ಲಖನೌ: ಪ್ರಧಾನಿ ನರೇಂದ್ರ ಮೋದಿ ಅವರ ರ್ಯಾಲಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಮಂಗಳವಾರ ಆಯೋಜನೆ ಆಗಿದೆ. ರ್ಯಾಲಿಗೆ ಸುಮಾರು 75 ಸಾವಿರ ಜನರನ್ನು ಕರೆತರುವಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ಕಾನ್ಪುರದ ಜಿಲ್ಲಾಡಳಿತ ಅಧಿಕೃತ ಸೂಚನೆ ನೀಡಿದೆ.
ಮೋದಿ ಅವರು ಕಾನ್ಪುರದ ಮೆಟ್ರೊ ರೈಲು ಉದ್ಘಾಟಿಸಿದ ಬಳಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ.
ಆರೋಗ್ಯ, ಆಹಾರ, ತೋಟಗಾರಿಕೆ, ಸಮಾಜ ಕಲ್ಯಾಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಮತ್ತು ಇತರ ಇಲಾಖೆಗಳಿಗೆ ಸುತ್ತೋಲೆ ಕಳುಹಿಸಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳು, ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಪಂಚಾಯಿತಿ ಸಹಾಯಕರು ಹಾಗೂ ಇತರರು ಸಭೆಯಲ್ಲಿ ಹಾಜರಿರಬೇಕು ಎಂದು ಜಿಲ್ಲಾಧಿಕಾರಿಯವರು ಸುತ್ತೋಲೆಯಲ್ಲಿ ಸೂಚಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಳ್ಳುವವರಿಗೆ ಸಾರಿಗೆ, ಆಹಾರ ಮತ್ತು ವಸತಿ ವ್ಯವಸ್ಥೆ ಮಾಡಬೇಕು ಎಂದು ಹೇಳಲಾಗಿದೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಪ್ರಯಾಗ್ರಾಜ್ನಲ್ಲಿ ನಡೆಸಿದ ರ್ಯಾಲಿಯಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳಬೇಕು ಎಂದು ಪ್ರಯಾಗ್ರಾಜ್ ಜಿಲ್ಲಾಡಳಿತ ಸೂಚಿಸಿತ್ತು. ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಮೋದಿ ಅವರ ಸಭೆಗಳ ವೇಳೆಯೂ ಜನರನ್ನು ಸರ್ಕಾರವೇ ಕರೆತಂದಿತ್ತು ಎಂಬ ವರದಿಗಳು ಇವೆ.
ಪಕ್ಷದ ರ್ಯಾಲಿಗಳಿಗಾಗಿ ಸರ್ಕಾರದ ಇಲಾಖೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ವಿಪಕ್ಷಗಳು ಟೀಕಿಸಿವೆ. ಪ್ರಯಾಗ್ರಾಜ್ನಲ್ಲಿ ಆಯೋಜಿಸಲಾಗಿದ್ದ ಸಭೆಯಲ್ಲಿ ಜನರನ್ನು ಸೇರಿಸಲು ಸರ್ಕಾರದ ಇಲಾಖೆಗಳನ್ನು ಬಿಜೆಪಿ ಬಳಸಿಕೊಂಡಿದೆ ಎಂದು ಸಮಾಜವಾದಿ ಪಕ್ಷ (ಎಸ್ಪಿ) ಆರೋಪಿಸಿದೆ. ಅಲ್ಲದೇ, ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಉತ್ತರ ಪ್ರದೇಶದಲ್ಲಿ ಚುನಾವಣೆಗಳು ನ್ಯಾಯಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಆಯೋಗಕ್ಕೆ ಎಸ್ಪಿ ಮನವಿ ಮಾಡಿದೆ. ಪ್ರಧಾನಿ ಸಭೆ ನಡೆಯುವ ಸ್ಥಳಕ್ಕೆ ಜನರನ್ನು ಕರೆದೊಯ್ಯಲು ಪ್ರಾದೇಶಿಕ ಸಾರಿಗೆ ಕಚೇರಿಯ ಸಹಾಯ ಪಡೆದು ಸಾವಿರಾರು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳನ್ನು ನಿಯೋಜನೆ ಮಾಡಲಾಗಿದೆ. ಮುಖ್ಯಮಂತ್ರಿಯೇ ಸರ್ಕಾರಿ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಬಿಜೆಪಿಯನ್ನು ಟೀಕಿಸಿದ್ದಾರೆ. ಸರ್ಕಾರದ ಸಂಪನ್ಮೂಲಗಳನ್ನು ಬಳಿಸಿಕೊಂಡು ಮೋದಿ ರ್ಯಾಲಿಗಳಿಗೆ ಜನರನ್ನು ಸೇರಿಸಲಾಗುತ್ತಿದೆ. ಬಿಜೆಪಿ ಪ್ರಾಮಾಣಿಕವಾಗಿ ಸಾರ್ವಜನಿಕ ಸಮಾವೇಶವನ್ನು ಎಂದಾದರೂ ನಡೆಸಿದೆಯೇ ಎಂದು ಕೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: