ಬೆಂಗಳೂರು: ರಾಜ್ಯದ ಗೃಹ ಸಚಿವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ಮಾನ ಹಾನಿ ಮಾಡಿರುವ ಮತ್ತು ರಾಜ್ಯದ ಗೌರವಕ್ಕೆ ಧಕ್ಕೆ ತಂದಿರುವ ಕಾಂಗ್ರೆಸ್ ಮುಖಂಡ ಬಿ. ಕೆ. ಹರಿಪ್ರಸಾದ್ ವಿರುದ್ಧ ಕಾನೂನು ರೀತಿಯ ಪ್ರಕರಣಗಳನ್ನು ದಾಖಲಿಸಿ, ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಉಪ್ಪಾರಪೇಟೆ ಪೋಲೀಸ್ ಠಾಣೆಗೆ ಬೆಂಗಳೂರು ದಕ್ಷಿಣ, ಬಿಜೆಪಿ.
ಅಧ್ಯಕ್ಷ ಎನ್. ಆರ್ ರಮೇಶ್ ದೂರು ನೀಡಿದರು.
ಏಪ್ರಿಲ್ 11 ರಂದು ಉಪ್ಪಾರಪೇಟೆ ಪೋಲೀಸ್ ಠಾಣೆ ವ್ಯಾಪ್ತಿಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರತಿಭಟನಾ ಸಭೆಯಲ್ಲಿ, ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿದ್ದ ಬಿ. ಕೆ. ಹರಿಪ್ರಸಾದ್ ರವರು ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರ ಬಗ್ಗೆ ಅತ್ಯಂತ ಹಗುರವಾದ ಮತ್ತು ನಿಂದನಾತ್ಮಕವಾದ ಪದಗಳನ್ನು ಬಳಸಿ ಮಾತನಾಡಿದ್ದಾರೆ. ಗೃಹ ಸಚಿವರಿಗೆ ಹೆಂಡ ಕುಡಿಯುವ ಅಭ್ಯಾಸ ಇದೆಯೋ? ಇಲ್ಲವೋ? ಅಥವಾ ಗಾಂಜಾ ಸೇದುವ ಅಭ್ಯಾಸ ಇರಬೇಕು ಎಂದು ಬಹಿರಂಗ ಸಭೆಯಲ್ಲಿ ಮಾತನಾಡಿರುವುದಲ್ಲದೇ, ಆರಗ ಜ್ಞಾನೇಂದ್ರ ರವರು ಅಜ್ಞಾನಿ ಜ್ಞಾನೇಂದ್ರ ಎಂಬ ಪದಗಳನ್ನು ಬಳಸಿ ಮಾತನಾಡಿದ್ದರು.
ಪ್ರಾಮಾಣಿಕ ರಾಜಕೀಯ ಜೀವನವನ್ನು ನಡೆಸುತ್ತಿರುವ ಆರಗ ಜ್ಞಾನೇಂದ್ರರವರ ಬಗ್ಗೆ ಈ ಹಗುರವಾದ ಮತ್ತು ನಿಂದನಾತ್ಮಕವಾದ ಪದಗಳನ್ನು ಬಳಸಿರುವ ಬಿ. ಕೆ. ಹರಿಪ್ರಸಾದ್ ರವರ ಮಾತುಗಳು ಕಾನೂನು ರೀತಿಯ ಅಪರಾಧವಾಗಿರುತ್ತದೆ ಎಂದು ದೂರು ನೀಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada