ದೀಪಾ ಅವರ ಜನ್ಮದಿನ ಜನವರಿ 8. ಅವರು ಮೂಲತಃ ಶಿವಮೊಗ್ಗದವರು. ತಂದೆ ಕುಮಾರಸ್ವಾಮಿ ಪ್ರಾಧ್ಯಾಪಕರಾಗಿದ್ದವರು. ತಾಯಿ ಶೈಲಾ ಶಿಕ್ಷಕಿಯಾಗಿದ್ದವರು.
ಶಾಲಾ ದಿನಗಳಿಂದಲೆ ದೀಪಾ ನಾಟಕಗಳಲ್ಲಿ ಪಾತ್ರವಹಿಸುತ್ತ ಬಂದರು. ಮೈಸೂರಿನಲ್ಲಿ ಬಿ.ಎಸ್ಸಿ ಪದವಿ ಪಡೆದರು. ಜೊತೆ ಜೊತೆಗೆ ಕರ್ನಾಟಕ ಶಾಸ್ತ್ರೀಯ ಮತ್ತು ಭರತನಾಟ್ಯದ ಸಾಧನೆಗಳನ್ನೂ ಗೀತಾ ದಾತರ್, ಡಾ. ವಸುಂಧರಾ ದೊರೆಸ್ವಾಮಿ ಅಂತಹ ಮಹಾನ್ ಗುರುಗಳ ಮಾರ್ಗದರ್ಶನದಲ್ಲಿ ಗಳಿಸಿದರು. ದೀಪಾ ಅವರು ರವಿಶಂಕರ್ ಅವರನ್ನು ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆಸಿದ ನಂತರದಲ್ಲಿ ‘ಅನೇಕ’ ರಂಗತಂಡದೊಂದಿಗೆ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು ಅನೇಕ ನಾಟಕಗಳಲ್ಲಿ ಅಭಿನಯಿಸುತ್ತ ಬಂದಿದ್ದಾರೆ. ಅವರು ಅಭಿನಯಿಸಿರುವ ನಾಟಕಗಳ ಸಂಖ್ಯೆಯೇ ಸುಮಾರು ನೂರರಷ್ಟು.
ದೀಪಾ ಕಿರುತೆರೆಯ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯ ಮಮತಾಮಯಿ ‘ಪಾರ್ವತಿ’ಯಾಗಿ ಎಲ್ಲ ಮನೆಗಳ ಮನತುಂಬಿದವರು. ಅವರು ಮೊಟ್ಟ ಮೊದಲು ಕ್ಯಾಮೆರಾ ಎದುರಿಸಿದ್ದು ಪಿ ಶೇಷಾದ್ರಿಯವರ ಧಾರಾವಾಹಿಯಲ್ಲಿ ಪುಟ್ಟ ಪಾತ್ರವೊಂದರಲ್ಲಿ. ‘ಕದನ’ ಧಾರಾವಾಹಿಯಿಂದ ಅವರ ಪಾತ್ರಗಳ ವ್ಯಾಪ್ತಿ ಹಿರಿದಾಗಿ ಹಲವಾರು ಹೆಸರಾಂತ ಧಾರಾವಾಹಿಗಳಲ್ಲಿ ನಟಿಸುತ್ತ ಬಂದಿದ್ದಾರೆ. ಇತರ ಭಾಷೆಯ ಕಿರುತೆರೆಯ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ. ಹಲವಾರು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.
ಬರಹಗಾರ್ತಿಯಾಗಿ ದೀಪಾ ರವಿಶಂಕರ್ ಅವರ ಬರಹಗಳು ಅನೇಕ ನಿಯತಕಾಲಿಕಗಳಲ್ಲಿ ಮೂಡಿವೆ. ಅವರ ‘ಕಾಮನಬಿಲ್ಲು’ ಅಂತಹ ಅಂಕಣವೂ ಜನಪ್ರಿಯ.
ದೀಪಾ ರವಿಶಂಕರ್ ಅವರ ಪ್ರತಿಭೆ ಎಲ್ಲೋ ಒಂದೇ ನೆಲೆಯಲ್ಲಿ ನಿಲ್ಲದೆ ವಿವಿಧ ನೆಲೆಗಳಲ್ಲಿ ಹರಿದಿರುವುದಕ್ಕೆ ಅವರ ‘ಕಗ್ಗಮಾರ್ಗ’ ವಿಡಿಯೋ ಪ್ರಸ್ತುತಿ ಒಂದು ಉದಾಹರಣೆ. ಈ ಕುರಿತು ದೀಪಾ ಅವರು “ಡಿವಿಜಿಯವರ ಮಂಕುತಿಮ್ಮನ ಕಗ್ಗ ನನ್ನನ್ನು ಯಾವಾಗಲೂ ಒಂದು ಅಚ್ಚರಿಯ ಸ್ಥಿತಿಯಲ್ಲೇ ಇಟ್ಟಿದೆ. 80 ವರ್ಷಗಳ ನಂತರವೂ ಇವತ್ತಿಗೂ ಪ್ರಸ್ತುತವಾಗಿರುವ ಕಗ್ಗವನ್ನು ಇವತ್ತಿನ ಕಾಲಕ್ಕೆ ಹೊಂದಿಸಿ ವ್ಯಾಖ್ಯಾನಿಸುವ ಹೊಸ ಪ್ರಯೋಗಕ್ಕೆ ತೊಡಗಿದ್ದೇನೆ.” ಎನ್ನುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: