ಗುರು ರಾಘವೇಂದ್ರ ಸಹಕಾರ ಬ್ಯಾಂಕಿನ ಅವ್ಯವಹಾರ ಪ್ರಕರಣದಲ್ಲಿ 1294 ಕೋಟಿ ರೂಪಾಯಿ ಅವ್ಯವಹಾರ ಆಗಿದೆ ಎಂದು ಆಡಿಟ್ ರಿಪೋರ್ಟ್ ಬಂದಿದ್ದು, ಈ ಬಗ್ಗೆ ಎಫ್ಐಆರ್ ಆಗಿದೆ. 819 ಕೋಟಿ ರೂಪಾಯಿ ಸಾಲಪಡೆದವರ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ.1,194 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಐಡಿ, ಇಡಿ ಸೂಚನೆ ನೀಡಿದೆ. ಹರಾಜು ಹಾಕಲು ಕ್ರಮ ಕೈಗೊಳ್ಳಲಿದ್ದೇವೆ. ರಿಸರ್ವ್ ಬ್ಯಾಂಕ್ ವರದಿಕೊಟ್ಟ ಬಳಿಕ ಅಂತಿಮ ಕ್ರಮ ಕೈಗೊಳ್ಳಲಾಗುತ್ತದೆ ಎಂದು (Belagavi Session) ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.ವಿಧಾನ ಪರಿಷತ್ನಲ್ಲಿ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಅವ್ಯವಹಾರದ ಬಗ್ಗೆ ಮಂಗಳವಾರ ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿ, 737 ಕೋಟಿ ರೂ.ಗಳನ್ನು 224 ಜನಕ್ಕೆ ಪರಿಹಾರ ಕೊಡಲಾಗಿದೆ. ರಿಸರ್ವ್ ಬ್ಯಾಂಕ್ ನಿರ್ದೇಶನದಂತೆ ಅಶೋಕನ್ ಎನ್ನುವ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ. ಐವರು ಇದನ್ನು ಸ್ವಾಧೀನಕ್ಕೆ ಪಡೆಯಲು ಮುಂದಾಗಿದ್ದಾರೆ. ಇವರಲ್ಲಿ ಒಬ್ಬರಿಗೆ ನೀಡಲಾಗುತ್ತದೆ. ಠೇವಣಿದಾರರ 300 ಕೋಟಿ ರೂಪಾಯಿ ಫ್ರೀಜ್ ಮಾಡಿದ್ದೇವೆ. ಆಡಿಟ್ ಮಾಡಿದವರನ್ನು ಅನರ್ಹಗೊಳಿಸಲಾಗಿದೆ ಎಂದು ತಿಳಿಸಿದರು.ಪ್ರತಿ ಸದನದಲ್ಲೂ ಹಗರಣದ ಬಗ್ಗೆ ಸಚಿವರು ಅಧಿಕಾರಿಗಳು ಬರೆದುಕೊಟ್ಟ ಉತ್ತರವನ್ನು ಓದುತ್ತಾರೆ. ಇಲ್ಲಿಯವರೆಗೂ ಯಾವುದೇ ಪ್ರಗತಿ ಆಗಿಲ್ಲ. ಅತ್ಯಂತ ಹೆಚ್ಚಿನ ಸಾಲ ಪಡೆದ 24 ಜನರ ಹೆಸರು ಪ್ರಕಟಿಸುವಂತೆ ಕೇಳಿದರೂ ಪ್ರಕಟಿಸಿಲ್ಲ. ಸಿಐಡಿ ತನಿಖೆ ಏನಾಯಿತು. ಲೆಕ್ಕ ಪರಿಶೋಧಕರ ಮೇಲೆ ಕ್ರಮ ತೆಗೆದುಕೊಂಡಿದ್ದೀರಾ? ಇ.ಡಿಯವರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳುತ್ತಾರೆ, ಏನು ಪ್ರಗತಿ ಆಗಿದೆ ಎಂದು ಕಾಂಗ್ರೆಸ್ನ ಯು.ಬಿ.ವೆಂಕಟೇಶ್ ಪ್ರಶ್ನಿಸಿದ್ದರು.ನಂತರ ಹಗರಣದಲ್ಲಿ ಪೋಲಿಸರು, ಅಧಿಕಾರಿಗಳು ಶಾಮೀಲಾಗಿದ್ದಾರೆ. ಇದನ್ನು ಸಿಬಿಐಗೆ ಕೊಡಿ, ಸಿಐಡಿ ತನಿಖೆ ವಿಳಂಬ ಆಗುತ್ತಿದೆ. ಮೂರು ತಿಂಗಳಲ್ಲಿ 483 ಕೋಟಿ ರೂಪಾಯಿ ಖರ್ಚು ಹೇಗೆ ಆಯಿತು ಎಂಬ ಯು.ಬಿ.ವೆಂಕಟೇಶ್ ಪ್ರಶ್ನೆಗೆ ಸಚಿವ ಸೋಮಶೇಖರ್ ಉತ್ತರಿಸಿ, ಇದನ್ನು ನಾವು ಒಪ್ಪುವುದಿಲ್ಲ. ಇದರಲ್ಲಿ ಸರ್ಕಾರ ಯಾರನ್ನೂ ರಕ್ಷಿಸುವ ಕೆಲಸ ಮಾಡುತ್ತಿಲ್ಲ. ಬಡವರ ಹಣದಲ್ಲಿ ಸರ್ಕಾರ ಆಟ ಆಡುವುದಿಲ್ಲ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…