ತಾರಾ ಚಲನಚಿತ್ರರಂಗದ ತಾರೆ.

 

ತಾರಾ ಚಲನಚಿತ್ರರಂಗವೆಂಬ ತಾರೆಗಳ ತೋಟದಲ್ಲಿ ವಿಶಿಷ್ಟರಾದ ತಾರಾ ಅವರ ಹುಟ್ಟಿದ ದಿನ ಮಾರ್ಚ್ 4. ಬಹಳ ವರ್ಷಗಳ ಕಾಲ ರಾಷ್ಟ್ರಮಟ್ಟದ ನಟನಾ ಪ್ರಶಸ್ತಿಗಳಲ್ಲಿ ಕನ್ನಡ ಚಿತ್ರರಂಗದ ಹೆಸರು ಮರೆತುಹೋಗಿದ್ದ ಸಮಯದಲ್ಲಿ, ತಾರಾ ಅವರು ತಮ್ಮ ‘ಹಸೀನಾ’ ಚಿತ್ರದ ಅಭಿನಯದ ಮೂಲಕ ಅದನ್ನು ಕನ್ನಡಕ್ಕೆ ಮತ್ತೊಮ್ಮೆ ತಂದರು. ‘ಕ್ರಮ’, ‘ಕರಿಮಲೆಯ ಕಗ್ಗತ್ತಲು’, ‘ಕಾನೂರು ಹೆಗ್ಗಡತಿ’, ‘ಮುಂಜಾನೆಯ ಮಂಜು’, ‘ನಿನಗಾಗಿ’, ‘ಸಯನೈಡ್’, ‘ಈ ಬಂಧನ’ ಹೀಗೆ ಹಲವು ಚಲನಚಿತ್ರಗಳಲ್ಲಿ ರಾಜ್ಯ ಪ್ರಶಸ್ತಿ ಪಡೆದ ತಾರಾ ಕನ್ನಡ ನಾಡು ಕಂಡ ಅಮೂಲ್ಯ ಪ್ರತಿಭೆ. ಅವರ ಮತದಾನ, ಸಯನೈಡ್, ಭಾಗೀರಥಿ ಮುಂತಾದ ಚಿತ್ರಗಳೂ ಅಷ್ಟೇ ಪ್ರಸಿದ್ಧ.ತಾರಾ ಅವರು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು ತಮಿಳು ಚಿತ್ರರಂಗದ ಮೂಲಕ. ನಂತರ ಕನ್ನಡಕ್ಕೆ ಬಂದು ಇಲ್ಲಿ ನಿರಂತರವಾಗಿ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಚಲನಚಿತ್ರಗಳಲ್ಲಿ ಮನೆಮಾತಾಗಿದ್ದಾರೆ. ಇಂದೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಷ್ಟೊಂದು ವರ್ಷ ಚಿತ್ರರಂಗದಲ್ಲಿದ್ದರೂ ಅವರು ನಾಯಕಿಯಾಗಿ ನಟಿಸಿದ್ದು ವಿರಳ ಚಿತ್ರಗಳಲ್ಲಿ. ಕನ್ನಡದ ಪ್ರತಿಷ್ಟಿತ ನಟರಾದ ವಿಷ್ಣುವರ್ಧನ್, ಅಂಬರೀಶ್, ಅನಂತನಾಗ್ ಅವರ ಕೂಡ ಅಲ್ಲಲ್ಲಿ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ತಾರಾ ಹೆಚ್ಚಾಗಿ ಕಂಡದ್ದು ನಮ್ಮ ನಾಯಕರ ತಂಗಿಯ ಪಾತ್ರದಲ್ಲಿ.ತಾರಾ ಅವರು ನಿರ್ವಹಿಸಿದ ಪಾತ್ರಗಳಲ್ಲಿ ಅವರ ಪ್ರತಿಭೆ ಎಷ್ಟು ಸೊಗಸಿನದ್ದೆಂದರೆ ಆ ಚಿತ್ರಗಳಲ್ಲಿ ಪ್ರಧಾನ ಪಾತ್ರಗಳಲ್ಲಿರುತ್ತಿದ್ದ ನಟನಾಮಣಿಗಳ ಪೇವಲ ಭಾವನಾಶೂನ್ಯ ಬೊಂಬೆತನಗಳನ್ನು ನಿವಾಳಿಸುವಷ್ಟು. ಕೆಲವು ಸಲ ಆ ನಾಯಕಿಯರನ್ನು ನೋಡಿದಾಗ ತಲೆ ಮೇಲೆ ಕುಟ್ಟಿ ನಮ್ಮ ‘ತಾರಾ’ ಅವರಂತೆ ಅಭಿನಯಿಸಲಿಕ್ಕೆ ನಿಮಗೆ ಏನು ಕಷ್ಟ ಅಂತ ಕೇಳುವಂತಾಗುತ್ತದೆ. ಜೊತೆಗೆ ಆ ನಾಯಕಿಯರನ್ನು ಮೆರೆಸಿ ನಮ್ಮ ಕನ್ನಡದ ಹುಡುಗಿಯರನ್ನು ಸಣ್ಣ ಪಾತ್ರಗಳಿಗೆ ದೂಡುವ ನಮ್ಮ ಕನ್ನಡದ ಪ್ರತಿಷ್ಟಿತ ದೊರೆಗಳನ್ನು ಕೂಡ ‘ಇದನ್ನೆಲ್ಲಾ ಮಾಡ್ತೀರಲ್ಲಾ ನಿಮಗೆ…..’ ಎಂದು ಕೇಳುವಂತಾಗುತ್ತದೆ. ಆದರೆ ಅದೆಲ್ಲ ಅನಿಸುತ್ತದೆ. ನಾವು ಕನ್ನಡಿಗರಲ್ಲವೇ ‘ಮರ್ಯಾದಸ್ತರು, ಶಾಂತಿಪ್ರಿಯರು’ ನಾವು ಹಾಗೆಲ್ಲಾ ಸೊಲ್ಲು ಹಾಕುವುದಿಲ್ಲ! ಈಗಿನ ದಿನದಲ್ಲಿ ಈ ತಾಪತ್ರಯ ಹೆಚ್ಚಿಲ್ಲ. ಕಾರಣ ಇಷ್ಟೇ. ಈಗಿನ ನಟಿಯರಲ್ಲಿ ವೆತ್ಯಾಸ ಇರೋದು ತುಂಬಾ ಕಡಿಮೆ. ಅವರು ಬೆಂಗಳೂರಿನವರೋ ಅಲ್ಲವೋ ಅಂತ! ಯಾರಿಗೂ ಕನ್ನಡ ಸರಿಯಾಗಿ ಬರೋಲ್ಲ.ಅದೇನೇ ಇರಲಿ. ತಾವು ಮಾಡುವ ಕೆಲಸ ಚಿಕ್ಕದಿರಲಿ, ದೊಡ್ಡದಿರಲಿ. ತಾವು ಮಾಡಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿದರೆ ಅದು ನೀಡುವ ಪ್ರತಿಫಲ ಎಷ್ಟು ದೊಡ್ಡದೆಂದು ನಮ್ಮ ತಾರಾ ಅವರು ತಮ್ಮ ಸಾಧನೆಗಳ ಮೂಲಕ ಲೋಕಕ್ಕೆ ತೋರಿಸಿಕೊಟ್ಟಿದ್ದಾರೆ. ಸಿದ್ಧಲಿಂಗಯ್ಯ, ಕೆ. ಬಾಲಚಂದರ್, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ್, ಶೇಷಾದ್ರಿ, ಮಣಿರತ್ನಂ, ನಾಗತಿಹಳ್ಳಿ, ದಿನೇಶ್ ಬಾಬು ಅಂಥಹ ವಿಭಿನ್ನ ನೆಲೆಯ ಶ್ರೇಷ್ಠರ ನಿರ್ದೇಶನಗಳಲ್ಲಿ ಕೆಲಸಮಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರ್.ಎಸ್‌. ಕೇಶವಮೂರ್ತಿ ಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು.

Mon Mar 6 , 2023
  ಆರ್.ಎಸ್‌. ಕೇಶವಮೂರ್ತಿಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು. ರುದ್ರಪಟ್ಟಣ ಸುಬ್ಬರಾಯ ಕೇಶವ ಮೂರ್ತಿಗಳು ಗಂಧರ್ವಾಂಶ ಸಂಭೂತರೆನ್ನಿಸಿದ್ದ, ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. ಗುರುಗಳನ್ನು ಶ್ವೇತಛತ್ರವೆಂದೇ ಭಾವಿಸಿದ್ದ ಕೇಶವಮೂರ್ತಿಗಳು “ಸಾಧನೆಯಿಂದ ಸಿದ್ಧಿ; ಸಿದ್ಧಿಯಿಂದ ಪ್ರಸಿದ್ಧಿ; ಅಸಾಧ್ಯ ಎನ್ನುವುದು ಸಲ್ಲ; ಪ್ರತಿಯೊಬ್ಬರೂ ಅಸಾಧ್ಯ ಸಾಧಕರಾದರೆ ‘ಅಸಾಧ್ಯಂ ತವ ಕಿಂವದ?” ಎಂದು ಪದೇ ಪದೇ ಹೇಳುತ್ತಿದ್ದರು.1903ರ ಮಾರ್ಚ್ 4ರಂದು ಬೇಲೂರಿನಲ್ಲಿ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ […]

Advertisement

Wordpress Social Share Plugin powered by Ultimatelysocial