ಚಿತ್ರದುರ್ಗ : ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕನ್ನಡ ನಾಡಿನ ಬಾವುಟವನ್ನು ದಹನ ಮಾಡಿರುವ ಎಂಇಎಸ್ ಕಾರ್ಯಕರ್ತರು ಪುಂಡಾಟಿಕೆ ಮೆರೆದಿರುವುದನ್ನು ಖಂಡಿಸಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಕಚೇರಿ ತೆರಳಿ ಮನವಿ ಸಲ್ಲಿಸಿ, ಅವರನ್ನು ಗಡಿಪಾರು ಮಾಡಿ ಇಲ್ಲವಾದರೆ ಗಲ್ಲಿಗೆರಿಸಿ ಎಂದು ಒತ್ತಾಯಿಸಿದ್ದಾರೆ
ಬೆಳಗಾವಿಯಲ್ಲಿ ಸದ್ಯ ಚಳಿಗಾಲದ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಇಡಿ ಸರ್ಕಾರವೇ ಅಲ್ಲಿರುವಾಗ ಇದರ ಮಧ್ಯೆಯೇ ಎಂಇಎಸ್ ಕಾರ್ಯಕರ್ತರ ಈ ರೀತಿ ವರ್ತನೆ ಮಾಡಿರುವುದು ಸರಿಯಿಲ್ಲ. ನಮ್ಮ ನೆಲದಲ್ಲಿ ಅನ್ನ, ನೀರು, ಗಾಳಿ ಸೇವಿಸಿ ನಮಗೆ ದ್ರೋಹ ಬಗೆಯುತ್ತಿದ್ದಾರೆ. ಸರ್ಕಾರ ಕೂಡಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ಎಂಇಎಸ್ ಕಾರ್ಯಕರ್ತರು ಹಾಗೂ ಶಿವಸೇನಾ ಕಾರ್ಯಕರ್ತರು ಪದೇ ಪದೇ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಲೇ ನಡೆದುಕೊಂಡು ಬರುತ್ತಿದ್ದಾರೆ. ಪ್ರತಿಭಟನೆ ನೆಪ ಹೇಳಿಕೊಂಡು ಕನ್ನಡ ಬಾವುಟವನ್ನು ಸುಟ್ಟು ಹಾಕಿರುವುದು ಕನ್ನಡಿಗರ ಹಾಗೂ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ನಮ್ಮ ಕನ್ನಡದ ಶಕ್ತಿ ಏನೆಂದು ತೋರಿಸಬೇಕು. ಆಗಾಗಿ ಈ ಸಮಯದಲ್ಲಿ ಸರ್ಕಾರ ಮೌನವಹಿಸುವುದು ಸೂಕ್ತವಲ್ಲ. ಪುಂಡರಿಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದರು.
ಈ ಕುರಿತು ಮಾತನಾಡಿರುವ ಸಂಘಟನೆಯ ಮುಖಂಡರು ಬೆಳಗಾವಿಯಲ್ಲಿ ಶಿವಸೇನೆ ಕಾರ್ಯಕರ್ತರ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಗಲ್ಲಿಗೆರಿಸಿ, ಇಲ್ಲವಾದರೆ ಅವರನ್ನು ಗಡಿಪಾರು ಮಾಡುವಂತೆ ಒತ್ತಾಯಿಸಿದರು. ಕರ್ನಾಟಕದ 224 ವಿಧಾನಸಭಾ ಕ್ಷೇತ್ರದ ಯಾವೊಬ್ಬ ಶಾಸಕರು ಕೂಡ ಇದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಅವರಿಗೆ ಕನ್ನಡ ನಾಡು ನುಡಿಯ ಬಗ್ಗೆ ರಕ್ಷಣೆ ಬೇಕಿಲ್ಲ ಎಂದು ಮುಖಂಡರು ಆರೋಪಿಸಿದರು.
ಕನ್ನಡ ಬಾವುಟ ದಹನ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೂ ಸರ್ಕಾರದ ಗಮನಕ್ಕೆ ಬಂದಿಲ್ಲವೇ ? ಎಂದು ಸರ್ಕಾರವನ್ನು ಪ್ರಶ್ನೆ ಮಾಡಿದರು.
ಅನುಮತಿಯಿಲ್ಲದೆ ಹೋರಾಟ ಮಾಡುವ ಎಂಇಎಸ್ ಹಾಗೂ ಶಿವಸೇನೆ ಪುಂಡರನ್ನು ಕೇಳಲು ಹೋದ ಪೋಲಿಸರನ್ನು ಅವಾಚ್ಯ ಶಬ್ದಗಳಾಡಿದವರನ್ನು ಬಿಟ್ಟು, ಕನ್ನಡ ಭಾಷೆಗೆ ಕನ್ನಡ ಧ್ವಜವನ್ನು ಸುಟ್ಟುಹಾಕಿದ ಮರಾಠಿಗರಿಗೆ ಕೇವಲ ಮಸಿ ಬಳಿದ ಕನ್ನಡಿಗರನ್ನು ಬಂಧಿಸಿರುವುದನ್ನು ಯಾವ ನ್ಯಾಯ ಎಂದು ಗೃಹಸಚಿವರನ್ನು ಪ್ರಶ್ನೆ ಮಾಡಿದರು. ಸರ್ಕಾರ ಕೂಡಲೇ ಅವರನ್ನು ಬಂಧಿಸಬೇಕು ಇಲ್ಲವಾದರೆ ಕರ್ನಾಟಕದ ಏಳುವರೆ ಕೋಟಿ ಕನ್ನಡಿಗರು ಹುಲಿಗಳಾಗಿ ಬೆಳಗಾವಿಗೆ ನುಗ್ಗಿ ಎಂಇಎಸ್ ಪುಂಡರನ್ನು ಬೇಟೆಯಾಡಬೇಕಾಗುತ್ತದೆ ಇದು ಕನ್ನಡಿಗರ ಆಕ್ರೋಶದ ನುಡಿಗಳು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಧ್ವಜವನ್ನು ಸುಟ್ಟು, ಕನ್ನಡ ತಾಯಿಗೆ ಅವಮಾನ ಮಾಡಿದ ಪುಂಡರನ್ನು ಬಂಧಿಸದೆ ಬಿಟ್ಟು, ಕೇವಲ ಎಂಇಎಸ್ ಓರ್ವ ಕಾರ್ಯಕರ್ತನಿಗೆ ಮಸಿ ಬಳಿದವನನ್ನು ಬಂಧಿಸಿರುವುದನ್ನು ಸರಿಯಲ್ಲ. ಬಂಧಿಸಿರುವ ಸ್ವಾಭಿಮಾನಿ ಕನ್ನಡಿಗರನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು, ಇಲ್ಲವಾದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ರಂಜಿತಾ ಹೋಟೆಲ್ ನಿಂದ ಪ್ರತಿಭಟನೆ ಮೆರವಣಿಗೆ ಹೋರಟು, ಆಸ್ಪತ್ರೆ ಮುಂಭಾಗದಿಂದ ಗಾಂಧಿ ವೃತ್ತದಲ್ಲಿ ಸೇರಿದ ಕನ್ನಡಪರ ಸಂಘಟನೆಗಳು ಎಂಇಎಸ್ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ತಹಶೀಲ್ದಾರ್ ಕಛೇರಿಗೆ ಹೋಗಿ ಮನವಿ ಸಲ್ಲಿಸಿದರು.
ಕನ್ನಡ ಪರ ಸಂಘಟನೆಗಳಾದ ಕರ್ನಾಟಕ ರಕ್ಷಣಾ ವೇದಿಕೆ, ನಾರಾಯಣ ಗೌಡ ಬಣದ ಕಾರ್ಯಕರ್ತರು, ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು, ಜಯಕರ್ನಾಟಕ ಸಂಘಟನೆಯ ಕಾರ್ಯಕರ್ತರು, ದಲಿತಪರ ಸಂಘಟನೆಗಳ ಕಾರ್ಯಕರ್ತರು, ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.