ಬೆಳಗಾವಿ ಅಧಿವೇಶನದಲ್ಲಿ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಸುಳ್ಳು ನೆಪ ಹೇಳುವುದನ್ನು ಬಿಟ್ಟು ಗುರುರಾಘವೇಂದ್ರ ಬ್ಯಾಂಕ್ ಸಹಿತ ವಿವಿಧ ಸಹಕಾರಿ ಬ್ಯಾಂಕ್ ಹಗರಣಗಳ (Bank fraud) ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಶ್ರೀ ಗುರು ರಾಘವೇಂದ್ರ ಕೋ- ಆಪರೇಟಿವ್ ಬ್ಯಾಂಕ್ ಠೇವಣಿದಾರರು ಮತ್ತು ಷೇರುದಾರರ ಹಿತರಕ್ಷಣಾ ವೇದಿಕೆಯ ಮುಖ್ಯ ಪೋಷಕ ಡಾ.ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು ಆಗ್ರಹಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಹಕಾರಿ ಬ್ಯಾಂಕ್ಗಳ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ಕೊಡಿಸಿ ಎಂದು ವಿವಿಧ ರೀತಿಯಲ್ಲಿ ಒತ್ತಾಯಿಸುತ್ತ ಬಂದರೂ ಸರ್ಕಾರ ಕಿವಿಗೊಡುತ್ತಿಲ್ಲ. ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮತ್ತು ಸ್ಥಳೀಯ ಸಂಸದ ತೇಜಸ್ವಿ ಸೂರ್ಯ ಅವರಿಗೆ ಎಲ್ಲ ವಿಚಾರ ಗೊತ್ತಿದ್ದರೂ ಈ ಬಗ್ಗೆ ಜಾಣ ಕಿವುಡರಂತೆ ವರ್ತಿಸುತ್ತಿದ್ದಾರೆ. ಇವರೆಲ್ಲರೂ ಸೇರಿ ಯಾರನ್ನು ಕಾಪಾಡಲು ನೋಡುತ್ತಿದ್ದಾರೆ ಎಂಬುದು ತಿಳಿಯುತ್ತಿಲ್ಲ ಎಂದು ಕಿಡಿ ಕಾರಿದ್ದಾರೆ.ವಿಧಾನ ಪರಿಷತ್ನಲ್ಲಿ ಗುರುರಾಘವೇಂದ್ರ ಬ್ಯಾಂಕ್ ಹಗರಣದ ಬಗ್ಗೆ ಚರ್ಚೆ ನಡೆದಾಗ, ಸಹಕಾರಿ ಸಚಿವರು ಸರಿಯಾದ ಮಾಹಿತಿ ನೀಡದೆ ಜಾರಿಕೊಂಡಿದ್ದಾರೆ. ನೀವು ಬಡವರ ಪರವಾಗಿದ್ದರೇ ಹಗರಣದ ತನಿಖೆಯನ್ನು ಸಿಬಿಐಗೆ ನೀಡಿ ಎಂದು ಬಿ.ಕೆ.ಹರಿಪಸ್ರಾದ್ ಅವರು ಕೇಳಿದ್ದಕ್ಕೆ, ಸಚಿವ ಸೋಮಶೇಖರ್ ಅವರು ಸಿಬಿಐಗೆ ಕೊಡಲು ಅಭ್ಯಂತರವಿಲ್ಲ, ಆದರೆ ತಡವಾಗುತ್ತದೆ ಎಂದು ಹೇಳಿರುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.ನಮ್ಮ ಸಿಐಡಿಯವರೇ ತನಿಖೆ ನಡೆಸಲು ಸಮರ್ಥವಾಗಿದ್ದಾರೆ. ಆದ್ದರಿಂದ ಪ್ರಕರಣದ ತನಿಖೆ ಸಿಬಿಐಗೆ ಕೊಡಲು ಆಗಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ, ಸತ್ಯ ಏನೆಂದರೆ ಈವರೆಗೂ ಸಹಕಾರಿ ಸಂಸ್ಥೆಗಳ ಹಗರಣಗಳ ಕುರಿತು 22 ಕೇಸ್ಗಳನ್ನು ಸಿಐಡಿಗೆ ವಹಿಸಿದ್ದು, ಒಂದು ಕೂಡ ತಾರ್ಕಿಕ ಅಂತ್ಯಕ್ಕೆ ತಲುಪಿಲ್ಲ. 850 ಸಹಕಾರಿ ಸಂಸ್ಥೆಗಳ ಅವ್ಯವಹಾರ ಕುರಿತು ಯಾವುದೇ ರೀತಿಯಾದ ನ್ಯಾಯ ದೊರಕಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…