ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸ್ಥಳೀಯ ಕೋರ್ಟ್ ಆದೇಶಿಸಿದೆ. ಇಲ್ಲಿನ ಪೊಲೀಸ್ ಮಾರ್ಗದಲ್ಲಿರುವ ಅಪರಾಧ ವಿಭಾಗದಲ್ಲಿ ಶನಿವಾರ ಹಾಜರಾದ ಅವರನ್ನುಎಸ್ಐಟಿ ಅಧಿಕಾರಿಗಳು 12 ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದರು. ನಂತರ, ತಡರಾತ್ರಿ ಅವರನ್ನು ಸ್ಥಳೀಯ ಕೋರ್ಟ್ಗೆ ಹಾಜರುಪಡಿಸಿದರು. ಕೋರ್ಟ್ ಗೂ ಹಾಜರುಪಡಿಸುವುದಕ್ಕೂ ಮೊದಲು ವೈದ್ಯರ ತಂಡವೊಂದು ಆಶಿಶ್ ಮಿಶ್ರಾ ಅವರ ಆರೋಗ್ಯ ತಪಾಸಣೆ ನಡೆಸಿತು ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ ಎಸ್.ಪಿ.ಯಾದವ್ ತಿಳಿಸಿದ್ದಾರೆ. ಆಶಿಶ್ ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಅಕ್ಟೋಬರ್.11 ಬೆಳಿಗ್ಗೆ 11ಕ್ಕೆ ಕೋರ್ಟ್ ಈ ಅರ್ಜಿ ವಿಚಾರಣೆ ನಡೆಸಲಿದೆ‘ ಎಂದೂ ಅವರು ತಿಳಿಸಿದರು.