ನವದೆಹಲಿ: ಪ್ರವಾದಿ ಮುಹಮ್ಮದ್ ಬಗ್ಗೆ ಕಾಮೆಂಟ್ ಮಾಡಿ ದೇಶಾದ್ಯಂತ ಮಾತ್ರವಲ್ಲದೆ, ಗಲ್ಫ್ ರಾಷ್ಟ್ರಗಳಲ್ಲೂ ಆಕ್ರೋಶದ ಕಿಡಿ ಹೊತ್ತಿಸಿ, ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾರನ್ನು ಶುಕ್ರವಾರ (ಜುಲೈ 1) ತರಾಟೆಗೆ ತೆಗೆದುಕೊಂಡ ಸುಪ್ರೀಂಕೋರ್ಟ್, ಕೂಡಲೇ ದೇಶದ ಜನತೆಯ ಮುಂದೆ ಕ್ಷಮೆಯಾಚಿಸಬೇಕೆಂದು ಸೂಚನೆ ನೀಡಿದೆ.
ಅಲ್ಲದೆ, ದೇಶದಲ್ಲಿ ಈಗ ಏನು ನಡೆಯುತ್ತಿದೆಯೋ ಅದಕ್ಕೆ ಆಕೆಯೇ ಹೊಣೆ ಎಂದು ಉನ್ನತ ನ್ಯಾಯಾಲಯದ ಹೇಳಿದೆ.
ಅವರನ್ನು (ನೂಪುರ್ ಶರ್ಮಾ) ಹೇಗೆ ಪ್ರಚೋದಿಸಲಾಯಿತು ಎಂಬ ಮಾಧ್ಯಮ ಚರ್ಚೆಯನ್ನು ನಾವು ಕೂಡ ನೋಡಿದ್ದೇವೆ. ಆದರೆ, ಅದಕ್ಕೆ ಆಕೆ ಪ್ರತಿಕ್ರಿಯಿಸಿದ ರೀತಿ ಮತ್ತು ತಾನೂ ಕೂಡ ವಕೀಲೆ ಎಂದು ಹೇಳಿಕೊಂಡಿದ್ದು ನಾಚಿಕೆಗೇಡಿನ ಸಂಗತಿಯಾಗಿದೆ. ಇಡೀ ದೇಶದ ಜನತೆಯ ಮುಂದೆ ಆಕೆ ಕ್ಷಮೆಯಾಚಿಸಲೇಬೇಕು ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದ್ದಾರೆ.
ತನ್ನ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸಲು ಕೋರಿ ಸುಪ್ರಿಂಕೋರ್ಟ್ಗೆ ನೂಪುರ್ ಶರ್ಮಾ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಪ್ರತಿಕ್ರಿಯಿಸಿ, ತರಾಟೆಗೆ ತೆಗೆದುಕೊಂಡಿತು. ಜೀವ ಬೆದರಿಕೆ ಇರುವುದರಿಂದ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಹಿಸಲು ನೂಪುರ್ ಶರ್ಮಾ ಕೇಳಿಕೊಂಡಿದ್ದಾರೆ ಎಂದು ಅವರ ಪರ ವಕೀಲ ಸಿಂಗ್ ಕೋರ್ಟ್ ಮುಂದೆ ವಿವರಿಸಿದರು.
ದೇಶಾದ್ಯಂತ ಭಾವನೆಗಳನ್ನು ಪ್ರಚೋದಿಸಿದ ಕಾರಣದಿಂದ ಅವರು (ನೂಪುರ್ ಶರ್ಮಾ) ಬೆದರಿಕೆಗಳನ್ನು ಎದುರಿಸುತ್ತಿರಬಹುದು ಅಥವಾ ಭದ್ರತಾ ಬೆದರಿಕೆಗೆ ಒಳಗಾಗಿರಬಹುದು. ಇಂದು ದೇಶದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ಅವರೇ ಕಾರಣ ಎಂದು ಹೇಳುವ ಮೂಲಕ ಆಕೆಯ ಮನವಿಯನ್ನು ಕೋರ್ಟ್ ವಜಾಗೊಳಿಸಿತು. ಈ ಸಂಬಂಧ ಯಾವುದೇ ಪರಿಹಾರವನ್ನು ಪಡೆಯಲು ಹೈಕೋರ್ಟ್ ಅನ್ನು ಸಂಪರ್ಕಿಸುವಂತೆ ಹೇಳಿತು.
ನೂಪುರ್ ಶರ್ಮಾ ಅವರು ಯಾವ ಸಂದರ್ಭಗಳಲ್ಲಿ ಕಾಮೆಂಟ್ ಮಾಡಿದ್ದಾರೆ ಎಂದು ವಕೀಲ ಸಿಂಗ್ ಸುಪ್ರೀಂಕೋರ್ಟ್ ವಿವರಿಸಲು ಪ್ರಯತ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸುಪ್ರಿಂಕೋರ್ಟ್, ಈ ಪ್ರಜಾಪ್ರಭುತ್ವದಲ್ಲಿ ಹುಲ್ಲು ಕೂಡ ಬೆಳೆಯಬೇಕು ಮತ್ತು ಅದನ್ನು ತಿನ್ನುವ ಹಕ್ಕು ಕತ್ತೆಗೆ ಇದೆ. ಹಾಗಂತ ಬೇಕಾಬಿಟ್ಟಿ ಬಿಡಲಾಗುವುದಿಲ್ಲ, ನಿಯಂತ್ರಣವೂ ಇರಬೇಕು. ಅದೇ ರೀತಿ ನೀವು ಏನು ಬೇಕಾದರೂ ಹೇಳಬಹುದು ಎಂದಲ್ಲ. ಸ್ವಲ್ಪ ನಿಯಂತ್ರಣ ಇರಬೇಕು ಎಂದು ಸುಪ್ರೀಂಕೋರ್ಟ್ ಬುದ್ಧಿಮಾತು ಹೇಳಿತು.
ಈಗಾಗಲೇ ನೂಪುರ್ ಶರ್ಮಾ ಕ್ಷಮೆಯಾಚಿಸಿ ತನ್ನ ಕಾಮೆಂಟ್ಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ವಕೀಲ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂಕೋರ್ಟ್, ಅವರು ಟಿವಿಗೆ ಹೋಗಿ ರಾಷ್ಟ್ರದ ಕ್ಷಮೆ ಕೇಳಬೇಕಿತ್ತು. ಹೇಳಿಕೆಯನ್ನು ಹಿಂತೆಗೆದುಕೊಳ್ಳಲು ತುಂಬಾ ತಡವಾಗಿದೆ. ಇವರು ಯಾವುದೇ ಧಾರ್ಮಿಕ ವ್ಯಕ್ತಿಗಳಲ್ಲ, ಆದರೂ ಪ್ರಚೋದಿಸುವ ಹೇಳಿಕೆಗಳನ್ನು ನೀಡುತ್ತಾರೆ ಎಂದು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿತು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada