ಇನ್ನೊಂದು ಕಡೆ ಎರಡು ಎಕ್ಸ್ಪೆಕ್ಟೆಡ್ ಸಿನಿಮಾಗಳೂ ಒಂದೇ ದಿನ ಬಿಡುಗಡೆಯಾಗೋದೂ ಹೊಸದಲ್ಲ. 9 ತಿಂಗಳ ಹಿಂದಷ್ಟೇ ಎರಡು ದೊಡ್ಡ ಸಿನಿಮಾಗಳು ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗಿ ಗದ್ದಲ ಎಬ್ಬಿಸಿತ್ತು.
ಕೊರೊನಾ ತಣ್ಣಗಾಗುತ್ತಿದ್ದಂತೆ ಕಿಚ್ಚ ಸುದೀಪ್ ಸಿನಿಮಾ ‘ಕೋಟಿಗೊಬ್ಬ 3’ ಹಾಗೂ ದುನಿಯಾ ವಿಜಯ್ ‘ಸಲಗ’ ಬಿಡುಗಡೆಗೆ ಸಜ್ಜಾಗಿ ನಿಂತಿತ್ತು. ಒಂದಿಷ್ಟು ವಾದ ವಿವಾದಗಳ ಬಳಿಕ ಈ ಎರಡೂ ಸಿನಿಮಾಗಳೂ ಒಂದು ದಿನದ ಅಂತರದಲ್ಲಿ ಬಿಡುಗಡೆಯಾಗಿತ್ತು.
ಈಗ ಮತ್ತೊಮ್ಮೆ ಇಂತಹದ್ದೇ ಸ್ಥಿತಿ ನಿರ್ಮಾಣ ಆಗಿದೆ. ಎರಡು ನಿರೀಕ್ಷಿತ ಸಿನಿಮಾಗಳು ಒಂದೇ ದಿನ ರಿಲೀಸ್ ಡೇಟ್ ಅನೌನ್ಸ್ ಮಾಡಿವೆ. ಅದು ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾ ‘ರವಿ ಬೋಪಣ್ಣ’. ಈ ಎರಡೂ ಸಿನಿಮಾಗಳೂ ಆಗಸ್ಟ್ 12ರಂದೇ ಬಿಡುಗಡೆಯಾಗುತ್ತಿದ್ದು, ಬಾಕ್ಸಾಫೀಸ್ನಲ್ಲಿ ಗುದ್ದಾಡುವುದಕ್ಕೆ ಪಂಚೆ ಕಟ್ಟಿ ನಿಂತಿವೆ.
ಮತ್ತೆ ಬಾಕ್ಸಾಫೀಸ್ ಕ್ಲ್ಯಾಶ್ಎರಡು ಎಕ್ಸ್ಪೆಕ್ಟೆಡ್ ಸಿನಿಮಾಗಳು ಒಂದೇ ದಿನ ರಿಲೀಸ್ಗೆ ರೆಡಿಯಾದರೆ, ಒಂದೋ ಬಾಕ್ಸಾಫೀಸ್ನಲ್ಲಿ ಗದ್ದಲ ಎಬ್ಬಿಸುತ್ತವೆ. ಇಲ್ಲಾ ಬಿಡುಗಡೆಗೂ ಮುನ್ನವೇ ಕಿತ್ತಾಟ ಶುರುವಾಗುತ್ತೆ. ಹಿಂದಿನಿಂದಲೂ ಕ್ಲ್ಯಾಶ್ ಆದಾಗಲೆಲ್ಲಾ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಕಳೆದ ಬಾರಿ ಎರಡು ಮಾಸ್ ಸಿನಿಮಾಗಳು ಬಾಕ್ಸಾಫೀಸ್ನಲ್ಲಿ ಕ್ಲ್ಯಾಶ್ ಆಗಿದ್ದವು. ಆದರೆ, ಈ ಬಾರಿ ಪರಿಸ್ಥಿತಿ ಬೇರೆನೇ ಇದೆ. ಒಂದು ರೊಮ್ಯಾಂಟಿಕ್ ಸಿನಿಮಾ ಜೊತೆ ಮತ್ತೊಂದು ಥ್ರಿಲ್ಲರ್ ಟಕ್ಕರ್ ಕೊಡುತ್ತಿದೆ. ಅದುವೇ ‘ಗಾಳಿಪಟ 2’ ಹಾಗೂ ‘ರವಿ ಬೋಪಣ್ಣ’
‘ಗಾಳಿಪಟ 2’ Vs ‘ರವಿಬೋಪಣ್ಣ’
ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಸಿನಿಮಾ ಮೇಲೆ ಯಾವಾಗಲೂ ಒಂದು ಕಣ್ಣು ಇದ್ದೇ ಇರುತ್ತೆ. ಅದರಲ್ಲೂ 12 ವರ್ಷಗಳ ಬಳಿಕ ಇಂಡಸ್ಟ್ರಿ ಹಿಟ್ ಆಗಿದ್ದ ‘ಗಾಳಿಪಟ’ ಸಿನಿಮಾ ಎರಡನೇ ಚಾಪ್ಟರ್ ಓಪನ್ ಆಗುತ್ತಿದೆ. ಮತ್ತೆ ಸ್ಯಾಂಡಲ್ವುಡ್ನಲ್ಲಿ ಗಣೇಶ್ ಹಾಗೂ ಯೋಗರಾಜ್ ಭಟ್ ಜೋಡಿಯ ರೊಮ್ಯಾಂಟಿಕ್ ಸಿನಿಮಾವೊಂದು ತೆರೆಗೆ ಬರುವುದಕ್ಕೆ ಸಜ್ಜಾಗಿ ನಿಂತಿದೆ. ಆದರೆ, ಇದೇ ದಿನ ಕ್ರೇಜಿಸ್ಟಾರ್ ಬ್ಯಾನರ್ ಈಶ್ವರಿ ಸಂಸ್ಥೆಯ 50ನೇ ಸಿನಿಮಾ ರವಿ ಬೋಪಣ್ಣ ಕೂಡ ರಿಲೀಸ್ ಆಗುತ್ತಿದೆ. ಈ ಎರಡೂ ಸಿನಿಮಾಗಳಲ್ಲಿ ಯಾವ ಸಿನಿಮಾಗೆ ಥಿಯೇಟರ್ ಮುಂದೆ ಹೌಸ್ಫುಲ್ ಬೋರ್ಡ್ ಬೀಳುತ್ತೆ ಅನ್ನೋ ಕುತೂಹಲ ಗರಿಗೆದರಿದೆ.
ರವಿ ಬೋಪಣ್ಣ ಪ್ರಬುದ್ಧ ‘ಪ್ರೇಮಲೋಕ’
ಕ್ರೇಜಿಸ್ಟಾರ್ ರವಿಚಂದ್ರನ್ ಬಹಳ ದಿನಗಳಿಂದ ‘ರವಿ ಬೋಪಣ್ಣ’ ಸಿನಿಮಾವನ್ನು ರಿಲೀಸ್ ಮಾಡಬೇಕು ಅಂತ ಎದುರು ನೋಡುತ್ತಲೇ ಇದ್ದರು. ಇದು ಅವರ ಸ್ವಂತ ನಿರ್ಮಾಣ ಸಂಸ್ಥೆಯ 50ನೇ ಸಿನಿಮಾ ಆಗಿರುವುದರಿಂದ ರಿಲೀಸ್ ದೊಡ್ಡ ಮಟ್ಟದಲ್ಲೇ ಆಗುತ್ತೆ ಎಂದು ಕ್ರೇಜಿ ಫ್ಯಾನ್ಸ್ ನಿರೀಕ್ಷೆ ಮಾಡುತ್ತಿದ್ದಾರೆ. ರಿಯಾಲಿಟಿ ಶೋನಲ್ಲಿ ರವಿಚಂದ್ರನ್ ಆಗಸ್ಟ್ 12ಕ್ಕೆ ‘ರವಿ ಬೋಪಣ್ಣ’ ರಿಲೀಸ್ ಎಂದು ಅನೌನ್ಸ್ ಮಾಡಿದ್ದರು. ಅದರಂತೆ ಬಿಡುಗಡೆ ಸಿದ್ಧತೆಗಳು ಆರಂಭ ಆಗಿವೆ. ಕುತೂಹಲವೇನು ಅಂದರೆ, ಕ್ರೇಜಿಸ್ಟಾರ್ ಈಗಾಗಲೇ ಇದೊಂದು ಪ್ರಬುದ್ಧ ಪ್ರೇಮಲೋಕ ಎಂದಿರೋದು ಫ್ಯಾನ್ಸ್ಗೆ ಕಿಕ್ ಕೊಟ್ಟಿದೆ.
ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್
ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾ ನಾಲ್ಕು ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ನಿರ್ಮಾಪಕನಾಗಿ, ನಿರ್ದೇಶಕನಾಗಿ, ಸಂಗೀತ, ಸಂಕಲನ ಹಾಗೂ ಸಾಹಿತ್ಯಗಾರನಾಗಿ ಕಾಣಿಸಿಕೊಳ್ಳಿದ್ದಾರೆ. ಇವರೊಂದಿಗೆ ರವಿ ಬೋಪಣ್ಣ ಜೊತೆ ಕಿಚ್ಚ ಸುದೀಪ್ ವಕೀಲರಾಗಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಕಾವ್ಯ ಶೆಟ್ಟಿ, ರಮ್ಯಾ ಕೃಷ್ಣನ್, ಜೈ ಜಗದೀಶ್, ರವಿಶಂಕರ್ ಗೌಡ, ರಚಿತಾ ರಾಮ್, ಸಂಚಿತಾ ಪಡುಕೋಣೆ ಸೇರಿದಂತೆ ಹಲವು ಮಂದಿ ನಟಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: