ಕಲಬುರಗಿ: ಸರ್ಕಾರಿ ನೌಕರ ವಿರೋಧಿಯಾದ ಎನ್ಪಿಎಸ್ ಯೋಜನೆಯನ್ನು ರದ್ದುಗೊಳಿಸಬೇಕು. ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು, 7ನೇ ವೇತನ ಆಯೋಗ ರಚನೆ ಮಾಡಬೇಕು ಎಂಬುದೂ ಸೇರಿದಂತೆ ಹಲವು ಪ್ರಮುಖ ಬೇಡಿಕೆಗಳನ್ನು 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಕಟಿಸಬೇಕು ಎಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಮಹದೇವಯ್ಯ ಮಠಪತಿ ಆಗ್ರಹಿಸಿದರು.ನಗರದಲ್ಲಿ ಶನಿವಾರ ನಡೆದ ಒಕ್ಕೂಟದ ಸಭೆಯಲ್ಲಿ ಮಾತನಾಡಿದ ಅವರ, ‘1.4.2006ರಿಂದ ರಾಜ್ಯದಲ್ಲಿ ಜಾರಿಗೆ ತರಲಾಗಿರುವ ಪಿ.ಎಫ್.ಆರ್.ಡಿ.ಎ ಕಾಯ್ದೆ ಪ್ರಾಯೋಜಿತ ಎನ್.ಪಿ.ಎಸ್ ಯೋಜನೆಯಿಂದಾಗಿ ರಾಜ್ಯ ಸರ್ಕಾರಿ ನೌಕರರಿಂದ ನಿಶ್ಚಿತ ಪಿಂಚಣಿಯನ್ನು ಕಸಿದುಕೊಳ್ಳಲಾಗಿರುತ್ತದೆ’ ಎಂದರು.’ಎನ್.ಪಿ.ಎಸ್ ಯೋಜನೆಯಡಿ ಸಂಗ್ರಹವಾಗುವ ಶೇ 10ರಷ್ಟು ನೌಕರರ ವಂತಿಕೆ ಮತ್ತು ಶೇ 12ರಷ್ಟು ಸರ್ಕಾರದ ವಂತಿಕೆಯನ್ನು ಪಿ.ಎಫ್.ಆರ್.ಡಿ. ಎ ಸಂಸ್ಥೆಯು ಫಂಡ್ ಮ್ಯಾನೇಜರುಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸುತ್ತಿದೆ. ಸರ್ಕಾರಿ ನೌಕರರ ಹಣ ಖಾಸಗಿ ಷೇರು ಖರೀದಿಗೆ ವಿನಿಯೋಗವಾಗುತ್ತಿದೆ’ ಎಂದೂ ಅವರು ದೂರಿದರು.’ನಿವೃತ್ತ ನೌಕರರಿಗೆ, ಮರಣ ಹೊಂದಿರುವ ನೌಕರರ ಕುಟುಂಬಕ್ಕೆ ಮಾಸಿಕ ಪಿಂಚಣಿ ಕೇವಲ ₹ 2,000 ದಿಂದ ₹ 3,000 ಮಾತ್ರವೇ ಬರುತ್ತಿದೆ. ಇದು ಮನೆಯ ಬಾಡಿಗೆ, ವಿದ್ಯುತ್ ಮತ್ತು ನೀರಿನ ಶುಲ್ಕ ಕಟ್ಟಲು ಸಾಕಾಗುತ್ತಿಲ್ಲ. ಈಗಾಗಲೇ ಕೆಲವು ರಾಜ್ಯಗಳಲ್ಲಿ ಇದನ್ನು ತೆಗೆದುಹಾಕಲಾಗಿದೆ. ಈ ಹಿನ್ನೆಲೆಯಲ್ಲಿ 1.4.2006ರಿಂದ ನೇಮಕಗೊಂಡ ಎಲ್ಲ ನೌಕರರಿಗೆ ಎನ್.ಪಿ.ಎಸ್ ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಮರುಸ್ಥಾಪಿಸಬೇಕು’ ಎಂದು ಆಗ್ರಹಿಸಿದರು.ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದ ಅಧ್ಯಕ್ಷ ಎನ್.ಇ.ನಟರಾಜ, ಕಾರ್ಯಾಧ್ಯಕ್ಷ ಶೋಭಾ ಲೋಕನಾಗಣ್ಣ, ಪ್ರಧಾನ ಕಾರ್ಯದರ್ಶಿ ಜೈಕುಮಾರ ಎಚ್.ಎಸ್., ಕಾರ್ಯದರ್ಶಿ ಎಸ್.ಅಭಿಜಿತ್, ಜಿಲ್ಲಾ ಘಟಕದ ಅಧ್ಯಕ್ಷ ಶರಣಗೌಡ ಪಾಟೀಲ, ಕಾರ್ಯದರ್ಶಿ ಪ್ರೇಮಾನಂದ, ಮಹಾವೀರ ಕಾಸರ ಹಾಗೂ ಪದಾಧಿಕಾರಿಗಳು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada