ನಿಗೂಢವಾಗಿ ಕಣ್ಮರೆಯಾಗಿದ್ದ ಕೋಣನಕುಂಟೆ ನಿವಾಸಿ ಶರತ್ (26) ಕೊಲೆಯ ಮಿಸ್ಟ್ರಿಯಿದು. ಒಂದು ವಾರದ ಹಿಂದೆ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಕಚೇರಿಗೆ ಅನಾಮಧೇಯ ಪತ್ರ ಕೊಲೆ ರಹಸ್ಯ ಭೇದಿಸಲು ನೆರವಾಗಿದೆ. ಅನಾಮಧೇಯ ಪತ್ರವನ್ನೇ ಗಂಭೀರವಾಗಿ ಪರಿಗಣಿಸಿದ ಎಸಿಪಿ ಡಿ.ಎಸ್. ರಾಜೇಂದ್ರ, ಇನ್ಸ್ಪೆಕ್ಟರ್ ಸಿ.ಜೆ. ಚೈತನ್ಯ ನೇತೃತ್ವದ ತಂಡ ಸುಮೋಟೋ ಪ್ರಕರಣ ದಾಖಲಿಸಿಕೊಂಡಿತ್ತು. ಬಳಿಕ ಚಿಕ್ಕಬಳ್ಳಾಪುರ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಚಳವಳಿ ಚಲಪತಿಗೌಡ, ಆತನ ಪುತ್ರ ಶರತ್ ಕುಮಾರ್, ಶ್ರೀಧರ್, ಧನುಷ್, ಎ.ಪಿ ಮಂಜುನಾಥನನ್ನು ಬಂಧಿಸಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ತನಿಖಾ ತಂಡ ಬಲೆ ಬೀಸಿದೆ.ಕೋಣನಕುಂಟೆ ನಿವಾಸಿ, ಶರತ್ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ. ಸರಕಾರಿ ಯೋಜನೆಗಳ ಸೌಲಭ್ಯ ಕೊಡಿಸುವುದಾಗಿ ಹಲವರಿಂದ ಸುಮಾರು 20 ಲಕ್ಷ ರೂ.ಗಳಿಗೂ ಅಧಿಕ ಹಣ ಪಡೆದಿದ್ದ. ಆದರೆ, ಯಾರಿಗೂ ಕೊಟ್ಟ ಮಾತಿನಂತೆ ಸೌಲಭ್ಯ ಕೊಡಿಸಿರಲಿಲ್ಲ. ಹೀಗಾಗಿ, ಯಲಹಂಕದ ಮಂಜುನಾಥ್ ಸೇರಿ ಹಲವರು ಈ ವಿಚಾರವನ್ನು ಚಲಪತಿ ಗೌಡನಿಗೆ ತಿಳಿಸಿದ್ದರು.ತಂದೆ ಚಲಪತಿ ಸೂಚನೆ ಮೇರೆಗೆ ಶರತ್ ಕುಮಾರ್ ಮತ್ತು ಆತನ ಸ್ನೇಹಿತರು ಮಾರ್ಚ್ನಲ್ಲಿ ಬನಶಂಕರಿಯಲ್ಲಿ ಶರತ್ನನ್ನು ಅಪಹರಿಸಿದ್ದರು. ಬಳಿಕ ಗೌರಿಬಿದನೂರಿನ ತೋಟದ ಮನೆ ಹಾಗೂ ವಾಟದ ಹೊಸಹಳ್ಳಿಯ ಮಾವಿನ ತೋಪಿನಲ್ಲಿ ಶರತ್ನನ್ನು ಅರೆ ಬೆತ್ತಲೆ ಮಾಡಿ ಚಿತ್ರಹಿಂಸೆ ಕೊಟ್ಟಿದ್ದರು. ಆರೇಳು ದಿನ ಅಮಾನುಷ ದೈಹಿಕ ಹಿಂಸೆ ಕೊಟ್ಟಿದ್ದರಿಂದ ಶರತ್ ಮೃತ ಪಟ್ಟಿದ್ದ. ಬಳಿಕ ಆರೋಪಿಗಳು ಶರತ್ನ ಮೃತದೇಹವನ್ನು ಗೋಣಿಚೀಲದಲ್ಲಿ ಕಟ್ಟಿಕೊಂಡು ಚಾರ್ಮಾಡಿ ಘಾಟ್ಗೆ ತೆರಳಿ ಎಸೆದು ಬಂದಿದ್ದರು ಎಂಬ ವಿಚಾರ ತನಿಖೆಯಿಂದ ಗೊತ್ತಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada