‘ಕೆಜಿಎಫ್ 2’ಗೆ ಸ್ಪರ್ಧೆ ಒಡ್ಡಿದ ವಿಜಯ್: ಗೆಲ್ಲೋದು ಯಾರು?
ಕನ್ನಡದ ಬಹು ನಿರೀಕ್ಷಿತ ಸಿನಿಮಾ ‘ಕೆಜಿಎಫ್ 2’ ಈ ವೇಳೆಗಾಗಲೆ ಬಿಡುಗಡೆ ಆಗಬೇಕಿತ್ತು, ಆದರೆ ಕೊರೊನಾ ಹಾಗೂ ಇನ್ನಿತರೆ ಕಾರಣಗಳಿಂದಾಗಿ ಬಿಡುಗಡೆ ಮುಂದಕ್ಕೆ ಹೋಗಿದೆ.
2020 ರ ಅಕ್ಟೋಬರ್ನಲ್ಲಿ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿತ್ತು.
ಬಳಿಕ 2021 ರ ಜನವರಿಗೆ ಬಿಡುಗಡೆ ಮುಂದೂಡಲ್ಪಟ್ಟಿತು. ನಂತರ ಜುಲೈ, ಆಗಸ್ಟ್, ಡಿಸೆಂಬರ್ ಎಲ್ಲ ದಿನಾಂಕ ದಾಟಿ ಈಗ 2022ರ ಏಪ್ರಿಲ್ 14ಕ್ಕೆ ಬಿಡುಗಡೆ ನಿಗದಿಗೊಳಿಸಲಾಗಿದೆ.
2022 ರ ಜನವರಿ-ಫೆಬ್ರವರಿ ತಿಂಗಳಲ್ಲಿ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಮಾಡಲಾಗುತ್ತದೆ ಎನ್ನಲಾಗಿತ್ತು. ಆದರೆ ಈ ಅವಧಿಯಲ್ಲಿ ಪರಭಾಷೆಯ ದೊಡ್ಡ ಬಜೆಟ್ನ, ಸ್ಟಾರ್ ನಟರ ಹಲವು ಸಿನಿಮಾಗಳು ಬಿಡುಗಡೆ ಆಗಲು ಸಾಲುಗಟ್ಟಿದ್ದವಾದ್ದರಿಂದ ಸಿನಿಮಾದ ಬಿಡುಗಡೆಯನ್ನು ಬಹಳ ಮುಂದಕ್ಕೆ ಇಟ್ಟುಕೊಂಡಿತು ಚಿತ್ರತಂಡ. ಆದರೂ ಸಹ ‘ಕೆಜಿಎಫ್ 2’ ಸಿನಿಮಾಕ್ಕೆ ಸ್ಪರ್ಧೆ ತಪ್ಪಿಲ್ಲ.
‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗುವ ದಿನವೇ ಹಿಂದಿಯ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಬಿಡುಗಡೆ ಆಗಲಿದೆ. ಅದರ ಬಳಿಕ ದಕ್ಷಿಣ ಭಾರತದ ಸ್ಟಾರ್ ನಟರೊಬ್ಬರ ಸಿನಿಮಾ ‘ಕೆಜಿಎಫ್ 2’ಗೆ ಪ್ರತಿಸ್ಪರ್ಧಿಯಾಗಿ ಬಂದಿದೆ.
ಏಪ್ರಿಲ್ನಲ್ಲಿ ಬಿಡುಗಡೆ ಆಗಲಿದೆ ಬೀಸ್ಟ್
ತಮಿಳಿನ ಸ್ಟಾರ್ ನಟ ವಿಜಯ್ ನಟನೆಯ ಹೊಸ ಸಿನಿಮಾ ‘ಬೀಸ್ಟ್’ ಏಪ್ರಿಲ್ ತಿಂಗಳಲ್ಲಿಯೇ ಬಿಡುಗಡೆ ಆಗಲಿದೆ. ಹೊಸ ವರ್ಷಕ್ಕೆ ಪೋಸ್ಟರ್ ಬಿಡುಗಡೆ ಮಾಡಿರುವ ‘ಬೀಸ್ಟ್’ ತಂಡ ಸಿನಿಮಾ ಏಪ್ರಿಲ್ನಲ್ಲಿ ಬಿಡುಗಡೆ ಆಗಲಿದೆ ಎಂದಿದೆ. ಆದರೆ ಏಪ್ರಿಲ್ನಲ್ಲಿ ಯಾವ ದಿನದಂದು ಸಿನಿಮಾ ಬಿಡುಗಡೆ ಆಗಲಿದೆ ಎಂಬುದನ್ನು ಪ್ರಕಟಗೊಳಿಸಿಲ್ಲ.
ಯಾವ ಸಿನಿಮಾ ಗೆಲ್ಲಲಿದೆ?
ಒಂದೊಮ್ಮೆ ವಿಜಯ್ ಸಿನಿಮಾ ಸಹ ಏಪ್ರಿಲ್ 14 ಅಥವಾ ಅದಕ್ಕೆ ಒಂದು ವಾರ ಆಜೂ-ಬಾಜೂ ಬಿಡುಗಡೆ ಆದಲ್ಲಿ ‘ಕೆಜಿಎಫ್ 2’ ಗೆ ಸಮಸ್ಯೆ ಆಗುವುದಂತೂ ಪಕ್ಕಾ. ಭಾರತದಲ್ಲಿಯೇ ಅತಿ ಹೆಚ್ಚು ಕಲೆಕ್ಷನ್ ಮಾಡುವ ಸ್ಟಾರ್ ನಟರಲ್ಲಿ ವಿಜಯ್ ಸಹ ಒಬ್ಬರು. ಮತ್ತು ‘ಕೆಜಿಫ್’ ಸಹ ಭಾರತದಲ್ಲಿ ಅತಿ ನಿರೀಕ್ಷಿತ ಸಿನಿಮಾ, ಹೀಗಿರುವಾಗ ‘ಬೀಸ್ಟ್’ ಹಾಗೂ ‘ಕೆಜಿಎಫ್ 2’ ನಡುವೆ ಯಾವ ಸಿನಿಮಾ ಗೆಲ್ಲುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಕಲಾನಿಧಿ ಮಾರನ್ ನಿರ್ಮಾಣ
‘ಬೀಸ್ಟ್’ ಸಿನಿಮಾದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಿನಿಮಾವನ್ನು ನೆಲ್ಸನ್ ದಿಲೀಪ್ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಲಾನಿಧಿ ಮಾರನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಭಾರಿ ಮೊತ್ತದ ಬಜೆಟ್ ಅನ್ನು ಖರ್ಚು ಮಾಡಲಾಗಿದ್ದು, ಅಂತರಾಷ್ಟ್ರೀಯ ಮಾಫಿಯಾದ ಕತೆಯನ್ನು ಸಿನಿಮಾ ಹೊಂದಿದೆ ಎನ್ನಲಾಗುತ್ತಿದೆ. ಸಿನಿಮಾದ ಎರಡು ಪೋಸ್ಟರ್ ಈವರೆಗೆ ಬಿಡುಗಡೆ ಆಗಿದೆ.
ಏಪ್ರಿಲ್ 14 ರಂದು ಅಮೀರ್ ಖಾನ್ ಸಿನಿಮಾ ಬಿಡುಗಡೆ
‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗುತ್ತಿರುವ ಏಪ್ರಿಲ್ 14ರಂದೇ ಅಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ಬಿಡುಗಡೆ ಆಗಲಿದೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಮೀರ್ ಖಾನ್, ಏಪ್ರಿಲ್ 14 ರಂದು ಸಿಖ್ಖರ ವೈಸಾಖಿ ಹಬ್ಬ ಇದೆ. ಅಮೀರ್ ಖಾನ್ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದಲ್ಲಿ ಮೊದಲ ಬಾರಿಗೆ ಸಿಖ್ಖರ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಅದೇ ದಿನ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ತಾವು ಅದೇ ದಿನ ಸಿನಿಮಾ ಬಿಡುಗಡೆ ಮಾಡುತ್ತಿರುವುದಕ್ಕೆ ಯಶ್ ಹಾಗೂ ನಿರ್ಮಾಪಕ ವಿಜಯ್ ಕಿರಗಂದೂರ್ ಅವರನ್ನು ಕ್ಷಮೆ ಕೇಳಿದ್ದಾಗ್ಯೂ ಅಮೀರ್ ಖಾನ್ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada