ಚಿತ್ರದುರ್ಗ: ಹಿಜಾಬ್ ವಿವಾದ ಶುಕ್ರವಾರ ನಗರದಲ್ಲಿ ತೀವ್ರ ಸ್ವರೂಪ ಪಡೆಯಿತು. ನಗರದ ಎಸ್ಆರ್ಎಸ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣ ವಾಗ್ವಾದಗಳಿಗೆ ವೇದಿಕೆಯಾಯಿತು.ಗುರುವಾರ ಸಂಜೆವರೆಗೂ ಕಾಲೇಜಿನ ಪ್ರವೇಶ ದ್ವಾರದಲ್ಲಿ ಪಟ್ಟುಸಡಿಲಿಸದೆ ಪ್ರತಿಭಟನೆ ನಡೆಸಿದ್ದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಶುಕ್ರವಾರ ಬೆಳಿಗ್ಗೆ ಹಿಜಾಬ್ ಧರಿಸಿ ಕಾಲೇಜಿಗೆ ಬಂದರು.’ನಿಮ್ಮ ವರ್ತನೆಯಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ. ತರಗತಿಗೆ ತೆರಳಲು ಅವಕಾಶ ನೀಡಿ’ ಎಂದು ಕಾಲೇಜು ಸಿಬ್ಬಂದಿಗೆ ಕೋರಿದರು. ‘ನ್ಯಾಯಾಲಯದ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ನಿಗದಿಪಡಿಸಿದ ಕೊಠಡಿಯಲ್ಲಿ ಹಿಜಾಬ್ ತೆಗೆದಿಟ್ಟು ತರಗತಿಗಳಿಗೆ ತೆರಳಿ’ ಎಂದು ಸಿಬ್ಬಂದಿ ಸೂಚಿಸಿದರು.ಸಿಬ್ಬಂದಿ ಮಾತಿಗೆ ಸಮ್ಮತಿಸಿದ ಬಹುತೇಕರು ಹಿಜಾಬ್ ತೆಗೆದಿಟ್ಟು ಬೆಳಿಗ್ಗೆ 10ಕ್ಕೆ ತರಗತಿಗಳಿಗೆ ಹಾಜರಾದರು. ಈ ವೇಳೆ ಹತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಆಕ್ರೋಶಗೊಂಡು ‘ಕಾಲೇಜಿಗೆ ರಜೆ ಘೋಷಿಸಿ, ಇಲ್ಲವೇ ನಮಗೆ ತರಗತಿಗೆ ಅವಕಾಶ ಕೊಡಿ’ ಎಂದು ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರ ಜತೆ ವಾಗ್ವಾದ ನಡೆಸಿದರು.ಸ್ಥಳದಲ್ಲಿದ್ದ ಪೊಲೀಸರು ‘ಹಿಜಾಬ್ ತೆಗೆದು ತರಗತಿಗೆ ತೆರಳಿ, ಇಲ್ಲವೇ ಮನೆಗೆ ಹೋಗಿ’ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಪೊಲೀಸರ ಜತೆ ತಳ್ಳಾಟ, ನೂಕಾಟ ನಡೆಯಿತು. ಬಳಿಕ ತರಗತಿ ಬಹಿಷ್ಕರಿಸಿ ಮನೆಗೆ ತೆರಳಿದರು.ನಗರದ ಎಸ್ಆರ್ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಪದವಿ ವಿದ್ಯಾರ್ಥಿಗಳು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.’ಹಿಜಾಬ್ ಬೇಕೆಂದು ಕೇಳುವುದು ನಮ್ಮ ಮೂಲಭೂತ ಹಕ್ಕು. ಅದನ್ನು ಪಡೆದೇ ತೀರುತ್ತೇವೆ’ ಎಂದು ಪಟ್ಟು ಹಿಡಿದು 50ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ತರಗತಿಗೆ ತೆರಳದೆ ಕಾಲೇಜು ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು.’ತಾರತಮ್ಯ ಮಾಡುವುದು ಎಷ್ಟರಮಟ್ಟಿಗೆ ಸರಿ. ನಾವು ಕಾನೂನನ್ನು ಪಾಲಿಸುತ್ತೇವೆ. ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು. ಹಿಂದೂಗಳು ಹಣೆಗೆ ಕುಂಕುಮ ಇಟ್ಟುಕೊಂಡು ಬರುವುದರಿಂದ ಸಮವಸ್ತ್ರ ನೀತಿ ಉಲ್ಲಂಘನೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.ಈ ವೇಳೆ ಕಾಲೇಜಿನ ಒಳಾಂಗಣದಲ್ಲಿ ಕೆಲ ವಿದ್ಯಾರ್ಥಿಗಳು ‘ಜೈ ಶ್ರೀರಾಮ್’ ಎಂದು ಘೋಷಣೆ ಕೂಗಿದರು.ಇದರಿಂದ ಪ್ರವೇಶ ದ್ವಾರದಲ್ಲಿದ್ದವರು ಕುಪಿತಗೊಂಡು ‘ನಾವು ಅಲ್ಲಾ…’ಎಂದು ಕೂಗಿದರೆ ಏನಾಗುತ್ತದೆ ಎಂದು ಪೊಲೀಸರ ಜತೆ ವಾಗ್ವಾದಕ್ಕಿಳಿದರು.’ಇಷ್ಟು ವರ್ಷ ಸಹೋದರರಂತೆ ಇದ್ದ ನಮ್ಮ ನಡುವೆ ಧರ್ಮದ ಹೆಸರಿನಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ನ್ಯಾಯಾಲಯದ ತೀರ್ಪು ಬರುವ ತನಕ ಮನೆಯಲ್ಲಿರುವಂತೆ ಹೇಳುತ್ತಿದ್ದಾರೆ. ಇದರಿಂದ ನಮಗೆ ಪರೀಕ್ಷೆ ವೇಳೆ ಸಮಸ್ಯೆ ಆಗಲಿದೆ. ಹೀಗಾಗಿ ಕಾಲೇಜನ್ನು ಸಂಪೂರ್ಣ ಬಂದ್ ಮಾಡಿ. ಇಲ್ಲವೇ ಆನ್ಲೈನ್ ತರಗತಿ ನಡೆಸಿ’ ಎಂದು ಆಗ್ರಹಿಸಿದರು.ಬೆಳಿಗ್ಗೆಯಿಂದಲೇ ಕಾಲೇಜು ಆವರಣದಲ್ಲಿ ಬೀಡು ಬಿಟ್ಟಿದ್ದ ಪೊಲೀಸರಿಗೆ ಪ್ರತಿಭಟನನಿರತ ವಿದ್ಯಾರ್ಥಿಗಳು ನೀರು, ಟೀ ವಿತರಿಸಿದರು. ಆದರೆ ಬಹುತೇಕ ಸಿಬ್ಬಂದಿ ‘ಟೀ ಕುಡಿಯುವುದಿಲ್ಲ’ ಎಂದು ನಿರಾಕರಿಸಿದರು.ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ ವಿದ್ಯಾರ್ಥಿಗಳ ಮನವೊಲಿಸಿದರು. ಕಾಲೇಜಿನ ಆವರಣದಲ್ಲಿ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿಗಳಿಗೆ ಸಮವಸ್ತ್ರವಿದೆ. ನ್ಯಾಯಾಲಯದ ಆದೇಶವನ್ನು ಪಾಲಿಸಲಾಗುತ್ತಿದೆ. ಕೆಲವರು ಹಠಕ್ಕೆ ಬಿದ್ದಿದ್ದಾರೆ. ಅವರಿಗೆ ತಿಳಿ ಹೇಳಲಾಗುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada