ತಲೆನೋವು ಅಥವಾ ಶಿರಶೂಲ. ಪ್ರತಿಯೊಬ್ಬರೂ ಜೀವನದಲ್ಲಿ ಒಮ್ಮೆಯಾದರೂ ಈ ನೋವನ್ನು ಅನುಭವಿಸಿಯೇ ಇರುತ್ತಾರೆ! ಅದು ಜೀವನಶೈಲಿಯಲ್ಲಾದ ಬದಲಾವಣೆಯಿಂದಾಗಿಯೋ, ಇಲ್ಲ ಮತ್ತೊಂದು ರೋಗದ ಲಕ್ಷಣವಾಗಿಯಾದರೂ ಕಾಣಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತಲೆನೋವಿನ ಸಮಸ್ಯೆ ಚಿಕ್ಕವಯಸ್ಸಿನಲ್ಲಿಯೇ ಹೆಚ್ಚು ಕಂಡುಬರುತ್ತಿರುವುದು ಆತಂಕದ ವಿಷಯ.
ಇದಕ್ಕೆ ಕಾರಣ ಇಂದಿನ ಜೀವನಶೈಲಿ!
ಈಗಿರುವ ಕೋವಿಡ್ ಕಾಲ ಘಟ್ಟದಲ್ಲಿ ನಮ್ಮ ಜೀವನಶೈಲಿಗಳೆಲ್ಲವೂ ಮೊದಲಿನಂತಿರದೆ ಬುಡ ಮೇಲಾಗಿದೆ! ವರ್ಕ್ ಫ್ರಂ ಹೋಂ, ಆನ್ಲೈನ್ ಕ್ಲಾಸ್ – ಹೀಗೆ ಮನೆಯಿಂದ ಹೊರಗೆ ಹೋಗಲು ಕಾರಣಗಳೇ ಇಲ್ಲದೆ, ಆಹಾರ-ವಿಹಾರದಲ್ಲಿ ವಿಪರೀತ ವ್ಯತ್ಯಾಸ ಉಂಟಾಗಿದೆ. ಬೆಳಗ್ಗೆ ಏಳುವುದರಿಂದ ಹಿಡಿದು ರಾತ್ರಿ ಮಲಗುವವರೆಗೂ ಯಾವುದಕ್ಕೂ ನಿರ್ದಿಷ್ಟ ಸಮಯವಿಲ್ಲದಿರುವುದು, ಸೇವಿಸುವ ಆಹಾರದಲ್ಲಿ, ದೇಹಕ್ಕೆ ವ್ಯಾಯಾಮ, ವಿಶ್ರಾಂತಿ ಯಾವುದಕ್ಕೂ ಶಿಸ್ತು ಎಂಬುದು ಇಲ್ಲವಾಗಿರುವುದು. ಮೊಬೈಲ್-ಕಂಪ್ಯೂಟರ್ಗಳ ಅತಿಯಾದ ಬಳಕೆಯಿಂದ ಮಾನಸಿಕ ಒತ್ತಡ ಹೆಚ್ಚಾಗಿ ಕೋಪ, ಭಯ, ದುಃಖ – ಹೀಗೆ ದೈಹಿಕ ಮಾನಸಿಕ ಆರೋಗ್ಯವೆಂಬುದು ಗಣನೀಯವಾಗಿ ಕ್ಷೀಣಿಸಿದೆ. ಅದರಲ್ಲೂ ತಲೆನೋವೆಂದು ವೈದ್ಯರ ಬಳಿ ಬರುವವರ ಸಂಖ್ಯೆ ಹೆಚ್ಚು.
ಕಾರಣಗಳು
ಅತಿಯಾದ ಖಾರ, ಹುಳಿ, ರೂಕ್ಷ, ಮಸಾಲೆಯುಕ್ತ, ಎಣ್ಣೆಯಲ್ಲಿ ಕರಿದ ಆಹಾರ ಸೇವಿಸುವುದು; ಕೃತಕ ಆಹಾರ ಸಂರಕ್ಷಕಗಳನ್ನು ಬಳಸಿ ತಯಾರಿಸಿದ ದೂಷಿತ ಆಹಾರ ಸೇವನೆ, ಪ್ರತಿದಿನವೂ ಒಂದು ನಿರ್ದಿಷ್ಟ ಸಮಯದಲ್ಲಿ ಆಹಾರ ಸೇವಿಸದಿರುವುದು, ಹಸಿವಾಗದೆ ಆಹಾರ ಸೇವಿಸುವುದು, ಮೇಲಿಂದ ಮೇಲೆ ಏನಾದರೂ ತಿನ್ನುತ್ತಲೇ ಇರುವುದು. ಅಜೀರ್ಣವಾದ ಆಹಾರ, ಉಪವಾಸ. ಜೀರ್ಣಾಂಗದಲ್ಲಿ ಕ್ರಿಮಿಗಳ ತೊಂದರೆ ಉಂಟಾದಾಗ, ಅತಿಯಾದ ಮದ್ಯಪಾನ, ದೇಹಕ್ಕೆ ಅಗತ್ಯವಿಲ್ಲದಿದ್ದರೂ ಅತಿಯಾದ ನೀರಿನ ಸೇವನೆ. ಅತಿಯಾದ ಕಾಫೀ-ಟೀ ಸೇವನೆಯನ್ನು ಹಠಾತ್ ಆಗಿ ನಿಲ್ಲಿಸುವುದು.
ಮಲ, ಸೀನು, ಕಣ್ಣೀರನ್ನು ತಡೆಯುವುದು, ಪ್ರತಿದಿನವೂ ದೂಳು, ಹೊಗೆಯ ಸೇವನೆ, ತೀಕ್ಷ್ಣವಾದ ಬಿಸಿಲಿನಲ್ಲಿ ತಿರುಗಾಡುವುದು, ಕಣ್ಣುಗಳಿಗೆ ತೊಂದರೆ ಆಗುವಷ್ಟು ಬೆಳಕಿರುವ ವಸ್ತುಗಳನ್ನು ತುಂಬಾ ಸಮಯ ದಿಟ್ಟಿಸಿ ನೋಡುವುದು (ಮೊಬೈಲ್, ಕಂಪ್ಯೂಟರ್, ಟಿ.ವಿ.), ಗಾಢವಾದ ವಾಸನೆಯುಳ್ಳ ವಸ್ತುಗಳನ್ನು ಆಘ್ರಾಣಿಸುವುದರಿಂದ (ಪರ್ಫ್ಯುಮ್), ಕಿವಿಗಡಚಿಕ್ಕುವ ಶಬ್ದವನ್ನು ಆಲಿಸುವುದು.
ಎತ್ತರದ ದಿಂಬಿನ ಮೇಲೆ ತಲೆ ಇಟ್ಟು ಮಲಗುವುದು, ವಿಪರೀತ ಮಾತನಾಡುವುದರಿಂದ, ಅತಿಯಾದ ಶೀತಗಾಳಿಯ ಸೇವನೆ.
ಹಗಲಿನಲ್ಲಿ ನಿದ್ರೆ ಮಾಡುವುದು, ರಾತ್ರಿ ಜಾಗರಣೆ ಮಾಡುವುದು ಇಲ್ಲವೇ ಬೆಳಗಿನ ಜಾವದವರೆಗೂ ಮಲಗದಿರುವುದು.
ಅತಿಯಾದ ಯೋಚನೆ, ಭಯ, ಕೋಪ, ಉದ್ವೇಗಗೊಳ್ಳುವುದು.
ಒಂದೇ ಬಗೆಯದಲ್ಲ!
ತಲೆನೋವಿನ ತೀವ್ರತೆ ಸಾಧಾರಣದಿಂದ, ಇನ್ನು ನೋವು ತಡೆಯಲಾಗುದಿಲ್ಲ ಎನ್ನುವಷ್ಟರವರೆಗೂ ಉಂಟಾಗುತ್ತದೆ.
ಒತ್ತಡದಿಂದುಟಾಗುವ ತಲೆನೋವು: ಒತ್ತಡದ ಕಾರಣದಿಂದ ತಲೆಯ ಮತ್ತು ಕುತ್ತಿಗೆಯ ಮಾಂಸಖಂಡಗಳಲ್ಲಿ ಸೆಳೆತ ಉಂಟಾಗಿ, ತಲೆಯ ಹಿಂಭಾಗದಲ್ಲೂ, ಕುತ್ತಿಗೆಯ ಹಿಂಭಾಗದಲ್ಲೂ ನಿರಂತರವಾಗಿ ಅಷ್ಟೇನೂ ತೀವ್ರವಲ್ಲದ ಮಂದ ನೋವು ಕಾಣಿಸುತ್ತದೆ. ಇದರಿಂದ ಕೆಲಸ- ಕಾರ್ಯಗಳಿಗೇನು ಅಡ್ಡಿ ಉಂಟಾಗದಿದ್ದರೂ, ಉಪಚಾರದ ನಂತರ ನೋವು ಪರಿಹಾರವಾದರೂ,ಈ ಬಗೆಯ ನೋವನ್ನು ಕಡೆಗಣಿಸುವಂತಿಲ್ಲ.
ಆಹಾರ-ವಿಹಾರದಲ್ಲುಂಟಾದ ವೈಪರೀತ್ಯದಿಂದಾಗಿ ಉಂಟಾಗುವ ತಲೆನೋವು: ಇದರಲ್ಲಿ ಸಂಜೆಯಾಗುತ್ತಲೇ ತಲೆಯ ಒಂದು ಬದಿಯಲ್ಲಿ (ಒಮ್ಮೆ ಎಡ, ಮತ್ತೊಮ್ಮೆ ಬಲ), ಹುಬ್ಬುಗಳ ಮೇಲೆ, ಕಣ್ಣುಗಳಲ್ಲಿ ನೋವು, ತಲೆ ಸಿಡಿದು ಹೋಗುವುದೇನೋ ಎನ್ನುವಷ್ಟು ವಿಪರೀತ ಸಿಡಿಯುವ ನೋವು. ಬೆಳಕನ್ನು ನೋಡಲಾಗದಿರುವುದು. ಅದರೊಂದಿಗೆ ಹೊಟ್ಟೆ ತೊಳೆಸಿದಂತಾಗಿ ವಾಂತಿ ಬರುವಂತಾಗುವುದು. ವಾಂತಿ ಬಂದ ನಂತರ ಸಮಾಧಾನ ಆಗುವುದು. ರಾತ್ರಿ ಮಲಗಿ ಬೆಳಗ್ಗೆ ಏಳುವಾಗ ನೋವು ಕಡಿಮೆ ಆಗಿರುವುದು. ಕೆಲವೊಮ್ಮೆ ವೈದ್ಯಕೀಯ ಸಲಹೆ, ಔಷಧಗಳಿಲ್ಲದೇ 2-3 ದಿನಗಳವರೆಗೂ ಬಾಧಿಸುವುದು. 3, 5, 10, 15 ದಿನಗಳಿಗೊಮ್ಮೆ ಪದೇ ಪದೇ ಕಾಣಿಸಿ ತೊಂದರೆ ಮಾಡುವುದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada