ಗದಗ, ಫೆಬ್ರವರಿ 20: ಗದಗಿನ ಶಿವಾನಂದ ಬ್ರಹನ್ಮಠದ ಉತ್ತರಾಧಿಕಾರಿ ವಿವಾದದ ನಡುವೆಯೂ ಜಗದ್ಗುರು ಶ್ರೀ ಶಿವಾನಂದ ಸ್ವಾಮೀಜಿಗಳ ರಥೋತ್ಸವ ಅದ್ಧೂರಿಯಾಗಿ ನೆರವೇರಿದೆ. ಸುಮಾರು ಎರಡು ಮೂರು ತಿಂಗಳಿಂದ ವಿವಾದದ ಸುಳಿಯಲ್ಲಿ ಸಿಲುಕಿದ್ದ ಶಿವಾನಂದ ಮಠದ ಜಾತ್ರೆ ಹೇಗೆ ನಡೆಯುತ್ತೆ ಎಂಬುದೇ ಬಹಳ ಕುತೂಹಲ ಕೆರಳಿಸಿತ್ತು.
ಕಿರಿಯ ಶ್ರೀ ಸದಾಶಿವಾನಂದ ಭಾರತಿ ಶ್ರೀಯನ್ನು ಉತ್ತರಾಧಿಕಾರಿ ಸ್ಥಾನದಿಂದ ತೆಗೆಯಲಾಗಿದೆ ಎಂಬ ವಿಚಾರದಿಂದ ಶುರುವಾಗಿದ್ದ ಪ್ರಕರಣ, ಕೋರ್ಟ್ ಮೆಟ್ಟಿಲೇರಿ ಮಧ್ಯಂತರ ತೀರ್ಪಿನಲ್ಲಿ ಕಿರಿಯ ಸ್ವಾಮಿಜಿ ಸದಾಶಿವಾನಂದ ಭಾರತಿ ಶ್ರೀಗೆ ಹಿನ್ನಡೆಯಾಗಿತ್ತು. ಮಠದ ಎಲ್ಲಾ ಜವಾಬ್ದಾರಿಯನ್ನು ನನ್ನ ಮೂಲಕವೇ ನಡೆಸಬೇಕೆಂದು ಕೋರ್ಟ್ ಆದೇಶ ಮಾಡಿದೆ ಎಂದು ಹಿರಿಯ ಶ್ರೀಅಭಿನವ ಸ್ವಾಮೀಜಿ ತಿಳಿಸಿದ್ದರು.
ಅಂದಿನಿಂದ ರಥೋತ್ಸವ ಮತ್ತು ಅಡ್ಡಪಲ್ಲಕ್ಕಿಯಲ್ಲಿ ಕೂರುವವರು ಯಾರು ಎನ್ನುವ ಪ್ರಶ್ನೆ ಮೂಡಿತ್ತು. ಇದೇ ವಿಚಾರವಾಗಿ ಇಬ್ಬರು ಸ್ವಾಮೀಜಿ ಮತ್ತು ಬೆಂಬಲಿಗರ ನಡುವೆ ಜಟಾಪಟಿ ಶುರುವಾಗಿ ನಾನಾ ನೀನಾ ಎನ್ನುವ ರೀತಿಯಲ್ಲಿ ಜಿದ್ದಿಗೆ ಬಿದ್ದಿದ್ದರು. ಅಲ್ಲದೇ ರಥೋತ್ಸವ ಮತ್ತು ಅಡ್ಡಪಲ್ಲಕ್ಕಿಯ ಮೇಲೆ ನಾನೇ ಕೂರುತ್ತೇನೆ. ನನ್ನ ಮೂಲಕವೇ ಜಾತ್ರೆ ನಡೆಯುತ್ತದೆ ಎಂದು ಕಿರಿಯ ಶ್ರೀ ಸವಾಲು ಹಾಕಿದ್ದರು ಎನ್ನಲಾಗಿತ್ತು.
ಹೀಗಾಗಿ ಭಾನುವಾರ ನಡೆದ ಜಾತ್ರೆಯಲ್ಲಿ 300 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕಾನೂನು ಸುವ್ಯವಸ್ಥೆಗೆ ನಿಯೋಜನೆಗೊಂಡಿದ್ದರು. ಇಲ್ಲಿ ಕೋರ್ಟ್ ಆದೇಶ ಪಾಲನೆಯಾಗಬೇಕಿದೆ ಹೀಗಾಗಿ ಯಾರೂ ಕಾನೂನು ವಿರುದ್ಧ ನಡೆಯುವುದು ಬೇಡ ಎಂದು ಪೊಲೀಸರು ಸಹ ಕಿರಿಯ ಮತ್ತು ಹಿರಿಯ ಶ್ರೀಗಳಲ್ಲಿ ಮನವಿ ಮಾಡಿದ್ದರು. ಜೊತೆಗೆ ಇಬ್ಬರು ಸ್ವಾಮೀಜಿ ಬೆಂಬಲಿಗರ ಮನವೊಲಿಸಿ ಜಾತ್ರೆ ಸುಸೂತ್ರವಾಗಿ ನಡೆಯುವಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿತ್ತು. ಹೀಗಾಗಿ ಮಧ್ಯಾಹ್ನ 3 ಗಂಟೆಗೆ ಅಡ್ಡಪಲ್ಲಕ್ಕಿ ಉತ್ಸವ ಹಿರಿಯ ಶ್ರೀ ಅಭಿನವ ಸ್ವಾಮೀಜಿ ನೇತೃತ್ವದಲ್ಲಿಯೇ ನಡೆಯಿತು. ಜೊತೆಗೆ ಸಾಯಂಕಾಲ ನಡೆದ ಅದ್ಧೂರಿ ರಥೋತ್ಸವ ಸಹ ಹಿರಿಯ ಶ್ರೀಗಳ ನೇತೃತ್ವದಲ್ಲಿಯೇ ನಡೆದು ಜಾತ್ರೆ ಯಶಸ್ವಿಯಾಯಿತು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಪೊಲೀಸ್ ಬಿಗಿಬಂದೋಬಸ್ತ್ನಲ್ಲಿ ಜಾತ್ರೆ ಪೂರ್ಣಗೊಂಡಿದೆ.
ಇನ್ನು ಸಂಭ್ರಮದಿಂದ ಜಾತ್ರೆ ನಡೆಯುತ್ತಿದ್ದರೂ ಸದಾಶಿವಾನಂದ ಶ್ರೀಗಳು ಮಾತ್ರ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ. ಕೋಣೆ ಬಿಟ್ಟು ಹೊರಗಡೆ ಬರಲಿಲ್ಲ. ಜೊತೆಗೆ ಪ್ರತಿಕ್ರಿಯೆ ನೀಡಲು ಸಹ ನಿರಾಕರಣೆ ಮಾಡಿದರು. ಮಠದಲ್ಲಿ ಎಲ್ಲಾ ಪೂಜೆ ಕೈಂಕರ್ಯಗಳು ಮಂತ್ರಪಠಣಗಳು ಸರಾಗವಾಗಿ ನಡೆದಿವೆ. ಇನ್ನು ಜಾತ್ರೆ ಯಶಸ್ವಿಯಾಗಿ ನೆರವೇರಿದ್ದಕ್ಕೆ ಹಿರಿಯ ಸ್ವಾಮೀಜಿ ಅಭಿನವ ಶ್ರೀ ಸಂತಸಪಟ್ಟಿದ್ದಾರೆ. ಎರಡು ತಿಂಗಳಿಂದ ಕೆಲವು ವಿಘ್ನಗಳು ಕಂಟಕವಾಗಿದ್ದವು. ಈಗ ಯಾವ ಅಡ್ಡಿ ಆತಂಕಗಳಿಲ್ಲದೇ ಜಾತ್ರೆ ಯಶಸ್ವಿಯಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada