ಲೋಕಸಭೆಯ ಕಾರ್ಯಕಲಾಪಗಳನ್ನು ನಡೆಸುವುದು ಅತ್ಯಂತ ಕಷ್ಟದ ಕೆಲಸ. ತುಂಟ ಹುಡುಗರ ಶಾಲಾ ಕೊಟಡಿಯಲ್ಲಿ ಹೆಚ್ಚೆಂದರೆ 60-70 ವಿದ್ಯಾರ್ಥಿಗಳನ್ನು ಶಿಸ್ತು , ಸಂಯಮ, ಉತ್ತಮ ಅಧ್ಯಾಪನ ಶಕ್ತಿ ಉಳ್ಳಂತಹ ಉಪಾಧ್ಯಾಯರುಗಳು ಮಾತ್ರವೇ ಸಮರ್ಥವಾಗಿ ನಿರ್ವಹಿಸಲು ಸಾಧ್ಯ. ಇನ್ನು ಲೋಕಸಭೆಯ ಗದ್ದಲವನ್ನು ನೋಡಿದರೆ ಯಮಧರ್ಮನಿಗೂ ಕೆಲವು ಸಲ ನಿಭಾಯಿಸಲು ಕಷ್ಟವೇನೋ ಅನಿಸುತ್ತೆ. ದೂರದರ್ಶನದಲ್ಲಿ ಲೋಕಸಭೆಯ ಕಾರ್ಯಕಲಾಪಗಳು ಕಾಣತೊಡಗಿದ ನಂತರದಲ್ಲಿ, ಹೀಗೆ ಅತ್ಯಂತ ತಾಳ್ಮೆ, ನಸು ನಗೆ ಮತ್ತು ಚಾಕಚಕ್ಯತೆಗಳಿಂದ ಲೋಕಸಭೆಯನ್ನು ನಿರ್ವಹಿಸಿದವರಾಗಿ ಪಿ. ಎ. ಸಂಗ್ಮಾ ನೆನಪಲ್ಲಿ ಉಳಿದವರಾಗಿದ್ದಾರೆ.
ಲೋಕಸಭಾ ಸ್ಪೀಕರ್ ಆಗಿ, ಹಿರಿಯ ಸಂಸದೀಯ ಪಟುವಾಗಿ, ಮೇಘಾಲಯದ ಮುಖ್ಯಮಂತ್ರಿಗಳಾಗಿ, ಕೇಂದ್ರ ಸರ್ಕಾರದ ವಿವಿಧ ಖಾತೆಗಳ ಸಚಿವರಾಗಿ ವಿವಿಧ ರೀತಿಗಳಲ್ಲಿ ಪಿ. ಎ. ಸಂಗ್ಮಾ ರಾಜಕೀಯದಲ್ಲಿದ್ದವರು.
ಪಿ. ಎ. ಸಂಗ್ಮಾ ಅವರು ಮೇಘಾಲಯದ ಗಾರೋ ಹಿಲ್ಸ್ ಜಿಲ್ಲೆಯಲ್ಲಿರುವ ಚಪಾಹಟಿ ಗ್ರಾಮದ ಬಡ ಕುಟುಂಬವೊಂದರಲ್ಲಿ 1947 ಸಪ್ಟೆಂಬರ್ 1ರಂದು ಜನಿಸಿದರು. ಹಿಂದುಳಿದ ರಾಜ್ಯದ ಹಳ್ಳಿಯ ಬಡಕುಟುಂಬದಲ್ಲಿ ಜನಿಸಿದ ಒಬ್ಬ ಹುಡುಗ ಸ್ಪೀಕರ್ನಂತಹ ಉನ್ನತ ಸ್ಥಾನವನ್ನು ಅಲಂಕರಿಸಿ, ರಾಷ್ಟ್ರಪತಿ ಸ್ಥಾನಕ್ಕೂ ಪೈಪೋಟಿ ನೀಡಿದ್ದ ಮತ್ತು ಅದಕ್ಕೂ ಸಮರ್ಥನಿದ್ದ ಎಂಬುದು ಮಹತ್ವದ ವಿಷಯ.ಸಂಗ್ಮಾ ಅವರು ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅಧ್ಯಾಪಕರಾಗಿ, ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 1988 -1990 ಅವಧಿಯಲ್ಲಿ ಮೇಘಾಲಯದ ಮುಖ್ಯಮಂತ್ರಿಯಾಗಿದ್ದ ಸಂಗ್ಮಾ ಅವರು 8 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಕೈಗಾರಿಕೆ, ವಾಣಿಜ್ಯ, ಗೃಹ ವ್ಯವಹಾರ, ಕಾರ್ಮಿಕ, ವಾರ್ತೆ ಮುಂತಾದ ವಿವಿಧ ಖಾತೆಗಳಲ್ಲಿ ಅವರು ನಿರ್ವಹಿಸಿದ್ದರು.ತಮ್ಮ 49ನೇ ವಯಸ್ಸಿನಲ್ಲಿ 16 ನೇ ಲೋಕಸಭಾ ಸ್ಪೀಕರ್ (1996- 1998) ಸ್ಥಾನಕ್ಕೇರಿದ ಸಂಗ್ಮಾ , ಅತೀ ಕಿರಿಯ ವಯಸ್ಸಿನ ಸ್ಪೀಕರ್ ಎಂಬ ಎಂಬ ಹೆಗ್ಗಳಿಕೆ ಹೊಂದಿದ್ದರು.
ಸೋನಿಯಾ ಗಾಂಧಿ ಅವರ ವಿದೇಶ ಪೌರತ್ವವನ್ನು ಖಂಡಿಸಿ ಕಾಂಗ್ರೆಸ್ ತೊರೆದಿದ್ದ ಸಂಗ್ಮಾ 1999ರಲ್ಲಿ ಶರದ್ ಪವಾರ್ ಜತೆ ಎನ್ಸಿಪಿ ಕಟ್ಟಿದರು. ಅಲ್ಲಿಂದ ಕೂಡ ಹೊರನಡೆದು ಮಮತಾ ಬ್ಯಾನರ್ಜಿ ಜತೆ ಸೇರಿ ನ್ಯಾಷನಲಿಸ್ಟ್ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ್ದರು. ಪುನಃ ಅದೂ ಸರಿಕಾಣದೆ ಕಂಗಾಲಾಗಿದ್ದವರು.ಈಶಾನ್ಯ ರಾಜ್ಯದ ಅಭಿವೃದ್ಧಿಗೆ ದುಡಿದಿದ್ದ ಸಂಗ್ಮಾ ಅವರು 2012- 13ರಲ್ಲಿ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ ಪ್ರಮುಖ ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ನೀಡದಿದ್ದುದರಿಂದ ಸೋಲನ್ನು ಕಂಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: