ಬೆಂಗಳೂರು.ಫೆ.3; ರಾಜ್ಯದಾದ್ಯಾಂತ ಶಾಲಾ-ಕಾಲೇಜುಗಳ ಬಳಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ತೆರವುಗೊಳಿಸಲು ಹೈಕೋರ್ಟ್, ಕರ್ನಾಟಕ ರಾಜ್ಯ ವಿದ್ಯುತ್ ಪ್ರಸರಣಾ ನಿಗಮಕ್ಕೆ ಮೂರು ತಿಂಗಳ ಗಡುವು ನೀಡಿದೆ.ಕೆಪಿಟಿಸಿಎಲ್ ಪರ ವಕೀಲರು, ನ್ಯಾಯಾಲಯದ ನಿರ್ದೇಶದನಂತೆ ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳ ಬಳಿ ಹಾದು ಹೋಗಿರುವ ವಿದ್ಯುತ್ ಮಾರ್ಗಗಳನ್ನು ಗುರುತಿಸುವ ಮತ್ತು ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಎಸ್ಕಾಂಗಳು ಆರಂಭಿಸಿವೆ.ಆ ಕಾರ್ಯ ಪೂರ್ಣಗೊಳಿಸಲು ಕನಿಷ್ಠ ನಾಲ್ಕೈದು ತಿಂಗಳು ಕಾಲಾವಕಾಶಬೇಕು ಎಂದು ಕೋರಿದರು. ಅದನ್ನು ಪರಿಗಣಿಸಿದ ನ್ಯಾಯಪೀಠ ಮೂರು ತಿಂಗಳು ಸಮಯ ನೀಡಿ ವಿಚಾರಣೆ ಮುಂದೂಡಿತು.ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸ್ಥಿತಿಗತಿ ಕುರಿತಂತೆ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಪಿಐಎಲ್ ಕುರಿತು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು.ಆ ವೇಳೆ, ಕೆಪಿಟಿಸಿಎಲ್ ಪರ ವಕೀಲರು ನ್ಯಾಯಾಲಯದ ಆದೇಶ ಪಾಲನೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಿ, ಸುಮಾರು 5 ಸಾವಿರಕ್ಕೂ ಅಧಿಕ ಕಡೆ ಶಾಲಾ-ಕಾಲೇಜುಗಳ ಬಳಿ ವಿದ್ಯುತ್ ಮಾರ್ಗ ಹಾದು ಹೋಗಿರುವುದನ್ನು ಗುರುತಿಸಲಾಗಿದೆ, ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ಎಲ್ಲಾ ಎಸ್ಕಾಂಗಳು ಆರಂಭಿಸಿದ್ದು, ಅದಕ್ಕೆ ಸಮಯ ಹಿಡಿಯುತ್ತದೆ. ಅದಕ್ಕಾಗಿ 4 ತಿಂಗಳು ಸಮಯ ನೀಡಬೇಕೆಂದರು.ಈ ಮಧ್ಯೆ, ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ವಕೀಲೆ ಬಿ.ವಿ.ವಿದ್ಯುಲ್ಲತ, ”ಹಿಂದೆ ಕಾನೂನು ಸೇವಾ ಪ್ರಾಧಿಕಾರ ಸಮೀಕ್ಷೆಯಲ್ಲಿ ವಿದ್ಯಾರ್ಥಿನಿಲಯಗಳಲ್ಲಿ ಶೌಚಾಲಯಗಳ ಕೊರತೆ ಇದೆ, ವಿದ್ಯಾರ್ಥಿಗಳು ಬಯಲಿನಲ್ಲೇ ಸ್ನಾನ ಮಾಡುತ್ತಾರೆ. ಜೊತೆಗೆ ಕುಡಿಯುವ ನೀರು, ಆಹಾರವಿಲ್ಲ ಎಂಬುದು ಸೇರಿ ಹಲವು ನೂನ್ಯತೆಗಳನ್ನು ಪಟ್ಟಿ ಮಾಡಿತ್ತು. ಆ ಹಿನ್ನೆಲೆಯಲ್ಲಿ ನ್ಯಾಯಪೀಠ ಸಮಗ್ರ ಸರ್ವೇ ನಡೆಸಿ ವರದಿ ಸಲ್ಲಿಕೆಗೆ ಸರಕಾರಕ್ಕೆ ಆದೇಶ ನೀಡಿತ್ತು, ಆದರೆ ಸರಕಾರ ಈವರೆಗೂ ಸಮೀಕ್ಷಾ ವರದಿ ಸಲ್ಲಿಸಿಲ್ಲ ಎಂದರು.ಅದಕ್ಕೆ ಸರಕಾರಿ ವಕೀಲರು, ಸಮೀಕ್ಷಾ ವರದಿ ಸಲ್ಲಿಸಲು ನಾಲ್ಕು ವಾರ ಕಾಲಾವಕಾಶ ನೀಡಬೇಕೆಂದರು. ಈ ಮಧ್ಯೆ ನ್ಯಾಯಪೀಠ ಈ ಹಿಂದೆ ನೀಡಿರುವ ಆದೇಶ ರಾಜ್ಯದ ಎಲ್ಲ ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿನ ಸ್ಥಿತಿಗತಿ ಕುರಿತಂತೆ ಸರಕಾರ 4 ವಾರಗಳಲ್ಲಿ ಸಮಗ್ರ ಸಮೀಕ್ಷೆ ನಡೆಸಿ ವರದಿಯನ್ನು ಸಲ್ಲಿಸಬೇಕು, ಇದೇ ಕೊನೆಯ ಅವಕಾಶ, ಮತ್ತೆ ಅವಕಾಶ ನೀಡುವುದಿಲ್ಲ ಎಂದು ನ್ಯಾಯಪೀಠ ಆದೇಶಿಸಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada