ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ – ಮೊದಲನೆಯ ಸಂಧಿ
ಸೂ. ಸಕಲ ರಾಜ್ಯವನುಳಿದಿವರು ಕೀ
ಚಕ ಕುಲಾಂತಕ ಕೆಡಹಿದನು ಕಿಮ್ಮೀರ ದಾನವನ
ಕೇಳು ಜನಮೇಜಯ ಧರಿತ್ರೀ
ಪಾಲ ಗಂಗಾ ತೀರದಲಿ ಭೂ
ಪಾಲಕರು ಗುರು ಭೀಷ್ಮ ವಿದುರಾದ್ಯಖಿಳ ಬಾಂಧವರ
ಬೀಳುಕೊಟ್ಟರು ಗಜಪುರದ ಜನ
ಜಾಲವನು ಕಳುಹಿದರು ಗಂಗಾ
ಕೂಲದುತ್ತರ ಭಾಗದಲಿ ಮಾಡಿದರು ವಿಕ್ರಮವ ೧
ನಿಲಿಸೆ ನಿಲ್ಲದೆ ಬಂದರರಸನ
ಬಳಿಯಲಗ್ಗದ ಮಂಡಲೇಶ್ವರ
ರೊಲಿದು ಸಾಕಿದ ರಾಜಪುತ್ರರು ಹಲವು ಮನ್ನಣೆಯ
ಬಲುಭಟರು ಬಾಹತ್ತರದ ನಿ
ಶ್ಚಲ ನಿಯೋಗಿಗಳಾಶ್ರಮಿಗಳ
ಗ್ಗಳೆಯ ವಿಪ್ರಸ್ತೋಮ ಬಂದುದು ಕೋಟಿ ಸಂಖ್ಯೆಯಲಿ ೨
ತಿರುಗಿ ಕಂಡನು ಭೂಮಿ ಭಾರದ
ನೆರವಿಯನು ಗಲ್ಲದಲಿ ಕರವಿ
ಟ್ಟರಸ ತಲೆದೂಗಿದನು ಸುಯ್ದನು ಬೈದು ದುಷ್ಕೃತವ
ಧರಣಿ ಸೇರಿದುದಹಿತರಿಗೆ ಕರಿ
ತುರಗ ರಥವೆಮಗಿಲ್ಲ ವಿಪಿನದ
ಪರಿಭವಣೆಗಿವರೇಕೆ ಬೆಸಗೊಳು ಭೀಮ ನೀನೆಂದ ೩
ನಿಲ್ಲಿರೈ ದ್ವಿಜನಿಕರ ಕಳುಹಿಸಿ
ಕೊಳ್ಳಿರೈ ಪುರವರ್ಗ ನೇಮವ
ಕೊಳ್ಳಿರೈ ಪರಿವಾರ ಮಕ್ಕಳತಂದೆ ಮೊದಲಾಗಿ
ಎಲ್ಲಿ ಮೆಳೆ ಮರಗಾಡು ಪಲ್ಲವ
ಫುಲ್ಲಫಲ ಪಾನೀಯ ಪೂರಿತ
ವಲ್ಲಿ ರಾಯನ ಸೆಜ್ಜೆಯರಮನೆಯೆಂದನಾ ಭೀಮ ೪
ಅವನಿಪತಿ ಚಿತ್ತವಿಸು ಬಹಳಾ
ರ್ಣವವ ಹೊಗು ಹಿಮಗಿರಿಯಲಿರು ಭೂ
ವಿವರ ಗತಿಯಲಿ ಗಮಿಸು ಗಾಹಿಸು ಗಹನ ಗಹ್ವರವ
ಎವಗೆ ನೀನೇ ಜೀವ ನೀನೇ
ವಿವಿಧ ಧನ ಗತಿ ನೀನೆ ಮತಿ ನೀ
ನವಗಡಿಸ ಬೇಡಕಟ ಕೃಪೆ ಮಾಡೆಂದುದಖಿಳಜನ ೫
ತುಂಬಿದನು ಕಂಬನಿಯನಕಟ ವಿ
ಡಂಬಿಸಿತೆ ವಿಧಿಯೆನ್ನನಿನಿಬರ
ನಂಬಿಸುವ ಪರಿಯೆಂತು ವಸನಗ್ರಾಸವಾಸದಲಿ
ತುಂಬಿ ಸಿರಿಗೆಡಹಿಯೊಳ ಲಕುಮಿಯ
ಮುಂಬಿಗನೊಳಪದೆಸೆಯ ಕುಂತದ
ಚುಂಬಿಗನೊಳೇನುಂಟು ಫಲವೆಂದರಸ ಬಿಸುಸುಯ್ದ ೬
ಖೇದವೇಕೆಲೆ ನೃಪತಿ ಹರುಷ ವಿ
ಷಾದದಲಿ ಸುಖ ದುಃಖದಲಿ ನುತಿ
ವಾದ ಪರಿವಾದದಲಿ ಸಮಬುದ್ಧಿಗಳಲಾ ದ್ವಿಜರು
ಈ ದುರಂತದ ಚಿಂತೆ ಬೇಡೆಲೆ
ದ್ವಾದಶಾತ್ಮನ ಭಜಿಸಿದರೆ ಭ
ಕ್ಷ್ಯಾದಿ ಬಹುವಿಧದನ್ನ ಸಿದ್ಧಿಪುದೆಂದನಾ ಧೌಮ್ಯ ೭
ಧರಣಿಪತಿ ಕೇಳ್ ಧೌಮ್ಯ ವಚನಾಂ
ತರದೊಳಮರನದೀ ವಿಗಾಹನ
ಪರಮಪಾವನ ಕರಣನೀಕ್ಷಿಸಿ ತರಣಿಮಂಡಲವ
ಮುರುಹಿ ಮೂಲಾಧಾರ ಪವನನ
ನುರುಸುಷುಮ್ನೆಗೆ ನೆಗಹಿ ನಿಚ್ಚಟ
ವರ ಸಮಾಧಿಯಲಿನನ ಮೆಚ್ಚಿಸಿದನು ಮಹೀಪಾಲ ೮
ವರವ ಕೊಟ್ಟೆನು ನಿನಗೆ ಹೇಮದ
ಚರುಕವಿದೆ ವಿವಿಧಾನ್ನ ಪಾನೋ
ತ್ಕರದ ತವನಿಧಿ ನಿನ್ನ ವಧು ಬಾಣಸನ ಕರಣದಲಿ
ವಿರಚಿಸಲಿ ಬಳಿಕುಣಲಿ ಶತ ಸಾ
ವಿರವನಂತವು ನೀವು ಬಳಿಕಂ
ಬುರುಹಮುಖಿ ಮರುದಿವಸವೀ ಪರಿಯೆಂದನಾ ದ್ಯುಮಣಿ ೯
ಭೂಮಿಪತಿ ಭುಲ್ಲವಿಸಿದನು ನಿ
ಸ್ಸೀಮ ಸಂತೋಷದಲಿ ಸುಜನ
ಸ್ತೋಮ ರಕ್ಷಣಕಾದ ನಿರ್ವಾಹದ ನಿರೂಢಿಯಲಿ
ಆ ಮುನೀಂದ್ರಂಗೆರಗಿ ಬಳಿಕೀ
ಭಾಮಿನಿಯ ಕರೆದೀ ಹದನ ಸು
ಪ್ರೇಮದಿಂದರುಹಿದನು ತನ್ನ ಸಹೋದರವ್ರಜಕೆ ೧೦
ಇವರು ತಿರುಗಿದರಿತ್ತಲಡವಿಯ
ಭವಣಿಗೆಯ ಭಾರಾಂಕ ಭಾಷೆಯ
ಲವಿರಳಿತ ಜನಜಾಲ ಸಹಿತಾರಣ್ಯ ಮಾರ್ಗದಲಿ
ಅವನಿಪತಿ ಕೇಳತ್ತಲಾ ಕೌ
ರವನ ನಗರಿಗೆ ಪಾರಿಕಾಂಕ್ಷಿ
ಪ್ರವರನೊಬ್ಬನು ಬಂದು ಹೊಕ್ಕನು ರಾಜಮಂದಿರವ ೧೧
ಮುನಿಯ ಸತ್ಕರಿಸಿದನು ಕೌರವ
ಜನಪನಾ ಋಷಿಮುಖ್ಯನೀತನ
ವಿನಯ ರಚನೆಗೆ ಮೆಚ್ಚಿ ನುಡಿದನು ರಾಜಕಾರಿಯವ
ನಿನಗದೊಂದೇ ಕೊರತೆ ಪಾಂಡವ
ಜನಪರನು ಜೂಜಿನಲಿ ಸೋಲಿಸಿ
ಕನಲಿಸಿದೆಯದರಿಂದ ಬಲುಗೇಡಹುದು ನಿನಗೆಂದ ೧೨
ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿನಿಯನೆನೆ ರೋಷ ಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ ೧೩
ತೊಡೆಗಳನು ಕಲಿಭೀಮ ಬವರದೊ
ಳುಡಿದು ಕೆಡಹಲಿಯೆಂದು ಶಾಪವ
ಕೊಡಲು ಮುನಿಪನ ಸಂತವಿಟ್ಟನು ಬಂದು ಧೃತರಾಷ್ಟ್ರ
ತೊಡೆಗೆ ಬಂದುದು ತೋಟಿ ಸಾಕಿ
ನ್ನೊಡಬಡಿಸಿ ಫಲವಿಲ್ಲ ನಮ್ಮಯ
ನುಡಿಗೆ ಮರುಮಾತಿಲ್ಲೆನುತ ಮುನಿ ಸರಿದನಾಶ್ರಮಕೆ ೧೪
ಆ ಮಹಾಮುನಿ ಶಾಪ ಭಯವನು
ಭೀಮಸೇನನ ಬಲುಹ ನೆನೆ ನೆನೆ
ದಾ ಮನಸ್ಸಿನ ಬೇಗೆಯಲಿ ಬೆದೆಬೆಂದು ಬೇಸರಲಿ
ಭೂಮಿಪತಿ ಕರೆಸಿದನು ವಿದುರನ
ನಾ ಮಹಾಜ್ಞಾನಿಯನು ಮುನಿಪನ
ತಾಮಸವನರುಹಿದೊಡೆ ಬಳಿಕಿಂತೆಂದನಾ ವಿದುರ ೧೫
ತಪ್ಪದಿದು ನಿನ್ನಾತಗಳ ಭುಜ
ದರ್ಪ ತೀವ್ರ ಜ್ವರದ ವಿಕಳರ
ನೊಪ್ಪಿತಾದೆ ಸುಯೋಧನಾದ್ಯರು
ಜನಿಸಲೀ ಧರೆಗೆ
ತಪ್ಪುವುದೆ ಋಷಿವಾಕ್ಯ ಸಂಧಿಯೊ
ಳಪ್ಪಿಗೊಳು ಪಾಂಡವರನಲ್ಲದ
ರಪ್ಪಿಕೊಂಬಳು ಮೃತ್ಯು ನಿನ್ನನು ಕುಮಾರಕರನೆಂದ ೧೬
ಎನಲು ಕಿಡಿಕಿಡಿಯೋಗಿ ಕೌರವ
ಜನಪನೀತನ ಬೈದು ಕುಂತೀ
ತನುಜರಲಿ ಬಾಂಧವನಲಾ ಹೋಗವರ ಹೊರೆಗೆಂದು
ಮುನಿದು ಗರ್ಜಿಸೆ ಜೀಯ ಕರ ಲೇ
ಸೆನುತ ಮನದುಬ್ಬಿನಲಿ ಪಾಂಡವ
ಜನಪರಿಹ ಕಾಮ್ಯಕ ವನಾಂತರಕೈದಿದನು ವಿದುರ ೧೭
ಇದಿರು ಗೊಂಡರು ಹಿರಿದು ಮನ್ನಿಸಿ
ವಿದುರನನು ಕೊಂಡಾಡಿ ಗುರು ನೃಪ
ನದಿಜ ಧೃತರಾಷ್ಟ್ರಾದಿಗಳ ಸುಕ್ಷೇಮ ಕುಶಲಗಳ
ವಿದುರನಾಗಮನ ಪ್ರಪಂಚದ
ಹದನನೆಲ್ಲವ ಕೇಳಿದರು ಹೇ
ಳಿದನು ನಿಜ ವೃತ್ತಾಂತವನು ವಿದುರಂಗೆ ಯಮಸೂನು ೧೮
ಇತ್ತಲೀ ವಿದುರನ ವಿಯೋಗದ
ಚಿತ್ತದಂತಸ್ತಾಪದಲಿ ನೃಪ
ಮತ್ತೆ ದೂತರ ಕಳುಹಿ ಕರೆಸಿದನಾತನನು ಪುರಕೆ
ಹೆತ್ತಮಕ್ಕಳ ಬಿಡು ಪೃಥಾಸುತ
ರತ್ತ ತಿರುಗೆನೆ ಖಾತಿಗೊಂಡೆನು
ಮತ್ತೆ ಮುನಿಯದಿರೆಂದು ವಿದುರನನಪ್ಪಿದನು ನೃಪತಿ ೧೯
ಆವ ವನದಲಿ ಪಾಂಡುಸುತರಿಗೆ
ತಾವು ನಿನಗೇನೆಂದರನಿಬರ
ನಾವ ವನದಲಿ ಕಂಡೆ ಕೂಡೆನಿತುಂಟು ಪರಿವಾರ
ಆವುದಭಿಮತ ಭೀಮಸೇನನ
ಭಾವವೇನು ಯುಧಿಷ್ಠಿರಾರ್ಜುನ
ರಾವ ಭಂಗಿಯಲಿದ್ದರೆಂದನು ನಗುತ ಧೃತರಾಷ್ಟ್ರ ೨೦
ಅರಸ ಕೇಳ್ ಗಂಗಾ ನದಿಯನು
ತ್ತರಿಸಿದವರಿಗೆ ಕಮಲಮಿತ್ರನ
ಕರುಣವಾಯಿತು ಕನಕ ಪಾತ್ರೆಯೊಳಕ್ಷಯಾನ್ನದಲಿ
ಪರಿಕರದ ಪರುಟವಣೆಯಲಿ ಸಾ
ವಿರದ ಶತಸಂಖ್ಯಾತ ಧರಣೀ
ಸುರ ನಿಯೋಗಿಗಳಾಪ್ತಜನ ಸಹಿತೈದಿದರು ವನವ ೨೧
ಜನಪ ಕೇಳ್ ಕಿಮ್ಮೀರನೆಂಬವ
ನನಿಮಿಷರಿಗುಬ್ಬಸದ ಖಳನಾ
ತನ ವಿಭಾಡಿಸಿ ಹೊಕ್ಕರವರಾರಣ್ಯ ಮಂದಿರವ
ದನುಜನೇ ಕಿಮ್ಮೀರನಾತನ
ನನಿಲಜನೊ ಫಲುಗುಣನೊ ಕೊಂದಾ
ತನು ಯುಧಿಷ್ಠಿರನೋ ಸವಿಸ್ತರವಾಗಿ ಹೇಳೆಂದ ೨೨
ಅರಸ ಕೇಳಂದೇಕ ಚಕ್ರದೊ
ಳೊರೆಸಿದನಲಾ ಭೀಮನಾತಗೆ
ಹಿರಿಯನೀ ಕಿಮ್ಮೀರ ಬಾಂಧವನಾ ಹಿಡಂಬಕಗೆ
ಧರಣಿಪಾಲನ ಸಪರಿವಾರದ
ಬರವ ಕಂಡನು ತನ್ನ ತಮ್ಮನ
ಹರಿಬವನು ಮರಳಿಚುವೆನೆನುತಿದಿರಾದನಮರಾರಿ ೨೩
ಇವರು ಮೂರೇ ದಿನಕೆ ಕಾಮ್ಯಕ
ವನ ಮಹಾಶ್ರಮಕಾಗಿ ಬರೆ ದಾ
ನವನು ದಾರಿಯ ಕಟ್ಟಿ ನಿಂದನು ಕೈಯ ಮುಷ್ಟಿಯಲಿ
ಅವನ ಕಂಗಳ ಕೆಂಪಿನಲಿ ಮೇ
ಣವನ ದಾಡೆಯ ಬೆಳಗಿನಲಿ ಖಳ
ನವಯವವ ಕಂಡಳುಕಿ ನಿಂದರು ಮುಂಗುಡಿಯ ಭಟರು ೨೪
ಮುಂದೆ ಘೋರಾರಣ್ಯವಿದೆ ಸುರ
ಬಂದಿಕಾರನ ಕಾಹಿನಲಿ ಕಾ
ಳಿಂದಿಯುದರದ ಮೊಬ್ಬಿನಂತಿದೆ ತೀವ್ರತರ ತಿಮಿರ
ಇಂದಿನಿರುಳಲಿ ಬದುಕಿದೊಡೆ ಸಾ
ವೆಂದಿಗೆಮಗಿಲ್ಲೆನುತ ಭಯದಲಿ
ನಿಂದುದಲ್ಲಿಯದಲ್ಲಿ ಪಾಂಡುಕುಮಾರ ಪರಿವಾರ ೨೫
ಅಡಿಗಡಿಗೆ ಮಾನಿಸರ ಸೊಗಡವ
ಗಡಿಸುತಿದೆ ಬರಹೇಳು ನೆತ್ತರ
ಗುಡಿಹಿಗೈನೆಯರೆಲ್ಲಿ ಶಾಕಿನಿ ಡಾಕಿನೀ ನಿಕರ
ತಡೆಯಬೇಡೋ ತಿನ್ನೆನುತ ಬೊ
ಬ್ಬಿಡುತ ಖಳನುರುಬಿದನು ರಾಯನ
ಮಡದಿ ಹೊಕ್ಕಳು ಮರೆಯನರ್ಜುನ ಭೀಮ ಧರ್ಮಜರ 26
ಎಲೆಲೆ ರಾಕ್ಷಸ ಭೀತಿ ಹೋಗದೆ
ನಿಲು ನಿಲೆಲವೋ ನಿಮಷಮಾತ್ರಕೆ
ಗೆಲುವರರಸುಗಳೆನುತ ಮುನಿ ರಕ್ಷೋಘ್ನ ಸೂಕ್ತವನು
ಹಲವು ವಿಧದಲಿ ಜಪಿಸಿ ದಿಗು ಮಂ
ಡಲದ ಬಂಧವ ರಚಿಸಿ ಜನ ಸಂ
ಕುಲವ ಸಂತೈಸಿದನು ಧೌಮ್ಯನು ಮುಂದೆ ಭೂಪತಿಯ ೨೭
ಆರು ನೀವ್ ನಡುವಿರುಳು ಪಾಂಡು ಕು
ಮಾರರಾವೆನಲಿತ್ತಲೇನು ವಿ
ಚಾರ ಬಂದಿರಿ ಹೇಳಿ ನೀವಾ ಬಕ ಹಿಡಿಂಬಕರ
ವೈರಿಗಳಲಾ ಹೊಲ್ಲೆಹೇನು ವಿ
ಕಾರಿಗಳನೊಡಹೊಯ್ದು ಶೋಣಿತ
ವಾರಿಯೋಕುಳಿಯಾಡಬೇಹುದೆನುತ್ತ ಖಳ ಜರೆದ ೨೮
ಮಿಡಿದನರ್ಜುನ ಧನುವನಾತನ
ಜಡಿದು ನಿಂದನು ಭೀಮನಸುರನ
ಕೆಡಹಿ ಕಾಮ್ಯಕ ವನದ ಭೂಮಿಯ ಭೂತ ಸಂತತಿಗೆ
ಬಡಿಸುವೆನು ನೀ ಸೈರಿಸೆನುತವ
ಗಡಿಸಿದನು ಕಲಿ ಭೀಮನಂತ್ಯದ
ಸಿಡಿಲು ಸೆರೆ ಬಿಟ್ಟಂತೆ ಬೊಬ್ಬಿಡುತೆದ್ದನಮರಾರಿ ೨೯
ಎಂಬೆನೇನನು ಪವನಜನ ಕೈ
ಕೊಂಬ ದೈತ್ಯನೆ ಹೆಮ್ಮರನ ಹೆ
ಗ್ಗೊಂಬ ಮುರಿದನು ಸವರಿದನು ಶಾಖೋಪಶಾಖೆಗಳ
ತಿಂಬೆನಿವನನು ತಂದು ತನ್ನ ಹಿ
ಡಿಂಬಕನ ಹಗೆ ಸಿಲುಕಿತೇ ತಾ
ನಂಬಿದುದು ನೆರೆ ದೈವವೆನುತಿದಿರಾದನಮರಾರಿ ೩೦
ಹೊಯಿದನವನುರವಣಿಸಿ ಮುರಿದೊಳ
ಹೊಯಿದು ಹೊಕ್ಕನು ಭೀಮನೆಲವೋ
ಕಯಿದು ಮರನೇ ಸೆಳೆಗೆ ಸೆಡೆವುದೆ ಭದ್ರ ಮದದಂತಿ
ಕಯಿದುವಿಲ್ಲಾ ತರಿಸಿಕೊಡುವೆನ
ಡಾಯುಧವ ಬಿಡು ಸರಳನೆನುತವ
ಹೊಯಿದು ಹುರಿಯೋ ಹುರಿಯೆನುತ ಗಹಗಹಿಸಿದನು ಭೀಮ ೩೧
ಮುರುಕಿಸುವ ಪವನಜನ ನೆತ್ತಿಯ
ನೆರಗಿದನು ಬಳಿಕವನ ಹೊಯ್ಲಿನ
ಬಿರುಸಿನಯ್ಯನೊ ಸಿಡಿಲ ಶಿಷ್ಯನೊ ವಜ್ರಕರ ಹತಿಯೊ
ಕರಗಿದಾ ಮಯಣಾಮದಿಗಳಿಂ
ದೆರದ ಕಾಹಿನ ಕರುವೆನಲು ಕು
ಕ್ಕುರಿಸಲಸುರನನಿಕ್ಕಿದನು ಚಾಪಲ ಚಪೇಟದಲಿ ೩೨
ಡೆಂಡಣಿಸಿ ಸುರವೈರಿ ಧೊಪ್ಪನೆ
ದಿಂಡುಗೆಡೆದನು ನೀಲಶೈಲದ
ದಂಡಿಗಾರನ ದೇಹಗರ್ತದ ರಕ್ತನಿರ್ಜರದ
ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡು
ಮಂಡೆಗೆದರಿದ ಖಳನ ಕಂಡುದು ಭೂಸುರವ್ರಾತ ೩೩
ಅರಸ ಹೇಳುವುದೇನು ಹೋರಿದ
ನರೆಗಳಿಗೆ ಕೊಂಡಾಡಿ ಬಳಿಕಿ
ಟ್ಟೊರೆಸಿ ಹುಡಿಯಲಿ ಹೂಳಿದನು ಕಿಮ್ಮೀರ ದಾನವನ
ಬೆರೆಸಿತೀ ವಿಪ್ರೌಘವೀ ಮುನಿ
ವರಿಯರೀ ಕಾಮಿನಿಯರೀ ನೃಪ
ವರನ ಪರಿಕರವಾ ಮಹಾಕಾಮ್ಯಕ ವನಾಂತರವ ೩೪
ತಳಿರು ಬಿಟ್ಟುದು ಕೂಡೆ ಹರಹಿನ
ಹಳುವದೊಳ್ ದ್ವಿಜವರ್ಗ ರಚಿಸಿದ
ತಳಿರ ಗುಡಿಗಳ ಪರ್ಣಶಾಲೆಯ ಭದ್ರಭವನಿಕೆಯ
ಮೆಳೆಯ ಮಂಟಪ ಹೊದರುದುರುಗಲು
ನೆಳಲ ಚೌಕಿಗೆ ವಿಪುಳ ವಟ ಸಂ
ಕುಲದೊಳೋಲಗ ಶಾಲೆ ಮೆರೆದುದು ಧರ್ಮನಂದನನ ೩೫
ಆ ಸಕಲ ಸಾಮ್ರಾಜ್ಯಲಕ್ಷ್ಮೀ ವಿ
ಳಾಸದರಮನೆಗಳನು ಮರೆಸಿದು
ದೀಶರಭ ಶಾರ್ದೂಲ ಸೇವಿತ ಘೋರ ಕಾಂತಾರ
ಆ ಸುಧಾಕಲಿತಾನ್ನವೇ ಫಲ
ರಾಸಿಯಾದುದು ಗೇಯರಸ ವಿ
ನ್ಯಾಸವೇ ಮಧು ಮಕ್ಷಿಕವ್ರಜ ಜಂಬುಕಧ್ವಾನ ೩೬
ದಿನಪ ಕೃಪೆ ಮಾಡಿದನಲೇ ಕಾಂ
ಚನಮಯದ ಭಾಂಡವನು ಬಳಿಕಾ
ವನಜಮುಖಿ ಮಾಡಿದ ಸುಪಾಕದ ಷಡುರಸಾನ್ನದಲಿ
ಮುನಿಜನಕೆ ಪರಿಜನಕೆ ಭೂಸುರ
ಜನಕೆ ತುಷ್ಟಿಯ ಮಾಡಿ ಭೂಪತಿ
ವನದೊಳಿದ್ದನು ವೀರ ನಾರಾಯಣನ ಕರುಣದಲಿ ೩೭
ಸಂಕ್ಷಿಪ್ತ ಭಾವ
Lrphks Kolar
ಕಾಮ್ಯಕ ವನದಲ್ಲಿ ಪಾಂಡವರ ಬಿಡಾರ. ಅಕ್ಷಯಪಾತ್ರೆ ವರಪ್ರಸಾದ. ಕಿಮ್ಮೀರ ವಧೆ.‌
ಗಂಗಾತೀರದಲ್ಲಿ ಗುರುಹಿರಿಯರನ್ನು ಬೀಳ್ಕೊಂಡ ಪಾಂಡವರು ಮುಂದೆ ನಡೆದರು. ಬೇಡ ಎಂದರೂ ಬಿಡದೆ ಸಾವಿರ ಸಾವಿರ ಸಂಖ್ಯೆಯಲ್ಲಿ ವಿಪ್ರರು ಹಿಂಬಾಲಿಸಿದರು. ಧರ್ಮಜನಿಗೆ ನೋವಾಯಿತು. ಇವರನ್ನು ಸಲಹುವುದಾದರೂ ಹೇಗೆ ಎಂದು ಚಿಂತಿಸಿ ಹಿಂದಿರುಗುವಂತೆ ಮನವೊಲಿಸಲು ಭೀಮನಿಗೆ ಹೇಳಿದನು. ಆದರೆ ನೀನು ಎಲ್ಲಿರುವೆಯೊ ಅದೇ ನಮ್ಮ ಸ್ಥಾನವೆಂದು ಅವರು ಕೇಳಿಕೊಂಡರು.
ಈ ಸಮಸ್ಯೆಯನ್ನು ಪರಿಹರಿಸಲು ಧೌಮ್ಯರು ಧರ್ಮಜನಿಗೆ ಸೂರ್ಯನನ್ನು ಒಲಿಸಿಕೊಳ್ಳಲು ಸೂಚಿಸಿದನು. ಅದರಂತೆ ಸೂರ್ಯನನ್ನು ಧ್ಯಾನಮಾಡಲು ಅವನು ಪ್ರತ್ಯಕ್ಷನಾಗಿ ಒಂದು ಬಂಗಾರದ ಅಕ್ಷಯಪಾತ್ರೆಯನ್ನು ಕೊಟ್ಟನು. ಎಷ್ಟು ಸಾವಿರ ಜನರು ಊಟ ಮಾಡಿದರೂ ಇದು ಖಾಲಿಯಾಗದು. ಎಲ್ಲರದ್ದೂ ಆದನಂತರ ದ್ರೌಪದಿಯು ಊಟ ಮಾಡಲಿ. ಮತ್ತೆ ಮಾರನೇ ದಿನ ಇದು ಹೀಗೇ ಮುಂದುವರಿಯುವುದು. ಅದರಂತೆ ಅಲ್ಲಿ ವಿಪ್ರರ, ಪರಿಜನರ ಊಟದ ಸಮಸ್ಯೆ ಬಗೆಹರಿಯಿತು.
ಇತ್ತ ಮೈತ್ರೇಯನೆಂಬ ಮುನಿ ಕೌರವರ ನಗರಕ್ಕೆ ಬಂದನು. ಅವನು ಪಾಂಡವರನ್ನು ಮೋಸದಿಂದ ಸೋಲಿಸಿದ್ದನ್ನು ಖಂಡಿಸಿದನು. ಆಗ ದುರ್ಯೋಧನನು ತೊಡೆ ತಟ್ಟಿ ಗರ್ವದಿಂದ ತನ್ನನ್ನು ಸಮರ್ಥಿಸಿಕೊಂಡನು. ಆಗ ಮುನಿಯು ಭೀಮನಿಂದ ನಿನ್ನ ತೊಡೆಯ ಮೂಲಕ ಮೃತ್ಯುವೆಂದು ಶಾಪ ಕೊಟ್ಟನು.
ಇದರಿಂದ ಭೀತಿಗೊಂಡ ಧೃತರಾಷ್ಟ್ರನು ವಿದುರನನ್ನು ಕರೆಸಿ ವಿವರಿಸಿದನು. ಅದಕ್ಕೆ ವಿದುರನು ಮುನಿಯನ್ನೇ ಸಮರ್ಥಿಸಿದನು. ಕೋಪಗೊಂಡ ರಾಜನು ವಿದುರನನ್ನು ತೊಲಗು ಎಂದನು. ವಿದುರನು ಸಂತಸದಿಂದ ಪಾಂಡವರ ಬಳಿಗೆ ಬಂದನು. ಆದರೆ ರಾಜ ವಿದುರನನ್ನು ಬಿಟ್ಟಿರಲಾರದೆ ಮತ್ತೆ ಕರೆಸಿಕೊಂಡನು. ಅಲ್ಲಿನ ವೃತ್ತಾಂತವನ್ನು ಹೇಳು ಎಂದಾಗ ವಿದುರನು ಕಿಮ್ಮೀರನ ವಧೆಯ ಬಗ್ಗೆ ಹೇಳಿದನು.
ಕಿಮ್ಮೀರನು ಬಕಾಸುರನ ಸೋದರ. ಭೀಮನ ಮೇಲೆ ಸೇಡು ತೀರಿಸಲು ಕಾಯುತ್ತಿದ್ದನು. ಈಗ ಇವರುಗಳನ್ನು ಕಂಡಾಗ ಮೇಲೆ ಬಿದ್ದನು. ಆದರೆ ಭೀಮನು ಅವನನ್ನು ಕೊಂದು ಹಾಕಿದನು. ಇವರಿಗೆ ಕಂಟಕ ದೂರವಾಯಿತು. ಸೂರ್ಯನು ಕೊಟ್ಟ ಅಕ್ಷಯಪಾತ್ರೆಯ ಸಹಾಯದಿಂದ ಮತ್ತು ಶ್ರೀ ಕೃಷ್ಣನ ಕೃಪೆಯಿಂದ ಅವರುಗಳು ಸಕಲ ಪರಿವಾರದೊಂದಿಗೆ ಅರಮನೆಯನ್ನು ಮರೆತು ಹಾಯಾಗಿ ಇದ್ದಾರೆ ಎಂದು ವಿದುರ ಹೇಳಿದನು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿ. ಆರ್. ವೆಂಕಟರಮಣನ್

Tue Feb 22 , 2022
ಡಿ. ಆರ್. ವೆಂಕಟರಮಣನ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಆಚಾರ್ಯರಾದ ಡಿ.ವಿ.ಜಿ ಅವರಿಗೆ ಆಪ್ತ ಬಲಗೈ ಅಂತಿದ್ದು ಅವರ ಸಾಹಿತ್ಯ ಸ್ವಾದವನ್ನು ಲೋಕಕ್ಕೆ ನೀಡಿದ ಮಹಾನ್ ಋಷಿ ಸದೃಶ ವ್ಯಕ್ತಿ. ಅವರ ‘ಕಗ್ಗಕ್ಕೊಂದು ಕೈಪಿಡಿ’ ಬಹು ಪ್ರಖ್ಯಾತ ಕೃತಿ. ಡಿ. ಆರ್ ವೆಂಕಟರಮಣನ್ 1931ರ ಫೆಬ್ರವರಿ 21ರಂದು ಕೊಳ್ಳೇಗಾಲದ ಬಳಿ ಇರುವ ಹನೂರು ಗ್ರಾಮದಲ್ಲಿ ಜನಿಸಿದರು. ತಂದೆ ರಾಮಚಂದ್ರ ಅಯ್ಯರ್ ಮೂಲತಃ ದಾರಾಪುರಂ ಎಂಬ ಸ್ಥಳಕ್ಕೆ ಸೇರಿದವರಾಗಿದ್ದು ಸರ್ಕಾರಿ ಕೆಲಸದ […]

Advertisement

Wordpress Social Share Plugin powered by Ultimatelysocial