ಚಾಮರಾಜನಗರ: ಸರ್ಕಾರಿ ವಾಹನಗಳು ಕೆಟ್ಟು ನಿಂತರೇ ಇಲ್ಲವೇ ಹಳತಾದರೇ ಗುಜರಿಗೆ ಹಾಕುವುದು ಸಾಮಾನ್ಯ. ಆದರೆ, ಇಲ್ಲಿ ಆ ರೀತಿ ಆಗದೇ ಜನಮನ ಗೆದ್ದ ಅಧಿಕಾರಿ ಬಳಸಿದ್ದ ಜೀಪನ್ನು ಕಾಪಿಡುವ ಪ್ರಯತ್ನ ಮಾಡಲಾಗಿದೆ.
ಹೌದು…, ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡು ಆತನ ಮೋಸಕ್ಕೆ ಬಲಿಯಾದ ಐಎಫ್ಎಸ್ ಅಧಿಕಾರಿ ಪಿ.ಶ್ರೀನಿವಾಸ್ ಬಳಸಿದ್ದ ಜೀಪು ಈಗ ಕೊಳ್ಳೇಗಾಲದಲ್ಲಿರುವ ಮಲೆಮಹದೇಶ್ವರ ವನ್ಯಜೀವಿಧಾಮ ಕಚೇರಿ ಆವರಣದಲ್ಲಿ ಸ್ಮಾರಕ ರೂಪ ಪಡೆದಿದೆ.
ಪಾಲಾರ್ ಆರ್ ಎಫ್ಒ ಕಚೇರಿ ಸಮೀಪ ಹತ್ತಾರು ವರ್ಷಗಳಿಂದ ಅನಾಥವಾಗಿ ನಿಂತಿದ್ದ ಜೀಪನ್ನು ಎಂಎಂಹಿಲ್ಸ್ ಡಿಸಿಎಫ್ ಏಡುಕೊಂಡಲು ಮರುಜೀವ ಕೊಟ್ಟಿದ್ದಾರೆ. ಜೀಪನ್ನು ರಿಪೇರಿ ಮಾಡಿಸಿ ಮತ್ತೇ ಸುಸ್ಥಿತಿಗೆ ತಂದು ಅದನ್ನು ಸಂರಕ್ಷಿಸಿಡಲಾಗಿದೆ.
ಇಷ್ಟೇ ಅಲ್ಲದೇ ಶ್ರೀನಿವಾಸ್ ಅವರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳು ಸಿಗಬೇಕು ಎಂಬ ದೃಷ್ಟಿಯಿಂದ ಅತಿಥಿ ಗೃಹದ ಮೊದಲ ಮಹಡಿಯಲ್ಲಿ ಅವರ ಹೆಸರಿನಲ್ಲಿ ಗ್ರಂಥಾಲಯ ತೆರೆದಿದ್ದು ಶ್ರೀನಿವಾಸ್ ಅವರ ವಿವಿಧ ಕಡೆ ಸೇವೆ ಸಲ್ಲಿಸಿದ ಫೋಟೋಗಳು, , ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂ ನಲ್ಲಿ ಬಡವರಿಗಾಗಿ ನಿರ್ಮಿಸಿಕೊಟ್ಟ ಮನೆಗಳು, ದೇವಾಲಯ, ಎಸ್.ಟಿ.ಎಫ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದು ಹೀಗೆ ಎಲ್ಲಾ ರೀತಿಯ ಭಾವಚಿತ್ರಗಳು, ಅವರಿಗೆ ಸಂಬಂಧಿಸಿದ ಸಾಹಿತ್ಯ, ಬರಹಗಳು, ದಾಖಲೆಗಳನ್ನು ಇಲ್ಲಿ ಸಂಗ್ರಹಿಸಿ ಇಡಲಾಗಿದೆ.
ಸರ್ಕಾರಿ ಅಧಿಕಾರಿಯೊಬ್ಬರು ಉತ್ತಮ ಕರ್ತವ್ಯ ನಿರ್ವಹಿಸಿದರೇ ಕಾಲವಾಗಿ ಹತ್ತಾರು ವರ್ಷಗಳಾದರೂ ಜನರು, ಇಲಾಖೆ ಮರೆಯಲಾರದು ಎಂಬುದಕ್ಕೆ ಶ್ರೀನಿವಾಸ್ ಉದಾಹರಣೆಯಾಗಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada