ಪ್ರೊ. ಕೃಷ್ಣಶಾಸ್ತ್ರಿಗಳ ಬಹುಮುಖ ವ್ಯಕ್ತಿತ್ವದ, ಬಹುಮುಖ ಪ್ರತಿಭೆಯ ಜೀವನವೇ ಒಂದು ಪವಾಡ ಸದೃಶವಾದದ್ದು. ಅವರು ಬಾಳಿದ ಜೀವನಮೌಲ್ಯಗಳು ಇಂದಿನ ಸಮಾಜದಲ್ಲಿ ಕಾಣಸಿಗುವಂಥವುಗಳಲ್ಲ. ಹತ್ತೊಂಬತ್ತನೆಯ ಶತಮಾನದಲ್ಲಿ ಅವತರಿಸಿದ ಶ್ರೇಷ್ಠ ಮಹನೀಯರಂತೆ ಕೃಷ್ಣಶಾಸ್ತ್ರಿಗಳು ತಮ್ಮ ಬದುಕಿನ ಬೆಲೆಯನ್ನು ಅರಿತು ಅದಕ್ಕೆ ತಕ್ಕಂತೆ ಬಾಳಿ ತಮ್ಮ ಜೀವನವನ್ನು ಸಾರ್ಥಕ ಮಾಡಿಕೊಂಡದ್ದೇ ಅಲ್ಲದೆ ಸಮಾಜದ ಮೌಲ್ಯಗಳಿಗೂ ನಿದರ್ಶನಗಳಾಗಿ ನಿಂತರು. ಅವರ ಕನ್ನಡ ರೂಪಾಂತರ ಕೃತಿಗಳಾದ ‘ವಚನ ಭಾರತ’ ಮತ್ತು ‘ಕಥಾಮೃತ’ ಕೃತಿಗಳು ಕನ್ನಡಿಗರ ಮನೆ ಮನೆಗಳಲ್ಲಿ, ಮನಗಳಲ್ಲಿ, ಜನಪದದಲ್ಲಿ ನಿರಂತರವಾಗಿ ಬೆಳಗಿ ಹಲವಾರು ಮರುಮುದ್ರಣಗಳನ್ನು ಕಂಡು ನಿತ್ಯ ಪ್ರಕಾಶಿಸುತ್ತಿವೆ.ಎ. ಆರ್. ಕೃ ಅವರು 1890ರ ಫೆಬ್ರವರಿ 12ರಂದು ಚಿಕ್ಕಮಗಳೂರು ಜಿಲ್ಲೆಯ ಅಂಬಳೆಯಲ್ಲಿ ರಾಮಕೃಷ್ಣ ಶಾಸ್ತ್ರಿಗಳು ಮತ್ತು ಶಂಕರಮ್ಮನವರ ಮೊದಲನೆಯ ಮಗನಾಗಿ ಜನಿಸಿದರು. ಇವರಿಗೆ ಮೂರು ಜನ ತಂಗಿಯರು ಮತ್ತು ಒಬ್ಬ ತಮ್ಮನನ್ನು ಕೊಟ್ಟ ತಾಯಿ ಅಸುನೀಗಿದ ಮೇಲೆ 10 ವರ್ಷದ ಬಾಲಕ ಕೃಷ್ಣಶಾಸ್ತ್ರಿಯವರ ಮೇಲೆ ಸಂಸಾರದ ಭಾರ ಬಿತ್ತು. ತಂದೆಯವರು ಮೈಸೂರಿನಲ್ಲಿ ಮೂವತ್ತು ರೂಪಾಯಿಗಳ ಮಾಸಾಶನದಿಂದ ಸಂಸಾರ ನಡೆಸುತ್ತಿದುದರಿಂದ ಬಡತನದಲ್ಲಿಯೇ ಬೆಳೆದರು. ಅದು ಸಾಲದೆಂಬಂತೆ ಬಾಲ್ಯದಲ್ಲೇ ಮೂವರು ತಂಗಿಯರನ್ನು ಕಳೆದುಕೊಂಡ ದುಃಖವೂ ಸೇರಿತ್ತು. ಆದರೆ ವಿದ್ಯೆಗೆ ಬಡತನವಿರಲಿಲ್ಲ. ಮೈಸೂರಿನಲ್ಲಿ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರೂ, ಘನ ವ್ಯಾಕರಣ ಪಂಡಿತರೂ ಆಗಿದ್ದ ತಂದೆಯವರೇ ಕೃಷ್ಣಶಾಸ್ತ್ರಿಗಳಿಗೆ ಪ್ರಥಮ ವಿದ್ಯಾಗುರುಗಳು. ಪ್ರತಿದಿನ ಮಗನಿಗೆ ಮರಳ ಮೇಲೆ ಅಕ್ಷರ ಬರೆದು ಪಾಠಶಾಲೆಗೆ ಹೋದರೆ ಬರುವ ವೇಳೆಗೆ ಅದನ್ನು ತಿದ್ದಿ ಕಲಿತು ತಂದೆಯಿಂದಲೇ ಕಾಸಿನ ಬಹುಮಾನ ಗಿಟ್ಟಿಸುತ್ತಿದ್ದರು. ಈ ಬಹುಮಾನದ ಪರಂಪರೆ ಬದುಕಿನಾದ್ಯಂತ ಮುಂದುವರೆಯಿತು. ವೆಸ್ಲಿ ಮಿಷನ್ ಹೈಸ್ಕೂಲಿನಲ್ಲಿ ಸರ್ವಪ್ರಥಮರಾಗಿ ಸ್ಕಾಲರ್ಷಿಪ್ ಗಿಟ್ಟಿಸಿದ್ದರು.ತಂದೆಯವರಿಂದ ಬಂದ ಒಂದೇ ಒಂದು ಆಸ್ತಿಯೆಂದರೆ ಈ ವಿದ್ಯೆ. ಕೃಷ್ಣಶಾಸ್ತ್ರಿಗಳು ಲೋಯರ್ ಸೆಕೆಂಡರಿಯಲ್ಲಿ ಓದುತ್ತಿರುವಾಗಲೇ ಹತ್ತು ವರ್ಷದ ವೆಂಕಟಲಕ್ಷ್ಮಿಯನ್ನು ವಿವಾಹವಾಗಬೇಕಾಯಿತು. ಇದರಿಂದ ಅಡುಗೆ ಕೆಲಸ ತಪ್ಪಿ ಓದಲು ಬಿಡುವಾದಂತಾಯಿತು. ಈ ವೇಳೆಗಾಗಲೇ ವಿಜ್ಞಾನ ಕ್ಷೇತ್ರದ ಬಗೆಗೆ ಆಸಕ್ತಿ ಬೆಳೆಯುತ್ತಿದ್ದು ಸಹಜವಾಗಿ ಅತ್ತ ಒಲಿದಿದ್ದರು. ಆದರೆ ತಂದೆಯವರ ಆರ್ಥಿಕ ಪರಿಸ್ಥಿತಿಯ ಕಾರಣ ಬೆಂಗಳೂರಿಗೆ ಹೋಗಿ ವಿಜ್ಞಾನವನ್ನು ಕಲಿಯುವುದು ದುಸ್ಸಾಧ್ಯವಾಯಿತು. ಈ ಅಸಹಾಯಕ ಸ್ಥಿತಿಯಲ್ಲಿ ಅನಿವಾರ್ಯವಾಗಿ ಹೆಚ್ಚು ಖರ್ಚಿಲ್ಲದ ಕನ್ನಡ ಮತ್ತು ಸಂಸ್ಕೃತಗಳಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರೆಸಿದರು. 1914ರಲ್ಲಿ ಬಿ.ಎ. ಪದವಿ ಪಡೆದರು. ನಂತರ ಎ.ಆರ್.ಕೃ ಅವರು ಖಾಸಗಿಯಾಗಿ ಮದ್ರಾಸಿನಿಂದ ಕನ್ನಡ ಎಂ.ಎ ಮಾಡಿ ಕೆಲವು ಕಾಲ ಅಠಾರ ಕಚೇರಿಯಲ್ಲಿ ಕೆಲಸಮಾಡಿದರು. 1916ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಟ್ಯೂಟರ್ ಆಗಿ ನೇಮಕವಾಗುವುದರ ಮೂಲಕ ಅಧ್ಯಾಪಕ ವೃತ್ತಿಗೆ ಪದಾರ್ಪಣೆ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada