ಆರ್.ಎಸ್. ಕೇಶವಮೂರ್ತಿಸಂಗೀತ ಪ್ರಪಂಚದಲ್ಲಿ ವೀಣೆ ಶೇಷಣ್ಣ, ವೀಣೆ ಸುಬ್ಬಣ್ಣ ಮೊದಲಾದವರು ದೊಡ್ಡ ಸಾಧಕರು. ರುದ್ರಪಟ್ಟಣ ಸುಬ್ಬರಾಯ ಕೇಶವ ಮೂರ್ತಿಗಳು ಗಂಧರ್ವಾಂಶ ಸಂಭೂತರೆನ್ನಿಸಿದ್ದ, ವೀಣೆ ಸುಬ್ಬಣ್ಣನವರ ಪಟ್ಟ ಶಿಷ್ಯರು. ಗುರುಗಳನ್ನು ಶ್ವೇತಛತ್ರವೆಂದೇ ಭಾವಿಸಿದ್ದ ಕೇಶವಮೂರ್ತಿಗಳು “ಸಾಧನೆಯಿಂದ ಸಿದ್ಧಿ; ಸಿದ್ಧಿಯಿಂದ ಪ್ರಸಿದ್ಧಿ; ಅಸಾಧ್ಯ ಎನ್ನುವುದು ಸಲ್ಲ; ಪ್ರತಿಯೊಬ್ಬರೂ ಅಸಾಧ್ಯ ಸಾಧಕರಾದರೆ ‘ಅಸಾಧ್ಯಂ ತವ ಕಿಂವದ?” ಎಂದು ಪದೇ ಪದೇ ಹೇಳುತ್ತಿದ್ದರು.1903ರ ಮಾರ್ಚ್ 4ರಂದು ಬೇಲೂರಿನಲ್ಲಿ ರುದ್ರಪಟ್ಣ ಸುಬ್ಬರಾಯರು ಮತ್ತು ಪುಟ್ಟಕ್ಕಯ್ಯನವರಿಗೆ ಜನಿಸಿದ ಪುತ್ರನಿಗೆ ಬೇಲೂರು ಚನ್ನಕೇಶವನ ಹೆಸರನ್ನೇ ಇಟ್ಟು ಕೇಶವಮೂರ್ತಿ ಎಂದು ಕರೆದರು. ಇಪ್ಪತ್ನಾಲ್ಕು ತಲೆಮಾರುಗಳಿಂದ ವೈಣಿಕ ವಂಶಜರಾದ ಸುಬ್ಬರಾಯರು ಶಾಲೆಯಲ್ಲಿ ಸಂಗೀತ ಬೋಧಕರಾಗಿದ್ದರು. ಕೇಶವಮೂರ್ತಿ ಮೂರು ತಿಂಗಳ ಕೂಸಾಗಿದ್ದಾಗ ಅವರಿಗೆ ಚಿಕ್ಕಮಗಳೂರಿಗೆ ವರ್ಗವಾಯಿತು.
ಧ್ವನಿವರ್ಧಕ ಸಾಧನಗಳಿಲ್ಲದ ಕಾಲದಲ್ಲಿ ವೀಣೆಯ ನಾದವನ್ನು ಹೆಚ್ಚಿಸುವುದರ ಬಗ್ಗೆ ಸಂಶೋಧನೆ ನಡೆಸಿ, ಇಪ್ಪತ್ನಾಲ್ಕು ತಂತಿಗಳ ವೀಣೆಯನ್ನು ಪ್ರಥಮವಾಗಿ ರಚಿಸಿದ ಸಾಧಕರು ಕೇಶವಮೂರ್ತಿಗಳು. ಪಿಟೀಲು ಕೊಳಲು, ಜಲತರಂಗ್, ಪಿಯಾನೋ, ಬಾಲಕೋಕಿಲ ವಾದ್ಯಗಳನ್ನು ಸಹ ಅವರು ನುಡಿಸುತ್ತಿದ್ದರು.ಎಸ್ಸೆಸ್ಸೆಲ್ಸಿವರೆಗೆ ವಿದ್ಯಾಭ್ಯಾಸ ಮಾಡಿದ ಕೇಶವಯ್ಯನಿಗೆ ಯಾವಾಗಲೂ ಸಂಗೀತದ ಕಡೆಗೇ ಒಲವು ಹೆಚ್ಚು. ತಂದೆಯವರ ಬಳಿಯೇ ಬಾಲ ಪಾಠದಿಂದ ವೀಣೆ ಕಲಿಯುತ್ತಿದ್ದು, ಸ್ವರಜತಿ ನುಡಿಸುವವರೆಗೆ ಬಂದಿದ್ದರು. ಮನೆಬಿಟ್ಟು ನೂರಿಪ್ಪತ್ತು ಮೈಲಿ ನಡೆದುಕೊಂಡು ಮೈಸೂರಿಗೆ ಬಂದರೆ ದೊಡ್ಡಪ್ಪನವರು ನಿರಾಶೆ ಮೂಡಿಸಿದರು. ಅಲ್ಲಿಂದ ಹೊರಬಂದು ಅಲೆಯುತ್ತಿದ್ದಾಗ ಅವರ ಬಂಧು ರಾಯಪ್ಪನವರು ತಮ್ಮ ಮನೆಗೆ ಕರೆದುಕೊಂಡು ಹೋದರು. ರಾಯಪ್ಪನವರ ಎದುರು ಮನೆಯಲ್ಲಿದ್ದ ಅಕ್ಕಮ್ಮಣ್ಣಿ ಎಂಬಾಕೆಗೆ ವೀಣೆ ಕಲಿಸಲು ವೀಣೆ ಸುಬ್ಬಣ್ಣನವರು ಬರುತ್ತಿದ್ದರು. ಅವರ ಪ್ರೌಢಿಮೆ ಬಗ್ಗೆ ಕೇಳಿದ್ದ ಕೇಶವಯ್ಯ ಒಂದು ದಿನ ಅವರಿಗೆ ಅಡ್ಡಬಿದ್ದು ತಮ್ಮ ಮಹತ್ತಾದ ಅಭಿಲಾಷೆಯನ್ನು ನಿವೇದಿಸಿಕೊಂಡರು. ಭಕ್ಷಿ ಸುಬ್ಬಣ್ಣನವರು ಸಮಾಧಾನಚಿತ್ತದಿಂದ ಆಲೈಸಿ, ಮಾತೇ ಇಲ್ಲದೆ, ಮಂದಹಾಸದಿಂದ ಆರ್ಶೀವದಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: