ಅಖಿಲಭಾರತ ಗಾಯನ ಸ್ಪರ್ಧೆಯೊಂದರಲ್ಲಿ ಭಾಗವಹಿಸುವ ಮೂಲಕ ಮಹೇಂದ್ರ ಕಪೂರ್ ಹಿನ್ನಲೆ ಗಾಯನ ಕ್ಷೇತ್ರಕ್ಕೆ ಕಾಲಿಟ್ಟರು. ಆ ಸ್ಪರ್ಧೆಗೆ ತೀರ್ಪುಗಾರರಾಗಿದ್ದವರು ಖ್ಯಾತ ಸಂಗೀತ ನಿರ್ದೇಶಕರಾದ ನೌಶಾದ್ ಹಾಗೂ ಸಿ. ರಾಮಚಂದ್ರ. ಸ್ಪರ್ಧೆಯಲ್ಲಿ ವಿಜೇತರಾದ ಗಾಯಕನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಇಬ್ಬರೂ ನಿಶ್ಚಯಿಸಿದ್ದರಂತೆ. ಅಂತೆಯೇ 1958ರಲ್ಲಿ ನೌಶಾದ್ ಅವರು ‘ಸೊಹನೀ ಮಹಿವಾಲ್’ ಚಿತ್ರದಲ್ಲಿ ಹಾಡಿಸಿದ ‘ಚಾಂದ್ ಛುಪಾ ಔರ್ ತಾರೆ ಡೂಬೆ’ ಮಹೇಂದ್ರ ಕಪೂರ್ ಅವರ ಮೊದಲ ಹಾಡಾಯಿತು. ಆದರೆ ಚಲನಚಿತ್ರ ಸಂಗೀತ ಪ್ರೇಮಿಗಳ ನಾಲಿಗೆಯಲ್ಲಿ ಕುಣಿದಾಡಿದ್ದು ಅದೇ ವರ್ಷ ಸಿ. ರಾಮಚಂದ್ರ ಅವರು ‘ನವರಂಗ್’ ಚಿತ್ರಕ್ಕಾಗಿ ಇವರಿಂದ ಹಾಡಿಸಿದ ‘ಆದಾ ಹೈ ಚಂದ್ರಮಾ ರಾತ್ ಆದೀ, ರೆಹೆನ ಜಾಯೆ ತೇರೀಮೇರೀ ಬಾತ್ ಆದೀ ಮುಲಾಖಾತ್ ಆದೀ’. ಇದರಿಂದ ಪ್ರಭಾವಿತರಾದ ಬಿ.ಆರ್.ಚೋಪ್ರಾ ಅವರು ಎನ್ ದತ್ತಾ ಅವರ ಸಂಗೀತದ ‘ಧೂಲ್ ಕಾ ಫೂಲ್’ ಚಿತ್ರದಲ್ಲಿ ಇವರಿಗೆ ನೀಡಿದ ಅವಕಾಶ ‘ತೆರೆ ಪ್ಯಾರ್ ಕಾ ಆಸ್ರಾ ಚಾಹತಾ ಹೂಂ’ದಂತಹ ಪ್ರಸಿದ್ಧ ಹಾಡಿನ ಜನನಕ್ಕೆ ಕಾರಣವಾಗುವುದರೊಂದಿಗೆ ಬಿ.ಆರ್.ಫಿಲ್ಮ್ಸ್ ಹಾಗೂ ಮಹೇಂದ್ರ ಕಪೂರ್ ಅವರ ದೀರ್ಘಕಾಲೀನ ಸಂಬಂಧಕ್ಕೂ ನಾಂದಿಯಾಯಿತು. ಮುಂದೆ ಈ ಬ್ಯಾನರ್ ನಲ್ಲಿ ರವಿ ಅವರ ಸಂಗೀತದೊಂದಿಗೆ ಬಂದ ‘ಗುಮ್ರಾಹ್’ ಚಿತ್ರದ ‘ಚಲೊಎಕ್ ಬಾರ್ ಫಿರ್ ಸೆ’, ‘ಇನ್ ಹವಾವೊಂ ಮೆ’, ‘ಯೆ ಹವಾ ಯೆ ಹವಾ’, ‘ಆಪ್ ಆಯೇ ತೊ ಖಯಾಲೆಂ’, ‘ಹಮ್ರಾಜ್’ ಚಿತ್ರದ ‘ನೀಲೆ ಗಗನ್ ಕೆ ತಲೆ’, ‘ತುಮ್ ಅಗರ್ ಸಾಥ್ ದೆನೆ ಕಾ’, ‘ಕಿಸೀ ಪತ್ಥರ್ ಕೀ ಮೂರತ್ ಸೆ’, ‘ನ ಮುಂಹ್ ಛುಪಾಕೆ ಜಿಯೊ’ ಹಾಡುಗಳಿಂದ ಮಹೇಂದ್ರ ಕಪೂರ್ ಚಿತ್ರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದರು. ಈ ಸಂಸ್ಥೆಯ ನಿರ್ಮಾಣದ ‘ವಕ್ತ್’ ಚಿತ್ರದ ‘ದಿನ್ ಹೈ ಬಹಾರ್ ಕೆ’, ‘ಆದ್ಮೀ ಔರ್ ಇನ್ಸಾನ್’ ಚಿತ್ರದ ‘ದಿಲ್ ಕರ್ತಾ’ ಹಾಗೂ ‘ಜಿಂದಗೀ ಇತ್ತೇಫಾಕ್ ಹೈ’, ‘ಧುಂದ್’ ಚಿತ್ರದ ‘ಸಂಸಾರ್ ಕೀ ಹರ್ ಶೈಕಾ’ ಮುಂತಾದವೂ ಮರೆಯದ ಹಾಡುಗಳಾದವು. ರವಿ ಅವರು ಇತರ ಬ್ಯಾನರ್ಗಳ ಚಿತ್ರವಾದ ‘ಭರೋಸಾ’ ದಲ್ಲಿ ‘ಆಜ್ ಕೀ ಮುಲಾಕಾತ್ ಬಸ್ ಇತ್ನೀ’, ‘ಅನ್ಮೋಲ್ ಮೋತಿ’ ಯಲ್ಲಿ ‘ಏ ಜಾನೆ ಚಮನ್ ತೆರಾ ಗೋರಾ ಬದನ್’ ಮುಂತಾದ ಸುಮಧುರ ಹಾಡುಗಳನ್ನು ಇವರಿಂದ ಹಾಡಿಸಿದರು.
ಮನೋಜ್ ಕುಮಾರ್ ಅವರೊಂದಿಗೆ ಮಹೇಂದ್ರ ಕಪೂರ್ ಅವರ ನಂಟು ‘ಶಹೀದ್’ ಚಿತ್ರದ ‘ಮೆರಾ ರಂಗ್ ದೇ ಬಸಂತೀ ಚೋಲಾ’ ಹಾಡಿನೊಂದಿಗೆ ಆರಂಭವಾದರೂ ಬಲಗೊಂಡದ್ದು ‘ಉಪ್ಕಾರ್’ ಚಿತ್ರದೊಂದಿಗೆ. ಗುಲ್ಶನ್ ಬಾವ್ರಾ ರಚಿಸಿ ಕಲ್ಯಾಣ್ಜೀ ಆನಂದ್ಜೀ ಸಂಗೀತ ನೀಡಿದ ‘ಮೆರೆ ದೇಶ್ ಕೀ ಧರ್ತೀ’ ಹಾಡು ದೇಶ ಭಕ್ತಿಗೆ ಇನ್ನಿಲ್ಲದಂತೆ ಪ್ರಸಿದ್ಧಿ ಪಡೆಯಿತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: