ಕುಮಾರವ್ಯಾಸನ

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ – ಹತ್ತನೆಯ ಸಂಧಿ
ಸೂ.ಕಂಡನಡವಿಯೊಳನಿಲಜನನಾ
ಖಂಡಲನ ತನುಜನ ಪತಾಕಾ
ದಂಡದಲಿ ನಿಲುವಂತೆ ವರವನು ಪಡೆದನಾ ಭೀಮ
ಕೇಳು ಜನಮೇಜಯ ದರಿತ್ರೀ
ಪಾಲ ನರ ನಾರಾಯಣಾಶ್ರಮ
ಕೂಲವತಿಗಳ ನ೦ದನದ ನಿರ್ಮಳ ಸರೋವರದ
ಕೇಳಿಕೆಯ ನವಿಲುಗಳ ತು೦ಬಿಯ
ಮೇಳವದ ಗೀತದ ವಿನೋದದ
ಲಾಳಿದರು ವನವಾಸ ಸಾಮ್ರಾಜ್ಯವನು ಸೊಗಸಿನಲಿ ೧
ಪರಮ ಧರ್ಮಶ್ರವಣ ಸೌಖ್ಯದೊ
ಳರಸನಿರೆ ಬದರಿಯಲಿ ಪೂರ್ವೋ
ತ್ತರದ ದೆಸೆವಿಡಿದೆಸೆಗಿತತಿಶಯ ಗ೦ಧ ಬಂಧುರದ
ಭರಣಿ ಮನ್ಮಥ ಪೋತ ವಣಿಜನ
ತರಣಿ ತರುಣ ಭ್ರಮರ ಸೇವಾ
ಸರಣಿಯೆನೆ ಸುಳಿದುದು ಸಮೀರಣನಾ ಮಹಾದ್ರಿಯಲಿ ೨
ಸರಸ ಸೌಗ೦ಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾಮೋಡಿಯಲಿ ಡಾ
ವರಿಸಿತೈ ದಿಂದ್ರಿಯದಲೊಂದಿರೆ ಸಕಲ ಮುನಿಜನವ ೩
ಮೇಲುತರದಲಿ ಪರಿಮಳದ ವೈ
ಹಾಳಿಯಲಿ ಸಲೆ ಬೀದಿವರಿದು ಚ
ಡಾಳಿಸುವ ಸೊಗಸಿನಲಿ ಸೊಂಪಾದಳು ಸರೋಜಮುಖಿ
ಸೋಲಿಸಿತಲಾ ಚೂಣಿಯಲಿ ಸಂ
ಪಾಳಿಸಿದ ಸೌಗಂಧವಿನ್ನು ವಿ
ಶಾಲ ಪದುಮದೆಂತುಟೆನುತವೆ ತೂಗಿದಳು ಶಿರವ ೪
ಅರಸನಲಿ ಮೇಣ್ ನಕುಲ ಸಹದೇ
ವರಲಿ ತನ್ನ ಮನೋರಥಕೆ ವಿ
ಸ್ತರಣ ವಾಗದು ನುಡಿವಡಿಲ್ಲರ್ಜುನ ಸಮೀಪದಲಿ
ಅರಿ ಭಯಂಕರ ಭೀಮನೇ ಗೋ
ಚರಿಸುವನಲಾಯೆನುತಲಾತನ
ಹೊರೆಗೆ ಬಂದಳು ನಗುತ ನುಡಿದಳು ಮಧುರ ವಚನದಲಿ ೫
ಹಿರಿದು ಸೊಗಸಾಯ್ತೆನಗೆ ಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋರಥವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನುಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಡನು ನಿಜ ಗಧಾಯುಧವ ೬
ಬಿಗಿದು ಬತ್ತಳಿಕೆಯನು ಹೊನ್ನಾ
ಯುಗದ ಖಡ್ಗ ಶರಾಸನವ ಕೊಂ
ಡಗಧರನ ನೆನೆದನಿಲಸುತ ಹೊರವಂಟ ನಾಶ್ರಮವ
ಬಗಿದು ಹೊಕ್ಕನರಣ್ಯವನು ಬೊ
ಬ್ಬೆಗಳಬಿರುಬಿನ ಭಾಹುಸತ್ವದ
ವಿಗಡ ಭೀಮನ ಕಾಲುದುಳಿ ಕಂಪಿಸಿತು ಕಾನನವ ೭
ಒದರಿದರೆ ಪರ್ವತದ ಶಿಖರದ
ಲುದುರಿದವು ಹೆಘ್ಘುಂಡುಗಳು ಮುರಿ
ದಿದೊದೆಯೆ ಬಿದ್ದವು ಬೇರುಸಹಿತ ಮಹಾ ದ್ರುಮಾಳಿಗಳು
ಗಧೆಯ ಹೊಯ್ಲಿನ ಗಂಡ ಶೈಲವೊ
ಕದಳಿಗಳೊ ತಾವರೆಯ ವುಬ್ಬಿದ
ಮದಮುಖನ ಪರಿಮಸಕ ಮುರಿದುದು ಗಿರಿತರುವ್ರಜವ ೮
ಮುಡುಹು ಸೋಂಕಿದೊಡಾ ಮದಾದ್ರಿಗೆ
ಳೊಡನೆ ತೋರಹತರು ಕೆಡೆದುವಡಿ
ಯಿಡಲು ಹೆಜ್ಜೆಗೆ ತಗ್ಗಿದುದು ನೆಲ ಸಹಿತ ಹೆದ್ದೆವರು
ಒಡೆದುದಿಳೆ ಬೊಬ್ಬಿರಿತಕೀತನ
ತೊಡೆಯ ಗಾಳಿಗೆ ಹಾರಿದವು ಕಿರು
ಗಿಡ ಮರ೦ಗಳು ಮೀರಿ ನಡೆದನು ಭೀಮ ನಡವಿಯಲಿ ೯
ಹುಲಿ ಕರಡಿ ಕಾಡಾನೆ ಸಿಂಹಾ
ವಳಿಗಳೀತನ ದನಿಗೆ ಯೋಜನ
ವಳೆಯದಲಿ ಹಾಯ್ದೋಡಿದವು ನೋಡುತ್ತ ಮುರಿ ಮುರಿದು
ಹಳುವ ತಟಪಟ ವಾಯ್ತು ದಿಗ್ಗಜ
ತುಳಿದ ಬಾಳೆಯ ವನದವೊಲು ವೆ
ಗ್ಗಳೆಯನೈ ಕಲಿಭೀಮ ಬಂದನು ವನದ ಮಧ್ಯದಲಿ ೧೦
ಬಿರಿದವದ್ರಿಗಳನಿಲಸುತನು
ಬ್ಬರದ ಬೊಬ್ಬೆಗೆ ಮಿಕ್ಕ ಮೃಗತತಿ
ಶರಭ ಶಾರ್ದೂಲಂಗಳಿಲ್ಲ ವಿಲೋಚನಾಂತದಲಿ
ಮರಗಿರದ ಮೃಗಗಿಗದ ಮಾತೇ
ನರಸ ಭೀಮನ ದನಿಗೆ ಬೆಚ್ಚದೆ
ಗಿರಿ ಗುಹೆಗಳೇ ಮಲೆತು ನಿಂದವುವನಿಗೆ ದನಿಗೊಡುತ ೧೧
ಆ ಮಹಾದ್ರಿಯ ತಪ್ಪಲಲಿ ನಿ
ಸ್ಸೀಮ ಕದಳೀ ಷಂಡದಲಿ ರಘು
ರಾಮನಾಮ ಸುಧಾಭಿಷೇಕ ಸಮಗ್ರ ಸೌಖ್ಯದಲಿ
ಭೀಮವಿಕ್ರಮ ನಿದ್ದನೀಯು
ದ್ದಾಮ ಸಿಂಹದ್ವನಿಗೆ ನಿದ್ರಾ
ತಾಮಸದ ತನಿಮದವಡಗೆ ಕಂದೆರೆದನಾ ಹನುಮ ೧೨
ಏನಿದೆತ್ತಣ ರಭಸವೀ ಗಿರಿ
ಸಾನುವಿದಮಾನುಷ ವಿಹಾರ
ಸ್ಥಾನವಿವನಾರೋ ಮಹಾದೇವ ಪ್ರಚಂಡನಲ
ಈನಿನದವೆಮ್ಮಂದಿನಗ್ಗದ
ವಾನರ ಗರ್ಜನೆಗೆ ಗುರುವಾ
ಯ್ತೇನನ೦ಬೆನೆನುತ್ತ ಮೆಲ್ಲನೆ ಮಿಡುಕಿದನು ಹನುಮ ೧೩
ಮುರಿಯದಂತಿರೆ ಲಘುವಿನಲಿ ಹೆ
ಮ್ಮರವನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿ ದಿಶಾಪಟ ನುಡಿಸಿದನು ಪವಮಾನನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೋದೈತ್ಯನೋ ದಿವಿಜನೋ ಕಿ
ನ್ನರನೋ ನೀನಾರೆಂದು ಭೀಮನ ನುಡಿಸಿದನು ಹನುಮ ೧೪
ನಾವು ಮರ್ತ್ಯರು ದೂರದಲಿ ರಾ
ಜೀವಗ೦ಧ ಸಮೀರಣನ ಸಂ
ಭಾವನೆಗೆ ಸೊಗಸಿದಳು ಸತಿಯಾಕೆಯ ವಚಸ್ಸಿನಲಿ
ತಾವರೆಯ ತಹೆನೆನುತ ಸಿಂಹ ವಿ
ರಾವದಲಿ ವಿಕ್ರಮಿಸೆ ವಿಗಡನ
ದಾವರಿಸಿ ಬಲುಬಾಲ ತಡೆದುದು ಪವನಜನ ಪಥವ ೧೫
ಗದೆಯ ಮೊನೆಯಲಿ ನೂಕಿದನು ರೋ
ಮದಲಿ ಚಲಿಸದು ಬಾಲ ನೋಡಿದ
ನಿದು ವಿಚಿತ್ರವಲಾಯೆನುತ ನುಡಿಸಿದನು ಕಪಿವರನ
ಒಡೆದಡದ್ರಿಗಳಳಿವವೆನ್ನಂ
ಗದಲಿ ನಾಬಲ್ಲಿದನು ಬಾಲದ
ಕದವ ತೆಗೆ ಬಟ್ಟೆಯಲೆನುತ ಗರ್ಜಿಸಿದನಾ ಭೀಮ ೧೬
ನೀವು ಬಲ್ಲಿದರಿದಕೆ ಸಂಶಯ
ವಾವು ದಲ್ಲದೊಡೀ ಮದದ್ವಿಪ
ವೀ ವಿಹಗಕುಲವೀ ಮೃಗವ್ರಜವಂಜುವವೆ ನಿಮಗೆ
ನಾವು ವೃದ್ದರು ನಮ್ಮ ಬಾಲವ
ನಾವು ಹದುಳಿಸಲಾರೆ ವೀಗಳು
ನೀವು ತೊಲಗಿಸಿ ಬಿಜಯ ಮಾಡುವುದೆಂದನಾ ಹನುಮ ೧೭
ಐಸಲೇ ತಪ್ಪೇನೆನುತ ತನ
ಗೇಸು ಬಲವುಂಟೈಸರಲಿ ಕ
ಟ್ಟಾಸುರದಲೌಂಕಿದನು ಬಾಲವನೊದರಿ ಬೊಬ್ಬಿಡುತ
ಗಾಸಿಯಾದನು ಪವನ ಸುತನೆ
ಳ್ಳೈಸು ಮಿಡುಕದು ಬಾಲ ಊರ್ಧ್ವ
ಶ್ವಾಸ ಲಹರಿಯಲಡಿಗಡಿಗೆ ಲಟಕಟಿಸಿದನು ಭೀಮ ೧೮
ತೆಗೆದು ಸೈರಿಸಿ ನಿಂದು ಹೊಯ್ವ
ಳ್ಳೆಗಳು ಡಾವರವಡಗಲೊಳ ತಾ
ಳೀಗೆಗೆ ಕಳವಳ ನೂಕಿದನು ಕರ್ಪುರದ ಹಳಕುಗಳ
ಡಗೆ ಡಗೆಯ ಮರುವಲಗೆ ಗೌಡೊ
ತ್ತುಗಳ ಬಲಿದವಯವದ ಸತ್ರಾ
ಣಿಗಳದೇವನು ಠಾವುರಿಯಲೊದಗಿದನು ಬಾಲದಲಿ ೧೯
ಮಿಡುಕದದು ಮಹಿಯಿಂ ಭೀಮನ
ಕಡುಹು ನಿಂದುದು ಬಾಲದಲಿ ತುದಿ
ನಡುಗದನಿಲಜನಂಗವಟ್ಟದ ಕಡುಹು ಕಂಪಿಸದು
ತೋಡಕೆ ಕೆಟ್ಟುದು ಕಾರ್ಯ ದುರ್ಬಲ
ನೊಡನೆ ಭಂಗವ್ಯಾಪ್ತಿ ತನ್ನನು
ಸುಡಲೆನುತ ಹಿಮ್ಮೆಟ್ಟಿ ಮಮ್ಮಲ ಮರುಗಿದನು ಭೀಮಂ ೨೦
ಈತ ಕಪಿರೂಪದ ಸುರೇಂದ್ರನೊ
ಭೂತನಾಥನೊ ಮೇಣು ವಿಮಳ
ತ್ರೇತೆಯಲಿ ದಶಮುಖನ ಹಾಣಾ ಹಾಣಿಗಳ ಕಪಿಯೋ
ಏತರವು ನಮ್ಮುಬ್ಬಟ್ಟೆಗಳಿಂ
ದೀತ ಗೆಲಿದನು ಬಾಲದಲಿ ಸ
ತ್ವಾತಿಶಯವಿನ್ನಿವನೊಳೆಂತುಟೊ ಶಿವಶೀವಾಯೆಂದ ೨೧
ಭೀಮ ಗದೆ ತಾನೌಕಿ ನಿಲಲು
ದ್ದಾಮ ಬಾಲದ ನಿದ್ರೆ ತಿಳಿಯದು
ರೋಮತತಿ ಮಸೆಗಾಣಿಸದವೆನುತುತ್ತಮಾಂಗದಲಿ
ಈ ಮನುಷ್ಯ ಶರೀರವಪಜಯ
ಧಾಮವಲ್ಲಾ ಶಿವ ಶಿವಾ ನಿ
ಸ್ಸೀಮ ಕಪಿನೀನಾರೆನುತ ಪವನಜ ಬೆಸಗೊಂಡ ೨೨
ನಾವು ವಾನರರಡವಿಯಲಿ ಫಲ
ಜೀವಿಗಳು ನಿಸ್ಸತ್ವರಿಲ್ಲಿಯ
ಠಾವ ಬಿಡಾಲನ್ಯತ್ರ ಗಮನ ತ್ರಾಣ ವಿಲ್ಲೆಮಗೆ
ನೀವುದಿಟವಾರೈ ಮಹಾ ಸಂ
ಭಾವಿತರು ಸುರ ನರ ಭುಜಂಗರೊ
ಳಾವ ಕುಲ ನಿಮಗೆಂದು ಭೀಮನ ನುಡಿಸಿದನು ಹನುಮ ೨೩
ಮನುಜರಾವ್ ಸೋಮಾಭಿಕುಲದಲಿ
ಜನಿಸಿದನು ವರ ಪಾಂಡುವಾತನ
ತನುಜರಾವು ಯುಧಿಷ್ಠರಾರ್ಜುನ ಭೀಮ ಯಮಳರೆನೆ
ವನಕೆ ಬಂದೆವು ನಮ್ಮ ದಾಯಾ
ದ್ಯನ ವಿಕಾರ ದ್ಯೂತ ಕೇಳೀ
ಜನದ ಕಿಲ್ಬಿಷದಿಂದ
ರಾಜ್ಯಭ್ರಂಶವಾಯ್ತೆಂದ ೨೪
ಬಳಿಕ ಸೌಗಂಧಿಕದ ಪವನನ
ಬಳಿವಿಡಿದು ನಾಬಂದೆನೆಮ್ಮಯ
ಲಲನೆ ಕಾಮಿಸಿದಳು ಸಹಸ್ರದಳಾಬ್ಜ ದರುಶನವ
ತಿಳಿಯಲಿದು ವೃತ್ತಾಂತ ನೀನ
ಸ್ಖಲಿತ ಬಲ ನೀನಾರು ತನ್ನನು
ತಿಳುಹ ಹೇಳು ಮಹಾತ್ಮ ಕಪಿ ನೀ ನೆನುತ ಕೈ ಮುಗಿದ ೨೫
ನಾವು ಹಿಂದಣ ಯುಗದರಾಘವ
ದೇವನೋಲೆಯಕಾರರಾ ಸು
ಗ್ರೀವ ಸಖ್ಯರು ಪವನನಿಂದಂಜನೆಗೆ ಜನಿಸಿದೆವು
ನಾವು ನಿಮ್ಮೊಡ ಹುಟ್ಟಿದರು ಸಂ
ಭಾವಿಸಿತುನಿಮ್ಮಿಷ್ಟವೆನೆ ನಗು
ತಾ ವೃಕೋದರ ನೆರಗಿದನು ಕಲಿ ಹನುಮನಂಘ್ರಿಯಲಿ ೨೬
ಜರುಗಿನಲಿ ಜಾಂಬೂನದದ ಸಂ
ವರಣೆಕಾರಂಗೆಡೇಯಲಿದ್ದುದು
ಪರಮನಿಧಿ ಮಝ ಪೂತು ಪುಣ್ಯೋದಯದ ಫಲವೆನುತ
ಸರಸಿಯೆತ್ತಲು ಗಂಧವೆತ್ತಲು
ಬರವಿದೆತ್ತಣಿದೆತ್ತ ಘಟಿಸದು
ದರೆರೆ ಮಾರುತಿ ತಂದೆ ನೀನೆಂದೆನುತ ಬಣ್ಣಿಸಿದ ೨೭
ತೀದುದೆಮಗೆ ವನ ಪ್ರವಾಸದ
ಖೇಧವರ್ಜುನನಗಲಿಕೆಯ ದು
ರ್ಭೇಧ ವಿಷವಿಂದಿಳಿದುದೈ ಶಿವ ಶಿವ ಮಹಾದೇವ
ಹೋದ ರಾಜ್ಯಭ್ರಂಶ ಬಹಳ ವಿ
ಷಾದ ಬೀತುದು ನಿಮ್ಮ ಕಾರು
ಣ್ಯೋದಯವುಯಮಗಾಯ್ತಲಾ ಚರಿತಾರ್ಥ ರಾವೆಂದ ೨೮
ಹಿರಿಯರೆನಗಿಬ್ಬರು ಯುಧಿಷ್ಠಿರ
ಧರಣಿಪತಿ ನೀನೊಬ್ಬನಯ್ಯಂ
ದಿರುಗಳಿಬ್ಬರು ಮಾರುತನು ನೀನೊಬ್ಬನಿಂದೆನಗೆ
ಗುರುಗಳಿಬ್ಬರು ಬಾದರಾಯಣ
ಪರಮಋಷಿ ನೀನೊಬ್ಬನೆಂದಪ
ಚರಿಸಿದನು ಪವಮಾನ ನಂದನನಂಜನಾ ಸುತನ ೨೯
ಲಲಿತ ವಚನಕೆ ನಿನ್ನಭುಜದ
ಗ್ಗಳಿಕೆಗಾ ಮೆಚ್ಚಿದೆನು ಹಿಮಕರ
ಕುಲ ಪವಿತ್ರರು ಜನಿಸಿದಿರಲಾ ಪಾಂಡು ಜಠರದಲಿ
ಗೆಲವು ನಿಮಗಹಿತರಲಿ ಪಾರ್ಥನ
ಕೆಲವು ದಿವಸಕೆ ಕಾಂಬಿರೆಮಗೆಯು
ಫಲಿಸಿತೀ ದಿನಕೆಂದು ಕೊಂಡಾಡಿದನು ಹನುಮಂತಂ ೩೦
ಅಂಜುವೆನು ಬಿನ್ನಹಕೆ ಭಾಂದವ
ವಂಜಿಕೆಯು ನಭಕೊತ್ತುತಿದೆ ಕೇ
ಳಂಜನಾ ಸುತ ತನ್ನ ಸಲುಗೆಯ ಮಾತ ಸಲಿಸುವೊಡೆ
ಅಂಜದೆಂಬೆನು ದನುಜ ಪುರಕೆ ಧ
ನಂಜಯನ ಹೊತ್ತಿಸಿದ ಖಳರನು
ಭಂಜಿಸಿದ ಸಾಗರವ ದಾಂಟಿದ ರೂಪು ತೋರೆಂದ ೩೧
ಈ ಯುಗದ ಗುಣ ಧರ್ಮವಾ ತ್ರೇ
ತಾಯುಗದವರಿಗೈದದಾ ತ್ರೇತಾ
ಯುಗವು ಸರಿಯಿಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮರ್ಥ್ಯವಾ ತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ ೩೨
ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತದ ಬಲವೀ ತ್ರೇತೆಯವರಲಿ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗಧರ್ಮ ಕೃತ ಮೊದಲಾಗಿ ಕಲಿಯುಗಕೆ ೩೩
ಹೀನಸತ್ವರು ಸತ್ಯ ಧರ್ಮ ವಿ
ಹೀನರರ್ಥ ಪರಾಯಣರು ಕುಜ
ನಾನುರಕ್ತರು ವರ್ಣ ಧರ್ಮಾಶ್ರಮ ವಿದೂಷಕರು
ದಾನಿಗಳು ದುಷ್ಪಾತ್ರದಲಿ ಗುಣ
ಮೌನಿಗಳು ಗರ್ವಿತರು ಮಿಥ್ಯಾ
ಜ್ನಾ‘ನಿಗಳು ಕಲಿಯುಗದ ಮನುಜರು ಭೀಮ ಕೇಳೆಂದ ೩೪
ಅದರಿನೀ ದ್ವಾಪರದ ಕಡೆಯಲಿ
ಯುದಿತ ಮಾನುಷ ಕರ್ಮ ಸಂಶಯ
ವಿದರೊಳೆಮ್ಮಯ ರೂಪು ಗೋಚರವಲ್ಲ ಮರ್ತ್ಯರಿಗೆ
ಇದು ನಿಧಾನವು ಭೀಮಯೆನೆ ತ
ತ್ಪದ ಯುಗಕೆ ಮಗುಳೆರಗಿ ನಿರ್ಭಂ
ದದಲಿ ಬಿನ್ನಹ ಮಾಡಲಮ್ಮೆನು ರೂಪ ತೋರೆಂದ ೩೫
ಆದಡಿನ್ನು ನೀರೀಕ್ಷಿಸೆನುತ ನಿ
ನಾದದಲಿ ನೆಲಬಿರಿಯೆ ಬಾಲದ
ಬೀದಿವರಿ ಬಾಸಣಿಸೆ ಘನ ನಕ್ಷತ್ರ ಮಂಡಲವ
ಮೇದಿನಿಯ ಹೊರೆಗಾರರಳ್ಳೆದೆ
ಯಾದರಳುಕಿದವದ್ರಿಗಳು ಸಪ್ತೋ
ದಧಿಗಳಂಜಿದವೆನಲು ಹೆಚ್ಚಿದನು ಕಲಿ ಹನುಮ ೩೬
ಮೇರುವಿನ ತಪ್ಪಲಲಿ ಬೆಳೆದ ಬ
ಲಾರಿ ಚಾಪವೊ ಮೇಣ್ತ್ರಿವಿಕ್ರಮ
ನಾರುಭಟೆಯಲಿ ಜಡಿವ ಜ್ಯೋತಿರ್ಗಣದ ಬಲು ಮಿಳಿಯೊ
ಚೂರಿಸಿವ ಬಲು ಬಾಲವೋ ಜಂ
ಬಾರಿಭವನವ ನಳ್ಳಿರಿಯೆ ತ್ರಿಪು
ರಾರಿ ಯೊಡ್ಡಿನ ಹೋಳಹಿನಲಿ ಹೊಳೆ ಹೊಳೆದನಾ ಹನುಮ ೩೭
ನೋಡಿದನು ನಡುಗಿದನು ಕಂಗಳ
ಕೋಡಿಯಲಿ ನೀರೊರೆಯೆ ಹರುಷದ
ರೂಡಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ
ಬಾಡು ಮೋರೆಯನೆತ್ತಿ ಕೈಗಳ
ನೀಡಿ ಕಂಗಳ ಮುಚ್ಚಿ ಮರಳಿದು
ನೋಡಿ ಶಿವ ಶಿವಾಯೆನುತ ಬೆಚ್ಚಿದನಡಿಗಡಿಗೆ ಭೀಮ ೩೮
ಸಾಕುಸಾಕಂಜಿದೆನು ಮನುಜರು
ಕಾಕುಬಲರು ನಿಜ ಸ್ವಭಾವವ
ನೇಕೆ ಬಿಡುವೆವು ತಿಳಿದು ತಿಳಿಯೆವು ಕಂಡೊಡಂಜುವೆವು
ಸಾಕುಪೂರ್ವದ ರೂಪಿನಲಿ ನಿ
ರ್ವ್ಯಾಕುಲನ ಮಾಡೆನಲು ಪವನಜ
ನಾ ಕಪೀಶ್ವರ ನಗುತ ಮುನ್ನಿನರೂಪ ಕೈಕೊಂಡ ೩೯
ಅಂಜದಿರು ನಿನಿನ್ನುಮೆಚ್ಚಿದೆ
ನಂಜಲಿಸು ನಾ ಸಲಿಸುವೆನು ನ
ಮ್ಮಂಜನಾ ದೇವಿಯರು ಕುಂತೀದೇವಿಯಾದರೆಲೆ
ರಂಜಕರು ನಾವಲ್ಲ ಹೇಳು ಸ
ಮಂಜಸದಲೆನೆ ಭೀಮ ನಗುತ ಧ
ನಂಜಯನ ಟೆಕ್ಕೆಯಕೆ ಬಿಜಯಂಗೈಯ ಬೇಕೆಂದಂ ೪೦
ಐಸೆ ಸಲಿಸಿದೆವೆನುತಲಾ ಕಪಿ
ಯಾ ಸಮಯಲದೃಶ್ಯವಾಗೆ ವಿ
ಕಾಸ ವಾದುದು ವಿಸ್ಮಯಕೆ ಪವಮಾನ ನಂದನನ
ಆ ಸುಗಂಧಿಕ ಕಮಲ ತಾನಿ
ನ್ನೇಸು ದೂರವೊ ದ್ರುಪದಸುತೆ ತನ
ಗೇಸು ಮುನಿವಳೊ ಹಾಯೆನುತ ಹರಿದನು ವನಾಂತರವ ೪೧
ಧರಣಿಪತಿಕೇಳ್ ಬಹಳ ವಿಪಿನಾ
ತರವನಂತವ ಕಳೆದುಬರೆ ಬರೆ
ಸರಸಿಜದ ಮೋಹರದ ಮುಂದೈತಪ್ಪ ಪರಿಮಳದ
ಮೊರೆಯತುಂಬಿಯ ತಟ್ಟುಗಳ ತನಿ
ವರಿವ ತಂಪಿನ ತುರುಗನಲಿ ತ
ತ್ಸರಸಿಯನು ದೂರದಲಿ ಕಂಡುಬ್ಬಿದನು ಕಲಿಭೀಮ ೪೨
ಒಗು ಮಿಗೆಯ ಪರಿಮಳದ ಕಂಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತುಂಬಿಯ ಲಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತ ನಪ್ಪಿದನು ಮಗನ ೪೩
ಝಳದ ಲಳಿ ಲಟಕಟಿಸೆ ಮಾರ್ಗ
ಸ್ಖಲಿತ ಖೇಧ ಸ್ವೇದಬಿಂದುಗ
ಳೊಳ ಸರಿಯೆ ರೋಮಾಳಿ ಚಾಳಿಸೆ ತೃಷೆಯದೆಸೆ ಮುರಿಯೆ
ತಳಿತುದಾಪ್ಯಾಯನ ಮನೋರಥ
ಫಲಿತರಸಿಯ ಹರುಷ ದರ್ಪಣ
ಬೆಳಗುವುದು ಮಝ ಭಾಪೆನುತ ಭುಲ್ಲವಿಸಿದನು ಭೀಮ ೪೪
ಸಾರ ಬರೆವರೆ ಕಂಡನಲ್ಲಿ ಕು
ಬೇರನಾಳಿದ್ದುದು ತಡೀಯ ಸ
ರೋರುಹದ ಕಾಹಿನಲಿ ಯಕ್ಷರು ಲಕ್ಷ ಸಂಖ್ಯೆಯಲಿ
ಸಾರೆ ಚಾಚಿದ ಹರಿಗೆಗಳ ಕರ
ವಾರಿಗಳ ಹೊದೆಯಂಬು ಚಾಪ ಕ
ಠಾರಿ ಸಲ್ಲೆಹ ಸಬಳಗಳ ಸೋಪಾನ ಮಾರ್ಗದಲಿ ೪೫
ಎದ್ದವರಿದಿರಾಗಿ ಭೀಮನ
ಹೊದ್ದಿದರು ನೀನಾರು ಹದ್ದಿಗೆ
ಬಿದ್ದಿದನೊ ಮೇಣ್ ಮಿತ್ರಭಾವದಲೆಮಗೆ ಬಿದ್ದಿದನೋ
ಉದ್ದರುಟತನ ನಿನ್ನ ಮೋರೆಯ
ಲಿದ್ದುದೈ ನೀನಾರು ನಿನಗೇ
ನಿದ್ದುದಿಲ್ಲಿಯನುತ್ತ ಜರೆದರು ಯಕ್ಷರನಿಲಜನ ೪೬
ನಾವಲೇ ಕುಂತೀ ಕುಮಾರರು
ಭೂವಧೂವಲ್ಲಭರು ನಮ್ಮಯ
ದೇವಿಗಾದುದು ಬಯಕೆ ಸೌಗಂಧಿಕ ಸರೋರುಹದ
ಠಾವು ಕಾಣಿಸಿಕೊಂಡು ಬಹುದಾ
ತಾವರೆಯನೆನೆ ಬಂದೆವಿಲ್ಲಿಗೆ
ನೀವು ಕಾಹಿನ ಬಂಟರೆಂಬುದನರಿಯೆ ನಾವೆಂದ ೪೭
ಐ ಸಲೇ ತಪ್ಪೇನು ನೀಯ
ಕ್ಷೇಶ ನಲ್ಲಿಗೆ ಹೋಗಿ ಬೇಡುವುದೀ
ಸರೋರುಹವಾವ ಘನ ಧನಪತಿಯುದಾರನಲೆ
ಮೀಸಲಿನ ಸರಸಿಯಲಿ ದೃಷ್ಠಿಯ
ಸೂಸಬಹುದೇ ರಾಯನಾಜ್ನಾ
ಭಾಷೆಯಿಲ್ಲದೆ ಬಗೆಯಲರಿದೆಂದುದು ಭಟಸ್ತೊಮ ೪೮
ಬೇಡಲರಿಯೆವು ನಾವು ಬೇಡುವರ ಕೂ
ಡಾಡುವರು ನಾವಲ್ಲ ಕದನವ
ಬೇಡಬಲ್ಲೆವು ಕರೆಯಿ ಕೊಡಲಾಪರೆ ಧನೇಶ್ವರನ
ಬೇಡುವುದು ಗದೆ ನಿಮ್ಮವಕ್ಷವ
ತೋಡಿ ನೆತ್ತರುಗೊಳದಲೋಕುಳಿ
ಯಾಡುವುದನೆಂದನಿಲಸುತ ಬೀಸಿದನು ನಿಜಗದೆಯ ೪೯
ಎಲೆಲೆ ಕವಿ ಯಕ್ಷ ರಾಕ್ಷಸ
ದಳವನೊಟ್ಟೈಸುವೆನೆ ಹೆ
ಬ್ಬುಲಿಯ ಹಿಂಡಿಗೆ ಹೋತ ಹೊಡಕರಿಸಿತು ಮಹಾದೇವ
ತಲೆಯ ಹೋಯ್ ಚೆಂಡಾಡು ತಿನ್ನಿವ
ನೆಲುವನೆನು ತೀಟಿಯಲಿ ಸಬಳದ
ಲಲಗಿನಲಿ ಖಡುಗದಲಿ ಹೊಯ್ದರು ಪವನ ನಂದನನಂ ೫೦
ತಾಗಿದೆದೆ ಮುಳ್ಳಿನಲಿ ಮದಗಜ
ಸೀಗುರಿಸುವುದೇ ಭಟರ ಕೈದುಗ
ಳೇಗುವವು ಪವಮಾನಸುತ ಕೈದೋರೆ ಖಾತಿಯಲಿ
ತಾಗಿದವದಿರನಿಕ್ಕಿದನು ರಣ
ದಾಗಡಿಗರನುಯೆಕ್ಕಿದನು ಕೈ
ದಾಗಿಸಿದನನಿಬರಲಿ ಗಂಡುಗತನದ ಗಾಡಿಕೆಯ ೫೧
ಗಾಡಿಸಿತು ಗಜಬಜ ಕೂಬೇರನ
ಬೀಡಿನಗ್ಗದ ಬಂಟರೇ ಕೈ
ಮಾಡಿರೈ ಕೋಳಗಾಹಿಗಳು ಫಡ ಹಿಂಗ ಬೇಡೆನುತ
ಜಾಡಿಸುವ ಮಣಿಮಯದ ಗಧೆಯಲಿ
ತೋಡುವೊಯ್ಲಿನ ತುಡುಕುಗಾಯದ
ನೀಡು ಮೊನೆಗಳ ವಿಗಡನಿಕ್ಕಿದನಕಟ ರಕ್ಕಸರ ೫೨
ಹಾರಿದವು ಹಂಸೆಗಳು ತುದಿಮರ
ನೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳವು ಜಕ್ಕ್ವಕ್ಕಿಗಳು
ಚೀರಿದವು ಕೊಳವಕ್ಕಿ ಜಲದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ ೫೩
ಚೆಲ್ಲಿದರು ರಕ್ಕಸರು ಯಕ್ಷರು
ಬಿಲ್ಲ ಬಿಸುಟರು ಗುಹ್ಯಕರು ನಿಂ
ದಲ್ಲಿ ನಿಲ್ಲರು ಕಿನ್ನರರ ನಿನ್ನೀನನುಸುರುವೆನು
ಗೆಲ್ಲವಿದು ಲೇಸಾಯ್ತು ಮಾನವ
ನಲ್ಲಿ ನಮಗೀ ಭಂಗ ಭಯರಸ
ವೆಲ್ಲಿ ಭಾಪುರೆ ವಿಧಿಯೆನುತ ಬೆಚ್ಚಿದುದು ಭಟಸ್ತೋಮ ೫೪
ಗಾಯವಡೆದರು ಕೆಲರು ಕೆಲರಸು
ಬೀಯವಾದುದು ಬಿಡುದಲೆಯ ಬಲು
ನಾಯಕರು ಸಂತೈಸಿದರು ಕೌಬೇರ ಭವನದಲಿ
ವಾಯುಸುತನೀ ವಿಜಯ ಸಿರಿಯ ಪ
ಸಾಯಿತಂಗಭಿಷೇಕವೆಂದು ಗ
ದಾಯುಧವನಲುಬಿದನು ಕೊಳನಲಿ ಚಾಚಿದನು ತಡಿಗೆ ೫೫
ತೊಳೆದು ಚರಣಾನನವ ನಡುಗೊಳ
ದೊಳಗೆ ಹೊಕ್ಕಡಿಗಡಿಗೆ ಮಿಗೆ ಮು
ಕ್ಕುಳಿಸಿ ತೀರದಲುಗುಳಿದಿವ್ಯಾಂಭೋಜ ಪರಿಮಳವ
ವಿಲಸದಲಿ ತನಿಹೊರೆದಶೀತಳ
ಜಲವ ಕುಡಿದಪ್ಯಾಯನಂತರ
ಲಲಿತ ಹೃದಯ ನಿಮಿರ್ದು ಹಿಡಿದನು ಕಮಲ ಪಂಕ್ತಿಗಳ ೫೬
ಚಾಚಿದನು ಬರಿ ಕೈಯನಬುಜಕೆ
ಚಾಚುವಿಭಪತಿಯಂತೆ ತುಂಬಿಗ
ಳಾ ಚಡಾಳ ದ್ವನಿಯ ದಟ್ಟಣೆ ಮಿಗಲು ಚೀರಿದವು
ವೀಚಿ ಮಸಗುವ ಕೊಳನು ಜಿನ ಋಷಿ
ಯಾಚರಣೆಯೊಳು ಕಮಲ ವನವನು
ಲೋಚಿನಲಿ ಲಾವಣಿಗೆಗೊ೦ಡನು ಭೀಮ ನಿಮಿಷದಲಿ ೫೭
ತಿರಿದು ತಾವರೆ ವನವ ಕಕ್ಷದೊ
ಳೀರುಕಿ ಗದೆಯನು ಕೊಂಡು ಸರಸಿಯ
ಹೊರವಳಯದಲಿ ನಿಂದು ಕಾಹಿನ ಯಕ್ಷ ರಾಕ್ಷಸರ
ಒರಲಿ ಕರೆದನು ನಿಮ್ಮ ಕೊಳನಿದೆ
ಬರಿದೆ ದೂರದಿರೆಮ್ಮನೆನುತಾ
ಸರಿನ ಮಾತಿನ ನಲವಿನಲಿ ಮರಳಿದನು ಕಲಿಭೀಮ ೫೮
ಸಂಕ್ಷಿಪ್ತ ಭಾವ
Lrphks Kolar
ಸೌಗಂಧಿಕಾಪುಷ್ಪವನ್ನು ಅರಸಿಕೊಂಡು ಭೀಮನ ಪಯಣ. ಆಂಜನೇಯನ ದರ್ಶನ.
ಗಂಧಮಾದನ ಪರ್ವತದಲ್ಲಿ ಸಂತಸದಿಂದ ದಿನಗಳನ್ನು ಕಳೆಯುತ್ತಿರಲು ಒಂದು ದಿನ ಎಲ್ಲಿಂದಲೋ ಬೀಸಿ ಬಂದ ಗಾಳಿಯು ಬಹಳ ಅಪರೂಪವಾದ ಸುಗಂಧವನ್ನು ಹೊತ್ತು ತಂದಿತು. ಅದಕ್ಕೆ ಬೆರಗಾದ ದ್ರೌಪದಿಯು ಆ ಪುಷ್ಪವನ್ನು ಪಡೆಯಲು ಬಯಸಿ ಇದಕ್ಕೆ ಭೀಮನೇ ಸರಿಯೆಂದು ಅವನಲ್ಲಿಗೆ ಬಂದು ತನ್ನ ಆಸೆಯನ್ನು ತಿಳಿಸಿದಳು. ಆಗಲಿ ಎಂದು ಭೀಮ ಹೊರಟ.
ಅರಣ್ಯದಲ್ಲಿ ಬಲವಾಗಿ ಭೀಮ ಬರುತ್ತಿರಲು ಆ ರಭಸಕ್ಕೆ ನೆಲ ನಡುಗಿತು. ಗಿಡಮರಗಳು ಉದುರಿದವು. ಮೃಗಗಳು ಮರೆಯಾದವು. ಪರ್ವತಗಳು ಕಂಪಿಸಿದವು. ಈ ಗಲಾಟೆಗೆ ಅಲ್ಲಿ ನಿದ್ರೆಯಲ್ಲಿದ್ದ ಹನುಮ ಕಣ್ದೆರೆದನು. ಯಾರಿವನು ಎಂದು ಭೀಮನನ್ನು ಮಾತನಾಡಿಸಿದನು. ಸೌಗಂಧಿಕಾ ಪುಷ್ಪವನ್ನರಸಿ ಬಂದೆನೆಂದು ಉತ್ತರಿಸಿ ಮುಂದುವರೆಯಲು ಪ್ರಯತ್ನಿಸಿದರೆ ಹನುಮನ ಬಾಲ ಅವನ ದಾರಿಗೆ ಅಡ್ಡವಾಗಿತ್ತು.
ಗದೆಯ ತುದಿಯಿಂದ ನೂಕಿದನು. ಆದರೆ ಅದು ಅಲುಗಾಡಲಿಲ್ಲ. ದಾರಿ ಬಿಡು ಎಂದು ಗದರಿಸಿದನು. ಅದಕ್ಕೆ ನಾನು ಮುದುಕ. ಅಶಕ್ತ. ನೀನೇ ತೆಗೆದಿರಿಸು ಎಂದನು ಹನುಮ. ಭೀಮ ಬಹಳವಾಗಿ ಪ್ರಯತ್ನಿಸಿದರೂ ಬಾಲ ಮಿಸುಕಲಿಲ್ಲ. ಕೊನೆಯಲ್ಲಿ ಇವನು ಯಾರೋ ಮಹಾತ್ಮನೆಂದರಿತು ಪರಿಚಯ ಕೇಳಿ ಬೇಡಿಕೊಂಡನು. ಆಗ ಹನುಮನು ತಾನು ರಾಮನ ದಾಸನೆಂದೂ, ತಾವಿಬ್ಬರೂ ಮರುತನ ಮಕ್ಕಳಾದ್ದರಿಂದ ಸಹೋದರರು ಎಂದೂ ಹೇಳಿದನು. ಭೀಮನು ಅವನನ್ನು ನಮಸ್ಕರಿಸಿ ಸಾಗರವನ್ನು ದಾಟಿದ ಸಮಯದ ಮಹತ್ ರೂಪದ ದರ್ಶನ ಬೇಡಿದನು. ಈ ಯುಗಕ್ಕೆ ಅದು ಅಲ್ಲವೆಂದರೂ ಕೊನೆಯಲ್ಲಿ ತೋರಿಸಿದನು. ಬೆರಗಾದ ಭೀಮನು ಅವನನ್ನು ಅರ್ಜುನನ ರಥದಲ್ಲಿದ್ದು ತಮಗೆ ಜಯವನ್ನು ತರಲು ಬೇಡಿಕೊಂಡನು. ನಂತರ ಅಲ್ಲಿಂದ ಮತ್ತೆ ಪುಷ್ಪದ ಹುಡುಕಾಟಕ್ಕೆ ಹೊರಟನು.
ಸ್ವಲ್ಪ ಮುಂದೆ ಹೋಗಲು ಆ ಹೂವುಗಳು ಇದ್ದ ಕೊಳ ಕಾಣಿಸಿತು. ರಮಣೀಯವಾದ ಸ್ಥಳವಾಗಿತ್ತು ಅದು. ಆದರೆ ಅಲ್ಲಿದ್ದ ಕುಬೇರನ ಪಡೆಯವರು ಇವನನ್ನು ತಡೆದರು. ಕುಬೇರನ ಅಪ್ಪಣೆ ಪಡೆದು ಬಾ ಎಂದರು. ಭೀಮನು ಅವರೊಂದಿಗೆ ಹೋರಾಡಿ ಎಲ್ಲರನ್ನೂ ಸೋಲಿಸಿ ಕೊಳಕ್ಕಿಳಿದು ಬೇಕಾದಷ್ಟು ತಾವರೆಗಳನ್ನು ಕಿತ್ತುಕೊಂಡು ಹೊರಟನು. ಇದು ಕುಬೇರನಿಗೆ ತಿಳಿದರೂ ಯಮನಂದನನೆಂದು ಸುಮ್ಮನಾದನು. ದ್ರೌಪದಿಗೆ ಎಷ್ಟು ಸಂತೋಷವಾಗಬಹುದೆಂದು ಯೋಚಿಸುತ್ತಾ ಮರಳಿದನು ಭೀಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪದರಂಗ ಪಿತಾಮಹ ಕೆ. ಎಸ್. ನಾಗಭೂಷಣಂ (ನಾಭೂ)

Wed Mar 2 , 2022
ಕೊಳತೂರು ಸೋಮಸುಂದರಯ್ಯ ನಾಗಭೂಷಣಂ ಕನ್ನಡದ ಪತ್ರಿಕೋದ್ಯಮದಲ್ಲಿ ‘ನಾಭೂ’ ಎಂದೇ ಚಿರಪರಿಚಿತರಾದವರು. ಸುದ್ದಿಯ ಅಂತರಂಗ ಹಿಡಿಯುವ ಡೆಸ್ಕ್ ಪತ್ರಿಕೋದ್ಯಮದಲ್ಲಿ ಅವರದು ಎತ್ತಿದ ಕೈ. ಅವರು ಕೊಟ್ಟ ಶೀರ್ಷಿಕೆಗಳನ್ನು ಪತ್ರಿಕಾರಂಗದಲ್ಲಿ ಈಗಲೂ ನೆನಪಿಸಿಕೊಳ್ಳುವವರಿದ್ದಾರೆ ಎಂದರೆ ಅದು ಹೊಗಳಿಕೆಯ ಮಾತಲ್ಲ. ನಾಗಭೂಷಣ ಪತ್ರಿಕೋದ್ಯಮದ ಶಬ್ಧಬ್ರಹ್ಮ ಎಂಬ ಖ್ಯಾತಿ ಪಡೆದಿದ್ದರು, ಏಕೆಂದರೆ ಪ್ರಜಾವಾಣಿಯಲ್ಲಿ ಬರುವ ಪದರಂಗದ (ಈಗ ಪದಬಂಧವೆಂದು ಪ್ರಚಲಿತ) ಕರ್ತೃ ಇವರೇ. ಪ್ರಜಾವಾಣಿಯಲ್ಲಿ ಪದಬಂಧವನ್ನು ಪ್ರಾರಂಭಿಸಿ ಅದನ್ನು ತಮ್ಮುಸಿರಿರುವವರೆಗೂ ಸತತ 48 ವರ್ಷಗಳ ಕಾಲ […]

Advertisement

Wordpress Social Share Plugin powered by Ultimatelysocial