ಪಾಟ್ನಾ, ಏಪ್ರಿಲ್. 30: ಕರ್ನಾಟಕ ವಿಧಾನಸಭಾ ಚುನಾವಣೆಯ ನಂತರ ಪಾಟ್ನಾದಲ್ಲಿ ಪ್ರತಿಪಕ್ಷ ನಾಯಕರ ಸಭೆ ನಡೆಯಬಹುದು ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸುಳಿವು ನೀಡಿದ್ದಾರೆ. ಶನಿವಾರವಷ್ಟೇ ನಿತೀಶ್ ಕುಮಾರ್, ಆರ್ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರನ್ನು ಭೇಟಿಯಾಗಿದ್ದರು.
ಸಿಂಗಾಪುರದಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡ ಏಳು ತಿಂಗಳ ನಂತರ ಲಾಲು ಶುಕ್ರವಾರ ಸಂಜೆ ರಾಜ್ಯ ರಾಜಧಾನಿಗೆ ಮರಳಿದ್ದಾರೆ.
ಮುಂಬರುವ 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಸವಾಲು ಹಾಕಲು ನಾವು ಖಂಡಿತವಾಗಿಯೂ ಸಭೆ ನಡೆಸುತ್ತೇವೆ ಮತ್ತು ಪ್ರತಿಪಕ್ಷಗಳ ಐಕ್ಯತೆಗೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸುತ್ತೇವೆ ಎಂದು ಸಿಎಂ ನಿತೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಮುಗಿದ ನಂತರ, ಸ್ಥಳದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು. ಅನೇಕ ನಾಯಕರು ಚುನಾವಣಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಪಾಟ್ನಾದಲ್ಲಿ ಸಭೆ ನಡೆಸಲು ವಿರೋಧ ಪಕ್ಷದ ನಾಯಕರು ಒಮ್ಮತಕ್ಕೆ ಬಂದರೆ ಇಲ್ಲಿಯೇ ನಡೆಯಲಿದೆ. ಪಾಟ್ನಾದಲ್ಲಿ ಸಭೆ ಆಯೋಜಿಸುವ ಅವಕಾಶ ಸಿಕ್ಕರೆ ಅದು ನಮಗೆ ಸಂತಸದ ಸಂಗತಿ” ಎಂದಿದ್ದಾರೆ.
ಈ ಹಿಂದೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರನ್ನು ಏಪ್ರಿಲ್ 24 ರಂದು ಕೋಲ್ಕತ್ತಾದಲ್ಲಿ ಭೇಟಿಯಾಗಿದ್ದರು. ಈ ವೇಳೆ ವಿರೋಧ ಪಕ್ಷದ ಒಗ್ಗಟ್ಟಿಗಾಗಿ ಕಾರ್ಯತಂತ್ರವನ್ನು ರೂಪಿಸಲು ರಾಜ್ಯ ರಾಜಧಾನಿಯಲ್ಲಿ ಎಲ್ಲಾ ಬಿಜೆಪಿಯೇತರ ಪಕ್ಷಗಳ ಸಭೆಯನ್ನು ಆಯೋಜಿಸುವಂತೆ ನಿತೀಶ್ ಕುಮಾರ್ ಅವರಿಗೆ ಮನವಿ ಮಾಡಿದ್ದರು.
ತೇಜಸ್ವಿ ಯಾದವ್ ಭೇಟಿಯ ನಂತರ, ಮಾತನಾಡಿದ್ದ ಮಮತಾ ಬ್ಯಾನರ್ಜಿ ಅವರು ನಿತೀಶ್ ಕುಮಾರ್ಗೆ ಕೇವಲ ಒಂದು ವಿನಂತಿಯನ್ನು ಮಾಡಿದ್ದೇನೆ ಎಂದು ಹೇಳಿದರು. “ರಾಜ್ಯದಿಂದ ಜಯಪ್ರಕಾಶ್ ನಾರಾಯಣ್ ಜಿ ಅವರ ಚಳುವಳಿ ಪ್ರಾರಂಭವಾಗಿರುವುದರಿಂದ ಬಿಹಾರದಲ್ಲಿ ಸರ್ವಪಕ್ಷ ಸಭೆ ನಡೆಸುವ ಬಗ್ಗೆ ಯೋಚಿಸುವಂತೆ ತಿಳಿಸಿದ್ದೇನೆ. ಬಿಹಾರದಲ್ಲಿ ಸರ್ವಪಕ್ಷ ಸಭೆ ನಡೆದರೆ, ನಾವು ಮುಂದೆ ಎಲ್ಲಿಗೆ ಹೋಗಬೇಕು ಎಂಬುದನ್ನು ನಾವು ನಿರ್ಧರಿಸಬಹುದು” ಎಂದಿದ್ದರು.
ಈ ಬೆಳವಣಿಗೆ ನಂತರ ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದ್ದರು. ಈ ತಿಂಗಳ ಆರಂಭದಲ್ಲಿ, ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಎಡ ನಾಯಕರಾದ ಸೀತಾರಾಮ್ ಯೆಚೂರಿ ಮತ್ತು ಡಿ ರಾಜಾ ಅವರನ್ನು ಭೇಟಿ ಮಾಡಿದ್ದರು.
ಕರ್ನಟಕ ಚುನಾವಣೆ ನಂತರ ಪಾಟ್ನಾದಲ್ಲಿ ನಡೆಯಲಿರುವ ಸಭೆಯಲ್ಲಿ, ಅದಾನಿ ವಿವಾದ, ಕೇಂದ್ರದ ಸಂಸ್ಥೆಗಳ ದುರ್ಬಳಕೆ ಮತ್ತು ರಾಹುಲ್ ಗಾಂಧಿಯ ಅನರ್ಹತೆಯ ಬಗ್ಗೆ ಪ್ರತಿಪಕ್ಷಗಳು ಚರ್ಚಿಸಲಿದ್ದಾರೆ. ಕಾಂಗ್ರೆಸ್ನೊಂದಿಗೆ ಉತ್ತಮ ಸಂಬಂಧವಿಲ್ಲದ ಟಿಎಂಸಿ, ಬಿಆರ್ಎಸ್ ಮತ್ತು ಎಸ್ಪಿಯಂತಹ ಪಕ್ಷಗಳೊಂದಿಗೆ ಬಿಹಾರ ಸಿಎಂ ಸಂವಾದ ನಡೆಸಲಿದ್ದಾರೆ ಎಂದು ನಿರ್ಧರಿಸಲಾಗಿದೆ.
2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮೈತ್ರಿಯನ್ನು ಸ್ಥಾಪಿಸಲು ನಿತೀಶ್ ಕುಮಾರ್ ಅವರು ಒಡಿಶಾ ಮತ್ತು ತೆಲಂಗಾಣಕ್ಕೂ ಭೇಟಿ ನೀಡಲಿದ್ದಾರೆ ಎಂದು ಜೆಡಿ (ಯು) ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. ಆದರೆ, ಸಭೆಯ ದಿನಾಂಕಗಳು ಇನ್ನೂ ನಿರ್ಧಾರವಾಗಿಲ್ಲ. ಪ್ರತಿಪಕ್ಷಗಳ ಏಕತೆಗೆ ನಿತೀಶ್ ಪದೇ ಪದೇ ಒತ್ತು ನೀಡುತ್ತಿದ್ದಾರೆ.
https://play.google.com/store/apps/details?id=com.speed.newskannada