ಹುಣಸೂರು ಕೃಷ್ಣಮೂರ್ತಿಗಳು ‘ಸತ್ಯ ಹರಿಶ್ಚಂದ್ರ’ ಅಂತಹ ಶ್ರೇಷ್ಠ ಚಿತ್ರ ನಿರ್ದೇಶಿಸಿದವರು; ‘ಬಂಗಾರದ ಮನುಷ್ಯ’, ‘ಭೂತಯ್ಯನ ಮಗ ಅಯ್ಯು’ ಅಂತಹ ಚಿತ್ರಗಳಿಗೆ ಚಿತ್ರ ಸಾಹಿತ್ಯ ರಚಿಸಿದವರು; ‘ಬೊಂಬೆಯಾಟವಯ್ಯ’, ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’, ‘ಮಾನವ ಮೂಳೆ ಮಾಂಸದ ತಡಿಕೆ’, ‘ನಗು ನಗುತಾ ನಲಿ’ ಅಂತಹ ಹಲವಾರು ಶ್ರೇಷ್ಠ ಹಾಡುಗಳನ್ನು ಬರೆದವರು; ರಾಜ್ ಕುಮಾರ್, ಉದಯಕುಮಾರ್, ನರಸಿಂಹರಾಜು, ದ್ವಾರಕೀಶ್ ಅಂತಹ ಕಲಾವಿದರಿಂದ ಶ್ರೇಷ್ಠ ಮಟ್ಟದ ಅಭಿನಯ ಹೊರಹೊಮ್ಮಿಸಿದ ಧೀಮಂತ ದಿಗ್ದರ್ಶಕರು. ಕನ್ನಡ ಚಿತ್ರರಂಗದಲ್ಲಿ ಹುಣಸೂರು ಕೃಷ್ಣಮೂರ್ತಿಯವರ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದಾದ ‘ಸತ್ಯ ಹರಿಶ್ಚಂದ್ರ’ದ ಬಗ್ಗೆ ಬಣ್ಣಿಸದೆ ಕನ್ನಡ ಚಿತ್ರರಂಗದ ಚರಿತ್ರೆಯೇ ಅಪೂರ್ಣವೆನಿಸುತ್ತದೆ. ಈ ಚಿತ್ರದ ಮೂಲಕ ಹುಣಸೂರರು ಪೌರಾಣಿಕ ಚಿತ್ರದ ಮಾದರಿಯೊಂದನ್ನು ರೂಪಿಸಿದರು. ಜೊತೆಗೆ ದೃಶ್ಯ ಸಂಯೋಜನೆ, ಕಲಾವಿದರ ಅಭಿನಯ, ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುವ ನಿರೂಪಣೆ, ಅತ್ಯಂತ ಭಾವತೀವ್ರತೆಯ ಸನ್ನಿವೇಶಗಳಲ್ಲಿ ವಾಸ್ತವ ಬದುಕನ್ನು ಪಕ್ಕದಲ್ಲೇ ತಂದು ನಿಲ್ಲಿಸುವ ಕೌಶಲ್ಯದಿಂದ ಚಿತ್ರದ ಸೊಗಸನ್ನು ಹೆಚ್ಚಿಸಿದರು. ಪೌರಾಣಿಕ ವ್ಯಕ್ತಿಯೊಬ್ಬನ ಬದುಕಿನ ಏಳು-ಬೀಳುಗಳನ್ನು ವೈಭವೀಕರಿಸುವ ಬದಲು ಮನುಷ್ಯ ಸಮಾಜದ ವಿವಿಧ ನೋಟಗಳನ್ನು ಅವರು ಕಟ್ಟಿಕೊಟ್ಟರು. ಪ್ರಭುತ್ವ ಕಟ್ಟಿಕೊಂಡಿರುವ ಭ್ರಮಾತ್ಮಕ ಲೋಕವನ್ನು ಛಿದ್ರಗೊಳಿಸಿ ಸಾಮಾನ್ಯ ಬದುಕಿನ ನಿಜರೂಪಗಳನ್ನು ದರ್ಶನ ಮಾಡಿಸಿದರು. ಅರಮನೆ ಮತ್ತು ಸ್ಮಶಾನಗಳ ನಡುವೆ ನಿಜ ಯಾವುದಿರಬಹುದು ಎಂದು ಕ್ಷಣಕಾಲ ಪ್ರೇಕ್ಷಕರನ್ನು ಚಿಂತನೆಗೆ ಹಚ್ಚಿದ ಮೊದಲ ಚಿತ್ರವಿದು. ಹಾಗೆಯೇ ದೃಶ್ಯಗಳ ಸರಣಿಯನ್ನು ನಿರ್ಮಿಸಿ ಮಾಯಾ ಜಗತ್ತಿನ ತೆರೆಯನ್ನು ಸರಿಸಿ ನೋಡುವಂಥ ಅಪೂರ್ವವಾದ ಪ್ರಯತ್ನ ಈ ಚಿತ್ರದಲ್ಲಿದೆ. ಈ ಚಿತ್ರಗಳ ಹಾಡುಗಳನ್ನು , ಈ ಹಾಡಿನಲ್ಲಿ ಹುಣಸೂರರ ಸಾಹಿತ್ಯವನ್ನು ಇಷ್ಟಪಡದ ಕನ್ನಡಿಗರುಂಟೆ ಕನ್ನಡ ಚಿತ್ರರಂಗದ ಆರಂಭದಿಂದಲೂ ಅದರ ಬೆಳವಣಿಗೆಯಲ್ಲಿ ಪಾತ್ರವಹಿಸಿರುವ ಹುಣಸೂರು ಕೃಷ್ಣಮೂರ್ತಿಯವರು ಸಂಭಾಷಣೆ, ಹಾಡುಗಳು, ಚಿತ್ರಕಥೆ ರಚನೆ, ನಟನೆ, ನಿರ್ಮಾಣ, ನಿರ್ದೇಶನ ಹೀಗೆ ಹಲವಾರು ಕ್ಷೇತ್ರಗಳಲ್ಲಿ ದುಡಿದವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada