ಹಲವು ರಾಜ್ಯಗಳ ವಿಧಾನಸಭಾ ಚುನಾವಣೆಗೂ ಮುನ್ನವೇ 2024ರ ಲೋಕಸಭಾ ಚುನಾವಣೆಗೆ ಕಮಲ ಪಡೆ ಸಿದ್ಧತೆ ಆರಂಭಿಸಿದೆ. ಉತ್ತರಪ್ರದೇಶ ಗೆದ್ದರೆ ದಿಲ್ಲಿ ಗದ್ದುಗೆ ಏರುವುದು ಸುಲಭ ಎಂಬ ಲೆಕ್ಕಾಚಾರ ಅರಿತಿರುವ ಬಿಜೆಪಿ, 80 ಸ್ಥಾನಗಳಲ್ಲಿ ಎಲ್ಲ ಸೀಟುಗಳನ್ನೂ ಗೆಲ್ಲುವ ಗುರಿಯೊಂದಿಗೆ ಕಾರ್ಯತಂತ್ರ ರೂಪಿಸಿ ಅಖಾಡಕ್ಕಿಳಿಯಲು ನಿರ್ಧರಿಸಿದೆ.ಪೂರ್ವ ಸಿದ್ಧತೆ ಕೈಗೊಳ್ಳಲು ಮುಂದಿನ ತಿಂಗಳಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಉತ್ತರ ಪ್ರದೇಶ ಪ್ರವಾಸ ಕೈಗೊಳ್ಳಲಿದ್ದಾರೆ. ಕ್ಷೇತ್ರವಾರು ಚುನಾವಣಾ ಪ್ರಚಾರ, ಸಂಸದರು, ಸಚಿವರ ಸಾಧನೆಯ ಮೌಲ್ಯಮಾಪನ, ಅಭ್ಯರ್ಥಿಗಳ ಆಯ್ಕೆ, ಚುನಾವಣೆಯ ಉಸ್ತುವಾರಿ ನೀಡುವುದು ಸೇರಿ ಹಲವು ರಾಜಕೀಯ ರಣತಂತ್ರಗಳ ಬಗ್ಗೆ ಮೂವರು ನಾಯಕರು ಸಮಾಲೋಚನೆ ನಡೆಸಲಿದ್ದಾರೆ.ಬಿಜೆಪಿ ಪಕ್ಷದ ಉನ್ನತ ಮೂಲಗಳ ಪ್ರಕಾರ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 75 ವರ್ಷ ದಾಟಿದ ಹಿರಿಯರನ್ನು ಬದಲಿಸಲು ನಾಯಕರು ನಿರ್ಧರಿಸಿದ್ದಾರೆ. ಜನರ ಕೈಗೆ ಸಿಗದ, ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡದ, ಸ್ಥಳೀಯವಾಗಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸಂಸದರನ್ನು ಕೈಬಿಟ್ಟು ಹೊಸ ಮುಖಗಳಿಗೆ ಮಣೆ ಹಾಕಲು ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/de…