಾಜಕಾರಣ ವಿರೋಧಿಸುವೆ. ಇನ್ನೂರು ರೂಪಾಯಿ ವಸ್ತು ನೀಡಿ ವೋಟ್ ಹಾಕಬೇಕೆಂದು ಆಣೆ ಮಾಡಿಸುತ್ತಿದ್ದೀರಾ?ʼʼ ಎಂದು ಕಿಡಿಕಾರಿದ್ದಾರೆ.ಬೆಳಗಾವಿ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಳಗಾವಿ ಗ್ರಾಮೀಣ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರ. ತನ್ನ ರಾಜಕೀಯ ಬದ್ಧವೈರಿ ಲಕ್ಷ್ಮೀ ಹೆಬ್ಬಾಳ್ಕರ್ ರನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ಧನಂಜಯ್ ಜಾಧವ್ ಪಣ ತೊಟ್ಟಿದ್ದಾರೆ. ಚುನಾವಣೆ ಗೆದ್ದ ತೀರುತ್ತೇನೆ ಎಂಬ ಹಠಕ್ಕೆ ಲಕ್ಷ್ಮಿ ಹೆಬ್ಬಾಳಕರ ಬಿದ್ದಿದ್ದಾರೆ.ಈ ಮಧ್ಯೆ ಬಿಜೆಪಿಯಲ್ಲಿ ಅನೇಕರು ಟಿಕೆಟ್ ಆಕಾಂಕ್ಷಿಗಳಿದ್ದು ಅದರಲ್ಲೂ ಮಾಜಿ ಶಾಸಕ ಸಂಜಯ ಪಾಟೀಲ್ ಸಹ ಮತದಾರರಿಗೆ ಬಹಿರಂಗವಾಗಿ ಗಿಫ್ಟ್ ನೀಡುತ್ತಿದ್ದಾರೆ. ಇತ್ತಿಚೆಗೆ ತಮ್ಮ ಜನುಮ ದಿನದ ಪ್ರಯುಕ್ತ ಶಕ್ತಿ ಪ್ರದರ್ಶನ ಮಾಡಿದ್ದ ಸಂಜಯ್ ಪಾಟೀಲ್ ಕಾರ್ಯಕ್ರಮಕ್ಕೆ ಬಂದವರಿಗೆ ತಟ್ಟೆ, ಲೋಟ, ಬಟ್ಟಲುಗಳನ್ನು ಗಿಫ್ಟ್ ಆಗಿ ನೀಡಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಏನೇ ಕೊಟ್ಟರೂ ಅದರ ಡಬಲ್ ಕೊಡ್ತೀನಿ ಅಂತಾ ತಮ್ಮ ಭಾಷಣದಲ್ಲಿ ಬಹಿರಂಗವಾಗಿಯೇ ಆಮಿಷವೊಡ್ಡಿದ್ದರು.ಒಟ್ಟಿನಲ್ಲಿ ಬೆಳಗಾವಿ ಗ್ರಾಮೀಣ ಮತಕ್ಷೇತ್ರದಲ್ಲಿ ಮತದಾರರನ್ನು ಸೆಳೆಯಲು ಕೈ, ಬಿಜೆಪಿ ನಾಯಕರು ನಾನಾ ಬಗೆಯ ಗಿಫ್ಟ್ ವಿತರಣೆ ಮಾಡುತ್ತಿದ್ದು, ಗಿಫ್ಟ್ ಪಾಲಿಟಿಕ್ಸ್ ಜೊತೆ ಈಗ ಪ್ರಾಮಿಸ್ ಪಾಲಿಟಿಕ್ಸ್ ಶುರುವಾಗಿದ್ದು ಚುನಾವಣೆಯಲ್ಲಿ ಇದು ಯಾರಿಗೆ ಪ್ಲಸ್ ಆಗುತ್ತದೆ ಯಾರಿಗೆ ಮೈನಸ್ ಆಗುತ್ತದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ.
https://play.google.com/store/apps/details?id=com.speed.newskannada