ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಇತ್ತಂಡಗಳ ನಡುವೆ ಈಗಾಗಲೇ ಟೆಸ್ಟ್ ಸರಣಿ ಆರಂಭವಾಗಿದ್ದು, ಚೊಚ್ಚಲ ಟೆಸ್ಟ್ ಪಂದ್ಯ ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಡಿಸೆಂಬರ್ 26ರ ಬಾಕ್ಸಿಂಗ್ ಡೇನಿಂದ ಶುರುವಾಗಿದೆ.
ಹೀಗೆ ಡಿಸೆಂಬರ್ 26ರಂದು ಶುರುವಾದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ದಿನ ಯಾವುದೇ ಅಡ್ಡಿಗಳಿಲ್ಲದೇ ಸರಾಗವಾಗಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡರು. ಅದರಂತೆ ಮೊದಲನೇ ದಿನ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿ ಉತ್ತಮ ಹಂತದಲ್ಲಿತ್ತು. ಆದರೆ ದ್ವಿತೀಯ ದಿನದಾಟ ಮಾತ್ರ ಮಳೆಯ ಕಾಟದಿಂದಾಗಿ ಆರಂಭವಾಗಲೇ ಇಲ್ಲ. ಹೀಗೆ ದ್ವಿತೀಯ ದಿನದಾಟ ಸಂಪೂರ್ಣವಾಗಿ ಮಳೆಗೆ ಆಹುತಿಯಾದರೆ ತೃತೀಯ ದಿನ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಆರಂಭವಾಯಿತು.
ಮೊದಲನೇ ದಿನ ಅಬ್ಬರಿಸಿದ್ದ ಟೀಂ ಇಂಡಿಯಾ ತೃತೀಯ ದಿನದಾಟ ಆರಂಭವಾಗುತ್ತಿದ್ದಂತೆಯೇ ಸೌತ್ ಆಫ್ರಿಕಾ ಬೌಲರ್ಗಳ ದಾಳಿಗೆ ವೇಗವಾಗಿ ತನ್ನ ಉಳಿದ 7 ವಿಕೆಟ್ಗಳನ್ನು ಕಳೆದುಕೊಂಡು 327 ರನ್ಗಳಿಗೆ ಆಲ್ ಔಟ್ ಆಯಿತು. ಹೀಗೆ ತೃತೀಯ ದಿನದಂದು ಬ್ಯಾಟಿಂಗ್ ವಿಭಾಗ ವಿಫಲವಾದ ನಂತರ ಟೀಮ್ ಇಂಡಿಯಾ ಬೌಲರ್ಗಳು ದಕ್ಷಿಣ ಆಫ್ರಿಕಾ ದಾಂಡಿಗರನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಲೇಬೇಕಾದ ಅನಿವಾರ್ಯತೆ ಎದುರಾಯಿತು. ಅದರಂತೆ ದಕ್ಷಿಣ ಆಫ್ರಿಕಾ ಮೊದಲನೇ ಇನ್ನಿಂಗ್ಸ್ನಲ್ಲಿ ತನ್ನ ಬ್ಯಾಟಿಂಗ್ ಆರಂಭಿಸಿದ ಬೆನ್ನಲ್ಲೇ ಜಸ್ಪ್ರೀತ್ ಬೂಮ್ರಾ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅವರ ವಿಕೆಟ್ ಕಬಳಿಸಿದರು. ಮೊದಲನೇ ಓವರ್ನಲ್ಲಿಯೇ ನಾಯಕನ ವಿಕೆಟ್ ಪಡೆದು ದಕ್ಷಿಣ ಆಫ್ರಿಕಾದ ಮೇಲೆ ಒತ್ತಡವನ್ನು ಹೇರಿದ ಜಸ್ಪ್ರೀತ್ ಬುಮ್ರಾ 11ನೇ ಓವರ್ ಬೌಲಿಂಗ್ ಮಾಡುವಾಗ ಕಾಲಿನ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರಗುಳಿದರು.
ಹೀಗೆ ಭಾರತ ಬೌಲಿಂಗ್ ವಿಭಾಗದ ಪ್ರಮುಖ ಬೌಲರ್ ನಿರ್ಣಾಯಕ ಸಮಯದಲ್ಲಿಯೇ ಗಾಯಕ್ಕೊಳಗಾಗಿ ತಂಡದಿಂದ ಹೊರಗುಳಿದದ್ದು ಆತಂಕ ಮೂಡಿಸಿತ್ತು. ದಕ್ಷಿಣ ಆಫ್ರಿಕಾದ ಪ್ರಮುಖ ವಿಕೆಟ್ ಪಡೆದು ಒತ್ತಡವನ್ನು ಹೇರಿದ್ದ ಜಸ್ಪ್ರೀತ್ ಬುಮ್ರಾ ಅಗತ್ಯತೆ ತಂಡಕ್ಕೆ ಹೆಚ್ಚಿತ್ತು. ಹೀಗೆ ಕಾಲಿನ ಗಾಯದಿಂದ ವಿಶ್ರಾಂತಿ ಪಡೆಯುತ್ತಿದ್ದ ಜಸ್ಪ್ರೀತ್ ಬುಮ್ರಾ ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿದ್ದಾಗ ಮತ್ತೆ ಕಣಕ್ಕಿಳಿದರು. ಆದರೆ ಜಸ್ಪ್ರೀತ್ ಬುಮ್ರಾ ಕೆಲ ಸಮಯದವರೆಗೆ ಬೌಲಿಂಗ್ ಮಾಡಲು ಮುಂದಾಗದೇ ಕೇವಲ ಕ್ಷೇತ್ರರಕ್ಷಣೆಯಲ್ಲಿ ತೊಡಗಿಕೊಂಡಿದ್ದರು.
ಕೊನೆಗೂ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಮುಕ್ತವಾಗಿ ಬೌಲಿಂಗ್ ಮಾಡಲು ಸಂಪೂರ್ಣವಾಗಿ ಸಜ್ಜಾದರು. 60ನೇ ಓವರ್ನ ಕೊನೆಯಲ್ಲಿ ಜಸ್ಪ್ರೀತ್ ಬೂಮ್ರಾ ಬೌಲಿಂಗ್ ಮಾಡಲು ಮುಂದಾದರು. ಆ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾದ ಕಗಿಸೋ ರಬಾಡ ಮತ್ತು ಮಹಾರಾಜ ಉತ್ತಮ ಜತೆಯಾಟವನ್ನು ಕಟ್ಟುವ ಪ್ರಯತ್ನದಲ್ಲಿದ್ದರು. ಈ ಸಂದರ್ಭದಲ್ಲಿ ಬಾಲ್ ಹಿಡಿದು ಬೌಲಿಂಗ್ ಮಾಡಲು ಬಂದ ಜಸ್ಪ್ರಿತ್ ಬೂಮ್ರಾರನ್ನು ಕಂಡ ವಿರಾಟ್ ಕೊಹ್ಲಿ ‘ಫೈನಲಿ ದ ರಾಕ್ ಹ್ಯಾಸ್ ಕಮ್ ಬ್ಯಾಕ್’ ಎಂದು ಕೂಗಿದರು. ಈ ಒಂದು ಸಾಲನ್ನು ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ನಲ್ಲಿ ಜನಪ್ರಿಯ ರೆಸ್ಲರ್ ದ ರಾಕ್ ಬಳಸಿದ್ದರು. 2011ರ ಸಮಯದಲ್ಲಿ ಹಲವು ವರ್ಷಗಳ ನಂತರ ವರ್ಲ್ಡ್ ವ್ರೆಸ್ಲಿಂಗ್ ಎಂಟರ್ಟೈನ್ಮೆಂಟ್ಗೆ ದ ರಾಕ್ ಮರಳಿದಾಗ ಈ ಸಾಲನ್ನು ಕೂಗಿದ್ದರು. ಆ ಸಮಯಕ್ಕೆ ಈ ಸಾಲು ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಅದೇ ಸಾಲನ್ನು ಇದೀಗ ಜಸ್ಪ್ರೀತ್ ಬುಮ್ರಾ ಗಾಯದ ಸಮಸ್ಯೆಯಿಂದ ಚೇತರಿಸಿಕೊಂಡು ಮತ್ತೆ ಬೌಲಿಂಗ್ ಮಾಡಲು ಮುಂದಾದಾಗ ವಿರಾಟ್ ಕೊಹ್ಲಿ ಕೂಗಿದ್ದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನೆಟ್ಟಿಗರು ವಿರಾಟ್ ಕೊಹ್ಲಿ ಕೂಗಿದ ಈ ಸಾಲನ್ನು ಟ್ವೀಟ್ ಮಾಡುತ್ತಿದ್ದು ಈ ವಿಷಯ ಸದ್ಯ ಟ್ವಿಟ್ಟರ್ ಟ್ರೆಂಡಿಂಗ್ ಪಟ್ಟಿಯಲ್ಲಿ ಸೇರಿಕೊಂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: